
ಲೇಖನ: ಭೈರೇಗೌಡ ಬದಾಮಿ
ಆಗಸ್ಟ್ 15, 1947 ರಂದು ಸುಮಾರು 250+ ವರ್ಷಗಳ ಕಾಲ ಬ್ರಿಟೀಶರ ದಾಸ್ಯದಿಂದ ಹೊರಬಂದು ಭಾರತ ಸ್ವತಂತ್ರ ದೇಶವಾಯಿತು. ಆದರೆ ಹಾಗೆ ಸ್ವತಂತ್ರವಾಗುವುದಕ್ಕೂ ಮುನ್ನಾ ಧರ್ಮಾಧಾರಿತವಾಗಿ ಬ್ರಿಟೀಷರು ಭಾರತವನ್ನು ಮೂರು ಭಾಗಗಳನ್ನಾಗಿ ಮಾಡಿ ಭಾರತದ ಎಡ ಮತ್ತು ಬಲಗಳಲ್ಲಿ ಪೂರ್ವ ಮತ್ತು ಪಶ್ಛಿಮ ಪಾಕಿಸ್ಥಾನ (1970ರ ದಶಕದಲ್ಲಿ ಸ್ವತಂತ್ರವಾದ ಬಾಂಗ್ಲಾದೇಶವಾಯಿತು) ಎಂದು ತುಂಡರಿಸಿ ಮಧ್ಯದ ಭಾಗವನ್ನು ಸ್ವತಂತ್ರ ಹಿಂದೂಸ್ಥಾನ ಎಂದು ಕರೆದು ಹೋದರು.
ಹಾಗೆಯೇ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಸುಮಾರು ರಾಷ್ಟ್ರದೊಳಗೆ 565 ರಾಜಸಂಸ್ಥಾನಗಳು ವಿವಿಧ ರಾಜ ಮಹಾರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಇಂತಹ ಸಣ್ಣ ಸಣ್ಣ ರಾಜಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ತಾನದ ಜೊತೆ ವಿಲೀನವಾಗಲು, ಹಾಗೆಯೇ ಸ್ವತಂತ್ರವಾಗಿಯೇ ಇರಬಹುದಾದ ಆಯ್ಕೆಗಳನ್ನು ಅವರಿಗೆ ಕೊಡಲಾಗಿತ್ತು. ಸ್ವಾತಂತ್ರ್ಯಾನಂತರದ ಭಾರತ ಸರ್ಕಾರದ ಪ್ರಥಮ ಗೃಹಸಚಿವರಾದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಈ ಎಲ್ಲಾ ರಾಜಸಂಸ್ಥಾನಗಳ ಭಾರತ ವಿಲೀನದ ಪ್ರಕ್ರಿಯೆ ಆರಂಭಗೊಂಡಿತು.
ಪಟೇಲರ ರಾಜಕೀಯ ಮುತ್ಸದ್ದಿತನ ಮತ್ತು ಚಾಣಾಕ್ಷತನದಿಂದ ಮತ್ತು ಭವಿಷ್ಯದ ದೃಷ್ಟಿಯಿಂದ ಬಹುತೇಕ ಎಲ್ಲಾ ರಾಜ್ಯಗಳೂ ಭಾರತದೊಂದಿಗೆ ವಿಲೀನವಾಗಲು ಶರತ್ತುಬದ್ಧವಾಗಿ ಒಪ್ಪಿಕೊಂಡರು. ಯಾವುದೇ ಷರತ್ತುಗಳು ಇಲ್ಲದೇ ಹೃತ್ಪೂರ್ವಕವಾಗಿ ಸ್ವತಂತ್ರ ಭಾರತಕ್ಕೆ ವಿಲೀನವಾಗಲು ಒಪ್ಪಿಕೊಂಡು ಸಹಿ ಹಾಕಿದ ಮೊತ್ತಮೊದಲನೇ ರಾಜ ಸಂಸ್ಥಾನ ಮೈಸೂರು ಎಂದೆನಿಸಿಕೊಂಡರೆ, ಅವರನ್ನೇ ಅನುಸರಿಸಿ, ಕೊಚ್ಚಿ, ತಿರುವನಂತಪುರ, ಭೋಪಾಲ್, ಗುಜರಾತ್ ಪ್ರಾಂತ್ಯದ ಬಹುತೇಕ ಚಿಕ್ಕ ಚಿಕ್ಕ ರಾಜ್ಯಗಳು ಸಹ ಭಾರತಕ್ಕೆ ಸೇರಿಕೊಂಡವು. ದುರಾದೃಷ್ಟವಷಾತ್ ಹೈದರಾಬಾದಿನ ನಿಜಾಮ ಮತ್ತು ಜುನಾಗಢದವರು ಪಾಕೀಸ್ಥಾನದೊಂದಿಗೆ ಸೇರಲು ಇಚ್ಚಿಸಿದರೆ, ಕಾಶ್ಮೀರದ ರಾಜ ಅಲಿಪ್ತನೀತಿಯನ್ನು ತಾಳಿ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದರು. ಮುಂದೆ ನಾನಾ ರೀತಿಯ ರಾಜಕೀಯ ಕಾರಣಗಳಿಂದಾಗಿ ಕಾಶ್ಮೀರ ಮತ್ತು ಜುನಾಗಢ ಭಾರತಕ್ಕೆ ಸೇರಿಕೊಂಡರೆ, ದಕ್ಷಿಣ ಭಾಗದಲ್ಲಿದ್ದ ಹೈದರಾಬಾದಿನ ನಿಜಾಮ ಮಾತ್ರ ಪಾಕಿಸ್ಥಾನದ ಪರ ಕಠಿಣ ಒಲವು ತೋರಿದ್ದು ಪಟೇಲರ ನಾಯಕತ್ವದ ವೈಖರಿಯ ರುಚಿನೋಡುವಂತಾಯಿತು.
ಹೈದರಾಬಾದ್ ರಾಜ್ಯದ ಅಧಿಕಾರ ಅಸಫ್ ಜಾಹಿ ರಾಜವಂಶದ VII ಮೀರ್ ಒಸ್ಮಾನ್ ಅಲಿ ಖಾನ್ ಎಂಬ ನಿಜಾಮ ದೊರೆಯ ಹಿಡಿತದಲ್ಲಿದ್ದರೂ, ಆ ಪ್ರಾಂತ್ಯಕ್ಕೆ ಸೇರಿದ್ದ, ತೆಲಂಗಾಣ, ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಬಹುಸಂಖ್ಯಾತರಾಗಿ ಹಿಂದೂಗಳೇ ಇದ್ದ ಕಾರಣ ಅವರೆಲ್ಲರೂ ಹಿಂದೂಸ್ಥಾನದ ಪರವಾಗಿರಲು ಇಚ್ಚಿಸುತ್ತಿದ್ದರು. ಇದನ್ನು ಗಮನಿಸಿದ ಹೈದರಾಬಾದಿನ ನಿಜಾಮ ಕೂಡಲೇ ತನ್ನದು ಸ್ವತಂತ್ರ ರಾಜ್ಯ ಎಂದು ಘೋಷಿಸಿಕೊಂಡಿದ್ದಲ್ಲದೇ ಒಳಗೊಳಗೇ, ಪಾಕಿಸ್ತಾನದ ಮುಸ್ಲಿಮ್ ಲೀಗ್ ಜೊತೆ ಸಂಪರ್ಕವನ್ನು ಬೆಳಸಿ ಹೇಗಾದರೂ ಮಾಡಿ ತನ್ನ ಪ್ರದೇಶವನ್ನು ಪಾಕಿಸ್ಥಾನದೊಂದಿಗೆ ಸೇರಿಸಲು ಸಾಧ್ಯವೇ ಎಂದು ಹೊಂಚುಹಾಕುತ್ತಿದ್ದ. ಆಗ ತಾನೇ ಕಾಶ್ಮೀರದ ಸಮಸ್ಯೆ ಗಂಭೀರವಾಗುತ್ತಿದ್ದದ್ದನ್ನು ಗಮನದಲ್ಲಿಟ್ಟುಕೊಂಡಿದ್ದ ಮತ್ತು ನಿಜಾಮನ ಈ ರೀತಿಯ ಕುತಂತ್ರದ ಬಗ್ಗೆ ಅರಿತಿದ್ದ ವಲ್ಲಭಭಾಯಿ ಪಟೇಲರು ಇದು ಮತ್ತೊಂದು ಕಾಶ್ಮೀರ ಆಗುವುದು ಬೇಡ ಎಂದು ನಿರ್ಧರಿಸಿ, ಬಹು ಜನರ ಆಶಯದಂತೆ ಈ ಪ್ರಾಂತ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಕಾರ್ಯತಂತ್ರ ರೂಪಿಸಿದರು.
