ಇಂದಿನ ದಿನಗಳಲ್ಲಿ ಅರಣ್ಯವು ಅರಣ್ಯಗಳ್ಳರ ಕಾರಣದಿಂದಾಗಿ ನಾಶಗೊಳ್ಳುತ್ತಿರುವ ಪ್ರಮಾಣ ತುಸು ಹೆಚ್ಚೇ ಇದೆ. ಮರ, ಗಿಡಗಳನ್ನ ಕಡಿದು ಅರಣ್ಯವನ್ನೇ ಒತ್ತುವರಿ ಮಾಡಿಕೊಳ್ಳುತ್ತಿರುವುದೂ ಸಹಜವೆಂಬಂತಾಗಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಅಧಿಕಾರಿಗಳು ಹಗಲಿರಳು ಶ್ರಮಿಸುತ್ತಿದ್ದಾರೆ. ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರಿದ್ದಾರೆ. ಅಂತಹ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸೆಪ್ಟೆಂಬರ್‌ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ಅವರ ನಿಸ್ವಾರ್ಥ ಕೊಡುಗೆಗಳನ್ನು ನೆನಪಿಸುವ ಮತ್ತು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನೆರವಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ಥೀಮ್‌ “Honoring the Sacrifices of those who Defended Forests and Wildlife”.


ಇತಿಹಾಸ
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಮೂಲವು ಭಾರತದ ಅತ್ಯಂತ ಮಹತ್ವದ ಪರಿಸರ ಚಳವಳಿಗಳಲ್ಲಿ ಒಂದಾದ ಬಿಷ್ಣೋಯಿ ಹೋರಾಟದಲ್ಲಿ ಬೇರೂರಿದೆ. 1730ರಲ್ಲಿ ಮಹಾರಾಜ ಅಭಯ್ ಸಿಂಗ್ ರಾಥೋಡ್ ಖೇಜಾರ್ಲಿಯ ಬಿಷ್ಣೋಯ್ ಗ್ರಾಮದ ಬಳಿ ಮರಗಳನ್ನು ತೆರವುಗೊಳಿಸಲು ಸಜ್ಜಾಗಿದ್ದರು. ಈ ವೇಳೆ ಪ್ರಕೃತಿಯ ಬಗ್ಗೆ ಆಳವಾದ ಗೌರವಕ್ಕೆ ಹೆಸರುವಾಸಿಯಾದ ಬಿಷ್ಣೋಯ್ ಸಮುದಾಯವು ತಮ್ಮ ಗ್ರಾಮವಾದ ಖೇಜರ್ಲಿಯಲ್ಲಿ ಖೇಜ್ರಿ ಮರಗಳನ್ನು ಕಡಿಯುವುದನ್ನು ವಿರೋಧಿಸಿತು. ಕೋಟೆಯೊಂದನ್ನು ನಿರ್ಮಿಸುವುದಕ್ಕೆ ಮರಗಳನ್ನ ಕಡಿಯಬೇಕಾಗಿತ್ತು. ಆದರೆ ಬಿಷ್ಣೋಯ್ ಜನರು ಪರಿಸರ ಸಂರಕ್ಷಣೆಯ ಉಳುವಿಗಾಗಿ ಆದ್ಯತೆ ನೀಡಿ ಎಂದು ಶಾಂತವಾಗಿಯೇ ಪ್ರತಿರೋಧಿಸಲು ನಿರ್ಧರಿಸಿದರು. ಈ ವೇಳೆ ಘೋರ ಹತ್ಯಾಕಾಂಡವೇ ನಡೆದಿತ್ತು. ಇದರಲ್ಲಿ 363 ಬಿಷ್ಣೋಯ್ ಪುರುಷರು, ಮಹಿಳೆಯರು ಮತ್ತು ಮಕ್ಕಳು ಮರಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದರು. ಈ ಹತ್ಯಾಕಾಂಡವನ್ನು ಪರಿಸರ ಸಂರಕ್ಷಣೆಗಾಗಿ ನಡೆದ ಸಾರ್ವಕಾಲಿಕವಾಗಿ ಸ್ಮರಣಿಸಲ್ಪಡುವ ತ್ಯಾಗದ ಉದಾಹರಣೆಯಾಗಿ ನೆನಪಿಸಿಕೊಳ್ಳಲಾಗುತ್ತದೆ. ಬಿಷ್ಣೋಯ್ ಸಮುದಾಯದ ತ್ಯಾಗವು ನಮ್ಮ ನೈಸರ್ಗಿಕ ಜಗತ್ತನ್ನು ರಕ್ಷಿಸುವ ಕರೆಯಾಗಿ ಇತಿಹಾಸದಾದ್ಯಂತ ಪ್ರತಿಧ್ವನಿಸುತ್ತದೆ. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವು ಈ ಐತಿಹಾಸಿಕ ಘಟನೆಯನ್ನು ಸ್ಮರಿಸುವುದಲ್ಲದೆ, ಭವಿಷ್ಯದ ಪೀಳಿಗೆಗಾಗಿ ನಮ್ಮ ಪರಿಸರವನ್ನು ಸಂರಕ್ಷಿಸಲು ನಡೆದ ಹೋರಾಟವನ್ನು ತಿಳಿಸಿದೆ.
