ಕ್ರಿ.ಶ. 1590  ಮತ್ತು 1812ರ ನಡುವೆ ಗೋವಾದಲ್ಲಿ ಕ್ರೈಸ್ತರು ನಡೆಸಿದ ತಣ್ಣನೆಯ ಕ್ರೌರ್ಯದ ಚಿತ್ರಣ ಅಂದಿನ ಸಾಮಾಜಿಕ ಸನ್ನಿವೇಶವನ್ನು ಲೇಖಕ ಟಿ.ಎ.ಪಿ. ಶೆಣೈ ಅವರು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

ಪುಸ್ತಕ ಪರಿಚಯ: ಉಮೇಶ್ ಕುಮಾರ್ ಶಿಮ್ಲಡ್ಕ, ಪತ್ರಕರ್ತ

ಸಾಮಾಜಿಕ, ರಾಜಕೀಯ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಸೂಕ್ಷ್ಮಜೀವಿಗಳ ಮನಸ್ಸಿಗೆ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅವರಲ್ಲಿ ಅನೇಕರು ಅವುಗಳ ದಾಖಲೀಕರಣದ ಕೆಲಸವನ್ನೂ ಮಾಡುತ್ತ ಸಾಗಿದ್ದಾರೆ ಕೂಡ. ಇಂತಹ ದಾಖಲೆಗಳೇ ಮುಂದಿನ ತಲೆಮಾರಿನಲ್ಲಿರುವ ಸೂಕ್ಷ್ಮಜೀವಿಗಳಿಗೆ ಆಕರವಾಗಿಬಿಡುತ್ತವೆ. ತುಲನೆಮಾಡಿ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಅಂಥದ್ದೊಂದು ಪುಸ್ತಕ ರಾಷ್ಟ್ರೋತ್ಥಾನ ಸಾಹಿತ್ಯ ೨೦೧೩ರಲ್ಲಿ ಪ್ರಕಟಿಸಿದ ’ಕ್ರೈಸ್ತ ಕ್ರೌರ್ಯ ಪರಂಪರೆ’. ಟಿ.ಎ.ಪಿ. ಶೆಣೈ ಇದರ ಲೇಖಕರು.

ಕ್ರೈಸ್ತ ಮತದ ಹುಟ್ಟು, ಧಾರ್ಮಿಕವಾಗಿ ಅದರ ವಿಸ್ತರಣೆಗಿಂತಲೂ ರಾಜಕೀಯವಾಗಿ ಅದರ ವಿಸ್ತರಣಾ ದಾಹ, ಜಗತ್ತನ್ನೇ ಸ್ವಾಧೀನಿಸುವುದಕ್ಕಾಗಿ ನಡೆಸಿದ, ನಡೆಸುತ್ತಿರುವ ತಣ್ಣನೆಯ ಕ್ರೌರ್ಯ ಪರಂಪರೆಗೆ ಕೈಗನ್ನಡಿ ಇದು. ಲೇಖಕರೇ ತಿಳಿಸಿರುವಂತೆ ನೀಳ್ಗತೆಯೊಂದರ ರೂಪದಲ್ಲಿ ಕ್ರೈಸ್ತ ಇತಿಹಾಸದ ಚೌಕಟ್ಟಿನೊಳಗೆ ಹುದುಗಿಕೊಂಡಿದ್ದ ಅನೇಕ ಘಟನಾವಳಿಗಳನ್ನು ಜೋಡಿಸಿಕೊಟ್ಟಿದ್ದಾರೆ. ಕ್ರೂಸೇಡ್ ಮತ್ತು ಇನ್ಕ್ವಿಜಿಷನ್ ಎಂಬ ಎರಡು ಪರಿಕಲ್ಪನೆಯ ಚಿತ್ರಣವೂ ಗಮನಸೆಳೆಯುತ್ತದೆ. ಜಗತ್ತಿನಾದ್ಯಂತ ಇದರ ಪ್ರಯೋಗ ಹೇಗಾಯಿತು ಎಂಬುದರ ವಿವರಣೆಯೂ ಇದ್ದು, ವಿಶೇಷವಾಗಿ ಕ್ರಿ.ಶ. ೧೫೯೦ ಮತ್ತು ೧೮೧೨ರ ನಡುವೆ ಗೋವಾದಲ್ಲಿ ಕ್ರೈಸ್ತರು ನಡೆಸಿದ ತಣ್ಣನೆಯ ಕ್ರೌರ್ಯದ ಚಿತ್ರಣ ಅಂದಿನ ಸಾಮಾಜಿಕ ಸನ್ನಿವೇಶದ ಕಲ್ಪನೆಗೆ ಅವಕಾಶ ಮಾಡಿಕೊಡುತ್ತದೆ.

