ಶಕ್ತಿ ಸಂಪನ್ನ ಭಾರತ

ಭಾರತ ಬಡ ದೇಶವಲ್ಲ. ಭಾರತ ದುರ್ಬಲ, ಕೈಲಾಗದ ದೇಶವಲ್ಲ. ಭಾರತದ ಶಕ್ತಿ ಅಡಗಿರುವುದು ಅದರ ಸಂಸ್ಕೃತಿಯಲ್ಲಿ. ಅದರ ಜನರ ದೈಹಿಕ ಮತ್ತು ಬೌದ್ಧಿಕ ಶಕ್ತಿಗಳಲ್ಲಿ. ತನ್ನನ್ನು ತಾನು ಸುಧಾರಿಸಿಕೊಂಡು ಮುಂದುವರೆಯುವ ಸ್ವಭಾವದಲ್ಲಿ, ಮಹಿಳೆಯರು ತಾಯಂದಿರು ಮನೆಗಳಲ್ಲಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ  ಅಡಗಿದೆ. ರೈತರ ದುಡಿಮೆಯಲ್ಲಿ, ಕಾರ್ಮಿಕರ ಶ್ರಮದಲ್ಲಿ, ದೇಶದ ಶಕ್ತಿ ಅಡಗಿದೆ. ವಿಜ್ಞಾನಿ-ತಂತ್ರಜ್ಞಾನಿಗಳ ಸಮರ್ಪಿತ  ಸಂಶೋಧನೆಗಳಲ್ಲಿ, ಕವಿ-ಸಾಹಿತಿಗಳ ಸೃಜನಶೀಲತೆಯಲ್ಲಿ, ಸಿನೆಮಾ- ಸಂಗೀತ-ನೃತ್ಯ ಕ್ಷೇತ್ರಗಳ ನುರಿತ ಕಲೆಯಲ್ಲಿ, ಕಾರು-ಆಟೋ- ಬಸ್ಸು-ರೈಲು ಚಾಲಕರ ಚುರುಕುತನದಲ್ಲಿ, ಮಾಧ್ಯಮ ಮಿತ್ರರ  ಸಂವಹನಾ ಕೌಶಲ್ಯದಲ್ಲಿ, ವಿದ್ಯಾರ್ಥಿಗಳ ಬುದ್ಧಿ- ಚಿಂತನೆಗಳಲ್ಲಿ, ಅಧ್ಯಾಪಕರ ಕಲಿಕೆ ಕಲಿಸುವಿಕೆಗಳಲ್ಲಿ ದೇಶದ ಶಕ್ತಿ ಅಡಗಿದೆ.

ಭಾರತದ ಬಗ್ಗೆ ಬರೆದಷ್ಟೂ ಕಡಿಮೆ. ಇಲ್ಲಿ ನೀಡಿರುವ ಮಾಹಿತಿಗಳು ನೀರ ಮೇಲೆ ತೇಲುವ ನೀರ್ಗಲ್ಲ ತುದಿ ಮಾತ್ರ. 

ಭಾರತವೆಂದರೆ.. .. ..

