By Du Gu Lakshman, August 26

: ತಾಯ್ನಾಡಿಗಾಗಿ ಪ್ರಾಣವನ್ನೇ ನೀಡಿದ ಶೂರ ಯೋಧನೊಬ್ಬನನ್ನು ನಮ್ಮ ಸರ್ಕಾರ ‘ಹುತಾತ್ಮ’ನೆಂದು ದಾಖಲೆಗಳಲ್ಲಿ ನಮೂದಿಸುವ ಕನಿಷ್ಟ ಸೌಜನ್ಯವನ್ನೂ ತೋರಿಲ್ಲ. ಭಗತ್‌ಸಿಂಗ್ ಬೇರೆ ಯಾವುದೇ ದೇಶದಲ್ಲಿ ಹುಟ್ಟಿದ್ದರೂ ಆತನ ಹೆಸರು ಅಜರಾಮರವಾಗಿರುವಂತೆ ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತಿತ್ತು. ಆದರೆ..? ಸರ್ಕಾರ ನಿರ್ಲಕ್ಷಿಸಿದರೇನಂತೆ, ಭಾರತದ ಕೋಟಿಕೋಟಿ ಹೃದಯಗಳಲ್ಲಿ ಅಮರವೀರ, ಹುತಾತ್ಮ ಭಗತ್‌ಸಿಂಗ್‌ನ ನೆನಪು ಚಿರಹಸಿರಾಗಿರಲಿದೆ. ಆತನ ಪ್ರೇರಣೆ ಯುವಪೀಳಿಗೆಗೆ ಶಾಶ್ವತ ಬಳುವಳಿಯಾಗಿ ಲಭಿಸಲಿದೆ. ಅದನ್ನು ಅಳಿಸಿ ಹಾಕಲು ಯಾರಿಗೂ, ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ.

ಕಳೆದ ಆ.೧೦ರಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಚಿತ್ರ ನನ್ನಂತೆಯೇ ಅನೇಕರನ್ನು ಸಂದಿಗ್ಧಕ್ಕೆ ಕೆಡವಿರಬಹುದು. ಅದು ರಾಷ್ಟ್ರಪತಿ ಭವನದಲ್ಲಿ ಆ.೯ರಂದು ಕ್ವಿಟ್ ಇಂಡಿಯಾ ಚಳವಳಿಯ ೭೧ನೇ ವಾರ್ಷಿಕೋತ್ಸವ ಸಮಾರಂಭದ ಚಿತ್ರ. ರಾಷ್ಟ್ರಪತಿಯವರಲ್ಲದೆ ಪ್ರಧಾನಿ ಡಾ.ಸಿಂಗ್, ಅವರ ಪತ್ನಿ ಗುರುಶರಣ್ ಕೌರ್, ಸೋನಿಯಾ ಗಾಂಧಿ, ರಕ್ಷಣಾ ಸಚಿವ ಎ.ಕೆ.ಆಂಟನಿ ಮೊದಲಾದವರು ಪಾಲ್ಗೊಂಡಿದ್ದ ಆ ಸಮಾರಂಭದಲ್ಲಿ ಸ್ವಾತಂತ್ರ್ಯ ಯೋಧರೊಬ್ಬರು ಸೋನಿಯಾ ಗಾಂಧಿಯತ್ತ ಹೆಜ್ಜೆ ಹಾಕುತ್ತಾ ಬಂದು ಅವರ ಆಶೀರ್ವಾದ ಪಡೆಯುತ್ತಿರುವ ಚಿತ್ರ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆ ಸ್ವಾತಂತ್ರ್ಯ ಯೋಧರಿಗೆ ಅಬ್ಬಬ್ಬ ಎಂದರೆ ೭೫ರಿಂದ ೮೦ ವಯಸ್ಸು ಆಗಿದ್ದಿರಬಹುದು. ಏಕೆಂದರೆ ಅವರು ಆರೋಗ್ಯವಂತರಾಗಿ, ಶಾರೀರಿಕವಾಗಿ ಸದೃಢರಾಗಿ ಇರುವಂತೆ ಕಾಣುತ್ತದೆ. ಅವರಿಗೆ ಈಗ ೮೦ ವಯಸ್ಸು ಎಂದಿಟ್ಟುಕೊಂಡರೂ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ಹೋರಾಡಿದ್ದು ನಿಜವೇ ಆಗಿದ್ದರೆ, ಆಗ ಅವರಿಗೆ ಕೇವಲ ೯ ವಯಸ್ಸು ಆಗಿರಬೇಕು. ಒಂಬತ್ತನೇ ವಯಸ್ಸಿನಲ್ಲಿ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ಯಾವ ಪುರಾವೆಗಳಿವೆಯೋ ಗೊತ್ತಿಲ್ಲ. ಪುರಾವೆಗಳು ಇದ್ದರೂ ಇರಬಹುದು! ಆದರೆ ನಿಜವಾಗಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಕ್ಕಿಲ್ಲ. ಪಾಲ್ಗೊಂಡಿದ್ದು ನಿಜವೇ ಆಗಿದ್ದಿದ್ದರೆ ಸೋನಿಯಾ ಗಾಂಧಿಯ ಆಶೀರ್ವಾದಕ್ಕಾಗಿ ವೇದಿಕೆಯ ಮೇಲೆ ಧಾವಿಸಿ ಬರುತ್ತಿರಲಿಲ್ಲ. ಸ್ವಾತಂತ್ರ್ಯಯೋಧರಾಗಿ ಅವರಿಗೆ ಸೋನಿಯಾ ಗಾಂಧಿಯ ಆಶೀರ್ವಾದ ಪಡೆಯುವ ದೌರ್ಭಾಗ್ಯವಾದರೂ ಏತಕ್ಕೆ?