ಕ್ರೂಸೇಡ್ ಮತ್ತು ಇಂಕ್ವಿಸಿಷನ್

ಕ್ರೂಸೇಡುಗಳ ಬಗ್ಗೆಯೂ ತಿಳಿದುಕೊಳ್ಳುವುದು ಅವಶ್ಯ. ಕ್ರೂಸೇಡ್ ಯುಗ ಎಂಬ ಮೊದಲ ಅಧ್ಯಾಯದಲ್ಲಿ ಈ ಬಗ್ಗೆ ವಿವರಣೆ ಹೀಗಿದೆ – ಮುಸ್ಲಿಂ ದೇಶಗಳ ಮತೀಯತೆಯು ಬರ್ಬರತೆಗೆ ಕಾರಣವಾದಂತೆ ಕ್ರೈಸ್ತ ದೇಶಗಳ ಮನಸ್ಸನ್ನು ನಿರ್ಮಿಸಿದ ಅವುಗಳ ಮತ ಪಂಥಗಳ ಜಾಡನ್ನೂ ಗಮನಿಸಬೇಕು. ಕ್ರೈಸ್ತಮತದ ವಿಸ್ತರಣಕಾಲದಲ್ಲಿ ಈ ದೇಶಗಳು ‘ಧರ್ಮಯುದ್ಧ’ದ ಹೆಸರಿನ ಕ್ರೂಸೇಡ್‌ಗಳ ಮೂಲಕ ದೇಶದೇಶಗಳ ಮೇಲೆ ಲಗ್ಗೆ ಇಟ್ಟವು. ಈ ಕ್ರೂಸೇಡುಗಳು ಪ್ರಾರ್ಥನೆ, ದಾನ, ಚರ್ಚುಗಳ ಚಟುವಟಿಕೆಗಳಿಗಷ್ಟೇ ಅಲ್ಲದೆ ಹಿಂಸೆಗೂ ಕೂಡಾ ಹೊಸ ವ್ಯಾಖ್ಯಾನವನ್ನು ನೀಡಿದವು. ಮತ ವಿಚಾರಗಳ ವಿಚಾರಣೆಯ ಇಂಕ್ವಿಸಿಷನ್‌ಗಳು ಕ್ರೈಸ್ತಮತವನ್ನು ಒಪ್ಪದವರ ಮೇಲೆ ಅತ್ಯಾಚಾರ ನಡೆಸಿದವು. ಈಗಲೂ ಅವು ಅನಸುರಿಸುತ್ತಿರುವ ಭಾವನಾರಹಿತ ಮತಾಂತರದ ವ್ಯವಹಾರಗಳು ಕ್ರೈಸ್ತ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಇದೇ ರೀತಿ, ಇಂಕ್ವಿಸಿಷನ್ ಕುರಿತ ವಿವರಣೆ ತಿಳಿದುಕೊಳ್ಳಬೇಕು. ಅದನ್ನು ಲೇಖಕರು ಹೇಳುವುದು ಹೀಗೆ: ‘ಕ್ರೈಸ್ತ ಕರುಣೆಯ ಮುಖವಾದ ಹಿಂದೆ ಕ್ರೂಸೇಡಿಗಿಂತ ಕ್ರೂರವಾದ ಚರಿತ್ರೆಯ ಭಾಗವಿದ್ದರೆ ಅದು ಇಂಕ್ವಿಸಿಷನ್‌ಗಳು. ಕ್ರೈಸ್ತಮತ ‘ಪಾವಿತ್ರ ’ವನ್ನು ಉಳಿಸಿಕೊಳ್ಳಲು ನಡೆದ ಈ ‘ವಿಚಾರಣೆ’ಗಳು ನೀಡಿದ ‘ತೀರ್ಪು’ಗಳು, ಇದಕ್ಕೆ ಬಲಿಯಾದ ನಿರಪರಾಧಿಗಳು ಹಾಗೂ ಅದನ್ನು ಎದುರಿಸಿದ ಧೀಮಂತ ಜೀವಗಳದ್ದೇ ಒಂದು ವಿಸ್ತಾರವಾದ ಕಥೆ, ಕ್ರೌರ್ಯ, ದಬ್ಬಾಳಿಕೆ, ಅನ್ಯಾಯ, ಒಳಸಂಚು, ಬೆದರಿಕೆ, ವೈಚಾರಿಕ ಮನದ ದಮನ – ಇವೆಲ್ಲವೂ ಸೇರಿದ ಒಟ್ಟು ಪರಿಣಾಮವು ಇಂಕ್ವಿಸಿಷನ್ ಎನಿಸಿಕೊಳ್ಳುತ್ತಿತ್ತು.’