ಈ ಕಾರ್ಯತಂತ್ರದ ಫಲವಾಗಿ, ಭಾರತ ಸರ್ಕಾರ ಅಂದಿನ ಹೈದರಾಬಾದ್ನ ರಾಜಪ್ರಭುತ್ವದ ಜೊತೆಗೆ ಯಥಾವತ್ ಪರಿಸ್ಥಿತಿಯನ್ನು ಕಾಪಾಡಿಕೊಂಡು ಹೋಗುವಂತಹ ಸ್ಟ್ಯಾಂಡ್ಸ್ಟಿಲ್ ಒಪ್ಪಂದವನ್ನು ಮಾಡಿಕೊಂಡು ಅದರ ಮೂಲಕ, ಭಾರತದ ದೇಶದ ಪ್ರತಿನಿಧಿಯಾಗಿ ಅರ್ಥಾತ್ ಭಾರತದ ಟ್ರೇಡ್ ಏಜೆಂಟ್ (ಏಜೆಂಟ್-ಜನರಲ್) ಆಗಿ ಕನ್ಹಯ್ಯಾಲಾಲ್ ಮನೆಕ್ಲಾಲ್ ಮುನ್ಷಿ (ಕೆ. ಎಂ. ಮುನ್ಷಿ) ಅವರನ್ನು ನೇಮಿಸಿದರು. ಶ್ರೀ ಮುನ್ಷಿಯವರನ್ನು 1937 ರಿಂದ 1939 ರವರೆಗೆ ಅಂದಿನ ಬಾಂಬೆ ಸರ್ಕಾರದಲ್ಲಿ ಗೃಹಸಚಿವರಾಗಿ ಅಲ್ಲಿನ ಕೋಮು ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದರಿಂದ ಹೈದರಾಬಾದ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ಭರವಸೆ ಪಟೇಲರಿಗೆ ಇದ್ದ ಕಾರಣ, ಈ ಕಾರ್ಯತಂತ್ರಕ್ಕೆ ರಹಸ್ಯವಾಗಿ ಆಪರೇಷನ್ ಪೋಲೋ ಎಂಬ ಹೆಸರನ್ನಿಟ್ಟಿದ್ದರು.
ಹೈದರಾಬಾದ್ ರಾಜ್ಯದ ಬಹುಸಂಖ್ಯಾತ ಹಿಂದೂಗಳು ಭಾರತ ಪರ ಒಲವಿರುವುದನ್ನು ಗಮನದಲ್ಲಿಟ್ಟುಕೊಂಡು ಪಟೇಲರು ಏನಾದರೂ ತಂತ್ರಗಾರಿಕೆ ಮಾಡಬಹುದು ಎಂಬುದನ್ನು ಊಹಿಸಿದ್ದ ಹೈದರಾಬಾದ್ ನಿಜಾಮನೂ ಸಹ, ತನ್ನ ರಾಜ್ಯದಲ್ಲಿ ರಜಾಕಾರರೆಂಬ ಮತಾಂಧರ ಖಾಸಗಿ ಸೈನ್ಯವನ್ನು ಪರೋಕ್ಷವಾಗಿ ಕಟ್ಟಿ ಖಾಸಿಂ ರಜ್ವಿ ಎಂಬ ಮತಾಂಧನನ್ನು ಅದರ ಮುಖ್ಯ ಸೇನಾಧಿಕಾರಿಯಾಗಿ ನೇಮಿಸಿ ತನ್ನ ರಾಜ್ಯದಲ್ಲಿರುವ ಯಾವ ಪ್ರಜೆಗಳು ಭಾರತದ ಜೊತೆ ವಿಲೀನವಾಗಲು ಬಯಸಿದ್ದರೋ ಅಂತಹವರನ್ನು ಸದೆ ಬಡಿಯುವ ಕಾರ್ಯಕ್ಕೆ ನಿಯೋಜಿಸಿದ. ಶೇ 90ರಷ್ಟಿದ್ದ ಹಿಂದೂಗಳ ಮೇಲೆ ರಜಾಕಾರ ಕ್ರೂರತನದ ದೌರ್ಜನ್ಯ ದಿನೇ ದಿನೇ ಹೆಚ್ಚಾಗತೊಡಗಿತು.
