ಬೆಂಗಳೂರು: ದೇಶವನ್ನು ಗೌರವಿಸುವ ಪದ್ಧತಿ ನಮ್ಮದು. ಜಗತ್ತಿಗೆ ಜ್ಞಾನ ವಿಜ್ಞಾನ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ ಶ್ರೇಷ್ಠ ಪರಂಪರೆ ನಮ್ಮದು. ಇದರ ಜೊತೆಗೆ ಬದುಕಿನ ಸಾರ್ಥಕತೆ ಎಲ್ಲಿದೆ ಎಂದು ತಿಳಿಸಿದವರು ನಾವು. ಅದಕ್ಕಾಗಿ ಜಗತ್ತಿಗೆ ದಾರಿ ತೋರುವ ಭಾರತ ನಿಜಾರ್ಥದಲ್ಲಿ ಜಗಜ್ಜನನಿ ಆದಳು. ಇಂದು ಮತ್ತೊಮ್ಮೆ ವಿಶ್ವಕ್ಕೆ ಭಾರತದ ಮಾರ್ಗದರ್ಶನ ಕಾಲದ ಕರೆ ಆಗಿದೆ ಎಂದು ದಕ್ಷಿಣ ಮಧ್ಯ ಕ್ಷೇತ್ರದ ಬೌದ್ಧಿಕ್ ಪ್ರಮುಖ್ ಪ್ರೊ.ಬಿ.ವಿ.ಶ್ರೀಧರಸ್ವಾಮಿ ಹೇಳಿದರು.



ದೇವನಹಳ್ಳಿಯ ಅನಂತ ವಿದ್ಯಾನಿಕೇತನದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘದ ವಾರ್ಷಿಕ ಚಟುವಟಿಕೆಗಳಲ್ಲಿ ಸಂಘ ಶಿಕ್ಷಾ ವರ್ಗವೂ ಒಂದು. 15 ದಿನಗಳ ಕಾಲ ನಡೆದ ಈ ಸಂಘ ಶಿಕ್ಷಾ ವರ್ಗದಲ್ಲಿ ತಪಸ್ಸಿನಂತೆ ಸ್ವಯಂಸೇವಕರು ಕಲಿತಿದ್ದಾರೆ. ದೇಶಾದ್ಯಂತ ಇಂತಹ 60ಕ್ಕೂ ಹೆಚ್ಚು ವರ್ಗಗಳು ಪ್ರತಿ ವರ್ಷ ನಡೆಯುತ್ತವೆ. ಸಮಾಜ ಮತ್ತು ದೇಶದ ಕುರಿತು ಹಾಗೂ ಸಂಘಟನೆಯ ಕುಶಲತೆಗಳನ್ನು ಕಲಿತುಕೊಳ್ಳುತ್ತಾರೆ. ಅದರ ಜೊತೆಗೆ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ಜಾಗೃತಗೊಳಿಸಿಕೊಳ್ಳುತ್ತಾರೆ ಎಂದರು.






ಸಮಾಜವನ್ನು ಮುನ್ನಡೆಸುವ ವ್ಯಕ್ತಿಗಳ ನಿರ್ಮಾಣದ ಕೇಂದ್ರವಾಗಿ ಶಾಖೆಗಳು ನಡೆಯುತ್ತಿವೆ. ಶಾಖೆಯ ಪ್ರಾರ್ಥನೆಯಲ್ಲಿ ತಾಯಿ ಭಾರತೀಯ ಕೆಲಸಕ್ಕಾಗಿ ತನ್ನ ಜೀವನವನ್ನು ಮುಡಿಪಿಡುವಂತಹ ಕಾರ್ಯಕ್ಕೆ ಸಿದ್ಧಗೊಳ್ಳುತ್ತಾರೆ. ಸಂಘಟನೆಗಿಂತ ದೇಶ ಉನ್ನತವಾದದ್ದು ಎನ್ನುವ ಭಾವ ಸಂಘಟನೆಯ ಸ್ವಯಂಸೇವಕರಲ್ಲಿ ಮೂಡುತ್ತದೆ. ಈ ಭಾವನೆಯನ್ನು ಸಂತರು ಮಹಂತರು ಸಹಸ್ರಾರು ವರ್ಷಗಳಿಂದ ದೇಶದ ಜನರಲ್ಲಿ ಬೆಳೆಸಿದ್ದಾರೆ. ಅದನ್ನೇ ಸಂಘ ಮುಂದುವರೆಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಾವಿರ ವರ್ಷದ ಸಂಘರ್ಷದ ಕಾರಣಕ್ಕಾಗಿ ಸುಶಕ್ತ, ಸಮರ್ಥವಾಗಿದ್ದ ಸಮಾಜವೂ ಕೂಡ ದುರ್ಬಲವಾಯಿತು. ಅನೇಕ ಮಹಾನ್ ಪುರುಷರು ಅವತರಿಸಿ ಈ ನಾಡನ್ನು ಸಬಲ ಗೊಳಿಸುವ ಪ್ರಯತ್ನವನ್ನು ಮಾಡಿದರು. ಸಂಘವೂ ಕೂಡ ಸಮಾಜವನ್ನು ಸದೃಢಗೊಳಿಸುವ ಕಾರ್ಯವನ್ನು ಸಂಘ ಮಾಡುತ್ತಿದೆ. ಆದರೂ ಮತಾಂತರ, ಅಸ್ಪಶ್ಯತೆ ಮುಂತಾದವು ಸವಾಲುಗಳಾಗಿ ನಮ್ಮ ಸಮಾಜದ ಮುಂದಿದೆ. ನಮ್ಮ ಸಮಾಜ ಗಟ್ಟಿಯಾದಾಗ ಮಾತ್ರ ಸವಾಲುಗಳಿಗೆ ಉತ್ತರವನ್ನು ನೀಡಬಹುದಾಗಿದೆ ಎಂದು ನುಡಿದರು.