ಗೋವಾದಲ್ಲಾಗಿತ್ತು ತಣ್ಣನೆಯ ಕ್ರೌರ್ಯ

ಗೋವಾ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ೧೫ನೇ ಶತಮಾನದಲ್ಲಿ ಅಂದಿನ ಆಡಳಿತಗಾರರು ನಡೆಸಿದ ತಣ್ಣನೆಯ ಕ್ರೌರ್ಯಕ್ಕೆ ಬೆದರಿ ಜೀವ ಉಳಿಸಲು ತಮ್ಮ ಹುಟ್ಟೂರು ಬಿಟ್ಟು ನಡೆದ ಕುಟುಂಬಗಳೆಷ್ಟೋ.. ಈಗಲೂ ಅನೇಕರು ತಮ್ಮ ಮೂಲ ಅರಸುತ್ತ ಗೋವಾ, ಸುತ್ತಮುತ್ತಲಿನ ಪ್ರದೇಶದ ಬೊಟ್ಟು ಮಾಡುತ್ತಿರುವುದನ್ನು, ಹಿರಿಯರು ಆ ಕುರಿತ ಕಥೆಗಳನ್ನು ಹೇಳುವುದನ್ನು ಕೇಳುತ್ತಿದ್ದೇವೆ. ಅಂತಹ ಕೆಲವು ಅಂಶಗಳನ್ನು ಉಲ್ಲೇಖಗಳೊಂದಿಗೆ ಲೇಖಕರು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಂಕ್ವಿಸಿಷನ್ ಯುಗ ಎಂಬ ಅಧ್ಯಾಯದಲ್ಲಿ ಅವರು, ಗೋವಾಕ್ಕೆ ಬಂದ ಇಂಕ್ವಿಸಿಷನ್ ಎಂಬ ಉಪಶೀರ್ಷಿಕೆಯಲ್ಲಿ ‘ರಾಜನ ಧರ್ಮವೇ ಪ್ರಜೆಗಳದ್ದೂ’ ಎನ್ನುವ ಘೋಷಣೆಯೊಡನೆ ಬಂದಿಳಿದ ಪೋರ್ತುಗೀಸರು ಅಕ್ರಮ ಅನ್ಯಾಯದ ಮತಾಂತರವನ್ನು ಪ್ರಾರಂಭಿಸಿದರು’ ಎಂಬ ವಾಕ್ಯದೊಂದಿಗೆ ಇದನ್ನು ವಿವರಣೆ ನೀಡಿರುವುದು ಹೀಗೆ – ‘ಹಿಂದುಗಳ ಪಾಲಿಗೆ ಅದೊಂದು ಅವಿರತ ಧರ್ಮಯುದ್ಧದ ಕಾಲಖಂಡವಾಗಿತ್ತು. ಹಿಂದುಗಳು ತಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ತೋರಿದ ಕ್ಷಾತ್ರ ಕೆಚ್ಚಿನ ಇತಿಹಾಸವಾಗಿತ್ತು. ಭಾರತದಂತಹ ಸಜ್ಜನ ದೇಶದಲ್ಲೂ ಈ ಪರಕೀಯರು ತಮ್ಮ ಸತ್ತೆಯನ್ನು ಹೇರಿ ಇಂಕ್ವಿಸಿಷನ್ ಕಾನೂನುಗಳಿಂದ ಹಿಂದುಗಳನ್ನು ಹಿಂಸಿಸಿದರು…’ ಎನ್ನುತ್ತ ದೇವಾಲಯಗಳ ಜಾಗದಲ್ಲಿ ಚರ್ಚ್ಗಳು ತಲೆ ಎತ್ತಿದ್ದ ಬಗೆಯನ್ನು ವಿವರಿಸಿದ್ದಾರೆ.