  • ಜಗತ್ತಿನ ಏಳನೇ ಅತಿ ದೊಡ್ಡ ರಾಷ್ಟ್ರ ಭಾರತ, ಉತ್ತರದಿಂದ ದಕ್ಷಿಣಕ್ಕೆ 3214ಕಿ.ಮೀ., ಪೂರ್ವದಿಂದ ಪಶ್ಚಿಮಕ್ಕೆ 2933ಕಿ.ಮೀ ಉದ್ದ-ಅಗಲ ಹೊಂದಿದೆ. ಒಟ್ಟು ಕರಾವಳಿ ತೀರ 7516ಕಿ.ಮೀ. ಭಾರತದ ಒಟ್ಟು ವಿಸ್ತೀರ್ಣ- 32,87,263ಕಿ.ಮೀ
  • ಅತಿ ಹೆಚ್ಚಿನ ರಾಷ್ಟ್ರಗಳೊಂದಿಗೆ 15,106ಕಿ.ಮೀಯಷ್ಟು ಬೃಹತ್ ವ್ಯಾಪ್ತಿಯ ಅಂತರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿರುವ ರಾಷ್ಟ್ರ ಭಾರತ. 7 ದೇಶಗಳ ಜತೆಗೆ ಭಾರತ ಅಂತರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ.
  • 16.4.1853ರಂದು ಮುಂಬೈನಿಂದ ಪ್ರಾರಂಭಗೊಂಡ ಈ ಸಂಸ್ಥೆಯ, ಅತ್ಯಂತ ಹೆಚ್ಚಿನ 1.56ಮಿಲಿಯನ್ ಉದ್ಯೋಗಿಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಸಂಸ್ಥೆ- ಭಾರತೀಯ ರೈಲ್ವೇ
  • ಪ್ರಾಚೀನ ಭಾರತದಲ್ಲಿದ್ದ ಖ್ಯಾತ ಹಾಗೂ ವಿಶ್ವದ ಮೊದಲ ವಿಶ್ವವಿದ್ಯಾಲಯ- ತಕ್ಷಶಿಲಾ
  • ಮಾರ್ಚ್ 2003ರ ಗಣತಿಯ ಪ್ರಕಾರ, 55,78೦ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಭಾರತದಲ್ಲಿ ಪ್ರಕಾಶಿತವಾಗುತ್ತವೆ. ಈ ಪೈಕಿ ಇಡೀ ಭಾರತದಲ್ಲೇ ಅತಿ ಹೆಚ್ಚು ಪ್ರಸಾರವುಳ್ಳ ದಿನಪತ್ರಿಕೆ- ದೈನಿಕ್ ಜಾಗರಣ್
  • ವಿಶ್ವ ಪ್ರಸಿದ್ಧ ಭಾರತೀಯ ಚಿತ್ರ ನಿರ್ದೇಶಕ, ಮರೆಯಲಾರದ ಚಿತ್ರಗಳಾದ ಪಥೇರ್ ಪಾಂಚಾಲಿ, ಅಪರಾಜಿತೊ, ಅಪುರ್ ಸಂಸಾರ್, ಚಾರುಲತಾ, ಘರೇ ಬೈರೇ ಚಿತ್ರಗಳು ಇವರ ಕೊಡುಗೆ. 1992 ನಿಧನರಾದ ಈ ಮಹಾನ್ ಕಲಾವಿದ -ಸತ್ಯಜಿತ್ ರೇ
  • ಚಂದ್ರನತ್ತ ಉಪಗ್ರಹ ಕಳುಹಿಸಿ 6ನೇ ದೇಶ ಭಾರತ. ಈ ಯೋಜನೆಯ ಹೆಸರು ಚಂದ್ರಯಾನ. ಈ ಯೋಜನೆಯ ಮೂಲ ಹೆಸರು – ಸೋಮಯಾನ
  • ಪೈಥಾಗೋರಸ್ ಪ್ರಮೇಯವನ್ನು ಮೊದಲೇ ಕಂಡುಕೊಂಡಿದ್ದ ಪ್ರಾಚೀನ ಭಾರತದ ರೇಖಾಗಣಿತಜ್ಞ- ಬೋಧಾಯನ
  • ಕೃತಕಜೀನ್ ಆವಿಷ್ಕಾರಕ್ಕಾಗಿ ನೊಬೆಲ್ ಪುರಸ್ಕೃತ ಭಾರತೀಯ ವಿಜ್ಞಾನಿ- ಡಾ| ಹರ್‌ಗೋಬಿಂದ್ ಖುರಾನಾ
  • ಪ್ಲಾಸ್ಟಿಕ್ ಸರ್ಜರಿ ಕುರಿತು ಸಮರ್ಪಕ ಮಾಹಿತಿ ತಿಳಿದಿದ್ದ ಪ್ರಾಚೀನ ಭಾರತದ ಶ್ರೇಷ್ಠ ಶಸ್ತ್ರಚಿಕಿತ್ಸಕ- ಸುಶ್ರುತ
  • ’ಪರಮ್-1೦,೦೦೦’ ಈ ಸೂಪರ್ ಕಂಪ್ಯೂಟರ್ ನಿರ್ಮಾತೃ ಡಾ| ವಿಜಯ್ ಭಾಟ್ಕರ್

ಜಗತ್ತಿನ 7 ನೇ ಅತಿ ದೊಡ್ಡ ದೇಶ, 4ನೇ ದೊಡ್ಡ ಸೈನ್ಯ, 3ನೇ ದೊಡ್ಡ ರೈಲ್ವೆ, 2ನೇ ಹೆಚ್ಚು ಜನಸಂಖ್ಯೆಯ ದೇಶ, 2ನೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ, 2ನೇ ಅತಿ ದೊಡ್ಡ ಅಕ್ಕಿ ಮತ್ತು ಚಹಾ ಉತ್ಪಾದಕ, ಕಾಗೆ ಬಂಗಾರ (ಮೈಕಾ) ಮತ್ತು ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿ ನಂ.1, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ, ಜಗತ್ತಿನ ಅತಿ ದೊಡ್ಡ ಕಾರ್ಮಿಕ ಶಕ್ತಿ, 2020 ರಲ್ಲಿ ವಿಶ್ವಶಕ್ತಿಯ ಸಾಮರ್ಥ್ಯದ ದೇಶ. ಏಕೆ ? ಹೇಗೆ ?

ಭಾರತ ಹೇಗಿತ್ತು ?

1೦,೦೦೦ ವರ್ಷಗಳ ಕಾಲ ಭಾರತ ವಿಶ್ವದ ಗೌರವ ಆಕರ್ಷಣೆಗಳ ಕೇಂದ್ರವಾಗಿತ್ತು. ಬ್ರಿಟಿಷರು ಕಾಲಿಡುವ ತನಕ ಜಗತ್ತಿನ ಅತಿ ಶ್ರೀಮಂತ ದೇಶವಾಗಿತ್ತು. 7೦೦ಕ್ರಿ.ಪೂ. ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ – ಜಗತ್ತಿನ 1೦,5೦೦ ವಿದ್ಯಾರ್ಥಿಗಳು, 6೦ ವಿಷಯಗಳಲ್ಲಿ ಅಧ್ಯಯನ. ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ಜಗತ್ತಿನ ಮೊದಲ ಗ್ರಾನೈಟ್ ದೇವಸ್ಥಾನ, 8೦ ಟನ್ ತೂಕದ ಏಕಶಿಲೆಯಿಂದ ಮಾಡಿದ್ದು. ೦ ಕಂಡುಹಿಡಿದವನು ಆರ್ಯಭಟ. 235೦ ಕ್ರಿ.ಪೂ. ಶಾಲಿಹೋತ್ರ ಪಶುವೈದ್ಯ ಶಾಸ್ತ್ರದ ಪಿತಾಮಹ.