ಖೇಜರ್ಲಿ ಹತ್ಯಾಕಾಂಡದ ನಂತರ ಅರಣ್ಯ ಸಂರಕ್ಷಣೆಯ ಆಂದೋಲನವು ವೇಗವನ್ನು ಪಡೆಯಿತು. ಪರಿಸರ ಸಂಘಟನೆಗಳು ಮತ್ತು ಕಾರ್ಯಕರ್ತರು ಪ್ರಕೃತಿಯನ್ನು ರಕ್ಷಿಸಿದವರ ತ್ಯಾಗವನ್ನು ಗುರುತಿಸಲು ಪ್ರಚಾರ ಮಾಡಿದರು. ನಂತರ ಅಂತಿಮವಾಗಿ 1982ರಲ್ಲಿ ಭಾರತ ಸರ್ಕಾರವು ಸೆಪ್ಟೆಂಬರ್ 11 ಅನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿತು. ಅಂದಿನಿಂದ ಇಂದಿನ ವರೆಗೂ ಪ್ರತಿ ವರ್ಷ ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಭಾರತವು ಕಾಡು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಪ್ರಾಣ ಕಳೆದುಕೊಂಡ ಎಲ್ಲಾ ವ್ಯಕ್ತಿಗಳನ್ನು ಗೌರವಿಸಲು ಬಂದಿದೆ. ಅರಣ್ಯ ಅಧಿಕಾರಿಗಳು, ರೇಂಜರ್ ಗಳು, ವನ್ಯಜೀವಿ ಕಾರ್ಯಕರ್ತರು, ಸ್ಥಳೀಯ ಸಮುದಾಯಗಳು ಮತ್ತು ಅರಣ್ಯನಾಶ, ಬೇಟೆ ಮತ್ತು ಇತರ ಬೆದರಿಕೆಗಳ ವಿರುದ್ಧ ನಿಂತ ಎಲ್ಲರನ್ನೂ ಈ ದಿನದಂದು ಸ್ಮರಿಸಲಾಗುತ್ತದೆ.


ಮಹತ್ವ
ಪರಿಸರ ಜಾಗೃತಿ: ಈ ದಿನವು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ನಿರ್ಣಾಯಕ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ತ್ಯಾಗಕ್ಕೆ ಗೌರವ: ಪರಿಸರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ.
ಕ್ರಮಕ್ಕಾಗಿ ಸಲಹೆ: ಪರಿಸರ ರಕ್ಷಿಸುವುದಕ್ಕಾಗಿ ಪ್ರತಿಯೊಬ್ಬರು ಕಠಿಣ ಕ್ರಮ ವಹಿಸುವಂತೆ ಮಾಹಿತಿ ನೀಡಲು ಈ ದಿನ ಸಹಕಾರಿಯಾಗಿದೆ.
ಜೀವಂತ ಪರಂಪರೆ: ನಮ್ಮ ನೈಸರ್ಗಿಕ ಪರಂಪರೆಯನ್ನು ರಕ್ಷಿಸುವಲ್ಲಿ ಮತ್ತು ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ಖಾತ್ರಿಪಡಿಸುವಲ್ಲಿ ನಾವೆಲ್ಲರೂ ಹಂಚಿಕೊಳ್ಳುವ ಜವಾಬ್ದಾರಿಯನ್ನು ಇದು ನಮಗೆ ನೆನಪಿಸುತ್ತದೆ.
ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು : ಅರಣ್ಯಗಳು ಶುದ್ಧ ಗಾಳಿ, ನೀರು ಮತ್ತು ಜೀವವೈವಿಧ್ಯಕ್ಕೆ ಕೊಡುಗೆ ನೀಡುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ. ಅವರ ಪ್ರಾಮುಖ್ಯತೆಯನ್ನು ಗುರುತಿಸುವುದರಿಂದ ಜನರು ತಮ್ಮ ಅವನತಿಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಉತ್ತೇಜಿಸುತ್ತದೆ.
ಶೈಕ್ಷಣಿಕ ಪರಿಣಾಮ: ಶಾಲೆಗಳು ಮತ್ತು ಸಂಸ್ಥೆಗಳು ಆಗಾಗ್ಗೆ ಈ ದಿನದಂದು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಆರೋಗ್ಯಕರ ಗ್ರಹವನ್ನು ಕಾಪಾಡಿಕೊಳ್ಳುವಲ್ಲಿ ಅರಣ್ಯಗಳ ಪಾತ್ರ ಮತ್ತು ಅವುಗಳನ್ನು ರಕ್ಷಿಸುವ ಮಹತ್ವದ ಬಗ್ಗೆ ತಿಳಿಸಲಾಗುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.