article by Du Gu Lakshman

‘ದೇಶದ ಗಡಿ ಕಾಯುತ್ತಾ ನಮ್ಮ ಮಗ ಹುತಾತ್ಮನಾಗಿರುವುದಕ್ಕೆ ಪರಿಹಾರ ನಿಧಿ ನೀಡುವ ಬದಲು, ಇದಕ್ಕೆ ಕಾರಣವಾದ ಪಾಕಿಸ್ಥಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.’

– ಇದು ಕಾಶ್ಮೀರದ ಪೂಂಚ್ ವಲಯದಲ್ಲಿ ಮೊನ್ನೆ ಆಗಸ್ಟ್ ೫ರಂದು ಮಧ್ಯರಾತ್ರಿ ಪಾಕ್ ಸೈನಿಕರು ನಡೆಸಿದ ದಾಳಿಯಲ್ಲಿ ಹುತಾತ್ಮನಾದ ವಿಜಯ್‌ಕುಮಾರ್ ರಾಯ್ ಅವರ ಪತ್ನಿ ಪುಷ್ಪಾರಾಯ್ ಹೇಳಿದ ಖಡಕ್ ನುಡಿ. ೧೦ ಲಕ್ಷ ರೂ. ಪರಿಹಾರದ ಚೆಕ್ಕನ್ನು ಹಿಡಿದು ಯೋಧನ ನಿವಾಸಕ್ಕೆ ತೆರಳಿದ ಅಧಿಕಾರಿಗಳು ಆಕೆಯ ಈ ಅನಿರೀಕ್ಷಿತ ಪ್ರತಿಕ್ರಿಯೆಗೆ ದಂಗಾಗಿದ್ದರು.

ಪುಷ್ಪಾರಾಯ್ ಹೇಳಿದ ಈ ಖಡಕ್ ನುಡಿ ಅವಳೊಬ್ಬಳದೇ ಆಗಿಲ್ಲ. ದೇಶವನ್ನು ಪ್ರೀತಿಸುವ, ಸೈನಿಕರೆಂದರೆ ದೇಶವನ್ನು ಕಾಯುವ ಅಮೂಲ್ಯ ರತ್ನಗಳೆಂದು ಭಾವಿಸುವ ಪ್ರತಿಯೊಬ್ಬ ದೇಶವಾಸಿಯ ಅಂತರಾಳದ ಮಾತು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಬಂದು, ನಮ್ಮ ಸೈನಿಕರ ಮೇಲೆರಗಿ ಕಾಲು ಕೆರೆದು ಯುದ್ಧಕ್ಕೆ ಆಹ್ವಾನ ನೀಡುವ, ಅನ್ಯಾಯವಾಗಿ ಬಲಿ ಪಡೆಯುವ ಪಾಕಿಸ್ಥಾನಿ ಸೈನಿಕರ ಇಂತಹ ವರ್ತನೆಗೆ ಬೇರೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ನೀಡಲು ಸಾಧ್ಯವಿಲ್ಲ.