ಸ್ವಾತಂತ್ರ್ಯ ದಿನಾಚರಣೆಯಂದು ಹಲವೆಡೆ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ, ಸನ್ಮಾನಿಸುವ ಸಮಾರಂಭಗಳು ನಡೆಯುತ್ತಲೇ ಇರುತ್ತವೆ. ನಾವು ಸ್ವಾತಂತ್ರ್ಯ ಪಡೆದೇ ಈಗ ೬೭ ವರ್ಷಗಳು ಸಂದಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ದೇಶಭಕ್ತರು ಈಗ ದೇಶದಲ್ಲಿ ಎಷ್ಟು ಮಂದಿ ಇದ್ದಾರು? ಸಮಾರಂಭಗಳಲ್ಲಿ ಸನ್ಮಾನ ಪಡೆಯುತ್ತಿರುವ ಸ್ವಾತಂತ್ರ್ಯ ಯೋಧರು ನಿಜವಾಗಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೆ? ಈ ಪ್ರಶ್ನೆ ಹಲವು ಪ್ರಜ್ಞಾವಂತರನ್ನು ಕಾಡದೇ ಇರದು. ೭೦-೭೫ ವಯೋಮಾನದವರು ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಮಾಸಾಶನ, ತಾಮ್ರಪತ್ರ ಇತ್ಯಾದಿ ಲಾಭವನ್ನು ಪಡೆಯುತ್ತಿರುತ್ತಾರೆ. ಇಂಥವರಿಗೆ ಏನೆನ್ನೋಣ?

ನಕಲಿ ಹೋರಾಟಗಾರರು

ಕೋಲಾರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರ (ಈಗ ಅವರಿಲ್ಲ) ಕಥೆ ಬಹು ರೋಚಕ! ಅವರು ಜೀವಂತವಾಗಿರುವಷ್ಟು ಕಾಲವೂ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸುತ್ತಿದ್ದರು. ಗಾಂಧೀಜಿ ಕುರಿತು ಒಂದಿಷ್ಟು ಭಾಷಣವನ್ನೂ ಕಂಠಪಾಠ ಮಾಡಿ ಒಪ್ಪಿಸುತ್ತಿದ್ದರು. ಬಹುತೇಕ ಮಂದಿ ಅವರನ್ನು ಸ್ವಾತಂತ್ರ್ಯ ಯೋಧರೆಂದೇ ಭಾವಿಸಿ ಗೌರವಿಸಿದ್ದರು. ಆದರೆ ಒಮ್ಮೆ ಅವರ ಸಮೀಪದ ಬಂಧುಗಳಿಗೇ ಈ ಬಗ್ಗೆ ಅನುಮಾನ ಕಾಡಿ, ಖಾಸಗಿಯಾಗಿ ವಿಚಾರಿಸಿದಾಗ ಆ ಸ್ವಾತಂತ್ರ್ಯ ಯೋಧರು ಗುಟ್ಟಾಗಿ ಹೇಳಿದರಂತೆ: ‘ನೋಡಪ್ಪ, ನಾನು ಬಾಲಕನಾಗಿದ್ದಾಗ ಚಿಕ್ಕಬಳ್ಳಾಪುರದಲ್ಲಿ ಯಾವುದೋ ಒಂದು ಮೆರವಣಿಗೆ ನಡೆಯುತ್ತಿತ್ತು. ನನಗೆ ಮೂತ್ರವಿಸರ್ಜನೆಗೆ ಅವಸರವಾಗಿತ್ತು. ಮೆರವಣಿಗೆ ಸಮೀಪದ ಮರೆಯಲ್ಲಿ ನಿಂತು ಮೂತ್ರವಿಸರ್ಜನೆ ಮಾಡುತ್ತಿದ್ದೆ. ಅಷ್ಟರಲ್ಲಿ ಪೊಲೀಸರು ಮೆರವಣಿಗೆಕಾರರನ್ನು ಚದುರಿಸಲು ಲಾಠಿ ಪ್ರಯೋಗಿಸಿದರು. ಮೆರವಣಿಗೆಯಲ್ಲಿದ್ದವರೆಲ್ಲ ಚೆಲ್ಲಾಪಿಲ್ಲಿಯಾದರು. ಮರೆಯಲ್ಲಿ ನಿಂತ ನನ್ನನ್ನು ಮೆರವಣಿಗೆಯಲ್ಲಿ ಪಾಲ್ಗೊಂಡವನೆಂದು ಭಾವಿಸಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು. ಅನಂತರ ಜೈಲಿಗೆ ಕರೆದುಕೊಂಡು ಹೋಗಿ ಆಮೇಲೆ ಬಿಡುಗಡೆ ಮಾಡಿದರು. ಬಿಡುಗಡೆ ಮಾಡಿದ ನಂತರವೇ ನಾನು ಯಾಕೆ ಜೈಲಿಗೆ ಹೋಗಿದ್ದೆ ಎಂಬುದು ಗೊತ್ತಾಯ್ತು! ಆಮೇಲೊಂದು ದಿನ ತಹಶಿಲ್ದಾರ್ ಕಚೇರಿಗೆ ಬರುವಂತೆ ನನಗೆ ಬುಲಾವ್ ಬಂತು. ಅಲ್ಲಿಗೆ ಹೋದಾಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆ. ಹಾಗಾಗಿ ಈ ಬಾರಿ ನೀವು ಸ್ವಾತಂತ್ರ್ಯ ದಿನಾಚರಣೆಯಂದು ಸನ್ಮಾನ ಸ್ವೀಕರಿಸಬೇಕು ಎಂದು ತಹಶಿಲ್ದಾರ್ ಹೇಳಿದಾಗ ನನಗೆ ದಿಗಿಲಾಯಿತು. ಆದರೂ ಏನೊಂದೂ ಮಾತನಾಡದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದೆ. ಅನಂತರ ಪ್ರತಿ ವರ್ಷವೂ ಕಾರ್ಯಕ್ರಮಕ್ಕೆ ಕರೆಯುತ್ತಿದ್ದರು. ನಾನೂ ಒಂದಿಷ್ಟು ಭಾಷಣ ಮಾಡಲು ಕಲಿತುಕೊಂಡೆ. ಹೀಗೆ ಈಗ ನಾನೊಬ್ಬ ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರನಾಗಿzನೆ. ನನ್ನ ಈ ಕಥೆಯನ್ನು ಮಾತ್ರ ಯಾರಿಗೂ ತಿಳಿಸಬೇಡಪ್ಪ…’

ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆಯೂ ಇಂತಹದೇ ಎಂದು ನಾನು ಖಂಡಿತ ದೂರುತ್ತಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಂಡು, ಸರ್ಕಾರದ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುವ ಅನೇಕರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರಾಗಿಲ್ಲ. ಅವರೆಲ್ಲ ನಕಲಿಗಳು, ಅಷ್ಟೆ. ಅವರಿಗೂ ಸ್ವಾತಂತ್ರ್ಯ ಹೋರಾಟಕ್ಕೂ ಏನೇನೂ ಸಂಬಂಧವಿರುವುದಿಲ್ಲ. ಸ್ವಾತಂತ್ರ್ಯ ಹೋರಾಟ ಸಂದರ್ಭದ ಯಾವುದಾದರೂ ಘಟನೆಯನ್ನು ಹೇಳಿ ಎಂದರೆ, ಯಾವುದೋ ಕಾಗಕ್ಕ-ಗುಬ್ಬಕ್ಕನ ಕಥೆಯನ್ನು ಹೇಳಿ ಮನರಂಜಿಸುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿದ್ದ ಅಗ್ರಮಾನ್ಯ ನಾಯಕರ ಹೆಸರು ಹೇಳಿ ಎಂದರೆ, ತಿಲಕರಿಂದ ಹಿಡಿದು ನೆಹರುವರೆಗಿನ ಹೆಸರುಗಳನ್ನು ಹೇಳಿ ಕಂಠಪಾಠ ಒಪ್ಪಿಸುತ್ತಾರೆ. ಇಂಥವರನ್ನು ನಾವು ಈಗಲೂ ಸ್ವಾತಂತ್ರ್ಯ ಹೋರಾಟಗಾರರೆಂದು ಗೌರವಿಸುತ್ತೇವಲ್ಲ , ಇದಕ್ಕೆ ಏನೆನ್ನೋಣ?

***

ಭಗತ್‌ಸಿಂಗ್ ಹುತಾತ್ಮನಲ್ಲವಂತೆ!

ಬಿಡಿ, ಇಂಥವರು ಎಲ್ಲೆಡೆಯಲ್ಲೂ ಇರುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತಾರೆ. ಆದರೆ ನಿಜವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ, ಗಲ್ಲಿಗೇರಿದ ಧೀರ ಸ್ವಾತಂತ್ರ್ಯ ಯೋಧರಿಗೆ ನಾವೆಷ್ಟು ಗೌರವ ಸಲ್ಲಿಸುತ್ತಿzವೆ? ನಮ್ಮ ಸರ್ಕಾರ ಅಂಥವರನ್ನು ಎಷ್ಟರಮಟ್ಟಿಗೆ ಗೌರವಿಸಿದೆ? ಇತ್ತೀಚೆಗೆ ಹುತಾತ್ಮ ವೀರ ಭಗತ್‌ಸಿಂಗ್ ಕುರಿತು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಡೆಯಲಾದ ಮಾಹಿತಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರ ಭಗತ್‌ಸಿಂಗ್ ಅವರನ್ನು ಸರ್ಕಾರಿ ದಾಖಲೆಗಳಲ್ಲಿ ಹುತಾತ್ಮನೆಂದು ಬಣ್ಣಿಸದಿರುವ ಆಶ್ಚರ್ಯಕರ ಸಂಗತಿ ಹೊರಬಿದ್ದಿದೆ. ಈ ಆಶ್ಚರ್ಯಕರ ಸಂಗತಿ ಗೊತ್ತಾಗಿರುವುದು ಕೇಂದ್ರ ಗೃಹ ಸಚಿವಾಲಯದಿಂದ. ಭಗತ್‌ಸಿಂಗ್ ಹುತಾತ್ಮರೆಂಬುದಕ್ಕೆ ಸಾಕ್ಷಿಯಾದ ಯಾವುದೇ ದಾಖಲೆ ಕೇಂದ್ರ ಸರ್ಕಾರದ ಬಳಿ ಇಲ್ಲವೆಂದು ಗೃಹ ಸಚಿವಾಲಯವೇ ಸ್ಪಷ್ಟಪಡಿಸಿದೆ.

