ಬೆಂಗಳೂರು, ಮಾರ್ಚ್ 19, 2025 : ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಈ ಬಾರಿ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ, ಮಾರ್ಚ್ 21-23ರವರೆಗೆ ನಡೆಯಲಿದ್ದು, ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯುನ್ನತ ನೀತಿ-ನಿರ್ಧಾರ ಕೈಗೊಳ್ಳುವ ವಾರ್ಷಿಕ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಇದರ ಉದ್ಘಾಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಉಪಸ್ಥಿತಿಯಲ್ಲಿ ಮಾರ್ಚ್ 21, 2024ರಂದು ಬೆಳಗ್ಗೆ 9:00 ಗಂಟೆಗೆ ನಡೆಯಲಿದೆ.  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂಘಕಾರ್ಯದ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಲಿದ್ದಾರೆ. ಅದರ ಜೊತೆಗೆ ವಿವಿಧ ಪ್ರಾಂತಗಳ ಕಾರ್ಯಕರ್ತರಿಂದ ರಾಷ್ಟ್ರವ್ಯಾಪಿ ನಡೆದ ವಿವಿಧ ಚಟುವಟಿಕೆಗಳ ಕುರಿತೂ ವರದಿ ನೀಡಲಾಗುತ್ತದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಅವರು “ಈ ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷಗಳನ್ನು ಪೂರೈಸಲಿದೆ. ಈ ನಿಮಿತ್ತ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸಂಘದ ಕಾರ್ಯವಿಸ್ತಾರದ ಕುರಿತು ಚರ್ಚೆಗಳು ನಡೆಯಲಿವೆ. 2025ರ ವಿಜಯದಶಮಿಯಿಂದ 2026ರ ವಿಜಯದಶಮಿಯವರೆಗೆ ಸಂಘ ಶತಾಬ್ದಿಯ ವರ್ಷ ಎಂದು ಕರೆಯಲಾಗುತ್ತದೆ. ಎಲ್ಲಾ ವರ್ಗದ ಜನರನ್ನು ಜೋಡಿಸಿಕೊಂಡು ಪ್ರಭಾವಿಯುತವಾಗಿ ಹಾಗೂ ವ್ಯಾಪಕವಾಗಿ ಕಾರ್ಯವಿಸ್ತಾರದ ಕೆಲಸ ಆಗಲಿದೆ. ಪಂಚಪರಿವರ್ತನೆ (ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ) ಕಾರ್ಯದ ಕುರಿತೂ ಚರ್ಚಿಸಿ ಎಲ್ಲಾ ಸ್ತರದ ಜನರನ್ನು ಈ ನಿಟ್ಟಿನಲ್ಲಿ ಜೋಡಿಸಿಕೊಳ್ಳುವ ಕುರಿತು ಯೋಜನೆಗಳನ್ನು ರೂಪಿಸಲಾಗುತ್ತದೆ.

ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ 2 ನಿರ್ಣಯಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಕಟಪಡಿಸಲಿದೆ. ಮೊದಲನೆಯದ್ದು ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಇತರೆ ಅಲ್ಪಸಂಖ್ಯಾತರ ಮೇಲೆ ದಾಳಿ ಸೇರಿದಂತೆ ಕಾಳಜಿ ವಹಿಸಬೇಕಾದ ಘಟನಾವಳಿಗಳ ಕುರಿತಾದರೆ, ಎರಡನೆಯದ್ದು ಕಳೆದ ನೂರು ವರ್ಷಗಳ ಸಂಘದ ಪಯಣ, ಶತಾಬ್ದಿ ವರ್ಷದ ಕಾರ್ಯ ಹಾಗೂ ಮುಂದಿನ ಯೋಜನೆಗಳ ಕುರಿತಾಗಿರುತ್ತದೆ.