 ಆಂಟನಿ ಹೊಣೆಗೇಡಿತನ

ಆದರೆ? ಭಾರತ ಸರ್ಕಾರದ ಪ್ರತಿಕ್ರಿಯೆ ಹೇಗಿತ್ತು? ಸಂಸತ್ತಿನಲ್ಲಿ ರಕ್ಷಣಾ ಸಚಿವ ಎ.ಕೆ.ಆಂಟನಿ ಐವರು ಸೈನಿಕರ ಹತ್ಯೆಗೆ ಸಂಬಂಧಿಸಿ ಸದಸ್ಯರಿಗೆ ನೀಡಿದ ಮಾಹಿತಿ ಎಂತಹದು? ಈ ಹೀನಕೃತ್ಯವನ್ನು ಉಗ್ರ ಶಬ್ದಗಳಲ್ಲಿ ಖಂಡಿಸಿ, ಪಾಕಿಸ್ಥಾನಕ್ಕೆ ಕಟುವಾದ ಎಚ್ಚರಿಕೆ ರವಾನಿಸುವ ಬದಲು, ಪಾಕಿಸ್ಥಾನವನ್ನು ಪಾರು ಮಾಡುವ ರೀತಿಯ ಹೇಳಿಕೆ ನೀಡಿರುವುದು ಇಡೀ ದೇಶವನ್ನು ಕೆರಳಿಸಿದೆ. ರಕ್ಷಣಾ ಸಚಿವರು ಸಂಸತ್ತಿನಲ್ಲಿ ‘ಈ ಹೀನಕೃತ್ಯ ಎಸಗಿದವರು ಪಾಕ್ ಯೋಧರ ಸಮವಸ್ತ್ರ ಧರಿಸಿದ ಭಯೋತ್ಪಾದಕರು’ ಎಂದು ಹೇಳಿದ್ದು ಬಿಜೆಪಿ, ಸಮಾಜವಾದಿ ಪಕ್ಷ ಸೇರಿದಂತೆ ಎಲ್ಲಾ ಸದಸ್ಯರನ್ನೂ ಆಕ್ರೋಶಗೊಳ್ಳುವಂತೆ ಮಾಡಿದೆ. ಈ ಹೇಳಿಕೆಯನ್ನು ಹಿಂದೆ ಪಡೆಯುವಂತೆ ೨ ದಿನ ಸಂಸತ್ತಿನಲ್ಲಿ ಭಾರೀ ಕೋಲಾಹಲವೇ ನಡೆಯಿತು. ಸೇನೆಯ ವರಿಷ್ಠರು ಮಾತ್ರ ಐವರು ಭಾರತೀಯ ಯೋಧರನ್ನು ಕೊಂದವರು ಪಾಕ್ ಯೋಧರೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ ಇಲ್ಲಿ ರಕ್ಷಣಾ ಸಚಿವರು ಸಂಸತ್ತಿಗೆ ನೀಡಿರುವ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎನ್ನುವುದು ಸ್ಪಷ್ಟವಾಗುವುದಿಲ್ಲವೆ? ರಕ್ಷಣಾ ಸಚಿವರ ಬೌದ್ಧಿಕ ದೀವಾಳಿತನ ಹಾಗೂ ಬೇಜವಾಬ್ದಾರಿ ವರ್ತನೆಯನ್ನು ಇದು ಬಯಲು ಮಾಡುವುದಿಲ್ಲವೆ? ರಕ್ಷಣಾ ಸಚಿವರಾಗಿ ಅವರಿಗೆ ಗಡಿ ನಿಯಂತ್ರಣ ರೇಖೆಯಲ್ಲಿ ನಿಜವಾಗಿ ನಡೆದzನು? ನಮ್ಮ ಐವರು ಸೈನಿಕರನ್ನು ಬರ್ಬರವಾಗಿ ಕೊಂದು ಹಾಕಿದ್ದು ಪಾಕ್ ಸೈನಿಕರೋ ಅಥವಾ ಪಾಕ್ ಸೈನಿಕರ ವೇಷದಲ್ಲಿದ್ದ ಉಗ್ರರೋ ಎಂಬ ಸ್ಪಷ್ಟ ಮಾಹಿತಿ ಸಿಗುವುದಿಲ್ಲವೆಂದರೆ ಏನರ್ಥ? ಸಂಸತ್ತಿಗೆ ಹೇಳಿಕೆ ನೀಡುವ ಮುನ್ನ ಸೇನೆಯ ವರಿಷ್ಠರನ್ನು ಸಂಪರ್ಕಿಸಿ ಅಧಿಕೃತ ಮಾಹಿತಿ ಪಡೆಯಬೇಕಾದ ಹೊಣೆ ಸಚಿವ ಆಂಟನಿ ಅವರದ್ದಾಗಿತ್ತು.

ಸಂಸತ್ತಿನಲ್ಲಿ ಇನ್ನೊಬ್ಬ ಕಾಂಗ್ರೆಸ್ ಸದಸ್ಯರು, ಕೇವಲ ಐವರು ಸೈನಿಕರು ಸತ್ತಿದ್ದಕ್ಕೆ ಲೋಕಸಭೆಯ ಅಮೂಲ್ಯ ಕಲಾಪವನ್ನು ಅಸ್ತವ್ಯಸ್ತಗೊಳಿಸಬೇಕೆ ಎಂದು ಹೇಳಿರುವುದು ಕಣ್ಣಿಗೆ ಎಣ್ಣೆ ಹಾಕಿ, ಪ್ರಾಣವನ್ನು ಪಣಕ್ಕಿಟ್ಟು ಗಡಿ ಕಾಯುವ ಸೈನಿಕರಿಗೆ ನಮ್ಮ ಜನಪ್ರತಿನಿಧಿಗಳು ಮಾಡಿರುವ ಅಪಚಾರಕ್ಕೆ ಸಾಕ್ಷಿಯಂತಿದೆ. ಸೈನಿಕರ ಪ್ರಾಣವೆಂದರೆ ಅಷ್ಟೊಂದು ಅಗ್ಗವೆ ಎಂಬ ಪ್ರಶ್ನೆಯನ್ನು ಈ ಸದಸ್ಯರಿಗೆ ಎಲ್ಲರೂ ಕೇಳಬೇಕಾಗಿದೆ.