ಹಾಗಿದ್ದರೆ ಭಗತ್‌ಸಿಂಗ್ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಗಲ್ಲಿಗೇರಿದ್ದು ಸುಳ್ಳೆ? ಇತಿಹಾಸದ ದಾಖಲೆಗಳೇ ಇರುವಾಗ, ಸರ್ಕಾರಿ ದಾಖಲೆಗಳಲ್ಲಿ ಆ ಮಹಾತ್ಮನನ್ನು ‘ಹುತಾತ್ಮ’ನೆಂದು ದಾಖಲಿಸುವುದಕ್ಕೆ ಯಾತರ ಅಡ್ಡಿ? ಹಾಗೆ ದಾಖಲಿಸಿದರೆ ಯಾರಿಗಾದರೂ ತೊಂದರೆಯಾಗುತ್ತದೆಯೆ? ಇದಕ್ಕೆ ಕೇಂದ್ರ ಸರ್ಕಾರವೇ ಉತ್ತರ ಹೇಳಬೇಕು. ಭಗತ್‌ಸಿಂಗ್ ಅವರನ್ನು ಹುತಾತ್ಮನೆಂದು ಘೋಷಿಸುವಂತೆ ಅಭಿಯಾನ ಆರಂಭಿಸುವುದಾಗಿ ಭಗತ್‌ಸಿಂಗ್ ಸಂಬಂಧಿ ಯಾದವೇಂದ್ರ ಸಿಂಗ್ ತಿಳಿಸಿದ್ದಾರೆ. ೧೯೩೧ ಮಾರ್ಚ್ ೨೩ರಂದು ದೇಶದ ಸ್ವಾತಂತ್ರ್ಯಕ್ಕಾಗಿ, ದಾಸ್ಯದಿಂದ ಭಾರತ ಮಾತೆಯ ಬಿಡುಗಡೆಗಾಗಿ ಭಗತ್‌ಸಿಂಗ್, ರಾಜ್‌ಗುರು ಮತ್ತು ಸುಖದೇವ್ – ಮೂವರೂ ನೇಣುಗಂಬವೇರಿ ಹುತಾತ್ಮರಾಗಿದ್ದರು. ದೇಶಕ್ಕೆ ದೇಶವೇ ಆಗ ಈ ಮೂವರು ಗಲ್ಲಿಗೇರಿದ್ದಕ್ಕೆ ದುಃಖಿಸಿತ್ತು. ಇಂತಹ ಹುತಾತ್ಮರು ಮತ್ತೆ ಮತ್ತೆ ಹುಟ್ಟಿ ಬರಲೆಂದು ಭಾರತದ ಜನಮಾನಸ ಮನದಾಳದಿಂದ ಪ್ರಾರ್ಥನೆ ಸಲ್ಲಿಸಿತ್ತು.

ಭಾರತ ಸರ್ಕಾರ ಮಾತ್ರ ಭಗತ್‌ಸಿಂಗ್‌ನಂತಹ ಒಬ್ಬ ಹುತಾತ್ಮ ಸ್ವಾತಂತ್ರ್ಯ ಯೋಧನಿಗೆ ನೀಡಿರುವ ಗೌರವವಾದರೂ ಎಂತಹದು? ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುವ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಭಗತ್‌ಸಿಂಗ್‌ನನ್ನು ಹೇಗೆ ಚಿತ್ರಿಸಲಾಗಿದೆ? ಭಗತ್‌ಸಿಂಗ್ ಬಗ್ಗೆ ಇರುವ ಪಾಠವನ್ನು ಓದಿದರೆ  ವಿದ್ಯಾರ್ಥಿಗಳಲ್ಲಿ ಆತನ ಬಗ್ಗೆ ಗೌರವ ಭಾವ ಮೂಡಲು ಸಾಧ್ಯವೆ? ಭಗತ್‌ಸಿಂಗ್‌ನನ್ನು ಕೀಳಾಗಿ ಚಿತ್ರಿಸಿರುವ  ಪಠ್ಯಪುಸ್ತಕಗಳಲ್ಲಿ ರಾಹುಲ್ ಗಾಂಧಿ ಆಧುನಿಕ ಪೀಳಿಗೆಯ ಆಶಾದೀಪವೆಂದು ಚಿತ್ರಿಸಿರುವುದು ಎಂತಹ ವಿಪರ್ಯಾಸ? ಭಗತ್‌ಸಿಂಗ್ ಯೋಗ್ಯತೆ ಏನು? ರಾಹುಲ್ ಗಾಂಧಿ ಯೋಗ್ಯತೆ ಏನು? ಥತ್, ಹೋಲಿಕೆಯೇ ಸರಿಯಲ್ಲ.

ಆ ಮಹಾಮಾತೆ ಎಂಥವರು!

ಭಗತ್‌ಸಿಂಗ್‌ನಿಗೆ ಬಾಲ್ಯದಿಂದಲೇ ವೀರದೀಕ್ಷೆ ನೀಡಿ ನಾಡ ಯೋಧನನ್ನಾಗಿ ರೂಪಿಸಿದ ಮಾತೆ ಸ್ವತಃ ಆತನ ತಾಯಿ ವಿದ್ಯಾವತಿದೇವಿ. ಶಿವಾಜಿಯ ವ್ಯಕ್ತಿತ್ವವನ್ನು ಜೀಜಾಬಾಯಿ ರೂಪಿಸಿದ್ದರೆ ಭಗತ್‌ಸಿಂಗ್‌ನನ್ನು ಒಬ್ಬ ಯೋಧನನ್ನಾಗಿ ರೂಪಿಸಿದ್ದು ವಿದ್ಯಾವತಿ. ಶಿಶುವಾಗಿದ್ದಾಗಲೇ ಭಗತ್‌ಸಿಂಗ್‌ನಿಗೆ ಅವನ ತಂದೆ, ಚಿಕ್ಕಪ್ಪಂದಿರ ಸಾಹಸಗಾಥೆಗಳನ್ನು, ಜೈಲು ಯಾತ್ರೆಗಳನ್ನು ವಿದ್ಯಾವತಿ ವಿವರಿಸುತ್ತಿದ್ದರು. ಸಿಖ್ ಗುರುಗಳ ಧರ್ಮ ನಿಷ್ಠೆ, ತ್ಯಾಗಶೀಲತೆ, ಸಾಹಸ, ಪರಾಕ್ರಮಗಳನ್ನು ಬಣ್ಣಿಸಿ ಬಾಲಕ ಭಗತ್‌ಸಿಂಗ್‌ನಲ್ಲಿ ಶ್ರೇಷ್ಠ ಗುಣಗಳ ಆವಿಷ್ಕಾರ ಮಾಡಿದ್ದರು.

೧೯೪೦ರಲ್ಲಿ ಭಗತ್‌ಸಿಂಗ್‌ನ ಅಣ್ಣ ಕುಲಬೀರ್ ಸಿಂಗ್ ಮತ್ತು ಆತನ ಇತರ ಸಹೋದರರು ಜೈಲಿನಲ್ಲಿದ್ದರು. ಅಲ್ಲಿ ಉಪವಾಸ ಮುಷ್ಕರ ಮಾಡುತ್ತಿದ್ದರು. ತಾಯಿ ವಿದ್ಯಾವತಿಗೆ ಅವರೆಲ್ಲರನ್ನು ಕಾಣುವ ಬಯಕೆ. ಜೈಲು ಅಧಿಕಾರಿಗಳಲ್ಲಿ ಪ್ರಾರ್ಥಿಸಿದರು. ಆದರೆ ಧೂರ್ತ ಅಧಿಕಾರಿಗಳು ಅಲ್ಲೂ ರಾಜಕೀಯ ತಂದೊಡ್ಡಿದರು. ಆಕೆಯ ಮಕ್ಕಳು ಉಪವಾಸ ನಿಲ್ಲಿಸುವವರೆಗೂ ಭೇಟಿ ಅಸಾಧ್ಯವೆಂದು ಷರತ್ತು ಹಾಕಿದರು. ವಿದ್ಯಾವತಿ ಬಗ್ಗಿದರೆ? ಅತ್ತು ಗೋಳಿಟ್ಟರೆ? ಮಕ್ಕಳಿಗೆ ಉಪವಾಸ ನಿಲ್ಲಿಸಿ ಎಂದು ಗೋಗರೆದರೆ? ಖಂಡಿತ ಇಲ್ಲ. ಆಕೆಯ ಮೂಲಕ ಅಂದು ಭಾರತೀಯ ಮಾತೃತ್ವ ಮಾತನಾಡಿತು. ಒಂದು ಸಾರ್ವಜನಿಕ ಸಭೆಯಲ್ಲಿ ‘ನನ್ನ ಮಕ್ಕಳು ಉಪವಾಸ ಮಾಡಿ ಮಡಿಯಲಿ. ಅದನ್ನು ಸ್ವಾಗತಿಸುವೆನೆ ಹೊರತು ನನ್ನ ಭೇಟಿಗಾಗಿ ಅವರು ಉಪವಾಸ ನಿಲ್ಲಿಸುವುದನ್ನು ನಾನು ಸಹಿಸುವುದಿಲ್ಲ. ಅವರ ಬೇಡಿಕೆಗಳು ಪೂರೈಸುವವರೆಗೂ ಉಪವಾಸ ಮುಂದುವರೆಯಲಿ’ ಎಂದು ಆಂಗ್ಲ ಸರ್ಕಾರಕ್ಕೆ ದಿಟ್ಟ ಉತ್ತರ ನೀಡಿದ್ದರು ಆ ಮಹಾಮಾತೆ.