ಅನೇಕರು ಜಗತ್ತನ್ನು ಶಕ್ತಿಯ ಬಲದಿಂದ ಜಗತ್ತನ್ನು ಗೆಲ್ಲುವ ಪ್ರಯತ್ನ ಮಾಡಿದರು. ಆದರೆ ಭಾರತ ಇಡೀ ವಿಶ್ವವೇ ಒಂದು ಕುಟುಂಬ ಎಂಬ ವಿಶಾಲ ಭಾವದ ಕಾರಣದಿಂದ ಜಗತ್ತಿನ ಮನಸ್ಸನ್ನು ಗೆಲ್ಲುವ ಕಾರ್ಯ ಮಾಡಿದ್ದೇವೆ. ಜಗತ್ತು ಭಾರತವನ್ನು ಭಕ್ತಿಯಿಂದ ಗೌರವದಿಂದ ಕಾಣುವಂತಾಗಿದೆ. ಆದರೆ ನಾವು ಜಾತಿಯನ್ನು ಮೀರಿ ಹಿಂದುಗಳು, ಭಾರತೀಯರು ಎಂದು ಹೇಳಿಕೊಳ್ಳುವ ಭಾವ ನಮ್ಮಲ್ಲಿ ಮೂಡಬೇಕು. ನಮ್ಮ ದೇಶದ ಪರಂಪರೆಯ ಮೌಲ್ಯಗಳನ್ನು ಪ್ರಕಟೀಕರಿಸುವ ಸಮಾಜ ನಮ್ಮದಾಗಬೇಕು. ಹೇಗೆ ಶರೀರದ ಎಲ್ಲಾ ಅಂಗಗಳು ಸಬಲವಾಗಬೇಕೋ, ಹಾಗೆಯೇ ಸಮಾಜದ ಎಲ್ಲಾ ವರ್ಗಗಳು ಸಶಕ್ತವಾಗಬೇಕು. ಅವರೆಲ್ಲರಲ್ಲೂ ರಾಷ್ಟ್ರಭಕ್ತಿಯ ಜಾಗರಣವಾಗಬೇಕಿದೆ ಎಂದರು.
ಜಾಗತಿಕ ಸ್ಥಿತಿಯಲ್ಲಿ ಆತ್ಮನಿರ್ಭರವಾಗಬೇಕಿದೆ. ನಮ್ಮ ದೇಶಕ್ಕೆ ಬೇಕಾಗುವ ಎಲ್ಲವನ್ನೂ ನಾವೇ ನಿರ್ಮಿಸಿಕೊಳ್ಳುವಂತಾಗಬೇಕು. ನಮ್ಮ ಭಾಷೆಯಲ್ಲಿ ನಮ್ಮ ಸಹಿ ಇರಬೇಕು, ಮನೆಯಲ್ಲಿ ಸ್ವಭಾಷೆಯನ್ನು ಬಳಸಬೇಕು, ಹುಟ್ಟು ಹಬ್ಬದ ಆಚರಣೆ ನಮ್ಮತನದಿಂದ ಕೂಡಿರಬೇಕು. ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಇತರರಿಗೆ ತೊಂದರೆಯಾಗದಂತೆ ನಮ್ಮ ಜೀವನಶೈಲಿ ಇರಬೇಕು. ನಮ್ಮ ಮನೆ ಸಾಮಾಜಿಕ ಸಾಮರಸ್ಯವನ್ನು ಸಾರುವ, ನಮ್ಮ ಪರಂಪರೆಯನ್ನು ಮಕ್ಕಳಿಗೆ ತಿಳಿಸುವ, ಪರಿಸರಕ್ಕೆ ಪೂರಕವಾಗಿರುವ ಪರಿವರ್ತನಾ ಕೇಂದ್ರಗಳಾಗಬೇಕು ಎಂದರು.






