ಹೊಸ ಕಾಲದ ವೈರುಧ್ಯಗಳು ಆಕಾಶವನ್ನು ಅಂಗೈಯಲ್ಲಿ ಹಿಡಿಯುವುದೆಂತು......

Bangalore: An Intellectual Seminar on ‘The New Age Contradictions’ will be held on Sunday, September 1st, 2013 at BMS Engineering College, Basavanagudi, Bangalore.

The seminar will be in Kannada medium and is organised by Swami Vivekananda 150th Birth Anniversary Celebration Committee, Karnataka. Magsaysay awardee Dr H Harish Hande, Noted poet Dr HS Venkatesh Murthy, National Award winner in Akashavani Mr Diwakar Hegde from Dharwad, Social worker Venkatesh Murthy of Youth For Seva are among the key resource persons.

Interested can contact:  http://vivek150.org/attend/ 9964000058, 9845342972

ಹೊಸ ಕಾಲದ ವೈರುಧ್ಯಗಳು ಆಕಾಶವನ್ನು ಅಂಗೈಯಲ್ಲಿ ಹಿಡಿಯುವುದೆಂತು......
ಹೊಸ ಕಾಲದ ವೈರುಧ್ಯಗಳು
ಆಕಾಶವನ್ನು ಅಂಗೈಯಲ್ಲಿ ಹಿಡಿಯುವುದೆಂತು……

ಹೊಸ ಕಾಲದ ವೈರುಧ್ಯಗಳು:

ಆಕಾಶವನ್ನು ಅಂಗೈಯಲ್ಲಿ ಹಿಡಿಯುವುದೆಂತು……

ಮಾನವ ಬದುಕಿನ ಮೌಲ್ಯಗಳ ಬದಲಾವಣೆಯಲ್ಲಿ, ಜೀವನದ ಪರಿಕಲ್ಪನೆಯಲ್ಲಾದ ವ್ಯತ್ಯಾಸದಲ್ಲಿ ಕಾಲದ ಬದಲಾವಣೆಯನ್ನು ಗುರುತಿಸಬೇಕಲ್ಲದೆ ಬೇರೆ ಹಾದಿ ಇಲ್ಲ. ಎಲ್ಲ ಕಾಲದಲ್ಲೂ ಮನುಷ್ಯನ ಮನಸ್ಸು ಹಳತನ್ನು ಅನುಮಾನಿಸುತ್ತ, ಹೊಸದನ್ನು ಅನ್ವೇಷಿಸುತ್ತ ಸಾಗುತ್ತದೆ. ವಿಶ್ವದ ಮಾಹಿತಿಗೆ, ಚಿಂತನೆಗೆ ತೆರೆದುಕೊಂಡಿರುವ ನಮಗೆ ಅವೆಲ್ಲವನ್ನೂ ಅಪ್ಪಿಕೊಳ್ಳುವ ಉತ್ಸಾಹವಿದ್ದರೂ ಪರಂಪರೆಯಿಂದ ನಮ್ಮದಲ್ಲದ ಸಂಗತಿಯಲ್ಲಿ ಅನನ್ಯತೆ ದಕ್ಕುವುದಿಲ್ಲ. ಆಕಾಶವನ್ನು ಅಂಗೈಯಲ್ಲಿ ಹಿಡಿದಂತಾಗುತ್ತದೆ. ಬದುಕಿನ ಅನುಕೂಲಕ್ಕೆ, ಕುತೂಹಲಕ್ಕೆ ವಿಜ್ಞಾನವನ್ನು ತಂತ್ರಜ್ಞಾನವನ್ನು ನೆಚ್ಚಿಕೊಂಡರೂ ಬಾಳಿನ ಮೌಲ್ಯವರ್ಧನೆಗೆ ಜೀವಸಂವೇದನೆಯನ್ನೂ ಭಾವ ವಿಕಾಸವನ್ನೂ ಅವಲಂಬಿಸುವುದು ಅನಿವಾರ್ಯ. ವಿಜ್ಞಾನದಂತೆ, ಗಣಿತದಂತೆ, ಭಾಷೆಯ ತರ್ಕದಂತೆ ಭಾವಾಭಿವ್ಯಕ್ತಿ ಸರಳವಲ್ಲ. ಸಂಕೀರ್ಣವಾದ ಮನಸ್ಸಿಗೆ ಅಂತರಂಗ ಬಹಿರಂಗಗಳನ್ನು ಒಂದಾಗಿಸಿಕೊಳ್ಳುವುದು ಯಾವಾಗಲೂ ಕಷ್ಟ. ಈ ಕಾಲಕ್ಕೆ ಆ ಕಷ್ಟ ಹೆಚ್ಚಾಗಿದೆ. ಆ ವೈರುಧ್ಯಗಳೇ ನಮ್ಮೆದುರಿನ ಸವಾಲುಗಳೂ ಆಗಿವೆ.