೧೯೬೫ರಲ್ಲಿ ಭಗತ್‌ಸಿಂಗ್‌ನ ಮೇಲೆ ಕಾವ್ಯ ರಚಿಸಿದ ಕವಿ ಶ್ರೀಕೃಷ್ಣ ಸರಲ್‌ಗೆ ತಾಯಿ ವಿದ್ಯಾವತಿ ನೀಡಿದ ಆದೇಶವೇನು ಗೊತ್ತೆ: ‘ನೀನು ನನ್ನ ಮಗ ಭಗತ್‌ಸಿಂಗನ ಮೇಲೆ ಇಷ್ಟೊಂದು ದೊಡ್ಡ ಗ್ರಂಥವನ್ನು ಬರೆದೆ. ಆದರೆ ಚಂದ್ರಶೇಖರ ಆಜಾದನ ಮೇಲೆ ಇದಕ್ಕೂ ಮುನ್ನವೇ ಇಂತಹ ಒಂದು ಕಾವ್ಯವನ್ನು ರಚಿಸಬೇಕಾಗಿತ್ತು. ನಿಜ, ಇಂದು ಆಜಾದನ ತಾಯಿ ಇಲ್ಲ. ಆತನ ಮೃತ ಮಾತೆಯ ಸ್ಥಾನದಿಂದ ನಾನು ನಿನಗೆ ಆದೇಶಿಸುತ್ತಿzನೆ – ಚಂದ್ರಶೇಖರ ಆಜಾದನ ಮೇಲೆ ನೀನು ಒಂದು ಗ್ರಂಥ ರಚಿಸು. ಬರೆಯುವೆನೆಂದು ನನಗೆ ವಚನ ನೀಡು’. ಕವಿಯ ಕಣ್ಣಿಂದ ನೀರಧಾರೆ ಹರಿಯಿತು. ಕೂಡಲೇ ತನ್ನ ಹೆಬ್ಬೆರಳು ಕತ್ತರಿಸಿ, ಆಕೆಗೆ ರಕ್ತ ತಿಲಕವಿಟ್ಟು ಪ್ರಮಾಣ ಮಾಡಿದ. ಅನಂತರ ಗ್ರಂಥವನ್ನು ಬರೆದ.

೧೯೫೭ರ ಮೇ ೧೨ರಂದು ದಿಲ್ಲಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವ ನಡೆದಾಗ ಭಗತ್‌ಸಿಂಗ್ ತಾಯಿ ವಿದ್ಯಾವತಿ ಅಲ್ಲಿಯೂ ಇದ್ದರು. ಸ್ವಾತಂತ್ರ್ಯವೀರ ಸಾವರ್ಕರರದೇ ಅಂದು ಮುಖ್ಯ ಭಾಷಣ. ಅವರು ‘ಕೆಲವರು ಸ್ವಾತಂತ್ರ್ಯವನ್ನು ತಾವೇ ತಂದುಕೊಟ್ಟಿದ್ದಾಗಿ ಹೇಳಿಕೊಳ್ಳುವುದುಂಟು. ಅವರು ಇಷ್ಟೊಂದು ಸುಳ್ಳು ಹೇಳಬಾರದು. ಸಶಸ್ತ್ರ  ಕ್ರಾಂತಿಕಾರಿಗಳಿಂದ ಹಿಡಿದು ನಿಃಶಸ್ತ್ರ ಚಳವಳಿಗಾರರವರೆಗೆ ಎಲ್ಲರ ಹೋರಾಟದ ಅಂತಿಮ ಫಲ ಅದು. ಆ ಪೈಕಿಯೂ ನಿರ್ಣಾಯಕ ಪಾತ್ರವಹಿಸಿದವರು ಯಾರು ಎಂಬುದಕ್ಕೆ ನಿಮಗೆ ಉತ್ತರ ಬೇಕೆ? ಹಾಗಾದರೆ ಈ ತಾಯಿಯನ್ನೇ ಕೇಳಿ’ ಎಂದು ಮಾತೆ ವಿದ್ಯಾವತಿಯ ಕಡೆಗೆ ಕೈ ತೋರಿಸಿದ್ದರು.