ಅಲ್ಲದೆ, ೧೭ನೇ ಶತಕದ ಕೊನೆಯಲ್ಲಿ ಗೋವಾದಲ್ಲಿ ಎರಡೂವರೆ ಲಕ್ಷದಷ್ಟಿದ್ದ ಹಿಂದುಗಳ ಸಂಖ್ಯೆ ೨೦,೦೦೦ಕ್ಕೆ ಇಳಿದಿತ್ತು! ಅಲ್ಲಿಂದ ಹೊರಬಿದ್ದ ಹಿಂದುಗಳೆಲ್ಲ ಗೋವಾದಿಂದ ಹೊರಗೆ ಬೇರೆ ಬೇರೆ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದರು. ಅಲ್ಲೇ ದೇವಸ್ಥಾನಗಳನ್ನು ನಿರ್ಮಿಸಿಕೊಂಡರು. ಹಳೇ ಗೋವಾದ ಕಾರಂಬೋಲಿಮ್ ನಲ್ಲಿದ್ದ ಅಪೂರ್ವ ಬ್ರಹ್ಮ ದೇವಸ್ಥಾನದಿಂದ ವಿಗ್ರಹವನ್ನು ಪೂರ್ವಕ್ಕೆ ಪಶ್ಚಿಮಘಟ್ಟಗಳ ತಪ್ಪಲು ಪ್ರದೇಶಗಳಿಗೆ ಸಾಗಿಸಲಾಯಿತು. ಸಂಖಾವಲಯದಲ್ಲಿದ್ದ ವಿಜಯದುರ್ಗಾ, ಲಕ್ಷ್ಮೀನರಸಿಂಹರನ್ನೂ ಕೆರಿಮ್‌ಗೆ ಸ್ಥಾನಾಂತರಿಸಲಾಯಿತು. ಮಾಪುಸಾದಿಂದ ಶಾಂತಾದುರ್ಗೆಯನ್ನು ಮರಾಠಿ ಸಾವಂತವಾಡಿಯ ಸಾಂಕ್ವೆಲಿಯಮ್‌ಗೆ ಕೊಂಡುಹೋದರು. ಶ್ರೀ ಮಹಾಲಕ್ಷ್ಮೀ ವಿಗ್ರಹವು ತಾಲೆಗಾಂವ್‌ನಿಂದ ಮೊದಲು ಮಾಯೆಮ್‌ಗೆ ಸ್ಥಾನಾಂತರಗೊಂಡು ೩೦೦ ವರ್ಷಗಳ ತರುವಾಯ ಪೋರ್ತುಗೀಸರ ಜೊತೆ ನಡೆದ ಒಪ್ಪಂದದಂತೆ ೧೮೧೮ರಲ್ಲಿ ಪಣಜಿಯ ಭವ್ಯಮಂದಿರದಲ್ಲಿ ಸ್ಥಾಪಿಸಲ್ಪಟ್ಟಿತು.

ಇತ್ತೀಚೆಗೆ ಮೇಘಾಲಯದ ಕ್ರಿಶ್ಚಿಯನ್ ಬಾಹುಳ್ಯದ ಶಿಲ್ಲಾಂಗ್‌ನಲ್ಲಿದ್ದ ವಿವೇಕಮಂದಿರ (ಶ್ರೀ ರಾಮಕೃಷ್ಣ ಮಠ)ವನ್ನು ಬಲವಂತವಾಗಿ ಮುಚ್ಚಿಸಿದ ಪ್ರಕರಣದ ವರದಿ, ಇದಕ್ಕೆ ಪ್ರತಿಯಾಗಿ ಹಿಂದುಗಳಾರೂ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಬಾರದು, ಚರ್ಚ್‌ಗೆ ತೆರಳಬಾರದು ಎಂದು ಅಸ್ಸಾಂನ ಜಿಲ್ಲೆಯೊಂದರ ಬಜರಂಗದಳದ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಸಾರ್ವಜನಿಕ ಸಮಾರಂಭದಲ್ಲಿ ಎಚ್ಚರಿಸಿದ ವರದಿಗಳಿಗೂ ಈ ಪುಸ್ತಕದಲ್ಲಿರುವ ವಿಚಾರಗಳು ತಾಳೆಯಾದರೆ ಪರಿಸ್ಥಿತಿ ಏನೆಂಬುದು ಎಂಥವರಿಗೂ ಮನವರಿಕೆಯಾದೀತು.

