೯ ಮಾರ್ಚ್ ೨೦೧೯: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಿಂದ ಆರೆಸ್ಸೆಸ್ ನ ಸರಕಾರ್ಯವಾಹರಾದ ಶ್ರೀ ಸುರೇಶ್ (ಭಯ್ಯಾಜಿ) ಜೋಶಿ ನೇತಾಜಿ ಸುಭಾಶ್ಚಂದ್ರ ಬೋಸ್ ರನ್ನು ಹಾಗೂ ಅವರು ಕಟ್ಟಿದ ಆಜ಼ಾದ್ ಹಿಂದ್ ಸೇನೆಯನ್ನು ಸ್ಮರಿಸುತ್ತಾ, ಆಜ಼ಾದ್ ಹಿಂದ್ ಸರ್ಕಾರ ನಿರ್ಮಾಣವಾಗಿ ೭೫ ವರ್ಷಗಳು ಸಂದಿರುವುದನ್ನು ನೆನೆದು ಇಂದಿನ ಯುವಜನತೆಗೆ ಮಾರ್ಗದರ್ಶನವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೇತಾಜಿಯವರನ್ನು ಸ್ಮರಿಸಬೇಕು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಆಜ಼ಾದ್ ಹಿಂದ್ ಸೇನಾ ಆರಂಭಗೊಳಿಸಿದ್ದು ೨೧ ಅಕ್ಟೋಬರ್ ೧೯೪೩ರಲ್ಲಿ. ಸೇನೆ ಸ್ಥಾಪನೆಯಾಗಿ ೨೦೧೮ಕ್ಕೆ ೭೫ ವರ್ಷಗಳು ತುಂಬಿವೆ. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ಈ ಸೇನೆ ಒಂದು ಪ್ರಮುಖ ಪಾತ್ರವಹಿಸಿದೆ. ಆಜ಼ಾದ್ ಹಿಂದ್ ಸೇನೆಯ ನಾಯಕತ್ವವಹಿಸಿದ ನೇತಾಜಿ ಸುಭಾಶ್ಚಂದ್ರ ಬೋಸ್, ಸರಕಾರವನ್ನು ಸಿಂಗಾಪುರದಲ್ಲಿ ರಚಿಸಿ ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಸೇನೆಯು ಅತ್ಯಂತ ಕಡಿಮೆ ಸಮಯದಲ್ಲಿ ಬಲವನ್ನು ಹೆಚ್ಚಿಸಿಕೊಳ್ಳುತ್ತಾ, ಬ್ರಿಟಿಷರ ವಿರುದ್ಧ ಈಶಾನ್ಯ ಭಾರತದಲ್ಲಿ ಸೆಟೆದು ನಿಂತದ್ದು ಆ ಕಾಲಘಟ್ಟದಲ್ಲಿ ಪ್ರಮುಖವಾದ ಬೆಳವಣಿಗೆ. ಆಜಾದ್ ಹಿಂದ್ ಸರ್ಕಾರ ಆಗ್ನೇಯ ಏಷ್ಯಾದ ಬ್ರಿಟಿಷ್ ವಸಾಹತುಗಳ ಎಲ್ಲಾ ನಾಗರಿಕ ಮತ್ತು ಮಿಲಿಟರಿ ಸಂಸ್ಥೆಗಳ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಿಕೊಂಡಿದ್ದಲ್ಲದೇ ಭವಿಷ್ಯದಲ್ಲಿ ಗೆದ್ದ ಪ್ರದೇಶಗಳಲ್ಲಿಯೂ ಅಧಿಕಾರವಹಿಸಿಕೊಂಡಿತು.