೧೯೬೫ ಮಾರ್ಚ್ ೯. ಉಜ್ಜೈನಿಯಲ್ಲಿ ಮಹಾತಾಯಿಯೊಬ್ಬಳ ದರ್ಶನಕ್ಕಾಗಿ ಭಾರೀ ಜನಸ್ತೋಮ ಕಾದು ಕುಳಿತಿತ್ತು. ವೇದಿಕೆಯ ಮೇಲೆ ಎರಡು ಚಿತ್ರಗಳು. ಒಂದೆಡೆ ಅಮರ ಹುತಾತ್ಮ ಭಗತ್‌ಸಿಂಗ್‌ನ ಭವ್ಯ ಚಿತ್ರ. ಇನ್ನೊಂದೆಡೆ ಮೀಸೆ ಹುರಿ ಮಾಡುತ್ತಾ ಠೀವಿಯಿಂದ ನಿಂತಿರುವ ಮಹಾಬಾಹು ಚಂದ್ರಶೇಖರ ಆಜಾದನ ಕಣ್ಣು ಕೋರೈಸುವ ಚಿತ್ರ. ಈ ಎರಡು ಚಿತ್ರಗಳ ನಡುವೆ ಆ ವೃದ್ಧ ಮಾತೆ. ಆಕೆಯೇ ವಿದ್ಯಾವತಿ. ಆಕೆ ಮೆಲ್ಲನೆ ಮಾತನಾಡತೊಡಗಿದೊಡನೆ ಇಡೀ ಸಭೆಯಲ್ಲಿ ರೋಮಾಂಚನ. ‘ಚಂದ್ರಶೇಖರ ಆಜಾದ್ ಮತ್ತು ಭಗತ್‌ಸಿಂಗ್ ಇಂದು ಈ ಜಗತ್ತಿನಲ್ಲಿ ಇಲ್ಲ ಎಂದು ಹೇಳುವವರು ಯಾರು? ನೋಡಿ ಇಲ್ಲಿ. ಅದೆಷ್ಟು ಜನ ಆಜಾದರು, ಭಗತ್‌ಸಿಂಗರು ಈ ಜನಸಂದಣಿಯಲ್ಲಿ ಕುಳಿತು ನನ್ನ ದೃಷ್ಟಿಯೊಂದಿಗೆ ತಮ್ಮ ದೃಷ್ಟಿಯನ್ನು ಒಂದುಗೂಡಿಸುತ್ತಿದ್ದಾರೆ…’ ಜನರು ಆ ಮಹಾತಾಯಿಯ ಭಾಷಣ ಕೇಳಿ ಗದ್ಗದಿತರಾದಾಗ, ‘ನೀವೆಲ್ಲ ಏಕೆ ಅಳುತ್ತಿದ್ದೀರಿ? ಅಳುವ ಸಮಯ ಇದಲ್ಲ. ಆಜಾದ್ ಮತ್ತು ನನ್ನ ಮಗ ಭಗತ್ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಇದಕ್ಕಾಗಿ ಆನಂದಪಡಿ’ ಎಂದು ಧೈರ್ಯ ತುಂಬಿದ್ದು ಕೂಡ ಆ ಮಹಾಮಾತೆ.

ಬೆಂಗಳೂರಿಗೂ ಬಂದಿದ್ದರು

ಇಂತಹ ವೀರಮಾತೆ ವಿದ್ಯಾವತಿದೇವಿ ಬೆಂಗಳೂರಿಗೂ ಬಂದಿದ್ದರು. ಆಕೆ ಬೆಂಗಳೂರಿಗೆ ಬಂದಿದ್ದು ೧೯೭೦ ನವಂಬರ್ ೮ರಂದು. ಖ್ಯಾತ ಲೇಖಕ, ಕವಿ ಶಿವರಾಮು ಅವರು ಬರೆದ ಸಾವರ್ಕರರ ಆತ್ಮಕಥೆಯಾದ ‘ಆತ್ಮಾಹುತಿ’ ಗ್ರಂಥ ಬಿಡುಗಡೆಗಾಗಿ ಒಂದು ಮುಕ್ಕಾಲು ಸಹಸ್ರ ಮೈಲಿ ಪ್ರಯಾಣ ಮಾಡಿ ಎರಡನೇ ಪುತ್ರ ಸರ್ದಾರ್ ಕುಲಬೀರ್ ಸಿಂಗ್ ಮತ್ತು ಸೊಸೆ ಶ್ರೀಮತಿ ಕಾಂತಾದೇವಿ ಅವರೊಂದಿಗೆ ಬಂದಿದ್ದರು. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಗ್ರಂಥದ ಬಿಡುಗಡೆ ಸಮಾರಂಭ. ಮೊದಲ ಬಾರಿಗೆ ಒಳಗಿನ ವಿಶಾಲ ಆಸನಗಳನ್ನು ತೆಗೆದು ಚಿಕ್ಕ ಕುರ್ಚಿಗಳನ್ನು ಹಾಕಲಾಗಿತ್ತು. ಮೇಲಿನ ಬಾಲ್ಕನಿ ಸೇರಿದಂತೆ ಎಲ್ಲೆಡೆಯಲ್ಲೂ ಜನಪ್ರವಾಹ. ಒಳಗೆ ಜಾಗ ಸಿಗದೆ ಹೊರಗೆ ಕಾದಿದ್ದವರು ಇನ್ನೆಷ್ಟೋ ಜನರು. ಪುರಭವನ ಈ ಜನಪ್ರವಾಹದಿಂದ ಅಕ್ಷರಶಃ ಸೋತಿತ್ತು. ಸಮಾರಂಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ತಿ.ತಾ.ಶರ್ಮ ‘ಈ ಭವನ ವಿಸ್ತಾರವಾಗಿದ್ದರೆ ಇಡೀ ಬೆಂಗಳೂರು ಇಲ್ಲಿಗೆ ಬರುತ್ತಿತ್ತು’ ಎಂದು ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಆಗ ಈ ಕ್ರಾಂತಿಮಾತೆಗೆ ೮೩ರ ವೃದ್ಧಾಪ್ಯ. ಆದರೂ ೧೬ರ ಉತ್ಸಾಹ. ಸಮಾರಂಭದಲ್ಲಿ ಗ್ರಂಥ ಲೋಕಾರ್ಪಣಗೊಳಿಸಿ ಆಕೆ ನೀಡಿದ ಕರೆ – ‘ದೇಶ್ ಕೀ ಸೇವಾ ಕರೋ, ದೇಶ್ ಕೊ ಊಂಚಾ ಕರೋ’ (ದೇಶ ಸೇವೆ ಮಾಡಿ, ದೇಶವನ್ನು ಮೇಲಕ್ಕೆತ್ತಿ). ವಿದ್ಯಾವತಿಯವರನ್ನು ಪ್ರತ್ಯಕ್ಷ ನೋಡಲೆಂದು ಹಿಂದಿನ ದಿನವೇ ರೈಲ್ವೇ ನಿಲ್ದಾಣದಲ್ಲಿ ಸಾವಿರಾರು ಜನರು ಕಾದಿದ್ದರಂತೆ. ಆಕೆಯ ಕಾಲ್ಮುಟ್ಟಿ ನಮಸ್ಕರಿಸಲು ಮುತ್ತಿಗೆ ಹಾಕಿದವರು ಇನ್ನೆಷ್ಟೋ ಜನರು. ವಿದ್ಯಾವತಿ ದೇವಿಯವರ ಆಗಮನದಿಂದ ಇಡೀ ಬೆಂಗಳೂರು ನಗರದಲ್ಲಿ ದೇಶಭಕ್ತಿಯ ವಿದ್ಯುತ್ ಸಂಚಾರವಾಗಿತ್ತು.

