
-ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತರು
50 ವರ್ಷಗಳ ಹಿಂದೆ ದೇಶವನ್ನು, ದೇಶದ ಜನತೆಯನ್ನು ತತ್ತರ ನಡುಗಿಸುವಂತೆ ಮಾಡಿದ ತುರ್ತುಪರಿಸ್ಥಿತಿಯ ಆ ಕರಾಳ ದಿನಗಳು ಬೇಡವೆಂದರೂ ಮತ್ತೆ ಮತ್ತೆ ಕಾಡುತ್ತವೆ. ಆ ದಿನಗಳಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹೋರಾಡಿ ಸೆರೆಮನೆ ಸೇರಿದ, ಸ್ವಂತದ ಬದುಕಿಗೆ ಬೆಂಕಿಹಚ್ಚಿಕೊಂಡ, ಈಗಲೂ ಬದುಕಿರುವ ಕೆಲವು ಹೋರಾಟಗಾರರಿಗೆ ಜೂನ್ 25 ಬಂತೆಂದರೆ ಸಂಭ್ರಮ, ದುಃಖ, ಧನ್ಯತೆ ಹೀಗೆ ವಿಧವಿಧ ಭಾವನೆಗಳು ದುತ್ತನೆ ಮೂಡಿ ತೇಲಿಹೋಗುತ್ತವೆ. ಈಗಿನ ಅತ್ಯಾಧುನಿಕ ಸಂವಹನ ಮಾಧ್ಯಮಗಳು, ಶರವೇಗದ ತಂತ್ರಜ್ಞಾನದ ಸಾಮಾಜಿಕ ಜಾಲತಾಣ ಇತ್ಯಾದಿ ಯಾವುದೂ ಇಲ್ಲದಿದ್ದ ಆ ಕಾಲದಲ್ಲಿ ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಗೆ, ಹೃದಯದಿಂದ ಹೃದಯಕ್ಕೆ ಸುದ್ದಿ, ಮಾಹಿತಿಗಳು ರವಾನೆಯಾಗಿ ಸರ್ವಾಧಿಕಾರದ ವಿರುದ್ಧ ನಡೆದ ಶಾಂತಿಯುತ, ಅಹಿಂಸಾತ್ಮಕ ಹೋರಾಟ ಅದು ಹೇಗೆ ಅತ್ಯಂತ ಯಶಸ್ವಿಯಾಯಿತು, ಸರ್ವಾಧಿಕಾರಿಯು ಕೊನೆಗೂ ಗದ್ದುಗೆಯಿಂದ ಜನಾದೇಶಕ್ಕೆ ತಲೆಬಾಗಿ ಹೇಗೆ ಕೆಳಗಿಳಿಯಬೇಕಾಯಿತು ಎಂಬುದು ಮಾತ್ರ ನಮ್ಮ ದೇಶದಲ್ಲಿ ಘಟಿಸಿದ ಅತ್ಯಂತ ಸೋಜಿಗ, ಆದರೆ ಸಾಹಸದ ವಿದ್ಯಮಾನವೇ ಸರಿ.
1975 ಜೂನ್ 12. ಭಾರತದ ಚರಿತ್ರೆಗೆ ನಿರ್ಣಾಯಕ ತಿರುವು ಕೊಟ್ಟ ದಿನ. ಅಂದು ಎರಡು ಅತ್ಯಂತ ಮಹತ್ವದ ಘಟನೆಗಳು ಜರುಗಿದವು. ಬೆಳಿಗ್ಗೆ 10 ಘಂಟೆಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಪ್ರಕಟವಾಯಿತು. "ಇಂದಿರಾಗಾಂದಿ ಚುನಾವಣಾ ಭ್ರಷ್ಟಾಚಾರ ಎಸಗಿರುವುದು ಸಾಬೀತಾಗಿದೆ. ಆದ್ಧರಿಂದ ಅವರ ಲೋಕಸಭಾ ಸದಸ್ಯತ್ವ ರದ್ದಾಗಿದೆ. ಮತ್ತು ಮುಂದೆ 6 ವರ್ಷಗಳವರೆಗೆ ಅವರು ಯಾವ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ." ಇದೇ ಆ ತೀರ್ಪು. ಅಂದೇ ಸಂಜೆ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಇಂದಿರಾ ಕಾಂಗ್ರೆಸ್ಗೆ ಭಾರೀ ಸೋಲು, ಜನತಾ ಮೋರ್ಚಾಗೆ ಭರ್ಜರಿ ಗೆಲುವು. ಒಂದರಲ್ಲಿ ನ್ಯಾಯಾಂಗವು ಭ್ರಷ್ಟ ರಾಜಸತ್ತೆಯ ವಿರುದ್ಧ ತೀರ್ಪು ನೀಡಿತ್ತು. ಇನ್ನೊಂದರಲ್ಲಿ ಜನತಾ ನ್ಯಾಯಾಲಯವೂ ಅದೇ ತೀರ್ಪನ್ನು ದೃಢಪಡಿಸಿತ್ತು.
ಇಂದಿರಾಗಾಂಧಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದವರು ಅವರ ವಿರುದ್ಧ ಸೋತಿದ್ದ ಸಮಾಜವಾದಿ ಪಕ್ಷದ ರಾಜನಾರಾಯಣ ಅವರು. ತೀರ್ಪು ತನ್ನ ವಿರುದ್ಧ ಆಗಬಹುದೆಂಬ ಆತಂಕ, ಅಂದಾಜು ಪ್ರಧಾನಿ ಇಂದಿರಾಗಾಂಧಿಗೆ ಇದ್ದೇ ಇತ್ತು. ನ್ಯಾಯಾಧೀಶ ಜಗಮೋಹನ ಲಾಲ್ ಸಿಂಹ ಅವರಿಗೆ ಪ್ರಾಣಾಪಾಯದ ಬೆದರಿಕೆ ಹಾಕಲಾಗಿತ್ತು. ಆದರೆ ಅವರು ಜಗ್ಗಲಿಲ್ಲ. ಇಂದಿರಾಗಾಂಧಿ ಪರ ತೀರ್ಪುಕೊಟ್ಟರೆ ಅವರನ್ನು ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನಾಗಿ ಭಡ್ತಿ ಕೊಡಲಾಗುವುದೆಂದು ಆಮಿಷ ಒಡ್ಡಲಾಗಿತ್ತು. ಆದರೆ ಈ ಆಮಿಷಕ್ಕೆ ಒಳಗಾಗದೆ ಇಂದಿರಾಗಾಂಧಿ ವಿರುದ್ಧ ತೀರ್ಪು ನೀಡಿ ನ್ಯಾಯಾಂಗದ ಪ್ರತಿಷ್ಠೆಯನ್ನು ಮೆರೆದಿದ್ದರು ಜಗಮೋಹನ ಲಾಲ್.
ಇಂದಿರಾಗಾಂಧಿ ಮಾತ್ರ ಈ ತೀರ್ಪಿಗೆ ತಲೆಬಾಗಲೇ ಇಲ್ಲ. ಪ್ರತಿಪಕ್ಷಗಳು, ಮಾಧ್ಯಮಗಳು ನ್ಯಾಯಾಲಯದ ತೀರ್ಪಿಗೆ ಗೌರವ ನೀಡಬೇಕೆಂದು ಏನೇ ಒತ್ತಡ ತಂದರೂ ಇಂದಿರಾಗಾಂಧಿ ಕ್ಯಾರೇ ಎನ್ನಲಿಲ್ಲ. ಪ್ರಧಾನಿ ಪದವಿಯ ಮೋಹ ಆ ಪರಿ ಅವರನ್ನು ಸೆಳೆದಿತ್ತು. ತನ್ನ ಅಧಿಕಾರ ಉಳಿಸಿಕೊಳ್ಳಲು ಆಕೆ ಪ್ರಜಾತಂತ್ರವಿರೋಧಿ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಲು ಭಂಡ ಧೈರ್ಯ ತಳೆದರು. ಜನತೆಯ ಬಾಯಿ ಹೊಲಿದು, ಕೈಕಾಲುಗಳನ್ನು ಕಟ್ಟಿ, ಕೆಳಗುರುಳಿಸಿ ಅವರ ಮೇಲೆ ಹತ್ತಿನಿಂತು ನಿರಂಕುಶ ಆಡಳಿತ ನಡೆಸಬೇಕೆಂಬ ಕೆಟ್ಟ ಹಠ ಆಕೆಯ ಅಂತರಂಗದಲ್ಲಿ ಮಡುಗಟ್ಟಿತು. ಆ ಹಠದ ಫಲಶೃತಿಯೇ 1975 ಜೂನ್ 25ರ ಮಧ್ಯರಾತ್ರಿ ದೇಶದ ಮೇಲೆ ತುರ್ತುಪರಿಸ್ಥಿತಿಯ ಅನಿರೀಕ್ಷಿತ ಘೋಷಣೆ. ಜನರ ಎಲ್ಲ ಬಗೆಯ ಮೂಲಭೂತ ಸ್ವಾತಂತ್ರ್ಯ, ಹಕ್ಕುಗಳ ರದ್ದು; ಪತ್ರಿಕೆಗಳ ಬಾಯಿಗೆ ಸೆನ್ಸಾರ್ ಬೀಗ; ನ್ಯಾಯಾಂಗದ ಕೈಕಾಲುಗಳಿಗೆ ಬೇಡಿ; ಸಂಘಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಕೊಡಲಿಯೇಟು - ಇದು ತುರ್ತುಪರಿಸ್ಥಿತಿ ಆದೇಶದ ತಾತ್ಪರ್ಯ. ಭಾರತದ 60 ಕೋಟಿ ಜನರು ಗಾಢನಿದ್ರೆಯಲ್ಲಿದ್ದಾಗ ಅವರ ಮೇಲೆ ನಡೆದ ಆಕಸ್ಮಿಕ ಗುಪ್ತದಾಳಿ ಇದಾಗಿತ್ತು.
ತುರ್ತುಪರಿಸ್ಥಿತಿ ಘೋಷಣೆಗೆ ಸಮ್ಮತಿಯ ಮುದ್ರೆ ಒತ್ತಿದವರು ಆಗ ರಾಷ್ಟ್ಪತಿಯಾಗಿದ್ದ, ಇಂದಿರಾಗಾಂಧಿಯ ʼರಬ್ಬರ್ ಸ್ಟ್ಯಾಂಪ್ʼ ಎಂದೇ ಕುಖ್ಯಾತರಾಗಿದ್ದ ಫಕ್ರುದ್ದೀನ್ ಆಲಿ ಅಹಮದ್. ಒಮ್ಮೆ ಘೋಷಣೆ ಹೊರಬೀಳುತ್ತಿದ್ದಂತೆಯೇ ಮಧ್ಯರಾತ್ರಿಯಲ್ಲೇ ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ವಾಜಪೇಯಿ, ಆಡ್ವಾಣಿ, ಮಧುದಂಡವತೆ ಮೊದಲಾದ ಪ್ರಮುಖ ವಿರೋಧಿ ನಾಯಕರ ಬಂಧನ. 20 ತಿಂಗಳು ಅವರೆಲ್ಲ ವಿಚಾರಣೆಯಿಲ್ಲದೆ ಜೈಲಿನಲ್ಲೇ ಕೊಳೆಯುವ ಸ್ಥಿತಿ. ಪತ್ರಿಕೆಗಳಲ್ಲಂತೂ ಇಂದಿರಾಗಾಂಧಿಯ ಕೇಂದ್ರ ಸರ್ಕಾರದ ವಿರುದ್ಧ ಒಂದಕ್ಷರವನ್ನೂ ಬರೆಯದಂತೆ ಬಿಗಿ ನಿರ್ಬಂಧ. ಸರ್ಕಾರದ ವಿರುದ್ಧ ಯಾವುದೇ ತೀರ್ಪು ನೀಡದಂತೆ ನ್ಯಾಯಾಂಗದ ಮೇಲೆ ಅಲಿಖಿತ ಒತ್ತಡ. ತನ್ನ ಅಧಿಕಾರದ ಉಳಿವಿಗಾಗಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗಗಳ ವಿರುದ್ಧ ಹೀಗೆ ನಿರ್ಬಂಧ, ನಿಷೇಧ ಹೇರಿದ ಇನ್ನೊಬ್ಬ ಸ್ವಾರ್ಥಿ ರಾಜಕಾರಣಿ ಇಂದಿರಾಗಾಂಧಿ ಹೊರತುಪಡಿಸಿದರೆ ಇನ್ಯಾರೂ ಇರಲಿಕ್ಕಿಲ್ಲ.