ಹಾಗೆಯೇ 1525ರಲ್ಲಿ ಕರ್ನಾಟದಲ್ಲಿ ಜನಿಸಿದ ಶೌರ್ಯಶಾಲಿ ವೀರಾಗ್ರಣಿ ರಾಣಿ ಅಬ್ಬಕ್ಕ ಅವರ 500ನೇ ವರ್ಷದ ಜಯಂತಿಯನ್ನು ಸ್ಮರಿಸಲು ಅಖಿಲ ಭಾರತೀಯ ಪ್ರತಿನಿಧಿ ಸಭೆ ವಿಶೇಷ ಹೇಳಿಕೆಯನ್ನು ಬಿಡುಗಡೆ ಮಾಡಲಿದೆ. ಈ ಹೇಳಿಕೆಯು ರಾಣಿ ಅಬ್ಬಕ್ಕ ಅವರ ಅಪ್ರತಿಮ ಕೊಡುಗೆಗಳನ್ನು ಗುರುತಿಸುತ್ತದೆ.

ಆರ್‌ಎಸ್‌ಎಸ್ ತರಬೇತಿ ಕಾರ್ಯಕ್ರಮಗಳ (ಪ್ರಶಿಕ್ಷಣ ವರ್ಗಗಳು) ಕುರಿತು ಮಾತನಾಡಿದ ಅವರು, ಈ ವರ್ಷ ಆರ್‌ಎಸ್‌ಎಸ್ 95 ಪ್ರಶಿಕ್ಷಣ ವರ್ಗಗಳನ್ನು ನಡೆಸಲಿದೆ ಎಂದರು. ಇದರಲ್ಲಿ ಸಂಘ ಶಿಕ್ಷಾ ವರ್ಗ, ಕಾರ್ಯಕರ್ತರ ವಿಕಾಸ ವರ್ಗ – 1 ಮತ್ತು ಕಾರ್ಯಕರ್ತ ವಿಕಾಸ ವರ್ಗ – 2 ಸೇರಿವೆ. ಅಂತಹ 72 ವರ್ಗಗಳನ್ನು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನಡೆಸಲಾಗುವುದು, 23 ವರ್ಗಗಳು 40 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಇರುತ್ತವೆ ಎಂದು ಅವರು ಹೇಳಿದರು. ಹಾಗೆಯೇ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರ ರಾಷ್ಟ್ರವ್ಯಾಪಿ ಪ್ರವಾಸವನ್ನು ನಿರ್ಣಯಿಸಲಾಗುತ್ತದೆ.

32 ಸಂಘ ಪ್ರೇರಿತ ಸಂಘಟನೆಗಳ ಸಂಘಟನಾ ಮಂತ್ರಿಗಳು ಮತ್ತು ಸಹ ಸಂಘಟನಾ ಮಂತ್ರಿಗಳು  3-ದಿನದ ಸಭೆಯಲ್ಲಿ ಭಾಗವಹಿಸುತ್ತಾರೆ. ಭಾರತೀಯ ಮಜ್ದೂರ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ್ ಸಂಚಾಲಿಕಾ ವಿ.ಶಾಂತಾಕುಮಾರಿ, ಬಿಜೆಪಿಯ ಜೆಪಿ ನಡ್ಡಾ, ಎಬಿವಿಪಿಯ ರಾಜ್ ಶರಣ್, ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್, ವನವಾಸಿ ಕಲ್ಯಾಣ ಆಶ್ರಮದ ಸತ್ಯೇಂದ್ರ ಸಿಂಗ್, ವಿದ್ಯಾಭಾರತಿ ಸೇರಿದಂತೆ ಹಲವು ಸಂಘಟನೆಗಳು ಎಬಿಪಿಎಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹಸರಕಾರ್ಯವಾಹರುಗಳು, ಅನ್ಯ ಪದಾಧಿಕಾರಿಗಳ ಸಹಿತ ಕಾರ್ಯಕಾರಿಣಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ. ಪ್ರಮುಖವಾಗಿ ಬೈಠಕ್ ಗೆ ಕ್ಷೇತ್ರೀಯ ಹಾಗೂ ಪ್ರಾಂತ ಸ್ತರದ 1480 ಆಹ್ವಾನಿತ ಪ್ರತಿನಿಧಿಗಳು ಅಪೇಕ್ಷಿತರಿದ್ದಾರೆ.

ಅಖಿಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನವಾದ ಮಾರ್ಚ್ 23, 2025 ಭಾನುವಾರ ಬೆಳಗ್ಗೆ 11:30ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.