ಈ ಪುಸ್ತಕವನ್ನು ಓದುವುದಕ್ಕೆ ಅನುಕೂಲವಾಗುವಂತೆ ಮನಸ್ಸಿಗೆ ಬುನಾದಿ ಹಾಕಿಕೊಡುವ ಕೆಲಸವನ್ನು ಡಾ. ಎಸ್.ಆರ್. ರಾಮಸ್ವಾಮಿಯವರ ಪಸ್ತಾವನೆ ಮಾಡುತ್ತದೆ. ಪ್ರಸ್ತಾವನೆಯ ಆರಂಭದಲ್ಲೇ ಜಗತ್ತಿನ ಧರ್ಮ ಮತ್ತು ಮತಗಳ ಚಿಂತನೆಗೆ ಅಡಿಪಾಯವಾಗಿರುವ ಮೂರು ಆಯಾಮಗಳನ್ನು ಉಲ್ಲೇಖಿಸಿದ್ದಾರೆ. ೧) ಆಧ್ಯಾತ್ಮಿಕ ಅನುಭೂತಿ ೨) ನೈತಿಕ ಮೌಲ್ಯಗಳು ೩) ಬಹಿರಂಗ ವ್ಯಾವಹಾರಿಕತೆ. ಈ ಮೂರನ್ನೂ ಸ್ಫುಟವಾಗಿ ಗುರುತಿಸದೇ ಇದ್ದರೆ ವಿಷಯ ಗ್ರಹಿಕೆಯಲ್ಲಿ ಗೊಂದಲ ಉಂಟಾಗಬಹುದು ಎಂಬ ತಿಳಿವಳಿಕೆಯ ಕಿರು ಎಚ್ಚರಿಕೆ ಗಮನಸೆಳೆಯುತ್ತದೆ.

ಅಷ್ಟೇ ಅಲ್ಲ ‘ಎಲ್ಲ ಧರ್ಮಗಳೂ ಸಮಾನ’ವೆಂದು ಪ್ರತಿಪಾದಿಸುವ ‘ಸಮಾನತೆ’ಯ ಪರಿಕಲ್ಪನೆಯ ಬಗ್ಗೆಯೂ ಗಮನಸೆಳೆದಿರುವ ಅವರು, ಸಮಾನತೆ ಎಂಬ ಶಬ್ದ ಪ್ರಯೋಗ ಔಪಾಚರಿಕತೆಗೆ ಸೀಮಿತ. ಅದಕ್ಕೆ ತಾತ್ತ್ವಿಕ ನೆಲೆಗಟ್ಟಿಲ್ಲ. ವಿಷಯದ ಆಳಕ್ಕೆ ಇಳಿದಷ್ಟೂ ಮತಗಳ ನಡುವಣ ಹೋಲಿಕೆಗೆ ಹೆಚ್ಚು ಅರ್ಥ ಇರಲ್ಲ ಎನ್ನುತ್ತ, ವೇದದ ಯಾವುದೋ ವಾಕ್ಯ, ಬೈಬಲಿನ ಯಾವುದೋ ವಾಕ್ಯ, ಕುರಾನಿನ ಯಾವುದೋ ವಾಕ್ಯವನ್ನು ಹೆಕ್ಕಿ ತೆಗೆದು ವರಸೆಯಾಗಿ ಜೋಡಿಸಿ ಎಲ್ಲ ಮತಗಳೂ ಸಮಾನವೆಂದು ಮಂಡನೆ ಮಾಡುವುದು ಅಮಾಯಕತೆ ಮತ್ತು ಅತಾರ್ಕಿಕತೆಯ ಪರಮಾವಧಿ ಎಂಬ ಆಶಯ ಪ್ರಸ್ತಾವನೆಯಲ್ಲಿ ವ್ಯಕ್ತವಾಗಿದೆ.

