ಬೆಂಗಳೂರು, ಜೂನ್ 29, 2025: ಮಾಧ್ಯಮಗಳು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸ್ವಾತಂತ್ರ್ಯ ಹೋರಾಟವನ್ನು ಅವಲೋಕಿಸಿದಾಗಲೂ ನಾಡಿನ ಸ್ವರಾಜ್ಯಕ್ಕಾಗಿ ಅಂದಿನ ಪತ್ರಿಕೆಗಳು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದವು. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟದ ಅಧ್ವರ್ಯುಗಳು ಪತ್ರಕರ್ತರಾಗಿದ್ದರು ಎಂಬುದು ಗಮನಾರ್ಹ ಸಂಗತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹೇಳಿದರು.

ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾದ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಇದರ ವತಿಯಿಂದ ಕೊಡಮಾಡುವ 2025ನೇ ಸಾಲಿನ ವಾರ್ಷಿಕ ವಿಎಸ್ ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲಾ ಕಾಲದಲ್ಲೂ ಪ್ರತಿಯೊಂದು ಕ್ಷೇತ್ರದಲ್ಲೂ ಒಳ್ಳೆಯದು, ಕೆಟ್ಟದು ಎಂಬುದು ಇದ್ದೇ ಇರುತ್ತದೆ. ಇದರಿಂದಾಗಿ ಕೇಳಿಬರುವ ಟೀಕೆಗಳಿಗೆ ಪತ್ರಿಕಾರಂಗವೂ ಹೊರತಾಗಿಲ್ಲ. ಆದರೆ ಪ್ರತಿ ಕ್ಷೇತ್ರವೂ ಒಳ್ಳೆಯದನ್ನು ಹುಡುಕಬೇಕು, ಗುರುತಿಸಬೇಕು, ಹರಡಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಮಾದರಿಯನ್ನು ನಂಬಿದೆ ಎಂದರು.

ಅಂದಿನ ಹೋರಾಟಗಾರರು ಆ ಕಾಲದ ತಂತ್ರಜ್ಞಾನವಾದ ಮುದ್ರಣ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡರು. ಕರ್ನಾಟಕದಲ್ಲೂ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕನ್ನಡದ ನೆಲದಲ್ಲಿ ಸ್ವದೇಶ ಪ್ರೇಮವನ್ನು, ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದರು. ಪತ್ರಿಕಾ ಮಾಧ್ಯಮವೆಂಬ ವೀರಪಂಥವನ್ನು ಹಿಡಿದು ಮಾರ್ಗದರ್ಶನ ಮಾಡಿದವರು. ನಿರ್ಬಂಧಗಳಿದ್ದಾಗಲೂ ಜನರಿಗೆ ಮುಟ್ಟಿಸಬೇಕಾದ ವಿಷಯಗಳನ್ನು ಸಮರ್ಥವಾಗಿ ತಲುಪಿಸಲಾಗುತ್ತಿತ್ತು ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಅಧ್ಯಕ್ಷ ಡಾ॥ ವಿ. ಶ್ರೀಧರ ಅವರು ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ ಅವರಿಗೆ ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿ, ಸುಧರ್ಮಾ ಸಂಸ್ಕೃತ ಪತ್ರಿಕೆಯ ಸಂಪಾದಕಿ ಮೈಸೂರಿನ ಕೆ.ಎಸ್.ಜಯಲಕ್ಷ್ಮಿ ಅವರಿಗೆ ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಹಾಯಕ ಸ್ಥಾನೀಯ ಸಂಪಾದಕ ರಾಮು ಪಾಟೀಲ್ ಅವರಿಗೆ ಎಂ.ವಿ.ಕಾಮತ್ ಪತ್ರಿಕೋದ್ಯಮ ಪ್ರಶಸ್ತಿ, ನ್ಯೂಸ್ 18 ಕನ್ನಡದ ಹರಿಪ್ರಸಾದ್ ಎ ಅವರಿಗೆ ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿ, ಖ್ಯಾತ ಅಂಕಣಕಾರ ರಾಧಾಕೃಷ್ಣ ಕಲ್ಚಾರ್ ಅವರಿಗೆ ಹೊ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿ, ಟಿವಿ ವಿಕ್ರಮದ ಮುಮ್ತಾಜ್ ಅಬ್ದುಲ್ ನೆಲ್ಯಡ್ಕ ಅವರಿಗೆ ವಿಎಸ್ ಕೆ ಡಿಜಿಟಲ್ ಮಾಧ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಇದರ ವಿಶ್ವಸ್ತರಾದ ಎಸ್ ಎಸ್ ನರೇಂದ್ರ ಕುಮಾರ್, ಡಾ. ಎಂ.ಕೆ.ಶ್ರೀಧರನ್, ರಾಧಾಕೃಷ್ಣ ಹೊಳ್ಳ, ಸತ್ಯನಾರಾಯಣ ಶಾನಭಾಗ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು, ಅಂಕಣಕಾರರು, ಸಾಮಾಜಿಕ ಜಾಲತಾಣಿಗರು, ಸಾಮಾಜಿಕ ಕಾರ್ಯಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.