ಆಜ಼ಾದ್ ಹಿಂದ್ ಸರ್ಕಾರವು ತನ್ನದೇ ನಾಣ್ಯ-ನೋಟುಗಳನ್ನು ಟಂಕಿಸುತ್ತಿತ್ತು, ತನ್ನದೇ ನ್ಯಾಯಾಲಯಗಳನ್ನು, ನಾಗರಿಕ ಸಂಹಿತೆಗಳನ್ನು ರಚಿಸಿಕೊಂಡಿತ್ತು. ತನ್ನದೇ ಕರ ವ್ಯವಸ್ಥೆಯನ್ನೂ ಸ್ಥಾಪಿಸಿಕೊಂಡಿತ್ತು. ಒಂದು ವಿದ್ಯುಕ್ತ ಸರ್ಕಾರಕ್ಕೆ ಬೇಕಿದ್ದ ಮಂತ್ರಿಮಂಡಲ, ಸಂವಿಧಾನ, ಸೇನೆ, ನಾಣ್ಯ, ನ್ಯಾಯ ವ್ಯವಸ್ಥೆ ಹಾಗೂ ಜಪಾನ್, ಜರ್ಮನಿ ಸೇರಿದಂತೆ ೯ ದೇಶಗಳಿಂದ ಅಂತಾರಾಷ್ಟ್ರ‍ೀಯ ಮಾನ್ಯತೆಯನ್ನೂ ಗಳಿಸಿತ್ತು. ಡಿಸೆಂಬರ್ ೧೯೪೩ ರಲ್ಲಿ ಈ ಸೇನೆಯ ತೆಕ್ಕೆಗೆ ಜಾಪಾನಿನ ನೌಕಾಪಡೆ ಗೆದ್ದುಕೊಟ್ಟ ಅಂಡಮಾನ್ ನಿಕೊಬಾರ್ ನ ಎರಡು ದ್ವೀಪಗಳು ಸೇರಿಕೊಂಡಿತು. ನೇತಾಜಿಯವರು ಈ ದ್ವೀಪಗಳನ್ನು ಶಹೀದ್ ಹಾಗೂ ಸ್ವರಾಜ್ ಎಂದು ಕರೆದು ೩೦ ಡಿಸೆಂಬರ್ ೧೯೪೩ರಂದು ಅಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದರು. ಈ ಎಲ್ಲ ಕ್ರಮಗಳು ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಕಾನೂನುಬದ್ಧ ಸರ್ಕಾರದ ರೂಪದಲ್ಲಿ ನಿರ್ದಿಷ್ಟವಾದ ಭರವಸೆ ನೀಡಿತು. ಇದೇ ಕಾರಣದಿಂದಾಗಿ ಜನಸಾಮಾನ್ಯರಲ್ಲಿ, ಬ್ರಿಟಿಷರ ಸೇನೆಯಲ್ಲಿದ್ದ ಭಾರತೀಯ ಯೋಧರಿಗೆ ರಾಷ್ಟ್ರ‍ಭಕ್ತಿಯ ಭಾವ ಮೂಡಿಸುವುದಲ್ಲದೇ, ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ತಿರುವು ಆಜ಼ಾದ್ ಹಿಂದ್ ಸೇನೆ ನೀಡಿತು.

ರಾಷ್ಟ್ರ‍ೀಯ ಸ್ವಯಂಸೇವಕ ಸಂಘವು ೭೫ ವರ್ಷಗಳ ಈ ಮಹತ್ವದ ಚಾರಿತ್ರಿಕ ಸಂದರ್ಭವನ್ನು ಸ್ಮರಿಸುತ್ತದೆ ಹಾಗೂ ತನ್ಮಯಾಭಾವದಿಂದ ಆಜ಼ಾದ್ ಹಿಂದ್ ಸೇನಾ, ನೇತಾಜಿ ಸುಭಾಶ್ಚಂದ್ರ ಬೋಸ್ ಹಾಗೂ ಸೇನೆಯ ಸಾವಿರಾರು ಯೊಧರನ್ನು ಸ್ಮರಿಸುತ್ತದೆ. ಕೇಂದ್ರ ಸರಕಾರವು ಆಜ಼ಾದ್ ಹಿಂದ್ ಸೇನೆಯನ್ನು ಇತ್ತೀಚೆಗೆ ಗುರುತಿಸಿದ್ದು ಶ್ಲಾಘನೀಯ. ಇಂತಹ ಸಂದರ್ಭದಲ್ಲಿ, ನಾವೆಲ್ಲರೂ ಜಾಗೃತಿ ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಗರೀಕರು, ಅದರಲ್ಲೂ ಇಂದಿನ ಯುವಜನರು ನಮ್ಮ ದೇಶದ ಸ್ಫೂರ್ತಿದಾಯಕ, ವೈಭವಯುತ ಚರಿತ್ರೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲಿ ಎಂದು ಈ ಮೂಲಕ ಆಶಿಸುತ್ತೇವೆ,

ಸರಕಾರ್ಯವಾಹ, ಸುರೇಶ್ (ಭಯ್ಯಾಜಿ) ಜೋಶಿ

Leave a Reply

Your email address will not be published.

This site uses Akismet to reduce spam. Learn how your comment data is processed.