ಇಸ್ರೇಲ್ ನಿದರ್ಶನ

ಅದು ಮುಂಬೈ ಸರಣಿ ಸ್ಫೋಟ ಘಟನೆ ನಡೆದ ಸಂದರ್ಭ. ಹೊಟೇಲ್ ತಾಜ್‌ಗೆ ಉಗ್ರರಿಂದ ಬೆಂಕಿ ಬಿದ್ದು ಅಲ್ಲಿದ್ದ ಬಹುತೇಕ ಮಂದಿ ಬೆಂದು ಹೋಗಿದ್ದರು. ಇಸ್ರೇಲ್‌ನ ಇಬ್ಬರು ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ಆ ಹೊಟೇಲ್‌ನಲ್ಲಿ ತಂಗಿದ್ದರು. ಹೊಟೇಲ್‌ಗೆ ಬಿದ್ದಿದ್ದ ಬೆಂಕಿ ಆ ದಂಪತಿಗಳಿಬ್ಬರನ್ನೂ ಆಹುತಿ ತೆಗೆದುಕೊಂಡಿತ್ತು. ಆದರೆ ಅವರ ಪುಟ್ಟ ಕಂದಮ್ಮನನ್ನು ಅಲ್ಲೇ ಇದ್ದ ನರ್ಸ್ ಒಬ್ಬಳು ಹೇಗೋ ಹೊರಗೆ ತಂದು ಪಾರು ಮಾಡಿದ್ದಳು. ಅದಾದ ಬಳಿಕ ಇಸ್ರೇಲ್ ಸರ್ಕಾರಕ್ಕೆ ಈ ವಿಷಯ ತಿಳಿದೊಡನೆ, ಆ ನರ್ಸನ್ನು ತಮ್ಮ ದೇಶಕ್ಕೆ ಕರೆಸಿ ಆಕೆಗೆ ಪೌರ ಸನ್ಮಾನ ನೀಡಿತ್ತು. ಆಕೆಯ ಸಾಹಸವನ್ನು ಕೊಂಡಾಡಲಾಗಿತ್ತು. ಇಸ್ರೇಲ್‌ನ ಒಬ್ಬ ಪುಟ್ಟ ಪ್ರಜೆಯನ್ನು ಕಾಪಾಡಿದ್ದಕ್ಕಾಗಿ ಆಕೆಗೆ ಇಂತಹದೊಂದು ಭವ್ಯ ಪೌರ ಸನ್ಮಾನ!

ಅದೇ ನಮ್ಮ ದೇಶದಲ್ಲಿ ಮೊನ್ನೆ ದೇಶದ ಗಡಿ ಕಾಯುತ್ತಾ ಪಾಕ್ ಸೈನಿಕರ ಗುಂಡಿಗೆ ಬಲಿಯಾದಾಗ ಆ ಐವರು ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದವರೆಷ್ಟು? ಕೇವಲ ಐವರು ಸೈನಿಕರ ಸಾವಿಗೆ ಸಂಸತ್ತಿನ ಅಮೂಲ್ಯ ಕಲಾಪವನ್ನು ಬಲಿ ಕೊಡಬೇಕೆ ಎಂದು ದಾರ್ಷ್ಟ್ಯದಿಂದ ಕೇಳಿದ ಜನಪ್ರತಿನಿಧಿಯ ಮಾನಸಿಕತೆ ಎಂತಹದು? ದೇಶದ ಗಡಿ ಕಾಯುವ ವೀರಯೋಧರೆಂದರೆ ಅವರೇನೂ ಯಾವುದೋ ಎಟಿಎಂ ಕಾಯುವ ಸೆಕ್ಯುರಿಟಿ ಗಾರ್ಡ್‌ಗಳಲ್ಲ ಅಥವಾ ಮನೆ ಕಾಯುವ ಯಕಃಶ್ಚಿತ್ ವಾಚ್‌ಮನ್ ಅಲ್ಲ. ಇಡೀ ದೇಶ ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವಾಗ ಈ ಸೈನಿಕರು ತಮ್ಮ ನೆಮ್ಮದಿಗೆ ತಿಲಾಂಜಲಿ ಕೊಟ್ಟು, ಕಣ್ಣಿಗೆ ಎಣ್ಣೆ ಹಾಕಿಕೊಂಡು ಶತ್ರುಪಡೆ ಗಡಿಯೊಳಗೆ ನುಸುಳದಂತೆ ಹಗಲೂರಾತ್ರಿ ಕಟ್ಟೆಚ್ಚರವಹಿಸಿ ಕಾಯುತ್ತಿರುತ್ತಾರೆ ಎಂಬ ಸಾಮಾನ್ಯ ಸಂಗತಿಯ ಅರಿವೇ ಈ ಜನಪ್ರತಿನಿಧಿಗೆ ಇಲ್ಲವೆಂದರೆ ಎಂತಹ ವಿಪರ್ಯಾಸ! ಗಡಿ ಕಾಯುವುದಕ್ಕೆ ಆ ಸೈನಿಕರಿಗೆ ಸಂಬಳ, ಸಾರಿಗೆ ಎಲ್ಲಾ ಸಿಗುತ್ತದೆ, ನಿಜ. ಆದರೆ ಯಾವುದೇ ಕ್ಷಣದಲ್ಲಿ ಆ ಸೈನಿಕರ ಜೀವಕ್ಕೆ ಏನು ಬೇಕಾದರೂ ಆಗಬಹುದು. ಅವರ ಪ್ರಾಣಕ್ಕೆ ಯಾವ ಸುರಕ್ಷತೆಯೂ ಇರುವುದಿಲ್ಲ. ಇಂತಹ ಸೈನಿಕರ ಬಗ್ಗೆ , ಅವರ ಪ್ರಾಣದ ಬಗ್ಗೆ ಅಗ್ಗದ ಮಾತುಗಳನ್ನಾಡುವ ರಾಜಕಾರಣಿಗಳಿಗೆ ಯಾವುದರಿಂದ ಹೊಡೆಯಬೇಕು, ನೀವೇ ಹೇಳಿ!

ಬರುವ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಭಾರತ ಹಾಗೂ ಪಾಕ್ ನಡುವೆ ಶಾಂತಿ ಮಾತುಕತೆ ನಿರ್ಧಾರವಾಗಿತ್ತು. ಪಾಕ್‌ನ ನೂತನ ಪ್ರಧಾನಿ ನವಾಜ್ ಶರೀಫ್ ಅವರೊಂದಿಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಯಾವುದೋ ಐಶಾರಾಮಿ ಹೊಟೇಲ್‌ನಲ್ಲಿ ಕುಳಿತು ಮಾತುಕತೆ ನಡೆಸಬೇಕಾಗಿತ್ತು. ಅಷ್ಟರಲ್ಲೇ ಶಾಂತಿ ಮಾತುಕತೆಗೆ ಧಕ್ಕೆ ತರುವಂತಹ ವಿದ್ಯಮಾನ ನಡೆದಿದೆ. ಹೀಗಿದ್ದರೂ ಸೆಪ್ಟೆಂಬರ್‌ನ ಆ ಶಾಂತಿ ಮಾತುಕತೆ ನಡೆಯಲಿದೆ ಎಂದು ಭಾರತ ಸರ್ಕಾರ ಐವರು ಸೈನಿಕರ ಹತ್ಯೆಯ ಬಳಿಕವೂ ಹೇಳುತ್ತಿದೆಯೆಂದರೆ, ನಮ್ಮ ಸರ್ಕಾರದ ಸ್ವಾಭಿಮಾನ್ಯ ಶೂನ್ಯತೆ ಹಾಗೂ ಪರಮಾದ್ಭುತ ಹೇಡಿತನದ ಬಗ್ಗೆ ಬೇರೆ ನಿದರ್ಶನಗಳೇ ಬೇಡ.

 ಶಾಂತಿ ಮಾತುಕತೆಯ ಪ್ರಹಸನ

ಪಾಕಿಸ್ಥಾನ ಪದೇಪದೇ ಗಡಿ ನಿಯಂತ್ರಣ ರೇಖೆ ದಾಟಿ ನಮ್ಮ ಸೈನಿಕರನ್ನು ಹಿಂಸಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಇಬ್ಬರು ಸೈನಿಕರ ಕತ್ತು ಕತ್ತರಿಸಿದ ಪಾಕ್ ಸೇನೆಯ ಹೀನ ಕೃತ್ಯ ಇಡೀ ವಿಶ್ವದ ಖಂಡನೆಗೆ ಒಳಗಾಗಿತ್ತು. ಅದರ ಬೆನ್ನಲ್ಲೇ ಮೇ ತಿಂಗಳಿನಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಸೇನಾನೆಲೆಗಳತ್ತ ಗುಂಡು ಹಾರಿಸಿದ ಘಟನೆ ನಡೆದಿತ್ತು. ಅದಾದ ಬಳಿಕ, ನವಾಜ್ ಶರೀಫ್ ಪಾಕ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡೇ ದಿನಗಳಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಮ್ಮ ಸೇನೆಯ ಕಿರಿಯ ದರ್ಜೆಯ ಅಧಿಕಾರಿಯನ್ನು ಸಾಯಿಸಿದ್ದರು. ಪಾಕಿಸ್ಥಾನಕ್ಕೆ ಭಾರತದೊಂದಿಗಿನ ಶಾಂತಿ ಮಾತುಕತೆಯೆಂದರೆ ಒಂದು ವಾರ್ಷಿಕ ತಮಾಷೆಯ ಕಾರ್ಯಕ್ರಮ ಎನಿಸಿಬಿಟ್ಟಿದೆ. ಪ್ರತಿ ವರ್ಷ ಇಂತಹ ಶಾಂತಿ ಮಾತುಕತೆ ದಿಲ್ಲಿಯಲ್ಲೊ, ನ್ಯೂಯಾರ್ಕ್‌ನಲ್ಲೊ ಅಥವಾ ಕರಾಚಿಯಲ್ಲೊ ನಡೆಯುತ್ತಲೇ ಇರುತ್ತದೆ. ಕೆಲವು ಬಾರಿ ಈ ಮಾತುಕತೆ ಮುಕ್ತಾಯವಾಗುವ ಮೊದಲೇ ಗಡಿಯಲ್ಲಿ ಪಾಕ್ ಸೈನಿಕರ ಬಂದೂಕು ಗರ್ಜಿಸಿ ಕೆಲವು ಆಹುತಿಗಳನ್ನು ತೆಗೆದುಕೊಳ್ಳುತ್ತದೆ. ಕಾರ್ಗಿಲ್ ಯುದ್ಧಕ್ಕೆ ಮುಂಚೆ ೧೯೯೯ ಫೆಬ್ರವರಿ ೨೧ರಂದು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲಾಹೋರ್‌ಗೆ ಬಸ್‌ನಲ್ಲಿ ತೆರಳಿ ನವಾಜ್ ಶರೀಫ್ ಅವರ ಹಸ್ತವನ್ನು ಕುಲುಕಿದ್ದರು. ವಾಜಪೇಯಿ ಚಾಚಿದ ಸ್ನೇಹ ಹಸ್ತಕ್ಕೆ ಬೆಚ್ಚಗೆ ಸ್ಪಂದಿಸಿದ ನವಾಜ್ ಶರೀಫ್ ಭಾರತ-ಪಾಕ್ ನಡುವೆ ಸ್ನೇಹ ಸೌಹಾರ್ದ ನಿರೀಕ್ಷೆಯನ್ನು  ನಿಜಗೊಳಿಸುವರೆಂದು ಹಲವರು ನಂಬಿದ್ದರು. ಅಂತಾರಾಷ್ಟ್ರೀಯ ಸಮುದಾಯ ಕೂಡ ಈ ಬೆಳವಣಿಗೆಗೆ ಸ್ವಾಗತ ಹಾಡಿತ್ತು. ಆದರೆ ಆದz ಬೇರೆ. ಪಾಕಿಸ್ಥಾನದ ಪ್ರಧಾನಿ ಮಾತಿಗೆ ತಕ್ಕಂತೆ ನಡೆದುಕೊಂಡಿರಲಿಲ್ಲ. ವಾಜಪೇಯಿ ಅವರೇನೋ ಲಾಹೋರ್‌ನಲ್ಲಿ ಶರೀಫ್ ಅವರನ್ನು ಭೇಟಿಯಾದಾಗ ‘ಜಂಗ್ ನ ಹೋನೇ ದೇಂಗೇ’ ಎಂದು ವಚನವಿತ್ತಿದ್ದರು. ಅದು ಮಾತ್ರ ಈಡೇರಲೇ ಇಲ್ಲ.ಇತಿಹಾಸದ ಪುಟಗಳನ್ನು ಕೆದಕಿದಾಗ ಇಂತಹ ಶಾಂತಿ ಮಾತುಕತೆಯ ಅದೆಷ್ಟೋ ಪ್ರಹಸನಗಳು ತೆರೆದುಕೊಳ್ಳುತ್ತವೆ. ಇವೆಲ್ಲ ಗೊತ್ತಿದ್ದೂ ಭಾರತ ಸರ್ಕಾರ ಮತ್ತೆ ಮತ್ತೆ ಶಾಂತಿ ಮಾತುಕತೆಗೆ ಮುಂದಾಗುತ್ತಿದೆಯೆಂದರೆ ಅಳಬೇಕೋ ನಗಬೇಕೋ ಅಥವಾ ಇನ್ನೇನು ಮಾಡಬೇಕೋ ಅರ್ಥವಾಗುತ್ತಿಲ್ಲ.

ಭಾರತ ವಿಭಜನೆಗೊಂಡು ಪಾಕಿಸ್ಥಾನವಾಗಿ ಬೇರ್ಪಟ್ಟಾಗ ಇನ್ನು ಭಾರತ – ಪಾಕಿಸ್ಥಾನದ ನಡುವೆ ಶಾಂತಿ ಸೌಹಾರ್ದ ನೆಲೆಸಬಹುದೆಂದು ಬಯಸಿದವರು ಹಲವರು. ಆದರೆ ಆzನು? ೧೯೪೭, ೧೯೬೫, ೧೯೭೧ ಹಾಗೂ ೧೯೯೯ – ಹೀಗೆ ನಾಲ್ಕು ಬಾರಿ ಪಾಕಿಸ್ಥಾನ ಭಾರತದೊಂದಿಗೆ ಕಾಲುಕೆರೆದು ಯುದ್ಧಕ್ಕೆ ಬಂದಿದೆ. ಆದರೆ ನಾಲ್ಕು ಬಾರಿಯೂ ಅದು ಸೋಲೊಪ್ಪಿಕೊಂಡು ಪಲಾಯನ ಮಾಡಿದೆ. ಹೀಗೆ ನಾಲ್ಕು ಬಾರಿ ಪಾಕಿಸ್ಥಾನ ಭಾರತದ ಮೇಲೆ ಯುದ್ಧ ಸಾರುವ ದಾರ್ಷ್ಟ್ಯ ತೋರಲು ಸ್ವಾತಂತ್ರ್ಯೋತ್ತರ ಕಾಂಗ್ರೆಸ್ ಪ್ರಭುತ್ವಗಳ ದೃಷ್ಟಿಮಾಂದ್ಯ ಹಾಗೂ ರಾಜಕೀಯ ವೈಫಲ್ಯವೇ ಕಾರಣ ಎನ್ನುವುದು ಹಗಲಿನಷ್ಟು ನಿಚ್ಚಳ. ಕಳೆದ ೬೬ ವರ್ಷಗಳಲ್ಲಿ ತಾನು ಕೊಟ್ಟ ಎಲ್ಲ ಭರವಸೆಗಳನ್ನು ಪಾಕಿಸ್ಥಾನ ಮುರಿದಿದೆ. ಪಾಕಿಸ್ಥಾನದೊಳಗೆ ಯಾವುದೇ ಗಂಭೀರ ಸಮಸ್ಯೆ ತಲೆದೋರಿದಾಗ ಅದು ಮಾಡುವ ಮೊದಲ ಕೆಲಸವೆಂದರೆ ಅಲ್ಲಿಯ ಜನರ ಭಾರತದ್ವೇಷವನ್ನು ಕೆರಳಿಸುವುದು. ಇದು ಪಾಕಿಸ್ಥಾನದ ಸಹಜ ಮಾನಸಿಕತೆಯೇ ಆಗಿದೆ. ಭಾರತದ ವಿರುದ್ಧ ಛದ್ಮಯುದ್ಧವನ್ನು ನಡೆಸುವುದೆಂದರೆ ಪಾಕಿಸ್ಥಾನಕ್ಕೆ ಭಾರೀ ಇಷ್ಟ. ಕಳೆದ ೧೬ ವರ್ಷಗಳಲ್ಲಿ ನಡೆದಿರುವುದು ಇಂತಹದೇ ಛದ್ಮ ಯುದ್ಧಗಳು. ಕಾಶ್ಮೀರದಲ್ಲಿ, ಇತರೆಡೆಗಳಲ್ಲಿ ಇಂತಹ ಛದ್ಮ ಯುದ್ಧಗಳಿಗೆ ಈವರೆಗೆ ೩೬ ಸಾವಿರಕ್ಕೂ ಹೆಚ್ಚು ಜನರ ಬಲಿಯಾಗಿದೆ. ಸಿಮ್ಲಾ ಮತ್ತಿತರ ಒಪ್ಪಂದಗಳಿಗೆ ಪಾಕಿಸ್ಥಾನ ಕವಡೆಯಷ್ಟೂ ಬೆಲೆಕೊಟ್ಟಿಲ್ಲ. ಲಾಹೋರ್ ಘೋಷಣೆಯ ಪರಿಣಾಮವಂತೂ ಎಲ್ಲರಿಗೂ ಗೊತ್ತಿರುವಂತಹುದೇ,