ತುರ್ತುಪರಿಸ್ಥಿತಿಯ ಆರಂಭದ ದಿನಗಳಲ್ಲಿ ಎಲ್ಲವೂ ಇಂದಿರಾಗಾಂಧಿಯ ನಿರೀಕ್ಷೆಯಂತೇ ನಡೆದಿತ್ತು. ದೇಶದೆಲ್ಲೆಡೆ ಮೌನ ನೆಲೆಸಿತ್ತು. ಯಾರೊಬ್ಬರೂ ಸರ್ವಾಧಿಕಾರದ ವಿರುದ್ಧ ತುಟಿಪಿಟಕ್ ಎಂದಿರಲಿಲ್ಲ. ಇಡೀ ದೇಶ ತುರ್ತುಪರಿಸ್ಥಿತಿಯ ಹೊಡೆತಕ್ಕೆ ಹೆದರಿ ಹೋಗಿದೆ ಎಂದೇ ಇಂದಿರಾಗಾಂಧಿ ಭ್ರಮಿಸಿದ್ದರು. ಇನ್ನು ತಾವಾಡಿದ್ದೇ ಆಟ, ತನ್ನ ಅನುಮತಿಯಿಲ್ಲದೆ ಏನೂ ಆಗದು. ಹುಲ್ಲುಕಡ್ಡಿಯೂ ಕದಲದು ಎಂದೇ ಭ್ರಮಿಸಿದ್ದರು. ಆದರೆ ಆದದ್ದೇ ಬೇರೆ.
ತುರ್ತುಪರಿಸ್ಥಿತಿಯ ಆರಂಭದ ದಿನಗಳಲ್ಲಿ ಮೌನದ ನೀರವತೆ ಆವರಿಸಿದ್ದು ನಿಜ. ಆದರೆ ಅದು ಮಸಣದ ಮೌನವಾಗಿರಲಿಲ್ಲ. ಯುದ್ಧಕ್ಕೆ ಮೊದಲು ನೆಲೆಸುವ ಮೌನ ಅದಾಗಿತ್ತು. ಪರಕೀಯರ ದಬ್ಬಾಳಿಕೆಯನ್ನೇ ಸಹಿಸದ ಈ ದೇಶದ ಜನತೆ ಇನ್ನು ಸ್ವಕೀಯರ ಸರ್ವಾಧಿಕಾರ, ದರ್ಪ, ದೌರ್ಜನ್ಯವನ್ನು ಸಹಿಸಿಯಾರೆ? ನೋಡನೋಡುತ್ತಿದ್ದಂತೆ ದೇಶದೆಲ್ಲೆಡೆ ತುರ್ತುಪರಿಸ್ಥಿತಿಯ ವಿರುದ್ಧ ಜನಕ್ರಾಂತಿಯ ಕಹಳೆ ಮೊಳಗಿತು. ಸರ್ವಾಧಿಕಾರ ವಿರೋಧಿಸಿ ಅಹಿಂಸಾತ್ಮಕ ಪ್ರತಿಭಟನೆಗಳು. ಘೋಷಣೆಗಳು ಮೊಳಗಿದವು. ಪ್ರತಿಭಟಿಸಿದವರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಆದರೆ ಹೋರಾಟ ನಿಲ್ಲಲಿಲ್ಲ. ಪೊಲೀಸರ ಲಾಠಿ ಏಟು, ಠಾಣೆಯಲ್ಲಿ ಚಿತ್ರಹಿಂಸೆ, ಜೈಲಿನಲ್ಲಿ ನರಕಯಾತನೆ - ಯಾವುದಕ್ಕೂ ಹೋರಾಟಗಾರರು ಬಗ್ಗಲಿಲ್ಲ. ಸರ್ವಾಧಿಕಾರಿಯನ್ನು ಗದ್ದುಗೆಯಿಂದ ಕೆಳಗಿಳಿಸುವವರೆಗೆ ನಮಗೆ ವಿಶ್ರಾಂತಿ ಇಲ್ಲ ಎಂಬ ದೃಢಸಂಕಲ್ಪ ಸತ್ಯಾಗ್ರಹಿಗಳದ್ದಾಗಿತ್ತು, ಕೊನೆಕೊನೆಗೆ ಜೈಲುಗಳಲ್ಲಿ ಜಾಗವಿಲ್ಲದೆ ಸತ್ಯಾಗ್ರಹಿಗಳನ್ನು ಹೊಡೆದು, ಬಡಿದು ಹಿಂಸಿಸಿ ಕಾಡಿನಲ್ಲೆಲ್ಲೋ ಪೊಲೀಸರು