ವ್ಯಾಹವಾರಿಕ ಜಾಣ್ಮೆಯೇ ಬುನಾದಿ

ಕ್ರೈಸ್ತ ಧರ್ಮವು ವ್ಯಾವಹಾರಿಕ ಜಾಣ್ಮೆಯಲ್ಲಿ ಅಳವಡಿಸಿಕೊಂಡ ಬಗ್ಗೆ ಬೆಳಕು ಚೆಲ್ಲಿರುವ ಲೇಖಕ ಟಿ.ಎ.ಪಿ. ಶೆಣೈ ಅದನ್ನು ವಿವರಿಸಿದ್ದು ಹೀಗೆ- ಯೇಸುವು ಶಿಲುಬೆಯನ್ನೇರಿದ ನಂತರದ ೧೦ ವರ್ಷಗಳವರೆಗೂ ಅವನ ಉಪದೇಶಗಳನ್ನು ಮೆಚ್ಚಿದವರು ಕ್ರೈಸ್ತರೆಂದು ಕರೆಯಿಸಿಕೊಂಡಿರಲಿಲ್ಲ. ಪೌಲ್ ಎನ್ನುವ ರೋಮಿನ ಪ್ರಜೆ ಯೇಸುವಿನ ಈ ಅನುಯಾಯಿಗಳನ್ನು ಕ್ರೈಸ್ತರೆನ್ನುವ ಹೆಸರಿನಲ್ಲಿ ಒಂದಾಗುವಂತೆ ಮಾಡಿದ. ಹೀಗಾಗಿ ಪೌಲನನ್ನೇ ಕ್ರೈಸ್ತಮತದ ಎರಡನೇ ಸ್ಥಾಪಕನೆಂದು ಗುರುತಿಸುವಂತಾಯಿತು. ಹೀಗೆ ಯೇಸುವೇ ಸ್ಥಾಪಿಸದ ಕ್ರೈಸ್ತಮತವು ಅವನ ಹೆಸರನ್ನು ತನ್ನ ಉಪಯೋಗಕ್ಕಾಗಿ ವಿನಿಯೋಗಿಸಿಕೊಂಡಿತು. ಹುಟ್ಟಿನಿಂದಲೇ ಇಂಥದ್ದೊಂದು ಅಸಂಬದ್ಧತೆಯನ್ನು ಪ್ರದರ್ಶಿಸಿದ ಕ್ರೈಸ್ತಮತವನ್ನು ಒಪ್ಪುವುದು ಮೂರನೇ ಶತಮಾನದವರೆಗೆ ಲಾಭದ ವಿಚಾರವಾಗಿರಲಿಲ್ಲ. ಕಾನ್‌ಸ್ಟಾಂಟೈನ್ (ಕ್ರಿ.ಶ. ೩೦೬-೩೩೭) ಎನ್ನುವ ರೋಮಿನ ದೊರೆಯು ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಕ್ರೈಸ್ತನಾದ ನಂತರವೇ ಯಾರಿಗೇ ಆದರೂ ಕ್ರೈಸ್ತನೆನ್ನಿಸಿಕೊಳ್ಳುವುದು ಲೌಕಿಕ ಲಾಭದ ಮಾರ್ಗವಾಯಿತು. ಈ ಕ್ರೈಸ್ತ ವ್ಯಾವಹಾರಿಕ ಜಾಣ್ಮೆಯೇ ಈವೆರಗೂ ರೂಪಾಂತರಗೊಳ್ಳುತ್ತ, ಬದಲುಗೊಳ್ಳುತ್ತ, ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುತ್ತ, ಪರಿವರ್ತಿತವಾದಂತೆ ತೋರಿಸಿಕೊಳ್ಳುತ್ತ, ಲಾಭದಾಯಕ ಉದ್ಯೋಗವೆನಿಸಿ ಮುಂದುವರಿಯುತ್ತಿದೆ.

ಸಮಾನತೆಯ ಸೋಗು !