ಪಾಕಿಸ್ಥಾನಕ್ಕೆ, ಅಸಲಿಗೆ ಭಾರತದೊಂದಿಗೆ ಸ್ನೇಹದಿಂದಿರುವುದು ಖಂಡಿತಕ್ಕೂ ಇಷ್ಟವಿಲ್ಲ. ಅಲ್ಲಿ ಯಾವುದೇ ಸರ್ಕಾರ ಬರಲಿ, ಭಾರತದೊಂದಿಗೆ ಜಗಳ ತೆಗೆಯುವುದೇ ಆ ಸರ್ಕಾರದ ಮೊದಲ ಅಜೆಂಡಾ ಆಗಿರುತ್ತದೆ. ಅದು ಜರ್ದಾರಿಯಾಗಿರಲಿ, ಬೆನಜೀರ್ ಭುಟ್ಟೋ ಇರಲಿ ಅಥವಾ ನವಾಜ್ ಶರೀಫ್ ಯಾರೇ ಪ್ರಧಾನಿ ಆಗಿರಲಿ ಭಾರತದ್ವೇಷದಲ್ಲಿ ಕಿಂಚಿತ್ತೂ ಬದಲಾವಣೆ ಇರುವುದಿಲ್ಲ. ಹೀಗಾಗಿ ಪಾಕಿಸ್ಥಾನದ ಧೋರಣೆ ಏನೆಂಬ ಬಗ್ಗೆ ಯಾರಿಗೂ ಯಾವುದೇ ಸಂದೇಹಕ್ಕೆ ಆಸ್ಪದವೇ ಇರುವುದಿಲ್ಲ! ೧೯೯೯ರ ಜುಲೈ ೧೫ರಂದು ದೂರದರ್ಶನ ಸಂವಾದದಲ್ಲಿ ಪಾಕಿಸ್ಥಾನದ ನಿವೃತ್ತ ಉಪದಂಡನಾಯಕ ಕೆ.ಎಂ.ಆರಿಫ್ ಹೇಳಿದ್ದನ್ನು ಕೇಳಿ: ‘`Kargil is the beginning of India’s troubles’’. ಐಎಸ್‌ಐನ ಮಾಜಿ ಪ್ರಮುಖ ಹಮೀದ್ ಗುಲ್ ಅವರೇ ತಮ್ಮ ಯೋಜನೆಯನ್ನು ಸಾರಿರುವುದು ಹೀಗೆ: ‘`India’s forces have to be bled, humilated and exposed… We must devise a strategy to break India. Don’t take it on directly; get inside and bleed it..’ ಐಎಸ್‌ಐನ ಇನ್ನೊಬ್ಬ ಮಾಜಿ ಪ್ರಮುಖ ಎಂ.ಎ.ದುರಾನಿ ಹೇಳಿದ ಮಾತನ್ನು ಕೇಳಿ: ‘`Gone is the bhai-bhai myth, the japha (embrace) diplomacy of Lahore. We can never be friends. Let’s evolve a good enemy relationship.’

 ಲಡಾಸು ಕೋವಿಗಳೇ ಗತಿ!