ಬಿಟ್ಟುಬರುತ್ತಿದ್ದರು. ಭಾರತದ ಜನಕೋಟಿ ಒಂದು ಮುಕ್ತ ಜನಾಂಗವಾಗಿ ಉಸಿರಾಡಿ ಬೆಳೆಯಲೆಂದು ಹರಿದ ಹೋರಾಟಗಾರರ ಬೆವರು, ನೆತ್ತರು, ಕಣ್ಣೀರುಗಳಿಗೆ ಲೆಕ್ಕ ಇಟ್ಟವರಾರು? ಆದರೆ ಆ ಕರಾಳ ದಿನಗಳಲ್ಲಿ ಸುರಿದ ಬೆವರು, ನೆತ್ತರು, ಕಣ್ಣೀರುಗಳ ಫಲವಾಗಿಯೇ ತುರ್ತುಪರಿಸ್ಥಿತಿ ತೊಲಗಿ, ಸರ್ವಾಧಿಕಾರ ಅಳಿಯಿತು. ಕಳೆದುಹೋಗಿದ್ದ ನಮ್ಮೆಲ್ಲ ಮೂಲಭೂತ ಸ್ವಾತಂತ್ರ್ಯಗಳು ಮರಳಿ ದೊರಕಿದವು. ತುರ್ತುಪರಿಸ್ಥಿತಿ ವಿರುದ್ಧದ ಈ ಹೋರಾಟ ಎರಡನೇ ಸ್ವಾತಂತ್ರ್ಯ ಸಮರವೆಂದೇ ಬಿಂಬಿತವಾಯಿತು.
ತುರ್ತುಪರಿಸ್ಥಿತಿ ತೊಲಗಿದ್ದಾದರೂ ಹೇಗೆ? ವಿರೋಧಿಗಳ ಬಂಧನ, ಪತ್ರಿಕೆಗಳ ಬಾಯಿಗೆ ಬೀಗ, ನ್ಯಾಯದೇವತೆಗೆ ಬೇಡಿ... ಹೀಗೆ ದೇಶದಲ್ಲಿ ಉಸಿರುಗಟ್ಟುವ ವಾತಾವರಣವಿದ್ದಾಗಲೂ ಹೋರಾಡಿದವರು ಯಾರು? ಇದು ಈಗಿನ ಪೀಳಿಗೆಯ ಬಹಳಷ್ಟು ಮಂದಿಗೆ ತಿಳಿಯದು. ಪ್ರಮುಖ ವಿರೋಧಿ ನಾಯಕರು ಬುದ್ಧಿ ಜೀವಿಗಳು, ಪ್ರಗತಿಪರರು ತುರ್ತುಪರಿಸ್ಥಿತಿಗೆ ಹೆದರಿ ಮೌನಕ್ಕೆ ಶರಣಾಗಿದ್ದಾಗ ತುರ್ತುಪರಿಸ್ಥಿತಿ ವಿರುದ್ಧದ ಅಹಿಂಸಾತ್ಮಕ ಹೋರಾಟಕ್ಕೆ ಚಾಲನೆ ನೀಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ವಿಪರ್ಯಾಸವೆಂದರೆ ಸಂಘವನ್ನು ಆ ಸಂದರ್ಭದಲ್ಲಿ ನಿಷೇಧಿಸಲಾಗಿತ್ತು. ಸಂಘದ ಪ್ರಮುಖ ನಾಯಕರನ್ನು ಸೆರೆಯಲ್ಲಿಡಲಾಗಿತ್ತು. ಹಾಗಿದ್ದಾಗಲೂ ಹೊರಗಿದ್ದ ಸಂಘದ ಪ್ರಮುಖರು, ಕಾರ್ಯಕರ್ತರು ತುರ್ತುಪರಿಸ್ಥಿತಿ ವಿರುದ್ಧ ಭೂಗತ ಹೋರಾಟವನ್ನು ಸಂಘಟಿಸಿದರು. ಸಂಘ ಪರಿವಾರದ ಜನಸಂಘ, ಎಬಿವಿಪಿ, ಬಿಎಂಎಸ್, ವಿಹಿಂಪ ಇತ್ಯಾದಿ ಸಂಘಟನೆಗಳಲ್ಲದೆ ಸಂಸ್ಥಾ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸರ್ವೋದಯ, ಲೋಕದಳ ಮೊದಲಾದ ಹೊರಗಿನ ಪಕ್ಷಗಳ ನಾಯಕರಲ್ಲಿ ಧೈರ್ಯ ತುಂಬಿ, ಹುರಿದುಂಬಿಸಿ, ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಶ್ರೇಯಸ್ಸು ನಿಸ್ಸಂಶಯವಾಗಿಯೂ ಆರೆಸ್ಸೆಸ್ ನದ್ದು. ಸಂಘ ಪರಿವಾರದವರಲ್ಲದೆ ಜಮಾತ್ - ಇ - ಇಸ್ಲಾಂ, ಸಿಪಿಎಂ, ಆನಂದಮಾರ್ಗದ ನಾಯಕರು ಮೀಸಾಬಂದಿಗಳಾಗಿದ್ದರೂ ಹೋರಾಟದಲ್ಲಿ ಈ ಸಂಘಟನೆಗಳ ಪಾತ್ರ ನಗಣ್ಯವಾಗಿತ್ತು.
ಪತ್ರಿಕೆಗಳ ಬಾಯಿಗೆ ಬೀಗ ಹಾಕಲಾಗಿದ್ದರೂ ಭೂಗತ ಪತ್ರಿಕೆಗಳು ದೇಶದ ಜನರಿಗೆ ಆಗಿನ ದಿನಮಾನದ ನೈಜ ಪರಿಸ್ಥಿತಿಯನ್ನು ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಆ ಪತ್ರಿಕೆಗಳು ಎಲ್ಲಿಂದ ಪ್ರಕಟವಾಗುತ್ತಿದ್ದವು, ಯಾರು ಪ್ರಕಟಿಸುತ್ತಿದ್ದರು, ವಿತರಕರು ಯಾರು.... ಇವೆಲ್ಲ ಪೊಲೀಸರಿಗೂ ಬೇಧಿಸಲಾಗದಷ್ಟು ರಹಸ್ಯವಾಗಿರುತ್ತಿತ್ತು. ಕಂಪ್ಯೂಟರ್ ತಂತ್ರಜ್ಞಾನ, ಇ-ಮೇಲ್, ಮೊಬೈಲ್, ಇಂಟರ್ನೆಟ್ ಇತ್ಯಾದಿ ಏನೊಂದೂ ಆಧುನಿಕ ಸೌಲಭ್ಯವಿರದ ಆ ದಿನಗಳಲ್ಲಿ ಭೂಗತ ಪತ್ರಿಕೆಯೊಂದು ಪ್ರಕಟವಾಗಿ ಅದು ಓದುಗರಿಗೆ ತಲಪುತ್ತಿದ್ದುದು ನಿಜಕ್ಕೂ ರೋಮಾಚಕಾರಿ! ಕಹಳೆ, ರಣದುಂದುಭಿಯಂತಹ ಭೂಗತ ಪತ್ರಿಕೆಗಳು, ಆಗಿನ ಜನಪ್ರಿಯ ಪತ್ರಿಕೆಗಳು. ಆ ಪತ್ರಿಕೆಗಳಿಗೆ ಆಗ ನಾನು ಸಂಪಾದಕನಾಗಿದ್ದೆ ಎಂಬುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಅದಕ್ಕೆ ತಕ್ಕ ಪ್ರತಿಫಲವೂ ದೊರಕಿತು. ಅದೆಂದರೆ ಮಡಿಕೇರಿ ಸೆರೆಮೆನೆಯಲ್ಲಿ ಮೂರು ತಿಂಗಳ ಸೆರೆವಾಸ! ನನ್ನ ಪತ್ರಿಕೋದ್ಯಮ ಪ್ರಾರಂಭವಾಗಿದ್ದು ಆಗಲೇ. ಆದರೆ ಅಷ್ಟು ಬೇಗ ಸೆರೆವಾಸದಂತಹ ʼಸರ್ಕಾರಿ ಪ್ರಶಸ್ತಿʼ ಸಿಗುತ್ತದೆಂದು ಖಂಡಿತ ನಾನು ನಿರೀಕ್ಷಿಸಿರಲಿಲ್ಲ.