ಕಾರ್ಯಕ್ರಮದ ಮುಖ್ಯಅತಿಥಿ ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಹಾಗೂ ಎಂ ಎಸ್ ರಾಮಯ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ. ಆರ್ ಜಯರಾಮ್ ಮಾತನಾಡಿ ಪ್ರಪಂಚ ಬದಲಾಗುತ್ತಿದೆ. ಭಾರತವೂ ಬದಲಾವಣೆಯ ಪರ್ವವನ್ನು ಕಾಣುತ್ತಿದೆ. ಪ್ರಪಂಚದಲ್ಲಿ ಧರ್ಮಸ್ಥಾಪನೆಯಾಗಬೇಕಾದರೆ ಭಾರತ ಮಾರ್ಗದರ್ಶನ ಮಾಡಬೇಕು. ನಾವು ಯಾರು, ನಮ್ಮ ಕರ್ತವ್ಯ ಏನು ಎನ್ನುವುದನ್ನು ನಾವು ಅರಿಯಬೇಕು. ನಾವು ನಮ್ಮ ದೇಶದ ಬಗ್ಗೆ ಚಿಂತನೆ ಮಾಡಬೇಕಾದರೆ, ನಮ್ಮ ದೇಶದ ಕೊರೆತೆಗಳನ್ನು ಮರೆತು ಸಮಭಾವ ಮತ್ತು ಸಾಮರಸ್ಯದ ಮೂಲಕ ನೋಡಬೇಕು. ಆಗ ಮುಂದಿನ ಯಾವುದೇ ಸವಾಲುಗಳನ್ನೂ ತಡೆಯಲು ನಾವು ಸಿದ್ಧರಾಗಿರುತ್ತೇವೆ ಎಂದರು.
ಬಹಿರಂಗ ಮತ್ತು ಅಂತರಂಗದ ಶಕ್ತಿ ನಮ್ಮಲ್ಲಿರಬೇಕು. ಮನಃಶಕ್ತಿ ದೃಢವಾಗಿದ್ದರೆ ಸಾಧನೆಯನ್ನು ಮಾಡಬಹುದು. ಜಾತಿಯ ಹೆಸರಿನಲ್ಲಿ ಒಡೆದು ಹಂಚಿಹೋಗಿ, ನಾವು ಯಾರು ಎನ್ನುವುದನ್ನು ನಾವು ಮರೆತಿದ್ದೇವೆ. ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಂತೋಷಗೊಂಡೆವು. ರಾಜರುಗಳೆಲ್ಲ ಒಂದಾದರ ಪರಿಣಾಮ ದೇಶವಾದೆವು. ಆದರೆ ಮುಂದೆ ಜಾತಿಯ ಹೆಸರಿನಲ್ಲಿ ಧರ್ಮವನ್ನು ಮರೆತೆವು. ಇಂದು ಧರ್ಮದ ರಕ್ಷಣೆ ಮಾಡುವ ಕರ್ತವ್ಯ ಮತ್ತು ಶಕ್ತಿ ಹೊಸ ಪೀಳಿಗೆಯ ಮೇಲಿದೆ ಎಂದರು.
ಧರ್ಮದ ಶಕ್ತಿ ನವಪೀಳಿಗೆಗೆ ಬೇಕಾಗಿದೆ. ಎಲ್ಲಾ ಶಕ್ತಿಗಳನ್ನು ಗಳಿಸಿ ನಿಪುಣರಾಗಬೇಕು. ಎಲ್ಲರನ್ನು ಒಟ್ಟಾಗಿ ಕೊಂಡುಹೋಗುವಂತಹ ಮಾನವ ಜನಾಂಗ ನಮ್ಮದಾಗಬೇಕು. ಎಲ್ಲರೂ ಸನಾತನ ಧರ್ಮಕ್ಕೆ ಸೇರಿದವರು. ಭಾರತೀಯರಾದ ನಮ್ಮಲ್ಲಿ ಬೇಧವಿಲ್ಲ. ಹೊಸ ಪೀಳಿಗೆಯ ದೇಶಭಕ್ತಿ ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಕುಗ್ಗಿರುವ ಸಮಾಜದ ವಿವಿಧ ಕ್ಷೇತ್ರಗಳಿಗೆ ಸಾಮರ್ಥ್ಯವನ್ನು ತುಂಬುತ್ತದೆ. ಆರೆಸ್ಸೆಸ್ ನಂತಹ ಸಂಸ್ಥೆಗಳ ಜೊತೆಗೆ ಕೈಜೋಡಿಸಬೇಕಿದೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತ ಮುಂದೆ ಹೋಗಬೇಕಿದೆ ಎಂದು ನುಡಿದರು.






ಕಾರ್ಯಕ್ರಮದ ವೇದಿಯಲ್ಲಿ ಬೆಂಗಳೂರು ಮಹಾನಗರದ ಸಂಘಚಾಲಕ ಹಾಗೂ ವರ್ಗದ ವರ್ಗಾಧಿಕಾರಿ ಮಿಲಿಂದ ಗೋಖಲೆ ಹಾಗೂ ಪ್ರಾಂತ ಸಂಘಚಾಲಕ ಜಿ ಎಸ್ ಉಮಾಪತಿ ಉಪಸ್ಥಿತರಿದ್ದರು.