ಪದೇಪದೇ ಪಾಕಿಸ್ಥಾನದ ಅನಪೇಕ್ಷಿತ ಆಕ್ರಮಣದಿಂದ ಅನ್ಯಾಯವಾಗಿ ಸಾವಿಗೀಡಾಗುವ ನಮ್ಮ ಸೈನಿಕರನ್ನು ನಾವು ತುಚ್ಛವಾಗಿ ಕಾಣುತ್ತಲೇ ಇzವೆ. ಅಷ್ಟೇ ಅಲ್ಲ, ನಮ್ಮ ಸೈನಿಕರಿಗೆ ಕೊಡಲಾಗುವ ಶಸ್ತ್ರಾಸ್ತ್ರಗಳ ಬಗ್ಗೆಯೂ ಭಾರತ ಸರ್ಕಾರಕ್ಕೆ ಅದೇ ದಿವ್ಯ ನಿರ್ಲಕ್ಷ್ಯಭಾವ ಇರುವುದು ಇನ್ನೊಂದು ಅಪಾಯಕಾರಿ ಬೆಳವಣಿಗೆ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರಿಗೆ ಲಭ್ಯವಿದ್ದುದು ಬಹುಮಟ್ಟಿಗೆ ೧೯೬೦ರಷ್ಟು ಹಿಂದಿನ ಲಡಾಸು ಕೋವಿಗಳು. ಈ ಕೋವಿಗಳು ಒಂದು ಬಾರಿಗೆ ಕೇವಲ ಮೂರು ಸುತ್ತು ಗುಂಡುಗಳನ್ನು ಎಸೆಯಬಲ್ಲವು. ಆದರೆ ಪಾಕ್ ಸೈನಿಕರಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಎ.ಕೆ. ಕೋವಿಗಳು ಒಮ್ಮೆಗೆ ೨೦ ಸುತ್ತು ಗುಂಡುಗಳನ್ನು ಎಸೆಯಬಲ್ಲವು. ತಮ್ಮ ಸೇನೆ ಹಿಂದೆ ಕೋರಿದ್ದ ಲೇಸರ್‌ಚಾಲಿತ ನಿರ್ದೇಶಕ ಮೊದಲಾದ ಸಾಧನಗಳನ್ನು ಸರ್ಕಾರದ ರಕ್ಷಣಾ ಖಾತೆ ಒದಗಿಸಿದ್ದರೆ ಕಾರ್ಗಿಲ್ ಯುದ್ಧದಲ್ಲಿ ಅಷ್ಟೊಂದು ಅಪಾರ ಪ್ರಮಾಣದ ಸೈನಿಕರ ಪ್ರಾಣಹಾನಿಯಾಗುತ್ತಿರಲಿಲ್ಲ. ನಮ್ಮ ಸೇನೆಯಲ್ಲಿರುವ ೩ ಸಾವಿರ ಟ್ಯಾಂಕುಗಳಲ್ಲಿ ೧,೨೦೦ ವೈಜಯಂತ ಟ್ಯಾಂಕುಗಳು ೩೦ ವರ್ಷ ಹಿಂದಿನವು. ಹೀಗೆ ಅದೆಷ್ಟೋ ತಾಂತ್ರಿಕ ಕೊರತೆಗಳು. ಈ ಕೊರತೆಗಳ ಜೊತೆಗೆ ಸೇನೆಯಲ್ಲಿ ಅಧಿಕಾರಿಗಳ ಕೊರತೆಯೇ ೧೩ ಸಾವಿರದಷ್ಟಿದೆ. ಕಾರ್ಗಿಲ್ ಯುದ್ಧದ ನಂತರವೂ ಈ ಕೊರತೆಯನ್ನು ನೀಗಲಾಗಿಲ್ಲ. ನಿಜವಾಗಿ ಕಾರ್ಗಿಲ್ ಯುದ್ಧವನ್ನು ನಮ್ಮ ಸೈನಿಕರು ಗೆದ್ದಿದ್ದು ತಮ್ಮ ಬಳಿಯಿದ್ದ ಲಡಾಸು ಕೋವಿಗಳಿಂದಲ್ಲ, ಆದರೆ ಅತ್ಯದ್ಭುತ ಸ್ವಾಭಿಮಾನ ಹಾಗೂ ಕೆಚ್ಚೆದೆಯ ದೇಶಪ್ರೇಮದ ಮೂಲಕ! ಅದೊಂದಿಲ್ಲದಿರುತ್ತಿದ್ದರೆ ಕಾರ್ಗಿಲ್ ಯುದ್ಧದಲ್ಲಿ ಭಾರತ ಸೋತು ಸೊರಗಿ ಹೋಗಬೇಕಾಗಿತ್ತು.

ಆದರೆ ನಮ್ಮನ್ನಾಳುವ ರಾಜಕಾರಣಿಗಳಿಗೆ ಇದು ಅರ್ಥವಾಗುವುದಾದರೂ ಹೇಗೆ? ನಮ್ಮ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕೆಂಬುದರ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಎಂದಾದರೂ ಒಂದು ಘನಗಂಭೀರ ಚರ್ಚೆ ನಡೆದಿದ್ದನ್ನು ನೀವು ಕೇಳಿದ್ದೀರಾ? ಕೆಲಸಕ್ಕೆ ಬಾರದ ಅನೇಕ ವಿಷಯಗಳ ಬಗ್ಗೆ ವಾರಗಟ್ಟಲೆ ಚರ್ಚೆ ನಡೆಯುತ್ತದೆ. ಆದರೆ ದೇಶದ ರಕ್ಷಣೆಯ ಬಗ್ಗೆ , ದೇಶವನ್ನು ರಕ್ಷಿಸುತ್ತಿರುವ ಸೈನಿಕರ ಬಗ್ಗೆ , ಅವರ ಪ್ರಾಣ ರಕ್ಷಣೆಯ ಬಗ್ಗೆ ಯಾಕೆ ಚರ್ಚೆಗಳು ನಡೆಯುತ್ತಿಲ್ಲ? ಅದೇನೂ ಮುಖ್ಯವಲ್ಲವೆ? ನಮ್ಮ ಸೈನಿಕರು ಹೀಗೆಯೇ ಅನ್ಯಾಯವಾಗಿ ಸಾಯುತ್ತಿರಬೇಕೆ?