ಟಿ.ಎ.ಪಿ. ಶೆಣೈ ಅವರ ವ್ಯಾವಹಾರಿಕ ಜಾಣ್ಮೆಯ ಧರ್ಮ ಇದು ಎಂಬ ವಿವರಣೆಯನ್ನು ಆಧಾರವಾಗಿಟ್ಟುಕೊಂಡು ಇಂದಿನ ಸನ್ನಿವೇಶವನ್ನು ಗಮನಿಸಿದರೆ ಕ್ರೈಸ್ತ ಧರ್ಮದ ರೂಪಾಂತರವನ್ನು ಉಲ್ಲೇಖಿಸಬಹುದು. ಮೂರ್ತಿ ಪೂಜೆ ವಿರೋಧಿಸುತ್ತಿದ್ದವರು ಶ್ರೀಕೃಷ್ಣನ ಸ್ಥಾನದಲ್ಲಿ, ಮುರುಗನ ಸ್ಥಾನದಲ್ಲಿ ಕ್ರಿಸ್ತನ ಮೂರ್ತಿಗಳು ಕಾಣಿಸಿಕೊಂಡಿವೆ. ಹಿಂದುದೇಗುಲಗಳಲ್ಲಾಗುವಂತೆ ಒಂದೊಂದು ವಾರದ ಜಾತ್ರೆಯನ್ನು, ಆನೆ ಮೇಲೆ ದೇವರ ಮೆರವಣಿಗೆ, ಚರ್ಚ್ ಎದುರು ಧ್ವಜಸ್ತಂಭ ಹೀಗೆ ಸಾಲು ಸಾಲು ಆಚರಣೆಗಳ ಅನುಕರಣೆಗಳಾಗಿವೆ. ಹಿಂದು ಧರ್ಮ ಬೇರೆಯಲ್ಲ, ಕ್ರೈಸ್ತ ಧರ್ಮ ಬೇರೆಯಲ್ಲ ಎಂಬ ಭಾವನೆ ಬೇರೂರಲು, ತಥಾಕಥಿತ ‘ಸಮಾನತೆ’ಯ ಔಪಚಾರಿಕ ಶಬ್ದ ಪ್ರಯೋಗಕ್ಕೆ ಇಷ್ಟು ಸಾಲದೇ? ಇದೇ ರೀತಿ ಮುಂದುವರಿದರೆ, ಏನಾಗಬಹುದು ಎಂದು ಊಹಿಸುವುದಕ್ಕೆ ಸಾಕಷ್ಟು ನಿದರ್ಶನಗಳೂ ಕಣ್ಣಮುಂದೆ ಸಿಗುತ್ತವೆ. ಅಂತಹ ಒಂದೆರಡು ನಿದರ್ಶನಗಳನ್ನೂ ಈ ಪುಸ್ತಕದಲ್ಲಿ ಶೈಣೈ ಅವರು ಉಲ್ಲೇಖಿಸಿದ್ದಾರೆ.

ಹಿಂದೂ-ಕ್ರೈಸ್ತ ಸಾಂಸ್ಕೃತಿಕ ಮುಖಾಮುಖಿ ಎಂಬ ಅಧ್ಯಾಯದಲ್ಲಿ ಅವರು ಪ್ರತ್ಯೇಕತೆಯು ಬೀಜಾಂಕುರ ಉಪಶೀರ್ಷಿಕೆಯಡಿ ವಿವರಿಸಿರುವುದು ಹೀಗೆ – “…೧೮ನೇ ಶತಮಾನದ ಹೊತ್ತಿಗೆ ವಿದೇಶಿ ಕ್ರೈಸ್ತ ವಿದ್ವಾಂಸರೂ ಅವರ ಜೊತೆಗೂಡಿದ ಇತರರೂ ಕ್ರೈಸ್ತರನ್ನು ಯೇಸುವಿನ ಶಿಷ್ಯರಲ್ಲೊಬ್ಬರಾದ ಸಂತ ಥಾಮಸನ ಜೊತೆಯಲ್ಲಿ ಭಾರತಕ್ಕೆ ಬಂದವರು ಎಂದು ನಿರ್ಣಯಿಸಿದರು. ಇದೇ ತರ್ಕವನ್ನು ಮುಂದುವರಿಸುತ್ತಾ ಭಾರತದ ಆಚಾರ್ಯ- ಪ್ರಣೀತ ದ್ವೈತ-ಅದ್ವೈತ-ವಿಶಿಷ್ಟಾದ್ವೈತ ಸಿದ್ಧಾಂತಗಳಿಗೂ ಭಕ್ತಿ-ಮುಕ್ತಿ ಮಾರ್ಗಗಳೆಲ್ಲಕ್ಕೂ ಯೇಸುವಿನ ಬೋಧನೆಯೇ ಸ್ಫೂರ್ತಿ ಎನ್ನುವ ಊಹೆಯನ್ನು ತೇಲಿಬಿಟ್ಟರು. ಇದಕ್ಕೆ ಈ ಸಿರಿಯನ್ ಗುಂಪಿ ಪ್ರಭಾವವೇ ಕಾರಣವೆಂದೂ ಆರೋಪಿಸಿ ಬಿಟ್ಟರು. ಹಿಂದೊಮ್ಮೆ ರಾಷ್ಟ್ರಪತಿಗಳಾಗಿದ್ದ ಕೆ.ಆರ್. ನಾರಾಯಣನ್ ಮಾತನಾಡುತ್ತ, ‘ಆಚಾರ್ಯ ಶಂಕರರು ಕೂಡ ಕ್ರೈಸ್ತ ಮತ್ತು ಇಸ್ಲಾಂ ತತ್ತ್ವಗಳಿಂದ ಪ್ರಭಾವಿತರಾಗಿದ್ದರು’ ಎಂದು ಹೇಳಿದುದಕ್ಕೆ ಈ ಕುಹಕ ಸಂಶೋಧನೆಗಳೇ ಕಾರಣ.”