ಭಗತ್‌ಸಿಂಗ್‌ನನ್ನು ಗಲ್ಲಿಗೇರಿಸುವ ಮೊದಲು ಆತನ ಕುಟುಂಬದ ಸದಸ್ಯರಿಗೆ ಅವನೊಂದಿಗೆ ಮಾತನಾಡಲು ಅನುಮತಿ ನೀಡಬೇಕಾಗಿದ್ದುದು ಬ್ರಿಟಿಷ್ ಸರ್ಕಾರದ ಕರ್ತವ್ಯವಾಗಿತ್ತು. ಆದರೆ ಇಲ್ಲೂ ಬ್ರಿಟಿಷ್ ಸರ್ಕಾರ ಕುತಂತ್ರ ಹೆಣೆದಿತ್ತು. ಭಗತ್‌ಸಿಂಗ್‌ನ ತಂದೆ-ತಾಯಿ ಮಾತ್ರ ಆತನನ್ನು ನೋಡಬಹುದು. ಉಳಿದ ಅಜ್ಜ-ಅಜ್ಜಿ ಮತ್ತಿತರರು ನೋಡುವಂತಿಲ್ಲವೆಂದು ಷರತ್ತು ಹಾಕಿತ್ತು. ಈ ಷರತ್ತಿಗೆ ಯಾರೂ ಮಣಿಯಲಿಲ್ಲ. ಅನುಮತಿ ನೀಡುವುದಾದರೆ ನಮಗೆಲ್ಲರಿಗೂ ಕೊಡಿ. ಇಲ್ಲದಿದ್ದರೆ ನಾವ್ಯಾರೂ ಗಲ್ಲಿಗೇರಲಿರುವ ಭಗತ್‌ಸಿಂಗ್‌ನನ್ನು ಕಾಣಲು ಬರುವುದಿಲ್ಲ ಎಂದು ಖಡಾಖಂಡಿತ ಮಾತುಗಳನ್ನು ಹೇಳಿದ್ದು ಕೂಡ ಇದೇ ಮಹಾತಾಯಿ. ಅದೆಷ್ಟು ಧೈರ್ಯವಿರಬೇಕು ಆ ಮಹಾತಾಯಿಗೆ!

ಇಂತಹ ಮಹಾತಾಯಿಯ ವೀರಪುತ್ರನೊಬ್ಬನನ್ನು, ತಾಯ್ನಾಡಿಗಾಗಿ ಪ್ರಾಣವನ್ನೇ ನೀಡಿದ ಶೂರ ಯೋಧನೊಬ್ಬನನ್ನು ನಮ್ಮ ಸರ್ಕಾರ ‘ಹುತಾತ್ಮ’ನೆಂದು ದಾಖಲೆಗಳಲ್ಲಿ ನಮೂದಿಸುವ ಕನಿಷ್ಟ ಸೌಜನ್ಯವನ್ನೂ ತೋರಿಲ್ಲ. ಭಗತ್‌ಸಿಂಗ್ ಬೇರೆ ಯಾವುದೇ ದೇಶದಲ್ಲಿ ಹುಟ್ಟಿದ್ದರೂ ಆತನ ಹೆಸರು ಅಜರಾಮರವಾಗಿರುವಂತೆ ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತಿತ್ತು. ಆದರೆ..? ಸರ್ಕಾರ ನಿರ್ಲಕ್ಷಿಸಿದರೇನಂತೆ, ಭಾರತದ ಕೋಟಿಕೋಟಿ ಹೃದಯಗಳಲ್ಲಿ ಅಮರವೀರ, ಹುತಾತ್ಮ ಭಗತ್‌ಸಿಂಗ್‌ನ ನೆನಪು ಚಿರಹಸಿರಾಗಿರಲಿದೆ. ಆತನ ಪ್ರೇರಣೆ ಯುವಪೀಳಿಗೆಗೆ ಶಾಶ್ವತ ಬಳುವಳಿಯಾಗಿ ಲಭಿಸಲಿದೆ. ಅದನ್ನು ಅಳಿಸಿ ಹಾಕಲು ಯಾರಿಗೂ, ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ.

 

Leave a Reply

Your email address will not be published.

This site uses Akismet to reduce spam. Learn how your comment data is processed.