ಮುಂಬೈ ಡಬ್ಬಾವಾಲಾಗಳು

188೦ರಲ್ಲಿ ಆರಂಭವಾದ ಮುಂಬೈಯಲ್ಲಿ ಊಟದ ಬುತ್ತಿ ಪೂರೈಸುವ ಡಬ್ಬಾವಾಲಾಗಳ ಕೆಲಸ ಅದೀಗ ಮ್ಯಾನೇಜ್‌ಮೆಂಟ್ ಜಗತ್ತಿನಲ್ಲಿ ಕುತೂಹಲ ಮೂಡಿಸಿದೆ. 5,೦೦೦ ಡಬ್ಬಾವಾಲಾಗಳ ದಿನಕ್ಕೆ 4,೦೦,೦೦೦ ಡಬ್ಬಿಗಳಂತೆ ಅವರಿಗೆ ಬೇಕಾದ ಊಟವನ್ನೇ 3 ಗಂಟೆಗಳ ಒಳಗಾಗಿ ತಲುಪಿಸುವ 99.9999ರಷ್ಟು ನಿಖರವಾಗಿ ತಲುಪಿಸುವ ವ್ಯವಸ್ಥೆಯು ಕಂಪ್ಯೂಟರ್‌ನ ನಿಖರತೆಯನ್ನೂ ಮೀರಿದೆ. ಸಿಕ್ಸ್ ಸಿಗ್ಮಾ ಅಲಂಕೃತರು – ಹೆಚ್ಚಿನವರು ಅನಕ್ಷರಸ್ತರು – ಆದರೆ ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಿದ್ದಾರೆ.ಇನ್ನೊಂದು ವಿಶೇಷವೆಂದರೆ ಡಬ್ಬಾವಾಲಾಗಳು 116 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ನಿರಶನ ಅಥವಾ ಮುಷ್ಕರ ಹೂಡಿಲ್ಲ. 5೦ ಕೋಟಿ ರೂ.ಗಳ ಈ ವ್ಯವಹಾರದಲ್ಲಿ ಪ್ರತಿಯೊಬ್ಬ ಡಬ್ಬಾವಾಲಾನೂ ಸಹ ಪಾಲುದಾರನೇ. ಈ ಸಂಸ್ಥೆಗೆ ಐಎಸ್‌ಒ 2೦೦೦ ಮಾನ್ಯತೆ ದೊರೆತಿದೆ. ಸರಾಸರಿ 8ನೇ ತರಗತಿ ಓದಿರುವ ಡಬ್ಬಾವಾಲಾಗಳ ಉಪಜೀವನವು ಇದೀಗ ಎಮ್‌ಬಿಎ ವಿದ್ಯಾರ್ಥಿಗಳಿಗೆ ಇಂದು ಮಾದರಿಯಾಗಿದೆ.

ವೈಜ್ಞಾನಿಕ ಸಾಧನೆಗಳು

ಇಸ್ರೋ-ಎತ್ತಿನ ಗಾಡಿಯಿಂದ ಜಿ.ಎಸ್.ಎಲ್.ವಿ. ವರೆಗೆ ಸಾಧನೆಗಳ ವಿಕ್ರಮ. ಅಮೇರಿಕದ ಅಂತರಿಕ್ಷ ಬಜೆಟ್ 16 ಬಿಲಿಯನ್(8,೦೦೦ ಕೋಟಿ ರೂ.) ಡಾಲರ್ ಆದರೆ ಇಸ್ರೋದ್ದು – 7೦೦ ಮಿಲಿಯನ್ ಡಾಲರ್(35೦ ಕೋಟಿ ರೂ.)ಮಾತ್ರ.

