ಮೈಸೂರು: ಭಾರತ ರಾಮಾಯಣ, ಮಹಾಭಾರತದಂತಹ ವಿಶಿಷ್ಟ ಕಥೆಗಳನ್ನು ನೀಡುವ ಮೂಲಕ ಜಗತ್ತಿನಲ್ಲಿ ಕಥೆಗಳ ಆಗರವೆನಿಸಿದೆ. ಕಥಾ ನಿರೂಪಣೆ ಒಂದು ಜಾಗತಿಕ ಕಲೆಯಾಗಿದೆ. ಭಾರತದಲ್ಲಿ ನಿರ್ಮಿತ ಸಿನೆಮಾಗಳು ಕೂಡ ಈಗ ಕೇವಲ ರಾಜ್ಯಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿದೆ ಎಂದು ಕೇಂದ್ರ ಸಚಿವ ಡಾ.ಎಲ್.ಮುರುಗನ್ ಹೇಳಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್ ಟೈನ್ಮೆಂಟ್ ಸಮ್ಮಿಟ್ ಅನ್ನು 2019 ರಲ್ಲಿ ಘೋಷಣೆ ಮಾಡಿದ್ದರು. ಈ ವರ್ಷ ಅದು ನಡೆಯಲಿದೆ. ಎಲ್ಲಾ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದದ್ದು. ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದೆ. ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಎಂಬುದು ಕೂಡ ಇದರ ಒಂದು ಭಾಗ. ಇದರ ಅಡಿಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ 100 ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸ್ತುತ ಹಾಲಿವುಡ್ ಸಿನೆಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡಲು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವ್ಯವಸ್ಥೆ ರೂಪಿಸಲಾಗಿದೆ ಎಂದು ನುಡಿದರು.
ನಮ್ಮ ದಕ್ಷಿಣ ಭಾರತದ ಸಿನೆಮಾಗಳಾದ ಆರ್ ಆರ್ ಆರ್, ಕಾಂತಾರ, ಬಾಹುಬಲಿ, ಪುಷ್ಪದಂತಹ ಸಿನೆಮಾಗಳು ನಮ್ಮ ತನದ ಕಥೆಗಳನ್ನು ಹೇಳುವ ಮೂಲಕ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ಸಿನೆಮಾಗಳಿಗೆ ಬೇಕಾದ ಅನುದಾನವನ್ನು ಕೇಂದ್ರದಿಂದ ನೀಡಲಾಗುತ್ತಿದೆ ಎಂದರು.
2022ರಲ್ಲಿ ಪ್ರಾರಂಭವಾದ ಮೈಸೂರಿನ ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ಮೂರೇ ವರ್ಷದಲ್ಲಿ 3000ಕ್ಕೂ ಅಧಿಕ ಚಿತ್ರಗಳನ್ನು ಸ್ವೀಕರಿಸುವ ಮೂಲಕ ಒಂದು ಪ್ರಮುಖ ವೇದಿಕೆಯಾಗಿ ಬೆಳೆದಿದೆ. ಅವರ ಶ್ರಮಕ್ಕೆ, ಪ್ರಯತ್ನಕ್ಕೆ ಅಭಿನಂದನೆಗಳು ಎಂದು ನುಡಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ ಸುನೀಲ್ ಪುರಾಣಿಕ್ ಪರಿದೃಶ್ಯದಲ್ಲಿ ಉತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದ ಚಿತ್ರ ಇಂದು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಸಾಕ್ಷ್ಯಚಿತ್ರ, ಕಿರುಚಿತ್ರದ ಮೂಲಕ, ಸಿನೆಮಾ ಕ್ಷೇತ್ರಕ್ಕೆ ಬರಬೇಕೆನ್ನುವ ಪ್ರತಿಭೆಗಳಿಗೆ ಪರಿದೃಶ್ಯ ಉತ್ತಮ ವೇದಿಕೆ. ಬೆಂಗಳೂರಲ್ಲಿ ಪ್ರಾರಂಭವಾದ ಪರಿದೃಶ್ಯ ಮುಂದಿನ ದಿನಗಳಲ್ಲಿ ಸಿನೆಮಾ ಕ್ಷೇತ್ರದ ಹಬ್ ಆಗಲಿರುವ ಮೈಸೂರಿಗೆ ಅದು ರವಾನೆಯಾಗಿದ್ದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಜಗನ್ನಾಥ ಶೆಣೈ, ಮೈಸೂರು ಸಿನೆಮಾ ಸೊಸೈಟಿಯ ಅಧ್ಯಕ್ಷ ಡಾ. ಚಂದ್ರಶೇಖರ ಸಿ ಆರ್, ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ವಾದಿರಾಜ, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಸಿನೆಮಾ ಆಯಾಮದ ಪ್ರಾಂತ ಸಂಯೋಜಕ ಶ್ರೀರಾಜ್ ಗುಡಿ, ಪ್ರಾಂತ ಸಹ ಸಂಯೋಜಕ ಶೈಲೇಶ್ ಕುಲಕರ್ಣಿ ಉಪಸ್ಥಿತರಿದ್ದರು.
ಪರಿದೃಶ್ಯ ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ. ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತದಿಂದ 985, ಇರಾನ್ ಇಂದ 413, ಸ್ಪೇನ್ ಇಂದ 138, ಫ್ರಾನ್ಸ್ 137, ಬ್ರೆಜಿಲ್ 108, ಚೀನಾ 99, ಇಂಡೋನೇಷಿಯಾ 91, ಟರ್ಕಿ 88, USA 82, ಇಟಲಿ 81 ಮುಂತಾದ ದೇಶಗಳಿಂದ 3123 ಸಿನಿಮಾಗಳು ಬಂದಿವೆ. ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.