ಭಾರತದ ಟ್ರೇಡ್ ಏಜೆಂಟ್ ಆಗಿ ಹೈದರಾಬಾದ್ ತಲುಪಿದ ಮುನ್ಷಿಯವರ ಹಾದಿ ಸುಗಮವಾಗಿರಲಿಲ್ಲ. ಆರಂಭದಿಂದಲೂ ನಿಜಾಮರು ಅವರಿಗೆ ಒಂದಲ್ಲಾ ಒಂದು ರೀತಿಯ ಕಾಟವನ್ನೇ ನೀಡಿದ್ದಲ್ಲದೇ, ಅವರಿಗೆ ಸೂಕ್ತವಾದ ವಸತಿಯನ್ನು ಒದಗಿಸಲು ನಿರಾಕರಿಸಿದಾಗ, ಭಾರತೀಯ ಸೇನೆಗೆ ಸೇರಿದ ಎರಡು ಕಟ್ಟಡದಲ್ಲಿಯೇ ಮುನ್ಷಿಯವರು ತಮ್ಮ ಸಿಬ್ಬಂದಿಗಳೊಂದಿಗೆ ವಾಸಿಸತೊಡಗಿ, ನಿಧಾನವಾಗಿ ರಜಾಕಾರರಿಂದ ಮತ್ತು ಕಮ್ಯೂನಿಷ್ಟರಿಂದ ತೊಂದರೆಗೊಳಗಾಗುತ್ತಿದ್ದ ಹಿಂದೂಗಳನ್ನು ಭೇಟಿ ಮಾಡಿ ಅವರ ಸಂಕಟಗಳನ್ನು ಅರಿತು ಪಟೇಲರಿಗೆ ರಹಸ್ಯವಾಗಿ ವರದಿ ಮಾಡತೊಡಗಿದರು
ಅದೇ ಸಮಯದಲ್ಲಿ ಅಲ್ಲಿನ ಜನರೂ ತಮ್ಮ ಸ್ವಾತಂತ್ರ್ಯಕ್ಕಾಗಿ ಸರದಾರ ಶರಣಗೌಡ ಇನಾಮದಾರ್, ಸ್ವಾಮಿ ರಾಮನಂದ ತೀರ್ಥರು ಮುಂತಾದ ಪ್ರಮುಖರ ಮುಂದಾಳತ್ವದಲ್ಲಿ ಹೋರಾಟ ನಡೆಸಲು ಆರಂಭಿಸಿದ್ದಲ್ಲದೇ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸುವ ಸಂಧರ್ಭದಲ್ಲಿ ರಜಾಕಾರರು ಅವರನ್ನು ನಿರ್ದಯವಾಗಿ ಗುಂಡು ಹಾರಿಸಿ ಕೊಂದು ಹಾಕಿದ್ದರು. ಈ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸತ್ಯಾಗ್ರಹಿಗಳೂ ಸಹ ಸಕ್ರಿಯವಾಗಿ ಬೆಂಬಲಿಸಿದ್ದಲ್ಲದೇ, ಆಗಸ್ಟ್ 1946ರಲ್ಲಿ, ತೆಲಂಗಾಣದ “ವರಂಗಲ್” ನಗರದಲ್ಲಿ ರಜಾಕಾರರು ಹಿಂದೂಗಳನ್ನು ಹತ್ಯೆ ಮಾಡಿದಾಗ, ಸಂಘದ ಸ್ವಯಂಸೇವಕರು ವಾರಂಗಲ್ ಕೋಟೆಯ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು.
ಇವೆಲ್ಲದರ ಮಧ್ಯೆ ಇಸ್ಲಾಮ್ ಮತಾಂಧ ರಜಾಕಾರರ ಜೊತೆಗೆ, ಕಮ್ಯುನಿಸ್ಟರೂ ಸಹ ಸದ್ದಿಲ್ಲದೇ ಈ ಪ್ರಕ್ರಿಯೆಯನ್ನು ಪರೋಕ್ಷವಾಗಿ ಹೇಗೆ ಬೆಂಬಲಿಸಿದ್ದರು ಎಂಬುದನ್ನು ಹಿರಿಯ ಲೇಖಕ ವಿ.ಪಿ.ಮೆನನ್ ಅವರು ತಮ್ಮ ದಿ ಸ್ಟೋರಿ ಆಫ್ ಇಂಟಿಗ್ರೇಷನ್ ಆಫ್ ಇಂಡಿಯನ್ ಸ್ಟೇಟ್ಸ್ ಎಂಬ ತನ್ನ ಪುಸ್ತಕದಲ್ಲಿ ಈ ರೀತಿಯಾಗಿ ವಿವರಿಸಿದ್ದಾರೆ.
