
ಬೆಂಗಳೂರು: ಅಸ್ಪೃಶ್ಯತೆ ತಪ್ಪಲ್ಲದಿದ್ದಲ್ಲಿ ಜಗತ್ತಿನಲ್ಲಿ ಯಾವುದೂ ತಪ್ಪಲ್ಲ ಎಂದು ಹೇಳಿದವರು ಬಾಳಾ ಸಾಹೇಬ ದೇವರಸರು. ಹಿಂದೂ ಸಮಾಜದಲ್ಲಿ ಸಾಮರಸ್ಯದ ಭಾವ ಜಾಗರಣಕ್ಕೆ ಮಹತ್ವಕೊಟ್ಟು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿ ತುರ್ತು ಪರಿಸ್ಥಿತಿ, ರಾಮ ಜನ್ಮಭೂಮಿ ಆಂದೋಲನ ಸೇರಿದಂತೆ ಅತ್ಯಂತ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಿದವರು. ವಿವಿಧ ಕ್ಷೇತ್ರಗಳಲ್ಲಿ ಸಂಘಟನೆಯ ಕಾರ್ಯಕ್ಕೆ ಬಲವನ್ನು ತುಂಬಿದವರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ. ನಾಗರಾಜ ಹೇಳಿದರು.



ಮಂಥನ ಕರ್ನಾಟಕ ವತಿಯಿಂದ ಮಲ್ಲೇಶ್ವರದ ಗರಿಜಾರಾಮ ದೈವಜ್ಞ ಭವನ ಸಭಾಂಗಣದಲ್ಲಿ ಆಯೋಜಿಸಲಾದ ಸಾಹಿತ್ಯ ಸಂಗಮ ಪ್ರಕಟಿತ ‘ಶ್ರೀ ಬಾಳಾಸಾಹೇಬ ದೇವರಸ್: ಸಾರ್ಥಕ ಬದುಕಿನ ಪರಿಚಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಸರಸಂಘಚಾಲಕರು ಸ್ವಯಂಸೇವಕರಿಗೆ ಮಾತ್ರ ಸರಸಂಘಚಾಲಕರಲ್ಲ, ಸಂಪೂರ್ಣ ಹಿಂದೂ ಸಮಾಜಕ್ಕೆ ಸರಸಂಘಚಾಲಕರು. ಸಂಘದ ತತ್ತ್ವದ ಮಾರ್ಗದರ್ಶಕರೂ ಹೌದು. ಎಲ್ಲಾ ಸಂದರ್ಭದಲ್ಲೂ ಕಾರ್ಯಕರ್ತರಿಗೆ ಯೋಗ್ಯ ಮಾರ್ಗದರ್ಶನ ಸರಸಂಘಚಾಲಕರಿಂದ ದೊರಕುತ್ತದೆ. ಅಂತಹ ಸ್ಥಾನದಲ್ಲಿ 21 ವರ್ಷಗಳ ಕಾಲ ಜವಾಬ್ದಾರಿ ನಿರ್ವಹಿಸಿದವರು ಬಾಳಾಸಾಹೇಬ ದೇವರಸರು ಎಂದರು.



ಡಾ. ಹೆಡಗೇವಾರ್ ಅವರಿಂದ ಶುರುವಾದ ಮೋಹಿತೆವಾಡದ ಶಾಖೆಗೆ ತಮ್ಮ 11ನೇ ವರ್ಷದಲ್ಲಿ ಸೇರಿ, ಅವರ ಗರಡಿಯಲ್ಲಿ ಪಳಗಿದರು. ಬಾಳಾ ಸಾಹೇಬ ದೇವರಸ್ ಅವರು ಸಾಮಾನ್ಯ ಸ್ವಯಂಸೇವಕರಿಂದ ಸರಸಂಘಚಾಲಕರ ಜವಾಬ್ದಾರಿಯವರೆಗೆ ಕಾರ್ಯನಿರ್ವಹಿಸಿದವರು. ಡಾ.ಹೆಡಗೇವಾರ್ ಹೇಗಿದ್ದರೆಂದು ಗೊತ್ತಾಗಬೇಕಿದ್ದರೆ ಬಾಳಾ ಸಾಹೇಬರನ್ನು ನೋಡಿ ಎಂದು ಸ್ವತಃ ಗುರೂಜಿ ಗೋಳ್ವಲ್ಕರ್ ಹೇಳಿದ್ದರು. ಮಾತು, ಯೋಚನೆ, ಅನುಶಾಸನ, ನಿರ್ಧಾರವೆಲ್ಲವೂ ಡಾ.ಹೆಡಗೇವಾರ್ ಅವರಂತೇ ಇತ್ತು ಎಂದು ತಿಳಿಸಿದರು.



ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಟಿ ಎಸ್ ವೆಂಕಟೇಶ್, ಪ್ರಾಂತ ಸಂಘಚಾಲಕ ಜಿ ಎಸ್ ಉಮಾಪತಿ, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲೇಖಕರು, ಉಪನ್ಯಾಸಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.