ಕುಟುಂಬ ಕೇಂದ್ರಿತ ಬದುಕು ಸ್ವಕೇಂದ್ರಿತವಾದಾಗ…

ಭಾರತದ ಬದುಕು ಕುಟುಂಬ ಕೇಂದ್ರಿತವಾದದ್ದು. ಇಂದಿನ ಆಧುನಿಕ ಬದುಕು ಬಹುಮಟ್ಟಿಗೆ ಅಲೆಮಾರಿತನದ್ದು ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಯದ್ದು. ಅದರಲ್ಲೂ ಪರಂಪರೆಯ ಉದ್ಯೋಗವನ್ನು ಬಿಟ್ಟು ನಗರದಲ್ಲಿ ನೌಕರಿ ಹಿಡಿದವರ ಮೊದಲ ಆದ್ಯತೆ ಉದ್ಯೋಗಕ್ಕೆ ನಂತರದ ಸ್ಥಾನ ಕುಟುಂಬಕ್ಕೆ. ವ್ಯಕ್ತಿಯ ಭಾವಾವಲಂಬನೆಯ ನೆಲೆಯಾಗಿದ್ದ ಕುಟುಂಬ; ಲಾಗಾಯ್ತಿನಿಂದ ಹೆಣ್ಣಿನ ಶೋಷಣೆ ಮಾಡುತ್ತ ಬಂದಿದೆ, ಕೆಲವರ ತ್ಯಾಗವನ್ನು ವೈಭವೀಕರಿಸಿ ಅವರ ವಿಕಾಸದ ಅವಕಾಶವನ್ನು ನಿರಾಕರಿಸುತ್ತ ಬಂದಿದೆ ಎಂಬ ಮಾತೂ ನಮ್ಮನ್ನು ಕಾಡುತ್ತಿದೆ. ಮದುವೆಯಿಲ್ಲದ ಸಹಬಾಳ್ವೆ, ಸಂತಾನವಿಲ್ಲದ ಸಂಸಾರಗಳು ಆರಂಭವಾಗಿವೆ. ಇದು ಪ್ರಕೃತಿಯನ್ನೇ ಅಣಕಿಸುವ ವೈರುಧ್ಯ.

ದರ್ಶನ ಪ್ರದರ್ಶನವಾದಾಗ……..

