ಮಹಿಳಾ ಸಮ್ಮೇಳನ ‘ನಾರೀ ಶಕ್ತಿ ಸಂಗಮ’ದ ಸ್ವಾಗತ ಸಮಿತಿ ರಚನೆ

ಬೆಂಗಳೂರು: ಸಮರ್ಥ ಭಾರತದ ವತಿಯಿಂದ ನವೆಂಬರ್ 26 ರಂದು ಬಸವನಗುಡಿಯ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಮಹಿಳಾ ಸಮ್ಮೇಳನ ‘ನಾರೀ ಶಕ್ತಿ ಸಂಗಮ’ ನಡೆಯಲಿದೆ.

ಈ ಕಾರ್ಯಕ್ರಮದ ನಿಮಿತ್ತ ಸ್ವಾಗತ ಸಮಿತಿ ಸಭೆ ಬೆಂಗಳೂರಿನ ರಂಗರಾವ್ ರಸ್ತೆಯಲ್ಲಿರುವ ಉತ್ತುಂಗದಲ್ಲಿ ನವೆಂಬರ್ 9, 2023ರಂದು ನಡೆಯಿತು.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಹಾಗೂ ಉಪಾಧ್ಯಕ್ಷೆಯಾಗಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಲ್. ಗೋಮತಿದೇವಿ ನೇತೃತ್ವವನ್ನು ವಹಿಸಲಿದ್ದಾರೆ. ಆಹ್ವಾನಿತ 20 ಮಂದಿ ಗಣ್ಯರನ್ನು ಸ್ವಾಗತ ಸಮಿತಿ ಸದಸ್ಯರನ್ನಾಗಿ ನಿಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಸಮ್ಮೇಳನದ ಹಿನ್ನೆಲೆ ಹಾಗೂ ಉದ್ದೇಶಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಹಿಳಾ ಸಮನ್ವಯದ ದಕ್ಷಿಣ ಪ್ರಾಂತ ಸಹ ಸಂಯೋಜಕಿ ವಸಂತ ಸ್ವಾಮಿ, ಸಮಿತಿಯ ಕಾರ್ಯಕರ್ತೆಯರಾದ ಉಷಾ ಜಗದೀಶ್, ತೇಜಸ್ವಿನಿ, ಉದಯಾ ಭಟ್ ಉಪಸ್ಥಿತರಿದ್ದರು.

ಮಹಿಳಾ ಸಮ್ಮೇಳನದ ಕುರಿತು

ನವೆಂಬರ್ 26, 2023 ರಂದು ನಡೆಯಲಿರುವ ಈ ಮಹಿಳಾ ಸಮ್ಮೇಳನವು ಸಮಾಜದ ಬಗ್ಗೆ ಕಳಕಳಿಯಿರುವ ಮಹಿಳೆಯರ ಏಕತ್ರೀಕರಣ, ವಿವಿಧ ವೃತ್ತಿಯಲ್ಲಿರುವ ಮಹಿಳೆಯರಿಗೆ ಸಮಾಜಮುಖಿ ದೃಷ್ಟಿ ನೀಡುವುದು, ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಮಾಜಸೇವೆಯ ಅವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಆಯೋಜನೆಗೊಳ್ಳಲಿದೆ.

ಸುಮಾರು 2000 ಮಹಿಳೆಯರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹಾಗೂ ರಾಷ್ಟ್ರೀಯ ವಿಚಾರಗಳ ಮಂಥನ, ಪರ್ಯಾವರಣ ಸಂರಕ್ಷಣೆ ಮುಂತಾದ ಚಟುವಟಿಕೆಗಳ ಕಾರ್ಯಾಗಾರ, ಭಾರತದ ಮಹಿಳಾ ಸಾಧಕಿಯರ ಪರಿಚಯಾತ್ಮಕ ಪ್ರದರ್ಶಿನಿ, ರಾಷ್ಟ್ರೀಯ ಸಾಹಿತ್ಯ ಮಳಿಗೆ, ವನವಾಸಿ, ಗೋ ಉತ್ಪನ್ನ ಹಾಗೂ ಸ್ವದೇಶಿ ಮಳಿಗೆಗಳು ಇರಲಿವೆ.

ಈ ಕಾರ್ಯಕ್ರಮವನ್ನು ಕರ್ನಾಟಕದ ಸಾಮಾಜಿಕ, ಆರ್ಥಿಕ, ನಾಗರಿಕ, ಪರಿಸರ ಮತ್ತು ಇತರೆ ಸವಾಲುಗಳನ್ನು ಎದುರಿಸುವ ಗುರಿಯನ್ನು ಹೊಂದಿರುವ ಸ್ವಯಂಸೇವಕ ವೇದಿಕೆ ‘ಸಮರ್ಥ ಭಾರತ’ ಇದರ ಸಹಯೋಗದಲ್ಲಿ ನಡೆಸಲಾಗುತ್ತಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.