ಭಾರತದ ಹೆಮ್ಮೆಯ ಚಂದ್ರಯಾನ ಉಡಾವಣೆ ಯಶಸ್ವಿಯಾದಾಗ ‘ಕತಾರ್ ಟ್ರಿಬ್ಯೂನ್’ ಪತ್ರಿಕೆಯಲ್ಲಿ ‘ಅಲ್ ವತನ್’ ಪತ್ರಿಕಾ ಬಳಗದ ಮುಖ್ಯಸ್ಥ ಅಹಮದ್ ಅಲಿ ಬರೆಯುತ್ತಾರೆ – “ನಾವು ಅರಬರು ಇನ್ನೂ ಆಲೂಗಡ್ಡೆ ಚಿಪ್ಸ್ ಮಾಡುವದರಲ್ಲಿದ್ದೇವೆ. ಭಾರತದವರು ಚಂದ್ರನಿಗೆ ಲಗ್ಗೆ ಇಟ್ಟಿದ್ದಾರೆ. ನಾವು ಭಾರತದ ಡ್ರೈವರ್ ಆಗಿರಲಿ, ಸಾಮಾನ್ಯ ಕಾರ್ಮಿಕನೇ ಆಗಿರಲಿ ಅವನನ್ನು ಗೌರವದಿಂದ ಕಾಣಲೇಬೇಕು, ಏಕೆಂದರೆ ಅದಕ್ಕೆ ಅವರು ಯೋಗ್ಯರು. ನಾವಾದರೋ ಪರಸ್ಪರ ಕುತಂತ್ರ ಹೂಡುವದರಲ್ಲಿ, ಕಿತ್ತಾಡುವುದರಲ್ಲಿ, ಒಡಕು ಮೂಡಿಸುವುದರಲ್ಲಿ. ನಾವು ಕೇವಲ ಕವನಗಳನ್ನು ಬರೆಯುತ್ತಾ, ವಿಲಾಸ ಮಾಡುತ್ತಾ ಇರಬಲ್ಲೆವು. ಈಗ ನಾವು ಮಾಡಬಹುದಾದ ಕೆಲಸವೆಂದರೆ ಚಂದ್ರನ ಬಗ್ಗೆ ಹಾಡುವುದು, ನಮ್ಮ ದುಸ್ಥಿತಿಯ ಬಗ್ಗೆ ಅಳುತ್ತಾ ಕೂರುವುದು”!

ಪೇಪರ್‌ನಷ್ಟು ತೆಳುವಾಗಿರುವ ನ್ಯಾನೋ ಪೇಪರ್‌ನಿಂದ ಬ್ಯಾಟರಿ ಸೆಲ್ ತಯಾರಿಸಿದವರು ಅಲ್ಟ್ರಾ ಥಿನ್ ಬ್ಯಾಟರೀಸ್ ಸೆಲ್ಲುಲೋಸ್ ಅನ್ನು ಬಳಸಿ. ಅಮೇರಿಕದ ಮೂರು ವಿ.ವಿ.ಗಳಲ್ಲಿ ಸಂಶೋಧನೆ ಮಾಡುತ್ತಿರುವ ಭಾರತೀಯ ವಿಜ್ಞಾನಿಗಳು – ಅಜೇಯನ್, ನಲ್ಲಮಾಸು, ಮುರುಗೇಶನ್, ಮಣಿಕೋಟ್, ಪುಷ್ಪರಾಜ್, ಕುಮಾರ್.

ಭಾರತದ ಆರ್ ಶಿವರಾಮನ್(34) ಚೆನ್ನೈ, ಕಂಪ್ಯೂಟರ್ ಹಾರ್ಡ್ ಡ್ರೈವ್‌ನಲ್ಲಿ ೫೦೦ ಜಿ.ಬಿ.ಅಷ್ಟು ಸ್ಥಳಾವಕಾಶದಲ್ಲಿ, 3೦ ಟೆರ್ರಾ ಬೈಟ್ ಕೂರಿಸುವಲ್ಲಿ ಯಶಸ್ವಿಯಾಗಿದ್ದಾನೆ. ನ್ಯಾನೋ ಕಣಗಳ ಆಧಾರಿತವಾಗಿ ನೀರಿನ ಸೋಸುವಿಕೆ ಯಂತ್ರವನ್ನು ಮೊದಲ ಬಾರಿಗೆ ಐಐಟಿ ಚೆನ್ನೈನಲ್ಲಿ ಸಿದ್ಧಪಡಿಸಲಾಗಿದೆ. ಇದನ್ನು ನ್ಯಾನೋ ಟೆಕ್ನಾಲಜಿ ಎಂದರೆ, ಅಣು ಪರಮಾಣು ಮಟ್ಟದಲ್ಲಿ ಕಣಗಳ ನಿಯಂತ್ರಣ ಮತ್ತು ಬಳಕೆ ಎಂದರ್ಥ. ಇದರಲ್ಲಿ ಭಾರತ ಏನೂ ಹಿಂದುಳಿದಿರಲಿಲ್ಲ. 3,೦೦೦ ವರ್ಷಗಳ ಹಿಂದೆಯೇ ಭಾರತದ ಖ್ಯಾತ ಉಕ್ಕು ‘ವೂಟ್ಸ್’ ನಲ್ಲಿ ಮತ್ತು ಅಜಂತಾ ವರ್ಣ ಚಿತ್ರಗಳಲ್ಲಿ ಸಹ ಈ ತಂತ್ರಜ್ಞಾನದ ಬಳಕೆ ಆಗಿದೆ. ಇಷ್ಟೆಲ್ಲಾ ಸಾಧನೆಗಳು ಇದ್ದರೂ ಸಹ, ಭಾರತವು ಈ ಸಂಶೋಧನೆಗಳಿಗೆ ನೀಡುತ್ತಿರುವ ಹಣ 1,೦೦೦ ಕೋಟಿ ರೂಪಾಯಿ,