“ಆ ಪ್ರಾಂತ್ಯದ ಜನರನ್ನು ರಜಾಕಾರರು ಹಗಲಿನ ಹೊತ್ತು ದಂಡಿಸಿದರೆ, ಕಮ್ಯೂನಿಸ್ಟರು ರಾತ್ರಿಯ ಹೊತ್ತಿನಲ್ಲಿ ದಬ್ಬಾಳಿಕೆ ನಡೆಸಿದರು. ತದನಂತರ ಕಮ್ಯೂನಿಸ್ಟರು ರಜಾಕಾರರೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವ ಮೂಲಕ ಅಕ್ಷರಶಃ ಭಾರತದ ಪರ ಒಲವಿದ್ದ ಹಿಂದೂಗಳನ್ನು ಹತ್ಯೆಮಾಡುವ ಮೂಲಕ ಹತ್ತಿಕ್ಕುವ ಪಯತ್ನ ಮಾಡಿದರು. ಈ ಎಲ್ಲಾ ಕುಕೃತ್ಯಗಳಿಗೆ ಹೈದರಾಬಾದಿನ ನಿಜಾಮನ ಕೃಪಾಶೀರ್ವಾದವಿತ್ತು ಎಂಬುದು ನಿಜಕ್ಕೂ ವಿಪರ್ಯಾಸವೇ ಸರಿ. ನಿಜಾಮ, ರಜಾಕಾರರು ಮತ್ತು ಕಮ್ಯುನಿಸ್ಟರು ಈ ಮೂವರು ಸಂಘಟಿತರಾಗಿ ಇಡೀ ಪ್ರಾಂತ್ಯವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಉದ್ದೇಶಿಸಿದ್ದರು. ರಜಾಕಾರರ ಈ ಪರಿಯ ಕಿರುಕುಳಗಳನ್ನು ರಜಾಕಾರರ ಕಿರುಕುಳ ತಾಳದೆ ಪ್ರಾಣ ರಕ್ಷಣೆಗಾಗಿ ಅದಾಗಲೇ ಭಾರತದ ಪರವಾಗಿದ್ದ ಅಕ್ಕ ಪಕ್ಕದ ಜಿಲ್ಲೆಗಳಾದ ಬಿಜಾಪುರ ಮತ್ತು ಸೋಲಾಪುರಕ್ಕೆ ಬಂದು ಆಶ್ರಯವನ್ನು ಪಡೆಯತೊಡಗಿದರು.
ರಜಾಕಾರರಿಗಿಂತಲೂ ಕ್ರೂರರಾಗಿದ್ದ ಕಮ್ಯುನಿಸ್ಟರು ಹೈದರಾಬಾದಿನ ಹಿಂದೂಗಳ ಮೇಲೆ ಉಗ್ರವಾದ ದೌರ್ಜನ್ಯವನ್ನು ನಡೆಸಿದ ಪರಿಣಾಮ 1947 ಆಗಸ್ಟ್ 15 ರಿಂದ 13 ಸೆಪ್ಟೆಂಬರ್ 1948 ರವರೆಗೆ ಸುಮಾರು 2000 ಕ್ಕೂ ಅಧಿಕ ಹಿಂದೂಗಳನ್ನು ಬರ್ಬರವಾಗಿ ಕೊಂದಿದ್ದಲ್ಲದೇ, ಸುಮಾರು 22 ಪೊಲೀಸ್ ಔಟ್ ಪೋಸ್ಟ್ಗಳ ಮೇಲೆ ದಾಳಿ ಮಾಡಿ, ನೂರಾರು ಗ್ರಾಮಗಳ ಮೇಲೆ ಧಾಳಿ ಮಾಡಿ ಅಲ್ಲಿನ ದಾಖಲೆಗಳನ್ನು ವಶಪಡಿಸಿಕೊಂಡು ನಾಶ ಪಡಿಸಿದ್ದಲ್ಲದೇ, ಅಲ್ಲಿನ ಪೊಲೀಸ್ ಠಾಣೆಯಿಂದ ಸುಮಾರು 230 ಬಂದೂಕುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅದರ ಮೂಲಕ ಹಿಂದುಗಳ ಮೇಲೆ ಮತ್ತಷ್ಟು ದೌರ್ಜನ್ಯವನ್ನು ಎಸಗಲು ಮುಂದಾಗಿದ್ದ ವಿಷಯವನ್ನು ಮುನ್ಶಿಯವರು ಪಟೇಲರಿಗೆ ತಿಳಿಸಿದ್ದಲ್ಲದೇ, ಈ ಆತಂಕಕಾರಿ ಅಶಾಂತಿಯ ನಡುವೆ, ನಿಜಾಮರು ಸ್ಟ್ಯಾಂಡ್ಸ್ಟಿಲ್ ಒಪ್ಪಂದದ ನಿಯಮಗಳನ್ನು ಗೌರವಿಸಲು ನಿರಾಕರಿಸಿದ ಪರಿಣಾಮ, ಶಾಂತಿ ಮತ್ತು ಸಾಮರಸ್ಯವನ್ನು ಪುನಃಸ್ಥಾಪಿಸಲು ಈ ಕೂಡಲೇ ಕೇಂದ್ರ ಪಡೆಗಳನ್ನು ಕಳುಹಿಸಿ ಕೊಡಲು ಕೋರಿಕೊಂಡರು.