ಜೀವ-ಜಗತ್ತುಗಳ ನಡುವಣ ಸಂಬಂಧವನ್ನು ವೈಚಾರಿಕ ನೆಲೆಯಲ್ಲಿ ನಿರ್ವಹಿಸುವ ಯತ್ನ ನಡೆದಿದೆ. ಆದರೆ ಜೀವ ದೇವರುಗಳ ನಡುವಿನ ಸಂಬಂಧವನ್ನು ಅಧ್ಯಾತ್ಮದ ನೆಲೆಯಲ್ಲಿಯೇ ನೋಡುವ ಅನಿವಾರ್ಯತೆ ಇದೆ. ಮತ ಎಂದರೆ ಅಭಿಪ್ರಾಯ, ಸಿದ್ಧಾಂತ ಸತ್ಯದೆಡೆಗೆ ಸಾಗುವ ಹಾದಿಯೇ ವಿನಃ ಗಮ್ಯವಲ್ಲ. ಆ ನೆಲೆಯಲ್ಲಿ ಸಿದ್ಧಾಂತವನ್ನೂ ಮತವನ್ನೂ ಮೀರುವ ದರ್ಶನ ಈ ನೆಲದ ವಿಶೇಷ. ದರ್ಶನ ವೈಯಕ್ತಿಕ, ಮತ ಸಾಮೂಹಿಕ. ಎಲ್ಲರ ಬದುಕಿಗೆ ನೆಲೆಯೊದಗಿಸುವ ಸಾಮಾಜಿಕ ತಿಳಿವಳಿಕೆಗೆ, ಬದ್ಧತೆಗೆ ಧರ್ಮ ಎಂದವರು ನಾವು. ವರ್ತಮಾನದಲ್ಲಿ ಮತ ಸಿದ್ಧಾಂತಗಳಾಚೆಯ ಅಧ್ಯಾತ್ಮದ ಒಲವು ಹೆಚ್ಚಿನವರಲ್ಲಿದೆ. ಅದಕ್ಕೆ ಆಸರೆಯಾದದ್ದು ಆಧುನಿಕ ದೇವ ಮಾನವರುಗಳ Package Systems. ಅಧ್ಯಾತ್ಮ ವೈಯಕ್ತಿಕ ಸಾಧನೆಯಾಗದೆ ಸಾಮೂಹಿಕ ಕವಾಯತಿನಂತೆ ಬಾಸವಾಗುತ್ತಿದೆ. ಅದರ ಉಪಕ್ರಮ ಅನುಪಾಲನಗಳು ಬಡವರ ಭಾಗ್ಯವಲ್ಲ ಎಂಬಷ್ಟು ಶ್ರೀಮಂತವಾಗಿವೆ. ಅಹಂಕಾರ ನಿವೃತ್ತಿಯಿಂದ ವಿಶ್ವಾತ್ಮಕ ದೃಷ್ಟಿಯೊಂದು ಮೂಡಬೇಕಲ್ಲದೆ ಪ್ರದರ್ಶನ ಪ್ರೀತಿಯಿಂದಲ್ಲ. ಅದು Week end process ಅಲ್ಲ. ನಮ್ಮ ಅಹಂಕಾರವನ್ನು ನಾವೇ ಪ್ರಶ್ನಿಸಿಕೊಳ್ಳುವ ಹಾದಿಯನ್ನು ಹುಡುಕುತ್ತಿದ್ದೇವೆ. ಅನುಕೂಲವೆಂಬ ಆತ್ಮಶತ್ರುವನ್ನು ಜೊತೆಯಲ್ಲಿಟ್ಟುಕೊಂಡೇ ಅಧ್ಯಾತ್ಮದ ಹಂಬಲವನ್ನು ಸಾಕುವುದೂ ವೈರುಧ್ಯವೇ.!

ಬದುಕು ಎಲ್ಲರ ಅವಕಾಶವಲ್ಲ ಗೆಲ್ಲುವವರಿಗಾಗಿರುವ ಸ್ಪರ್ಧೆ…….