ವಾಣಿಜ್ಯ ಚಿಂತಕರಲ್ಲಿ ಈ ಜಾಗತಿಕವಾಗಿ ಮೊದಲ ಸ್ಥಾನದಲ್ಲಿರು ವವರು ಕೊಯಮತ್ತೂರು ಕೃಷ್ಣ ಪ್ರಹಲ್ಲಾದ್. ಸಿಕೆಪಿ ಎಂದೇ ಖ್ಯಾತರಾದ ಇವರ ‘ಬಾಟಮ್ ಆಫ್ ದ ಪಿರಾಮಿಡ್’ ಇತ್ತೀಚಿನ ಜನಪ್ರಿಯ ಪುಸ್ತಕ. ಇವರಲ್ಲದೇ ವಿಜಯ ಗೋವಿಂದರಾಜನ್, ರಾಮ್‌ಚರಣ್, ರಾಕೇಶ್ ಖುರಾನಾ ಇವರು ಜಗತ್ತಿನ ಮೊದಲ 50 ವಾಣಿಜ್ಯ ವ್ಯವಹಾರ ಚಿಂತಕರ ಪಟ್ಟಿಯಲ್ಲಿದ್ದಾರೆ.

ಭಾರತಕ್ಕೆ ಭಾರತವೇ ಹೋಲಿಕೆ

‘ಟ್ಯಾಲಿ’ ಸಾಫ್ಟ್‌ವೇರ್ ನ್ನು ಸಿದ್ಧಪಡಿಸಿದ ಭರತ್ ಗೋಯೆಂಕಾ ತಮ್ಮ ಹಿರಿಯರಿಂದ ಬಂದ ವಾಣಿಜ್ಯ ವ್ಯವಹಾರಗಳ ತಂತ್ರವನ್ನು ತಂದೆಯ ವರಿಂದ ಕಲಿತರು. ಹಿರಿಯರ ಲೆಕ್ಕಾಚಾರ ಪದ್ಧತಿಗೆ ಒಂದು ಕಂಪ್ಯೂಟರ್ ಆಯಾಮ ನೀಡಿದರು. ಇಂದು ‘ಟ್ಯಾಲಿ’ ಸಾಫ್ಟ್‌ವೇರ್ ತೃತೀಯ ಜಗತ್ತಿನ ಅತಿ ಬೇಡಿಕೆಯ ವಾಣಿಜ್ಯ ಸಾಫ್ಟ್‌ವೇರ್, ಮಾತ್ರವಲ್ಲ ತನ್ನ 3೦% ಮಾರುಕಟ್ಟೆಯನ್ನು ಅದು ಹಿಡಿದಿಟ್ಟಿದೆ. ‘ಟ್ಯಾಲಿ’ ಇ.ಆರ್.ಪಿ. 9 ಎಂಬ ಹೊಸ ಆವೃತ್ತಿಯು ಯಾವುದೇ ವ್ಯಾಪಾರಿಗೆ ತಾನು ಕುಳಿತ ಸ್ಥಳದಿಂದಲೇ ತನ್ನ ವ್ಯವಹಾರವನ್ನು ಎಲ್ಲಾ ರೀತಿಯಿಂದ ನಿರ್ವಹಿಸಬಹುದಾಗಿದೆ. ಅದಕ್ಕೆ ಡೈಯಲ್ ಉಪ್ ಕನೆಕ್ಶನ್ ಇದ್ದರೂ ಸಾಕು. ಮುನಿಸಿಪಾಲಿಟಿಗಳಿಗೆ ಬೇಕಾದ ವಾಣಿಜ್ಯ ಸಾಫ್ಟ್‌ವೇರ್ ‘ಟ್ಯಾಲಿ ಅಸೆಂಟ್ ಫಾರ್ ಗವರ್ನೆನ್ಸ್’ ಅನ್ನು ಭರತ್ ಅವರ ತಂಡ ಹೊರತಂದಿದೆ.

ಕಬ್ಬಿಣದ ತುಕ್ಕಿನಿಂದ ಚಿನ್ನ

ತುಕ್ಕು ಹಿಡಿದ ಕಬ್ಬಿಣ ಉಕ್ಕಿನ ಕಂಪನಿಗಳನ್ನು ಖರೀದಿಸಿ ಅವುಗಳ ಮೂಲಕ ಚಿನ್ನ ತೆಗೆದ ಭಾರತದ ಒಬ್ಬ ಸಾಮಾನ್ಯ ವ್ಯಾಪಾರಿ ಇಂದು ವಿಶ್ವದ ಉಕ್ಕಿನ ಕೋಟೆಯ ಒಡೆಯ. ಅವರೇ ಲಕ್ಷ್ಮೀಮಿತ್ತಲ್. 12 ಬೃಹತ್ ಪ್ರಮಾಣದ ಪ್ಲಾಂಟ್‌ಗಳ ಒಡೆಯನಾಗಿರುವ ಈತನ ಗೆಲುವಿನ ಯಾತ್ರೆ ಆರಂಭವಾದದ್ದು ಇಂಡೋನೇಶಿಯಾ ದೇಶದ ಇಸ್‌ಪಾಟ್ ಕಂಪನಿಯನ್ನು ಕೊಳ್ಳುವುದರ ಮೂಲಕ. ಆರ್ಥಿಕ ಕುಸಿತದಿಂದ ಉಕ್ಕಿನ ವ್ಯಾಪಾರ ಬಸವಳಿದಿದ್ದಾಗ ಮಿತ್ತಲ್ ಕಂಪನಿ ಭರ್ಜರಿ ಲಾಭ ಗಳಿಸಿತ್ತು. ಈತನ ಸಾಮ್ರಾಜ್ಯ ಹರಡಿರುವುದು ಕೆನಡಾದಿಂದ ಟ್ರಿನಿಡಾಡ್‌ವರೆಗೆ, ಟೊಬ್ಯಾಗೊದಿಂದ ಕಝಕಿಸ್ಥಾನದವರೆಗೆ. ಇನ್ನೊಂದು ದೈತ್ಯ ಕಂಪನಿ ಅರ್ಸೆಲಾರ್ ಅನ್ನು ಕೊಂಡಿದ್ದು ಕೆಲವೇ ನಿಮಿಷಗಳ ಮಾತುಕತೆಯ ಮೂಲಕ. “ತಮ್ಮ ಕೆಲವೇ ಮಾತುಗಳಲ್ಲಿ ನಡವಳಿಕೆಯಿಂದ ಮಿತ್ತಲ್ ನಮ್ಮ ಹೃದಯವನ್ನು ಗೆದ್ದರು” ಎಂದಿದ್ದರು ಅರ್ಸೆಲಾರ್ ಕಂಪನಿಯ ಮೊದಲಿನ ಡೈರೆಕ್ಟರ್‌ಗಳು.

