
ಉತ್ತರಪ್ರದೇಶ: ಏಪ್ರಿಲ್ 13 ಮತ್ತು 14 ನೇ ತಾರೀಕು ಅವಧ್ ಪ್ರಾಂತದ ಬಾರಬಂಕಿಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸರ್ವಸಾಧಾರಣ ಸಭೆಯಲ್ಲಿ ಕರ್ನಾಟಕ ಪ್ರಾಂತದ ಮಹಿಳಾ ಕಾರ್ಯಕರ್ತರು ಪ್ರಕಟಿಸಿದ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ರಚನೆಯಾಗಿರುವ ಗ್ರಾಹಕ ದಿಕ್ಸೂಚಿ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಸ್ವದೇಶಿ ಜಾಗರಣಾ ಮಂಚ್ ನ ರಾಷ್ಟ್ರೀಯ ಸಹಸಂಚಾಲಕ ಸತೀಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನ ರಾಷ್ಟ್ರೀಯ ಅಧ್ಯಕ್ಷ ನಾರಾಯಣಭಾಯಿ ಶಹಾ ಕೃತಿಯನ್ನು ಬಿಡುಗಡೆ ಮಾಡಿದರು.

ಕಳೆದ 2024 ಜೂನ್ 29 ರಿಂದ 31ರವರೆಗೆ ಬೆಂಗಳೂರಿನಲ್ಲಿ ನಡೆದ ಗ್ರಾಹಕ ಪಂಚಾಯತಿನ ಕೇಂದ್ರೀಯ ಮಹಿಳಾ ಜಾಗರಣ ಕಾರ್ಯಶಾಲಾ ಹಾಗೂ ಮಹಿಳಾ ಜಾಗರಣ ಸಮಾವೇಶದಲ್ಲಿ ಪುಸ್ತಕವು ಕನ್ನಡದಲ್ಲಿ ಪ್ರಕಟವಾಗಿತ್ತು. ಈ ಗ್ರಾಹಕ ದಿಕ್ಸೂಚಿ ಪುಸ್ತಕವು ಗ್ರಾಹಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಾರ್ಯಕರ್ತರಿಗೆ ಒಂದು ದಿಕ್ಸೂಚಿಯಾಗಲಿದೆ ಎಂದು ರಾಷ್ಟ್ರೀಯ ಮಹಿಳಾ ಆಯಾಮದ ಪ್ರಮುಖರಾದ ಆಶಾ ಸಿಂಗವರು ತಿಳಿಸಿದರು.


ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖರಾದ ಗಾಯತ್ರಿ ನಾಡಿಗ್ ಅವರು ಪುಸ್ತಕದ ಬಗ್ಗೆ ತಿಳಿಸುತ್ತಾ ಗ್ರಾಹಕ ಪಂಚಾಯತಿನ ಮಹಿಳಾ ಆಯಾಮದಿಂದ ಮೊದಲ ಬಾರಿಗೆ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಗ್ರಾಹಕನ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸಲು ಈ ಪುಸ್ತಕವು ದಿಕ್ಸೂಚಿಯಾಗಲಿದೆ. ಗ್ರಾಹಕ ಪಂಚಾಯಿತಿನಲ್ಲಿ ಮಹಿಳಾ ಸಹಭಾಗಿತ್ವ, ಪರ್ಯಾವರಣ, ಆಹಾರ ಸಂರಕ್ಷಣೆ, MRP, ಉಪಭೋಕ್ತವಾದ, ಯೋಗ, ಇಂದಿನ ಮಹಿಳೆಯರ ಸ್ಥಿತಿಗತಿ, ಮಹಿಳೆಯರಿಗೆ ಡಿಜಿಟಲ್ ಶಿಕ್ಷಣದ ಅವಶ್ಯಕತೆ ಹಾಗೂ ಸೈಬರ್ ಸಮಸ್ಯೆಗಳು ಮುಂತಾದ ಹಲವು ವಿಷಯಗಳ ಲೇಖನಗಳಿವೆ ಎಂದು ತಿಳಿಸಿದರು.
ದೇಶಾದ್ಯಂತ ಆಗಮಿಸಿದ್ದ ಪ್ರಾಂತದ ಮಹಿಳಾ ಆಯಾಮದ ಪ್ರತಿನಿಧಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಆರ್ ಎಸ್ ಎಸ್ ಶತಮಾನೋತ್ಸವದ ಸಂದರ್ಭದಲ್ಲಿ ಗ್ರಾಹಕ ಪಂಚಾಯತ್ ಸಹಭಾಗಿತ್ವ ಮತ್ತು ಸಮಾಜದಲ್ಲಿ ಪಂಚ ಪರಿವರ್ತನೆಗಳ ಕುರಿತು ಗ್ರಾಹಕ ಪಂಚಾಯಿತಿನ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ್ ಅವರು ತಿಳಿಸಿದರು.