ಬದಲಾಗುತ್ತಿರುವ ಅವರ ಧರ್ಮಾಚರಣೆಗಳು ಹಿಂದು ಸಮುದಾಯದವರ ದಾರಿತಪ್ಪಿಸುವಂಥದ್ದು. ದೇಶದ ಪ್ರಥಮ ಪ್ರಜೆಯಾಗಿದ್ದವರ ಚಿಂತನೆಯನ್ನೂ ದಾರಿ ತಪ್ಪಿಸಿದವರು, ಸಾಮಾನ್ಯರ ದಾರಿತಪ್ಪಿಸದೇ ಇರುತ್ತಾರೆಯೇ? ರಾಜಕೀಯವಾಗಿಯೂ ಪ್ರಭಾವವನ್ನು ಬೀರುತ್ತಿರುವ ಇವರು ‘ಸೇವೆ’ಯ ನೆರಳಿನಲ್ಲಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಾರೆ. ಇದು ಕೂಡ ಕ್ರೈಸ್ತತಂತ್ರವೇ ಎಂಬುದನ್ನು ಲೇಖಕರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದನ್ನು ಓದುತ್ತಿರುವ ಜಾತಿ ಮೀಸಲಾತಿ ಲಾಭ ಪಡೆಯುವುದಕ್ಕಾಗಿ ಮತಾಂತರವಾದರೂ ಅವರಿಗೂ ಮೀಸಲಾತಿ ಬೇಕೆನ್ನುವ ‘ದಲಿತ’ ಕ್ರಿಶ್ಚಿಯನ್ನರ ಬೇಡಿಕೆಯ ನೆನಪಾಗದೇ ಇರದು.

ರಾಷ್ಟ್ರ, ರಾಷ್ಟ್ರೀಯತೆಗಳು ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ನಮ್ಮ ಧರ್ಮ, ಸಂಸ್ಕೃತಿ ಪರಂಪರೆಗಳಿಗೆ ಕೊಡಬೇಕು. ವೈವಿಧ್ಯಮಯ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆಯೂ ಎಲ್ಲರ ಮೇಲೂ ಇರುವ ಕಾರಣ ಇಂತಹ ಇತಿಹಾಸಗಳ ಅರಿವೂ ಇರಬೇಕಾದ್ದು ಅವಶ್ಯ. ಲೇಖಕರು ಪುಸಕ್ತದ ಕೊನೆಯಲ್ಲಿ ಒಂದಷ್ಟು ಆಕರ ಗ್ರಂಥಗಳು ವಿವರನ್ನೂ ನೀಡಿದ್ದಾರೆ. ಕ್ರೈಸ್ತ ಕ್ರೌರ್ಯ ಪರಂಪರೆ ಕುರಿತ ವಿಸ್ತೃತ ತಿಳಿವಳಿಕೆಗಾಗಿ ಆಕರ ಗ್ರಂಥಗಳು ಅಧ್ಯಯನಕ್ಕೆ ಈ ಪುಸ್ತಕ ಪ್ರೇರಣೆಯಾದೀತು.

ಉಮೇಶ್ ಕುಮಾರ್ ಶಿಮ್ಲಡ್ಕ, ಪತ್ರಕರ್ತ

1 thought on “ಅವರದು ರಕ್ತಸಿಕ್ತ ಕ್ರೌರ್ಯ, ಇವರದು ತಣ್ಣನೆಯ ಕ್ರೌರ್ಯ ಪರಂಪರೆ

Leave a Reply

Your email address will not be published.

This site uses Akismet to reduce spam. Learn how your comment data is processed.