ಪಾಕಿಸ್ಥಾನೀಯರ ಅಸೂಯೆ

ಅಂಬಾನಿ ಸೋದರರು ಇಬ್ಬರ ಹಣ ಸೇರಿಸಿದರೆ ಇಡೀ ಕರಾಚಿಯ ಸ್ಟಾಕ್ ಎಕ್ಸ್‌ಚೇಂಜಿನಲ್ಲಿರುವ ಎಲ್ಲಾ ಕಂಪನಿಗಳನ್ನು ಖರೀದಿಸಿ, ಇನ್ನೂ 15,೦೦೦ ಕೋಟಿ ರೂ. ಉಳಿಯುತ್ತದೆ ಎಂದು ಗೋಳು ಹೊಯ್ದುಕೊಳ್ಳುವವರು – ಪಾಕಿಸ್ಥಾನದ ಹಿರಿಯ ಪತ್ರಕರ್ತ ಡಾ.ಫಾರೂಖ್ ಸಲೀಮ್. ಮುಂದುವರೆದು ಹೀಗೆ ಬರೆಯುತ್ತಾರೆ.

  •  ಪಾಕಿಸ್ಥಾನದ ವರ್ಷದ ಎಲ್ಲ ಉತ್ಪಾದನೆಗಳನ್ನು ಕೊಂಡು, 3೦,೦೦೦ಕೋಟಿ ರೂ. ಉಳಿಸುವ ಸಾಮರ್ಥ್ಯ ಭಾರತದ ಮೊದಲಾ ನಾಲ್ಕು ಶ್ರೀಮಂತರಿಗಿದೆ. ಆ ನಾಲ್ವರು ಚೈನಾದ ಮೊದಲ ನಲ್ವತ್ತು ಶ್ರೀಮಂತರನ್ನು ಕೊಳ್ಳಬಲ್ಲರು.
  • ವಿಶ್ವಸಂಸ್ಥೆಯು ತನ್ನ 192 ಸದಸ್ಯ ರಾಷ್ಟ್ರಗಳಲ್ಲಿ ಅಫಘಾನಿಸ್ಥಾನದ ಚುನಾವಣೆಗೆ ಸಹಾಯ ಕೇಳಿದ್ದು ಭಾರತದ ಚುನಾವಣಾ ಕಮಿಷನ್ ಅನ್ನು. ಅಫಘಾನಿಸ್ಥಾನದ ರಾಜಧಾನಿ ಕಾಬುಲ್ ಪಾಕಿಸ್ಥಾನಕ್ಕೆ ಹತ್ತಿರವಾಗಿದೆಯಲ್ಲವೇ? ಪಾಕಿಸ್ಥಾನಕ್ಕೆ ಏಕೆ ಕೇಳಲಿಲ್ಲ?
  • ಈ ಭೂಮಿಯ ಮೇಲೆ ಅತ್ಯಂತ ಶ್ರೀಮಂತ ಮುಸ್ಲಿಂ ಆಗಿರುವ ಅಜಿಮ್ ಪ್ರೇಮ್‌ಜೀ ವಾಸಿಸುತ್ತಿರುವುದು ಭಾರತದಲ್ಲಿ, ಅದೂ ಬೆಂಗಳೂರಿನಲ್ಲಿ.
  • ಭಾರತದಲ್ಲಿ 3 ಡಜನ್ ಬಿಲಿಯಾಧಿ ಪತಿಗಳಿದ್ದರೆ, ಪಾಕಿಸ್ಥಾನದಲ್ಲಿ ಒಬ್ಬನೇ ಒಬ್ಬ ಡಾಲರ್ ಬಿಲಿಯಾಧಿಪತಿ ಇಲ್ಲ.
  • ಭಾರತದ ಉದ್ಯಮಪತಿ ತನ್ನ ಹೆಂಡತಿಗೆ ಒಂದು ಹುಟ್ಟು ಹಬ್ಬಕ್ಕೆ ಕೊಟ್ಟ ಕಾಣಿಕೆಯ ಮೊತ್ತ ಕೇವಲ 3೦ಕೋಟಿ ರೂ.
  • ಒಂದೇ ಪೂರ್ವಜರನ್ನು, ಒಂದೇ ಡಿ.ಎನ್.ಎ. ಹೊಂದಿರುವ ಮತ್ತು ಒಂದೇ ರೀತಿಯ ಸಿನೆಮಾ ನೋಡುವ ಸಂಗೀತ ಕೇಳುವ ನಾವು ಪಾಕಿಸ್ಥಾನಿಯರಲ್ಲಿ ಏನಿಲ್ಲ?