ವಸ್ತು, ವ್ಯಕ್ತಿಗಳ ಅಂತರಿಕ ಮೌಲ್ಯಕ್ಕಿಂತ ಮಾರುಕಟ್ಟೆಯ ಬೆಲೆಯೇ ನಿರ್ಣಾಯಕವಾದದ್ದು. ವ್ಯಕ್ತಿತ್ವ ವಿಕಸನದ ಪಾಠ್ಯದಲ್ಲೂ ಸಂಗಡವಿದ್ದವರನ್ನು ಹಿಂದೆಹಾಕಿ ಮುಂದೆಹೋಗುವ, ಸ್ಪರ್ಧೆಯಲ್ಲಿ ಗೆಲ್ಲುವ ಪಾಠವನ್ನೇ ಕಲಿಸಲಾಗುತ್ತಿದೆ. ಜಾಹೀರಾತು ಎಂದರೆ ವಸ್ತುವಿನ ವೈಭವೀಕರಣ.CV  ಎಂದರೂ ಅದೇ! ಯಾವುದು commercially viable    ಅಲ್ಲವೋ ಅದು ಬದುಕಿಗೇ ಬೇಡವಾದದ್ದು ಎಂದು ಮಾರುಕಟ್ಟೆ ಹೇಳುತ್ತಿದೆ. ಬದುಕಿನ ಎಲ್ಲ ಸಂಗತಿಗಳನ್ನೂ ಮಾರುಕಟ್ಟೆಯ ಭಾಷೆಯಲ್ಲಿಯೇ ನಿರ್ವಚಿಸುವ, ಯಶಸ್ಸನ್ನೇ ಒಳಿತೆನ್ನುವ ದೃಷ್ಟಿ ನಮ್ಮದೂ ಆಗಿದೆ. ಹಾಗಾಗಿಯೇ ಲಂಚದೊಂದಿಗೆ ರಾಜಿಯಾಗುತ್ತೇವೆ. ಸರಳವಾದ ಬದುಕು ಸಾಮಾಜಿಕ ಗೌರವದ್ದಲ್ಲ ಎಂಬುದನ್ನು ರೂಢಿಸಿದ್ದು ಮಾರುಕಟ್ಟೆ. ಪ್ರಕೃತಿಗೆ ಹತ್ತಿರವಾದ ಬದುಕು ವೈಭವದ್ದಾಗಿರಲು ಸಾಧ್ಯವಿಲ್ಲ. ವಸ್ತು ವೈಭವವಿಲ್ಲದೇ ಮಾರುಕಟ್ಟೆ ಬದುಕುವುದಿಲ್ಲ. ಮಾರುಕಟ್ಟೆಯ ಬೆಲೆಯನ್ನು ಮೀರಿದ ಆಂತರಿಕ ಮೌಲ್ಯವನ್ನು ಕಂಡುಕೊಳ್ಳುವವರೆಗೆ ಸ್ಪರ್ಧೆಯಿಂದಾಚೆಯ ಬದುಕು ಸಿಕ್ಕುವುದಿಲ್ಲ. ನಗರದಲ್ಲಿ ಸಾವಯವವಾದ, ಸರಳವಾದ ಬದುಕು ಸಹಜ ಬದುಕಿಗಿಂತ ದುಬಾರಿಯಾಗಿದೆ. ಈ ವೈರುಧ್ಯವನ್ನು ಎದುರಿಸಬೇಕಾಗಿದೆ.

ಆನಂದಕ್ಕೆ ಸಮಯವಿಲ್ಲದಷ್ಟು ಅನ್ನದ-ಅರಿವಿನ ಚಿಂತೆ…….

ದಿನದ ಇಪ್ಪತ್ನಾಲ್ಕು ತಾಸೂ ದುಡಿಯುವ ಹಂಬಲದ, ಅಂಥದೇ ಅವಕಾಶದ ದಿನಗಳಲ್ಲಿ ದುಡಿಮೆಗೆ ಮಿತಿಯೆಲ್ಲಿ? ಇದ್ದ ಅವಧಿಯಲ್ಲಿ ಅನ್ನ-ಅರಿವು-ಆನಂದಕ್ಕೆ ಅವಕಾಶ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಇದೆ. ಮಾಹಿತಿಯ ಮಹಾಪೂರವೇ ಇರುವಾಗ ಅಗತ್ಯವಾದದ್ದು ಯಾವುದು ಎಂದು ನಿರ್ಧರಿಸಲಾಗುತ್ತಿಲ್ಲ.  ಬದುಕಿನ ಎಲ್ಲ ಸಂಗತಿಗಳನ್ನೂ ಮಾಹಿತಿಯಾಗಿಸುವ ಆತುರದಲ್ಲಿ ಅನುಭವಕ್ಕೆ ಎರವಾಗತ್ತಿದ್ದೇವೆ. ನಮ್ಮ ಅರಿವು ನಮಗೆ ಆನಂದ ನೀಡದಿರುವುದೇ ವೈರುಧ್ಯ…

ಮಣ್ಣಿನಿಂದ ದೂರವಾದ ಅನ್ನದ ಕನಸು…….

ದೊಡ್ಡ ನಗರಗಳೆಂದರೆ ಮಾನವ ನಿರ್ಮಿತ ನರಕಗಳೇ ಆಗಿವೆ. ಉದ್ಯೋಗ ನಿರ್ಮಾಣವಾಗುವುದು ನಗರದಲ್ಲಿ ಮಾತ್ರ ಎಂದು ನಂಬಿದ್ದೇವೆ. ನಗರದ ಸಮಸ್ಯೆಗಳ ಮಧ್ಯೆಯೇ ನೆಮ್ಮದಿಯನ್ನರಸುತ್ತಿದ್ದೇವೆ. ಸೊಳ್ಳೆಪರದೆ ಸೊಳ್ಳೆಯ ಸಮಸ್ಯೆಗೆ ನಿಜವಾದ ಪರಿಹಾರವಲ್ಲ. ಸಮಸ್ಯೆ ಇದ್ದರೂ ನಾವದರಿಂದ ತಪ್ಪಿಸಿಕೊಂಡಿದ್ದೇವೆ ಎಂಬ ನೆಮ್ಮದಿ ಎಷ್ಟು ದಿನ ಉಳಿದೀತು? ಪರಂಪರೆಯ ಕೌಶಲವನ್ನು ಸಾಕಲಾರದ ಉದ್ಯೋಗಗಳು ಸುಸ್ಥಿರವಾದುವಲ್ಲ. ನಮ್ಮ ಮಕ್ಕಳಿಗೆ ಸಂಗ್ರಹವನ್ನು ಬಿಟ್ಟು ಹೋಗುತ್ತೇವೆ ಉದ್ಯೋಗವನ್ನಲ್ಲ, ಪರಂಪರೆಯ ಕೌಶಲವನ್ನಲ್ಲ  ಎನ್ನುವ ಸ್ಥಿತಿ ಭವಿಷ್ಯಕ್ಕೆ ಭರವಸೆಯಲ್ಲ. ಎಷ್ಟೇ ತಂತ್ರಜ್ಞಾನವಿದ್ದರೂ ಅನ್ನ ಮಣ್ಣಿನಲ್ಲೇ ಬೆಳೆಯಬೇಕಲ್ಲದೇ ಅನ್ಯ ದಾರಿ ಇಲ್ಲ. ದುಡಿಯುವುದು ಹಣವನ್ನು, ಅನ್ನ ಖರೀದಿಗೆ ಸಿಗುತ್ತದೆ ಎನ್ನುವ ಪರಿಕಲ್ಪನೆ ಎಷ್ಟು ದಿನ ಬದುಕೀತು? ಹಸಿರಿನ ಹಳ್ಳಿಯಲ್ಲಿ ಬೆಳೆಯುವ ಅನ್ನವನ್ನು ಪಡೆಯುವುದಕ್ಕೆ ಕಸದ ಗೂಡಾದ ನಗರವನ್ನು ಸೇರುವುದು ವೈರುಧ್ಯವಲ್ಲವೆ..!

ಚಳವಳಿಗಳನ್ನು ಸಾಕಲಾರದ ಸಂಕಟ……….

ಶತಮಾನಗಳ ಕಾಲ ಸ್ವಾತಂತ್ರ್ಯ ಹೋರಾಟವನ್ನು ಸಾಕಿಕೊಂಡು ಬಂದ ನಮಗೆ ಅಣ್ಣಾ ಹಜಾರೆಯವರ ಹೋರಾಟವನ್ನು  ಒಂದು ವರ್ಷ ಸಾಕುವುದೂ ಕಷ್ಟವಾಯಿತು. ಅದೊಂದೇ ಅಲ್ಲ ಯಾವ ಚಳವಳಿಯನ್ನೂ ಹಾದಿತಪ್ಪಿಸಬಲ್ಲ ಜಾಗತೀಕರಣದ ಜಾಲದಲ್ಲಿ ನಾವಿದ್ದೇವೆ. ಒಂದೋ ಚಳವಳಿಯ ಉದ್ದೇಶವನ್ನೇ ಅನುಮಾನಿಸುವಂತೆ ಮಾಡಲಾಗುತ್ತದೆ ಅಲ್ಲದಿದ್ದರೆ ಚಳವಳಿಯ ಮುಖದಲ್ಲಿರುವವರಿಗೆ ಆಮಿಷ ಒಡ್ಡಿ, ಬೆದರಿಕೆ ಹಾಕಿ ಸಂಘಟನೆಯನ್ನು ಒಡೆಯಲಾಗುತ್ತದೆ. ಈ ಕೆಲಸವನ್ನು ಯಶಸ್ವಿಯಾಗಿ ಪೂರೈಸುವ ಹೊಣೆ ಮಾಧ್ಯಮಗಳದ್ದಾಗಿರುತ್ತದೆ. ಮಾಧ್ಯಮ ಕೇವಲ ಮಾಹಿತಿಯನ್ನು ನೀಡುತ್ತಿಲ್ಲ ಅಭಿಪ್ರಾಯವನ್ನು ನಿರೂಪಿಸುತ್ತಿದೆ. ಆದರೆ ಮಾಧ್ಯಮಕ್ಕೆ ಯಾವ ಸಾಮಾಜಿಕ ನೈತಿಕ ಸಾಂಸ್ಕೃತಿಕ ಹೊಣೆಗಾರಿಕೆಯೂ ಇಲ್ಲ.

ಆ ಮಾಧ್ಯಮಗಳನ್ನು ಸಾಕುತ್ತಿರುವ ಶಕ್ತಿಗಳು ಈ ನೆಲದ ಸಂಸ್ಕೃತಿಯ ಗಂಧವಿಲ್ಲದ ಬಹುರಾಷ್ಟ್ರೀಯ ಕಂಪನಿಗಳು. ವ್ಯವಸ್ಥೆಯ ಜಾಡ್ಯವನ್ನು ಪ್ರಶ್ನಿಸುವ ಎಲ್ಲ ಯತ್ನಗಳಿಗೂ ಇದೇ ಸಮಸ್ಯೆಯಿದೆ. ಗ್ರಾಮೀಣ ಬದುಕನ್ನು ಚಿತ್ರಿಸುವ ಧಾರಾವಾಹಿಯನ್ನು ಪ್ರಾಯೋಜಿಸಿರುವುದು ಬಹುರಾಷ್ಟ್ರೀಯ ಕಂಪನಿಯೆಂದು ಗೊತ್ತಿದ್ದೂ ಆ ಧಾರಾವಾಹಿಯಲ್ಲಿ ಕಳೆದುಹೋಗುತ್ತೇವಲ್ಲ ಇದು ವೈರುಧ್ಯ.

ದೇಶವನ್ನು ಆಳುವುದು ಬಲ. ಕಾಲವನ್ನು ಆಳುವುದು ತಪಸ್ಸು.!

The EVENT
The EVENT

 

Leave a Reply

Your email address will not be published.

This site uses Akismet to reduce spam. Learn how your comment data is processed.