
ಕಾಸರಗೋಡು: ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ಬಗ್ಗೆ ವಿಸ್ತೃತ ಮಾಹಿತಿ ನೀಡುವ ‘ಪರಿಕ್ರಮ ಸಂತ’ ವಿಶೇಷ ಸಾಕ್ಷ್ಯಚಿತ್ರ ವಿಡಿಯೋವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕರಾದ, ಮಂಗಳೂರು ಗೋಪಾಲ ಚೆಟ್ಟಿಯಾರ್ ಪೆರ್ಲ ಅವರು ಅನಾವರಣಗೊಳಿಸಿದರು.

ನೀರ್ಚಾಲಿನ ಮಹಾಜನ ಸಂಸ್ಕೃತ ವಿದ್ಯಾಲಯದಲ್ಲಿ ವಿಡಿಯೋ ಅನಾವರಣದ ಸರಳ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅವರು ಮಾತನಾಡಿ, ಪರಿಕ್ರಮ ಸಂತ ಸೀತಾರಾಮ ಕೆದಿಲಾಯರು ದೇಶದ ಉದ್ದಗಲಕ್ಕೂ ಸಂಚರಿಸಿ ಗ್ರಾಮಗಳ ಮಹತ್ವವನ್ನು ಸಾರಿದ ಪರಿ ಅನನ್ಯ. ಭಾವಿ ಭಾರತಕ್ಕೆ ಗ್ರಾಮಗಳೇ ಆಧಾರ. ಗ್ರಾಮಗಳು ದೇಶದ ಸಾಂಸ್ಕೃತಿಕತೆಯ ಪ್ರತೀಕ ಮತ್ತು ಕೇಂದ್ರಗಳು. ಇಷ್ಟು ಮಾತ್ರವಲ್ಲದೆ ಗೋ ಸಂಪತ್ತು, ಸಸ್ಯ ಸಂಪತ್ತು ಸಹಿತ ಕೃಷಿ ಆಧರಿತ ಆರ್ಥಿಕತೆಗೂ ರಹದಾರಿ ಗ್ರಾಮಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾ.ಸ್ವ. ಸಂಘದ ಹಿರಿಯರಾದ ಬಾಲಕೃಷ್ಣ ಏಣಿಯರ್ಪು, ಸುಶೀರಾ ಎಡಿಟರ್ ಮಹೇಶ ಕೃಷ್ಣ ತೇಜಸ್ವಿ, ಚಿತ್ರ ಕಲಾವಿದ ವಿಶ್ವಾಸ್ ಎಂ., ವಿವೇಕಾದಿತ್ಯ, ವಿಜೇಶ್ ಬಿ.ಕೆ. ಉಪಸ್ಥಿತರಿದ್ದರು.