ಭಾರತೀಯರಲ್ಲಿ ಏನಿದೆ? – ಅವರು ನಿರ್ಮಾಣದ ಬಗ್ಗೆ ಯೋಚಿಸಿದರೆ, ನಾವು ನಿರ್ನಾಮದ ವಿನಾಶದ ಬಗ್ಗೆ ಯೋಚಿಸುತ್ತೇವೆ. ನಮ್ಮ ತಲೆಯಲ್ಲಿರುವ ಹುಳ ಒಂದೇ ಮತ,ಮತ,ಮತ. ಭಾರತೀಯರು ಎಲ್ಲದರ ಬಗ್ಗೆ ಯೋಚಿಸುತ್ತಾರೆ.

ದೊಡ್ಡಣ್ಣನ ಮನೆಯಲ್ಲಿ ಭಾರತ

ಕಳೆದ ಡಿಸೆಂಬರ್‌ನಲ್ಲಿ ವಾಷಿಂಗ್‌ಟನ್ ನಲ್ಲಿ ಅಮೇರಿಕದ ಅಧ್ಯಕ್ಷ ಒಬಾಮಾ ಮತ್ತು ಭಾರತದ ಪ್ರಧಾನಿ ಮನಮೋಹನ್‌ಸಿಂಗರ ಮುಖಾಮುಖಿ ಮಾತುಕತೆ ನಡೆಯಿತು. ಸಿಂಗ್‌ರ ಪಕ್ಕದಲ್ಲಿ ಮಾತುಕತೆಗಳನ್ನು ಗುರುತು ಹಾಕಿಕೊಳ್ಳಲು ಕುಳಿತವರು ಅವರ ಆಪ್ತ ಕಾರ್ಯದರ್ಶಿ ಜೈದೀಪ್ ಸರ್ಕಾರ್ ಭಾರತದ ವಿದೇಶಾಂಗ ಖಾತೆಯಲ್ಲಿರುವ ನವ ಯುವಕ. ಒಬಾಮಾ ಪಕ್ಕದಲ್ಲಿ ಅಮೇರಿಕದ ಪರವಾಗಿ ಕುಳಿತವರು ಅನಿವಾಸೀ ಭಾರತೀಯ ಅನಿಶ್ ಗೋಯೆಲ್, ಅಮೇರಿಕದ ವಿದೇಶಾಂಗ ವ್ಯವಹಾರಗಳಲ್ಲಿ ಉದಯಿಸುತ್ತಿರುವ ನಕ್ಷತ್ರ. ಅದೇ ರೀತಿ ನಡೆದ ಅಫ್‌ಗನ್-ಪಾಕ್ ಕುರಿತ ಮಾತುಕತೆಗಳಲ್ಲಿ ಅಮೇರಿಕದ ಪ್ರಮುಖರೊಂದಿಗೆ ಪಾಕ್-ಅಫ್‌ಘನ್‌ಗಳ ಅಮೆರಿಕದ ವಿಶೇಷ ಪ್ರತಿನಿಧಿಯಾಗಿದ್ದವರು ವಿಕ್ರಮ್‌ಸಿಂಗ್.

ಇದು ಅಮೇರಿಕದಲ್ಲಿ ಹೆಚ್ಚುತ್ತಿರುವ ಭಾರತೀಯರ ಪ್ರಭಾವವನ್ನು ತೋರಿಸುತ್ತದೆ. ಅಲ್ಲಿನ ಭಾರತೀಯರ ನಿಷ್ಠೆ-ನಿಯತ್ತು, ಪ್ರತಿಭೆ, ಕಠಿಣ ಪರಿಶ್ರಮ ಗುರುತಿಸಿ ಅದಕ್ಕೆ ನೀಡಿರುವ ಗೌರವವಷ್ಟೆ. ಇದಕ್ಕಿಂತ ಹೆಚ್ಚಿನದನ್ನು ಕಲ್ಪಿಸಿಕೊಳ್ಳುವುದು ಎರಡೂ ದೇಶಗಳಿಗೆ ನಷ್ಟಕಾರಿ.