ಇಂತಹ ಸಮಯಕ್ಕೇ ಕಾಯುತ್ತಿದ್ದ ಪಟೇಲರು ಪಟೇಲರು ನಿಜಾಮನೊಂದಿಗೆ ಮಾತುಕತೆಗಳನ್ನು ನಡೆಸುವ ಮೂಲಕ, ನಿರಂತರವಾಗಿ ರಾಜತಾಂತ್ರಿಕ ಒತ್ತಡಗಳನ್ನು ಹೇರಿದರೂ ಅವರ ಷರತ್ತುಗಳಿಗೆ ನಿಜಾಮ ಒಪ್ಪಲಿಲ್ಲ. ಅಂತಿಮವಾಗಿ ಪಟೇಲರು ನಮ್ಮ ಭಾರತೀಯ ಸೇನೆಯನ್ನು ಹೈದರಾಬಾದ್ ಪ್ರಾಂತ್ಯಕ್ಕೆ ಸೆಪ್ಟೆಂಬರ್ 13, 1948 ರಂದು ನುಗ್ಗಿಸಿ, ಸೆಪ್ಟೆಂಬರ್ 17ರವರೆಗೂ ನಿರಂತರವಾಗಿ ಭಾರತೀಯ ಸೇನೆಯು ತಮ್ಮ ಶೌರ್ಯ ಮತ್ತು ನಿಖರವಾದ ಸಿದ್ಧತೆಯ ಮೂಲಕ ಹೈದರಾಬಾದ್ ನಿಜಾಮರ ಪಡೆಯ ವಿರುದ್ಧ ಹೋರಾಟ ನಡೆಸಿ, ಅವರನ್ನು ಮಣಿಸಿದರು. ತನ್ನ ಸೇನೆ ಸಂಪೂರ್ಣವಾಗಿ ಭಾರತೀಯ ಸೇನೆಗೆ ಶರಣಾಗುತ್ತಿದ್ದಂತೆಯೇ ಹೈದರಾಬಾದ್ ನಿಜಾಮ ತನ್ನ ಸ್ವತಂತ್ರ ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲು ಒಪ್ಪಿಕೊಂಡನು. ಆಪರೇಷನ್ ಪೋಲೋ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಹೈದರಾಬಾದ್ ಪ್ರಾಂತ್ಯ ಭಾರತದೊಂದಿಗೆ 17ನೇ ಸಪ್ಟೆಂಬರ್ 1948 ರಂದು ವಿಲೀನವಾಯಿತು. ಮುಂದೆ 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ದೇಶದ ಎಲ್ಲಾ ಭಾಗಗಳು ಪುನರ್ವಿಂಗಡಣೆಯಾದ ಸಂದರ್ಭದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಕನ್ನಡ ಭಾಷಿಕರ ಪ್ರಾಂತ್ಯಗಳು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಕೊಂಡಿತು.