ಮೊನ್ನೆ ಐವರು ಸೈನಿಕರ ಹತ್ಯೆಯ ಬಗ್ಗೆ ಸಂಸತ್ತಿನಲ್ಲಿ ಯಾರು ಎಷ್ಟೇ ಆರ್ಭಟಿಸಿದರೂ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ತುಟಿಪಿಟಕ್ ಎನ್ನಲಿಲ್ಲ. ಆಸ್ಟ್ರೇಲಿಯಾದಲ್ಲಿ ಬೆಂಗಳೂರಿನ ಮಹಮದ್ ಎಂಬ ವೈದ್ಯನನ್ನು ಬಂಧಿಸಿದಾಗ ಅವರಿಗೆ ರಾತ್ರಿ ನಿದ್ದೆಯೇ ಬಂದಿರಲಿಲ್ಲವಂತೆ! ನಮ್ಮದೇ ಐವರು ಸೈನಿಕರು ಸತ್ತಾಗ ಅವರಿಗೆ ನಿದ್ದೆ ಬಂತೋ ಇಲ್ಲವೋ ಗೊತ್ತಿಲ್ಲ. ಆದರೆ ಕನಿಷ್ಠ ಸಂತಾಪ ಸೂಚಿಸುವಷ್ಟು ಸೌಜನ್ಯವೂ ಅವರಿಗಿಲ್ಲವೆಂಬುದು ಸಾಬೀತಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತ್ರ ಕಾಂಗ್ರೆಸ್ ಪಕ್ಷ ಮತ್ತು ಭಾರತ ಎರಡೂ ಹುತಾತ್ಮ ಸೈನಿಕರೊಂದಿಗಿದೆ ಎಂಬ ಹೇಳಿಕೆ ನೀಡಿ ದಂಗುಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಭಾರತದ ಭಾಗವಲ್ಲ , ಭಾರತ ಬೇರೆ, ಕಾಂಗ್ರೆಸ್ ಪಕ್ಷವೇ ಬೇರೆ ಎಂಬುದನ್ನು ಈ ಹೇಳಿಕೆ ಮೂಲಕ ಅವರೇ ಒಪ್ಪಿಕೊಂಡಂತಾಗಿದೆ!

 ಇಂತಹ ಅವಿವೇಕಿಗಳ ಕೈಯಲ್ಲಿ ಆಡಳಿತ ಸೂತ್ರ ಇದ್ದರೆ ಇನ್ನೇನು ಅನಾಹುತಗಳು ಆಗಲಿವೆಯೋ..!

 ನಮ್ಮ ದೇಶದಲ್ಲಿ ಮೊನ್ನೆ ದೇಶದ ಗಡಿ ಕಾಯುತ್ತಾ ಪಾಕ್ ಸೈನಿಕರ ಗುಂಡಿಗೆ ಬಲಿಯಾದಾಗ ಆ ಐವರು ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದವರೆಷ್ಟು? ಕೇವಲ ಐವರು ಸೈನಿಕರ ಸಾವಿಗೆ ಸಂಸತ್ತಿನ ಅಮೂಲ್ಯ ಕಲಾಪವನ್ನು ಬಲಿ ಕೊಡಬೇಕೆ ಎಂದು ದಾರ್ಷ್ಟ್ಯದಿಂದ ಕೇಳಿದ ಜನಪ್ರತಿನಿಧಿಯ ಮಾನಸಿಕತೆ ಎಂತಹದು? ದೇಶದ ಗಡಿ ಕಾಯುವ ವೀರಯೋಧರೆಂದರೆ ಅವರೇನೂ ಯಾವುದೋ ಎಟಿಎಂ ಕಾಯುವ ಸೆಕ್ಯುರಿಟಿ ಗಾರ್ಡ್‌ಗಳಲ್ಲ ಅಥವಾ ಮನೆ ಕಾಯುವ ಯಕಃಶ್ಚಿತ್ ವಾಚ್‌ಮನ್ ಅಲ್ಲ. ಇಡೀ ದೇಶ ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವಾಗ ಈ ಸೈನಿಕರು ತಮ್ಮ ನೆಮ್ಮದಿಗೆ ತಿಲಾಂಜಲಿ ಕೊಟ್ಟು, ಕಣ್ಣಿಗೆ ಎಣ್ಣೆ ಹಾಕಿಕೊಂಡು ಶತ್ರುಪಡೆ ಗಡಿಯೊಳಗೆ ನುಸುಳದಂತೆ ಹಗಲೂರಾತ್ರಿ ಕಟ್ಟೆಚ್ಚರವಹಿಸಿ ಕಾಯುತ್ತಿರುತ್ತಾರೆ ಎಂಬ ಸಾಮಾನ್ಯ ಸಂಗತಿಯ ಅರಿವೇ ಈ ಜನಪ್ರತಿನಿಧಿಗೆ ಇಲ್ಲವೆಂದರೆ ಎಂತಹ ವಿಪರ್ಯಾಸ!

 

Leave a Reply

Your email address will not be published.

This site uses Akismet to reduce spam. Learn how your comment data is processed.