ಪ್ರಜಾತಂತ್ರ, ಸ್ವಾತಂತ್ರ್ಯ, ಸಂವಿಧಾನದ ಬಗ್ಗೆ ಭಾರೀ ಮಾತನಾಡುತ್ತಿದ್ದ ಪ್ರಗತಿಪರ ಸಾಹಿತಿಗಳೆನಿಸಿದ ಲಂಕೇಶ್, ಚಂಪಾ, ಬರಗೂರು ಮೊದಲಾದವರು ಮಾತ್ರ ಬಾಯಿಗೆ ಬೀಗ ಜಡಿದುಕೊಂಡು ತೆಪ್ಪಗಿದ್ದರೆನ್ನುವುದು ಈಗ ಸ್ಮರಣಾರ್ಹ! ತುರ್ತುಪರಿಸ್ಥಿತಿ ಹೋರಾಟದ ಕುರಿತು 1977ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ʼಭುಗಿಲುʼ ಎಂಬ ಬೃಹತ್ ಗ್ರಂಥ ರಚಿಸುತ್ತಿರುವ ಸಂದರ್ಭದಲ್ಲಿ ಹಲವು ಸಾಹಿತಿಗಳ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಆಗ ಲಂಕೇಶ್ ಬಳಿಗೆ ಹೋದಾಗ ಅವರು "ನಾವೆಲ್ಲ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಹೇಡಿಗಳಾಗಿದ್ದೆವು. ನಿಜವಾಗಿ ಹೋರಾಡಿದವರು ನೀವೇ (ಆರೆಸ್ಸೆಸ್ )" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ತಮ್ಮ ಈ ಅಭಿಪ್ರಾಯವನ್ನು ʼಭುಗಿಲುʼ ಗ್ರಂಥದಲ್ಲಿ ದಾಖಲಿಸಕೂಡದೆಂದೂ ತಾಕೀತು ಮಾಡಿದ್ದರು!
ತುರ್ತುಪರಿಸ್ಥಿತಿ ತೊಲಗಿ ಐದು ದಶಕಗಳೇ ಸಂದಿವೆ. ದೇಶದ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಭಾರತದ ರಾಜಕೀಯ ಅಖಾಡದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಸಂಭವಿಸಿವೆ. ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿ, ಕಷ್ಟನಷ್ಟ ಅನುಭವಿಸಿದ ಅನೇಕರು ಸರ್ಕಾರದ ಯಾವ ಕೃಪೆಗೂ ಪಾತ್ರರಾಗದೆ ಕಾಲಗರ್ಭದಲ್ಲಿ ಹೂತುಹೋಗಿದ್ದಾರೆ. ಇನ್ನು ಕೆಲವರು ತುರ್ತುಪರಿಸ್ಥಿತಿಯ ಲಾಭ ಪಡೆದು ಅಧಿಕಾರದ ಏಣಿಯೇರಿ ಮಿಂಚಿದ್ದಾರೆ. ಅಂದು ಹೋರಾಡಿದ ಅನಾಮಿಕರು ಮಾತ್ರ ಯಾವ ಪ್ರತಿಫಲವನ್ನೂ ಬಯಸಲಿಲ್ಲ. ಅವರೆಲ್ಲ ಚರಿತ್ರೆಯ ಪುಟಗಳಲ್ಲಿ ಅನಾಮಿಕರಾಗಿಯೇ ಉಳಿದರು. ʼನಕಲಿʼ ಸ್ವಾತಂತ್ರ್ಯ ಹೋರಾಟಗಾರರಂತೆ ಮಾಸಾಶನ, ನಿವೇಶನ, ತಾಮ್ರಪತ್ರ ಏನೊಂದನ್ನೂ ಇಚ್ಛಿಸಲಿಲ್ಲ. ಅವರು ಬಯಸಿದ್ದು - ಧನ್ಯತೆಯನ್ನು ಮಾತ್ರ!