ಹೀಗೆ ಮೈಸೂರು ಪ್ರಾಂತ್ಯಕ್ಕೆ ಸೇರಿಕೊಂಡರೂ ಅಲ್ಲಿನ ಜನರು, ಹೈದಾರಾಬಾದಿನ ನಿಜಾಮನಿಂದ ಬಿಡುಗಡೆ ಹೊಂದಿದ ಶುಭಗಳಿಕೆಯನ್ನು ಪ್ರತೀವರ್ಷವೂ ಸಪ್ಟೆಂಬರ್ 17 ರಂದು ಅತ್ಯಂತ ಸಂಭ್ರಮ ಸಡಗರಗಳಿಂದ ವಿಮೋಚನಾ ದಿನಾಚರಣೆಯನ್ನು ಆಚರಿಸುವುದನ್ನು ರೂಢಿಗೆ ತಂದಿದ್ದಲ್ಲದೇ, ಅಂದು ಆಗಸ್ಟ್ 15 ರಂದು ಸ್ವಾತ್ರಂತ್ರ್ಯ ದಿನಾಚರಣೆಯನ್ನು ಅಚರಿಸುವಂತೆಯೇ ಧ್ವಜಾರೋಹಣ ಮಾಡುತ್ತಾರೆ.
ತದ ನಂತರ ಅದೇ ಸಪ್ಟೆಂಬರ್ 17ರ 2019 ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡೆಯೂರಪ್ಪನವರ ಸಾರಥ್ಯದಲ್ಲಿ ಅದೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಉತ್ಸವದ ಹೆಸರನ್ನು ಬದಲಾಯಿಸಿ ಅದನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ. ಕರ್ನಾಟಕದ ಉಳಿದ ಎಲ್ಲಾ ಭಾಗಗಳಲ್ಲಿ ವರ್ಷಕ್ಕೆ ಒಂದು ಬಾರಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ ಕಲ್ಯಾಣ ಕರ್ನಾಟಕದ ಜನರು ಮಾತ್ರಾ ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾರೆ. ಆಗಸ್ಟ್ 15 ರಂದು ಬ್ರಿಟೀಷರ ದಾಸ್ಯದಿಂದ ಹೊರಬಂದ ಸಂಭ್ರಮವಾದರೇ, ಸಪ್ಟೆಂಬರ್ 17 ನಿಜಾಮ ಮತ್ತು ರಜಾಕಾರ ದಬ್ಬಾಳಿಕೆಯಿಂದ ಹೊರಬಂದು ಭಾರತದ ಒಕ್ಕೂಟಕ್ಕೆ ಸೇರಿದ ಸುದಿನವನ್ನು ನೆನಪಿಸಿಕೊಳ್ಳುತ್ತಾರೆ.
ಈ ದಿನದ ಸಂಪೂರ್ಣ ಶ್ರೇಯ ಭಾರತ ಪರ ಸೇರಿಕೊಳ್ಳಲು ರಜಾಕರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಸ್ವಾತ್ರಂತ್ಯ್ರ ಹೋರಾಟಗಾರರಿಗೂ ಮತ್ತು ಹೈದರಾಬಾದಿನ ನಿಝಾಮನ ಎಲ್ಲಾ ಕುತಂತ್ರವನ್ನೂ ಚಾಣಾಕ್ಷತನದಿಂದ ಮೆಟ್ಟಿ ಆತನನ್ನು ಶರಣಾಗುವಂತೆ ಮಾಡಿ ಹೈದರಾಬಾದ್ ಪ್ರಾಂತ್ಯವನ್ನು ಮತ್ತೊಂದು ಕಾಶ್ಮೀರವಾಗದಂತೆ ತಡೆದ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಕೆ .ಎಂ. ಮುನ್ಷಿಯವರಿಗೆ ಸಲ್ಲುತ್ತದೆ. ಅಂತಹ ಮಹಾನುಭಾವರನ್ನು ಇಂದು ನಾವೆಲ್ಲರು ಹೃತ್ಪೂರ್ವಕವಾಗಿ ನೆನಪಿಸಿಕೊಂಡು ಹೃತ್ಪೂರ್ವಕವಾದ ಗೌರವವನ್ನು ಸಲ್ಲಿಸುವುದು ಕೇವಲ ಕಲ್ಯಾಣ ಕರ್ನಾಟಕದ ಜನರಿಗಷ್ಟೇ ಅಲ್ಲದೇ ಸಮಸ್ತ ಭಾರತೀಯರ ಆದ್ಯ ಕರ್ತವ್ಯವೇ ಆಗಿದೆ.