ಒಬಾಮಾಗೆ ಸಹಾಯಕರಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದವರ ಸಂಖ್ಯೆ – 26. ಒಬಾಮಾ ಜೊತೆಗೆ 17 ಜನ ಪ್ರಮುಖ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಪಾಕಿಸ್ಥಾನಕ್ಕೆ ಹೊಟ್ಟೆಕಿಚ್ಚಿಗೆ ಸಿಲುಕಿಸಿದೆ. ಅಮೇರಿಕದಲ್ಲಿ 25ಲಕ್ಷ ಭಾರತೀಯರಿದ್ದು, 32 ಲಕ್ಷ ಚೈನೀಯರಿದ್ದಾರೆ.  ಮನೆಯಲ್ಲಿ ಬೆಳೆದ ವಾತಾವರಣದಿಂದಾಗಿ ಮತ್ತು ಒಳ್ಳೆಯ ಇಂಗ್ಲಿಷ್ ಮಾತನಾಡುವ ಕಾರಣದಿಂದ ಭಾರತೀಯರು ಅಮೆರಿಕನ್‌ರ ನೆಚ್ಚಿನ ಆಯ್ಕೆ ಆಗಿದ್ದಾರೆ. ಇತ್ತೀಚಿಗೆ ಪಾಕಿಸ್ಥಾನಕ್ಕೆ ನೆರವು ನೀಡುವಾಗ ಯುಎಸ್‌ಏಯಿಡ್ ಪ್ರಮುಖರಾಗಿ ರಾಜೀವ್ ಶಾಹ ಇದ್ದದ್ದು ಪಾಕ್‌ನವರ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು.

ಏನಿದು ತಿರುಗು-ಮುರುಗು?

  •   ಜಗತ್ತಿನಲ್ಲಿ ಅತಿ ಹೆಚ್ಚು ಹೃದ್ರೋಗಿಗಳನ್ನು, ಸಕ್ಕರೆ ಖಾಯಿಲೆಯುಳ್ಳವರ ದೇಶ ಭಾರತ. ಆದರೆ ಜಗತ್ತಿಗೆ ಯೋಗ, ಪ್ರಾಣಯಾಮ, ಆಯುರ್ವೇದಗಳನ್ನು ನೀಡಿದ ದೇಶ ಭಾರತ.
  •  ‘ಜಗತ್ತೇ ಒಂದು ಕುಟುಂಬ’ ಎಂದಿದ್ದು ಭಾರತ. ಆದರೆ ಅತಿ ವೇಗದಲ್ಲಿ ಕುಟುಂಬಗಳು ಒಡೆಯುತ್ತಿರುವುದು ಮತ್ತು ದಂಪತಿಗಳ ವಿಚ್ಛೇದನಗಳು ಹೆಚ್ಚುತ್ತಿರುವುದು ಭಾರತದ ನಗರಗಳಲ್ಲಿ.
  •   ಜಡ ವಸ್ತುಗಳಲ್ಲಿಯೂ ಪರಮಾತ್ಮ ಇದ್ದಾನೆ ಎನ್ನುತ್ತದೆ ಭಾರತ. ಆದರೆ ತನ್ನವರನ್ನೇ ಕೀಳೆಂದು ದೂರತಳ್ಳುವ, ತಾವು ಹೀನರು ಎಂದು ಭಾವಿಸಿ ದೂರವೇ ಉಳಿಯುವ ಜನರಿರುವುದು ಭಾರತದಲ್ಲಿ.
  •   ಹಾಕಿ, ಚೆಸ್, ಕರಾಟೆ, ಬಾಕ್ಸಿಂಗ್‌ಗಳನ್ನು ಜಗತ್ತಿಗೆ ತೋರಿದ್ದು ಭಾರತ. ಮೊದಲ ಓಲಂಪಿಕ್ ವೈಯಕ್ತಿಕ ಸ್ವರ್ಣ ಗೆಲ್ಲಲು ಸ್ವಾತಂತ್ರ್ಯಾ ನಂತರ 62 ವರ್ಷಗಳು ಬೇಕಾದವೇ ?
  •   ಜಗತ್ತಿಗೆ ನೀತಿ ನಿಯಮ ನಡವಳಿಕೆ ಜೀವನ ಪದ್ಧತಿಗಳನ್ನು ಹೇಳಿಕೊಟ್ಟ ಭಾರತವು ಜಗತ್ತಿನ ಭ್ರಷ್ಟಾಚಾರದ ಪಟ್ಟಿಯಲ್ಲಿ ೮೪ನೇ ಸ್ಥಾನದಲ್ಲಿದೆ.    ‘ಕಾಯಕವೇ ಕೈಲಾಸ’ ಎಂದ ಈ ಕರ್ಮಭೂಮಿಯಲ್ಲಿ ಪಡ್ಡೆ ಹೊಡೆದುಕೊಂಡು ಸುತ್ತುತ್ತಿರುವ ಯುವಕರ ಸಂಖ್ಯೆ 5 ಕೋಟಿಯಂತೆ. ಇದು ಇಂಗ್ಲೆಂಡಿನ ಜನಸಂಖ್ಯೆಯಷ್ಟು !!
(-Rajesh Padmar)

2 thoughts on “ಶಕ್ತಿ ಸಂಪನ್ನ ಭಾರತ:- ‘ಮೇರಾ ಭಾರತ್ ಮಹಾನ್’- ಸ್ವಾತಂತ್ರೋತ್ಸವ ವಿಶೇಷ ಲೇಖನ Independence day special

Leave a Reply

Your email address will not be published.

This site uses Akismet to reduce spam. Learn how your comment data is processed.