ಬೆಂಗಳೂರು: ಸ್ವಾಮಿ ವಿವೇಕಾನಂದರು ಇಂದಿಗೂ ನಮಲ್ಲಿ ಹುದುಗಿಕೊಳ್ಳಲು ಮುಖ್ಯ ಕಾರಣವೆಂದರೆ ಅವರ ಜ್ಞಾನ, ತಿಳುವಳಿಕೆ ಹಾಗೂ ಮೇರುವ್ಯಕ್ತಿತ್ವ. ನಮ್ಮ ಮಾತುಗಾರಿಕೆ ಹಾಗೂ ಬರವಣಿಗೆಯನ್ನು ರೂಢಿಸಿಕೊಳ್ಳಲು ಪ್ರೇರೇಪಿಸುವ ಸ್ಪೂರ್ತಿದಾಯಕ ವ್ಯಕ್ತಿ ಸ್ವಾಮಿ ವಿವೇಕಾನಂದರು, ಭಾರತೀಯ ಜ್ಞಾನಪರಂಪರೆಯ ಪುನರುಜ್ಜೀವನಕ್ಕೆ ಯುವಬರಹಗಾರರ ಕೊಡುಗೆ ಅಮೂಲ್ಯ ಎಂದು ಅಂಕಣಕಾರ ಚೈತನ್ಯ ಹೆಗಡೆ ಹೇಳಿದರು.
12ನೇ ವರ್ಷದ ಬಿ ಗುಡ್ ಡು ಗುಡ್ ಅಭಿಯಾನದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಮರ್ಥ ಭಾರತ ಹಾಗೂ ಮಿಥಿಕ್ ಸೊಸೈಟಿ ಜಂಟಿಯಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.






ತಂತ್ರಜ್ಞಾನ, ಯಾಂತ್ರಿಕತೆ, ಕೃತಕ ಬುದ್ಧಿಮತ್ತೆ ಮುಂತಾದ ಬೇರೆ ಬೇರೆ ಆಯಾಮಗಳಿಂದ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಬರೆವಣಿಗೆಯ ಕೌಶಲ್ಯದ ದೃಷ್ಟಿಕೋನವನ್ನು ಮತ್ತೊಬ್ಬರಿಗೆ ಅರ್ಥೈಸುವುದು ಮುಖ್ಯವಾದ ಸಂಗತಿ. ಏಕೆಂದರೆ ನಮ್ಮ ಮಾತು ಹಾಗೂ ಬರೆವಣಿಗೆಯ ಶೈಲಿಗೆ ನಮ್ಮಲ್ಲಿನ ವಿಚಾರದ ಅಡಿಪಾಯವು ಬಹಳ ಮುಖ್ಯವಾಗಿರುತ್ತದೆ. ಈ ಕೌಶಲ್ಯವನ್ನು ನಾವು ಪ್ರಬಂಧದ ಮೂಲಕ ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ. ಜೊತೆಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಮಾತು ಮತ್ತು ಬರೆವಣಿಗೆಯ ಕೌಶಲ್ಯದ ಮೂಲವನ್ನು ನಮಗೆ ತಿಳಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶರಣ್ಯ ಎಸ್, ದ್ವಿತೀಯ ಬಹುಮಾನ ಪಡೆದ ಭೂಮಿಕಾ ಹೆಚ್ ಕೆ, ತೃತೀಯ ಬಹುಮಾನ ಪಡೆದ ಅನುಷಾ ಜಿ ಪಿ ಹಾಗೂ ಸಮಾಧಾನಕರ ಬಹುಮಾನವನ್ನು ಗಳಿಸಿದ ಎಲ್ಲಾ ವಿಜೇತರಿಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು.






ಕಾರ್ಯಕ್ರಮದಲ್ಲಿ ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯ ಹಾಗೂ ಗೌರವ ಕೋಶಾಧಿಕಾರಿ ಕೆ.ಎಸ್. ಹಿರಿಯಣ್ಣಯ್ಯ, ಸಮರ್ಥ ಭಾರತದ ಸದಸ್ಯೆ ಚೇತನಾ ರಾಜೇಂದ್ರ, ಸಮರ್ಥ ಭಾರತ ಟ್ರಸ್ಟಿ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು.