Mohan Bhagwat, RSS Sarasanghachalak

-By ಸಂತೋಷ್ ತಮ್ಮಯ್ಯ Santhosh Thammaiah in Hosadigatha, 09-01-2013.

Mohan Bhagwat, RSS Sarasanghachalak

ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯನ್ನು ಸಾಕಷ್ಟು ತಿರುಚಿಯೋ, ಅರ್ಥೈಸಲಾಗದೆಯೋ, ಎಟುಕಿದಷ್ಟನ್ನೇ ಪ್ರಕಟಿಸಿಯೋ ಎರಡು ದಿನ ಮಾಧ್ಯಮಗಳು ತೋಚಿದಂತೆ ಬರೆದದ್ದಾಯಿತು. ಒಂದಿಷ್ಟು ಶೋಕಿ ಮಾಡುವ ಬುದ್ಧಿಜೀವಿಗಳು, ಮಳೆ ಬಂದಾಗ ಪೊಟರೆಯೊಳಗಿನ ಕಪ್ಪೆಗಳು ಹೊರಬರುವಂತೆ ಬಂದದ್ದಾಯಿತು. ವಟಗುಟ್ಟಿದ್ದೂ ಆಯಿತು. ಟ್ವಿಟ್ಟರ್-ಫೇಸ್‌ಬುಕ್‌ಗಳಲ್ಲಿ ಭಾರತ ಮತ್ತು ಇಂಡಿಯಾಗಳನ್ನು ತಮಾಷೆಯಾಗಿ ಬರೆದರು. ಹಂಗಿಸಿದರು. ಭಾರತ ಎಂಬುದು ಅರ್ಥೈಸಲಾಗದವರಿಗೆ ಮೋಹನ್ ಭಾಗವತರ ಮಾತುಗಳೂ ಅರ್ಥವಾಗಲಿಲ್ಲ. ಅರ್ಥವಾಗುವುದಿಲ್ಲ. ಅಷ್ಟಕ್ಕೂ ಭಾರತ ಮತ್ತು ಇಂಡಿಯಾಗಳ ವ್ಯತ್ಯಾಸಗಳನ್ನೇನೂ ಅವರು ಮೊಟ್ಟಮೊದಲನೆಯದಾಗಿ ಹೇಳಿಯೂ ಇರಲಿಲ್ಲ. ಅಂದರೆ ಭಾರತ ಇಂಡಿಯಾ ಅಲ್ಲ. ಇಂಡಿಯಾ ಭಾರತವೂ ಆಗುವುದಿಲ್ಲ ಎಂಬುದು ಕಣ್ಣುಮುಚ್ಚಿ ಒಂದರೆ ಗಳಿಗೆ ದೇಶ ಎಂಬುದೇನು ಎಂದು ಆಲೋಚಿಸುವವರಿಗೆ ಅತ್ಯಂತ ಸುಲಭವಾಗಿ ಹೊಳೆಯುವ ಸಂಗತಿ. ಏಕೆಂದರೆ… ನಲ್ವತ್ತೇಳರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಯಿತಷ್ಟೆ. ನೆಹರೂಗೆ ಒಂದು ದೇಶವನ್ನು ಕಟ್ಟಬೇಕಾಗಿತ್ತು. ಅವರು ಬಾಯಿಬಿಟ್ಟು ‘ನಾವೊಂದು ದೇಶವನ್ನು ಕಟ್ಟುತ್ತಿದ್ದೇವೆ’ಎಂದು ಹೇಳಿಯೂಬಿಟ್ಟರು. ಕಟ್ಟಲು ಆರಂಭಿಸಿಯೂ ಬಿಟ್ಟರು. ಹಾಗೆ ನೆಹರೂ ಶೋಧಿಸಿದ ಹೊಸ ದೇಶವೇ ‘ಇಂಡಿಯಾ’ .

ಅದಕ್ಕೂ ಮೊದಲೇ ಜೀವಂತವಾಗಿದ್ದ , ಇಂದಿಗೂ ಅಳಿಯದೇ ಉಳಿದಿರುವ ಮಾನಸ ದೇಶವೇ ‘ಭಾರತ’. ಹಿಂದುವಾಗಿ ಹುಟ್ಟಿದ್ದೇ ಆಕಸ್ಮಿಕ ಎಂದುಕೊಂಡಿದ್ದ ನೆಹರೂಗೆ ಎಷ್ಟೇ ಆದರೂ ಹಳೆಯದನ್ನು ಮುರಿದು ಕಟ್ಟಲು ಆಗಲೇ ಇಲ್ಲ. ಆದರೂ ಕಳೆದ ಆರು ದಶಕಗಳುದ್ದಕ್ಕೂ ದೇಶದ ಸೋಷಿಯಲಿಷ್ಟರು, ಬುದ್ಧಿಜೀವಿಗಳೆಂದು ಮೆರೆಯುತ್ತಾ ಬಂದವರು ದೇಶವನ್ನು ಇಂಡಿಯಾ ಎಂದೇ ಕರೆಯುತ್ತಾ ಬಂದಿದ್ದಾರೆ. ಇಂಡಿಯಾ ದೇಶವೆನ್ನುವಾಗ ಅವರು ‘ಭಾರತ’ ಎಂಬ ಅಪಚಾರ, ಅವಘಡವನ್ನು ತಡೆದಿದ್ದೇವೆ ಎಂಬ ಅಹಂ ಅನ್ನು ಘನತೆಯಿಂದಲೇ ತೋರಿದ್ದಾರೆ. ಈ ಇಂಡಿಯಾದಲ್ಲಿ ಸ್ವಾತಂತ್ರ್ಯ ಹೋರಾಟದ ವೀರಗಾಥೆಯಿಲ್ಲ. ಅರವಿಂದ, ಬಂಕಿಮರ, ಠಾಕೂರರ ಕನಸಿನ ದೇಶವಿಲ್ಲ. ಸಂಸ್ಕೃತಿಯ ಛಾಪು ಇಲ್ಲ. ಬಡವ-ಬಲ್ಲಿದರ ನಡುವಿನ ಸಾಮರಸ್ಯವಿಲ್ಲ. ಅಖಂಡತೆಯ ದೃಷ್ಟಿಯಿಲ್ಲ. ನೆಲದ ವಾಸನೆಯಿಲ್ಲ. ಅಯೋಧ್ಯಾ-ಮಥುರಾ-ಕಾಶಿ- ಕಾಂಚಿ-ಆವಂತಿಕಾಗಳ ನೆನಪಂತೂ ಇಲ್ಲವೇ ಇಲ್ಲ. ನೆಹರೂ ಪ್ರಣೀತ ಇಂಡಿಯಾದಲ್ಲಿ ಇಂಡಸ್ಟ್ರೀಗಳೇ ಗುಡಿಗೋಪುರಗಳು. ಭಾರತದ ಗುಡಿಗೋಪುರಗಳು ನೆಹರೂ ಇಂಡಿಯಾದಲ್ಲಿ ಕಮ್ಯುನಲ್ ಸ್ಪಾಟ್‌ಗಳು. ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ಎಷ್ಟೇ ರಾಮ ನಾಮ ಜಪ ಮಾಡಿದರೂ ಇಂಡಿಯಾದ ವಿರುದ್ಧ ನಿಲ್ಲಲಾಗಲಿಲ್ಲ. ೧೯೩೯ರಲ್ಲಿ ಭಾರತದ ‘ವಂದೇಮಾತರಂ’ ಅನ್ನು ಕತ್ತರಿಸಿ ಇಂಡಿಯಾಕರಣಗೊಳಿಸಲಾಯಿತು. ೧೯೩೧ರಲ್ಲಿ ಇಂಡಿಯಾಕ್ಕೆಂದೇ ಸಿದ್ಧಗೊಳಿಸಿದ ತ್ರಿವರ್ಣವನ್ನು ರಾಷ್ಟ್ರಧ್ವಜವನ್ನಾಗಿ ಸ್ವೀಕರಿಸಲಾಯಿತು. ಗಾಂಧೀಜಿಯ ಎದುರಲ್ಲೇ ಗೋರಕ್ಷಣೆಯ ನಿಷ್ಠೆಯನ್ನು ಕೈಬಿಡಲಾಯಿತು.

ಗಾಂಧೀಜಿ ಎದುರಲ್ಲೇ ಹಿಂದಿ ಭಾಷೆಯನ್ನು ಇಂಡಿಯಾಕ್ಕಾಗಿ ಹಿಂದೂಸ್ಥಾನಿಗೊಳಿಸಲಾಯಿತು. ಸ್ವತಃ ಗಾಂಧೀಜಿಯೇ ‘ರಘುಪತಿ ರಾಘವ ರಾಜಾರಾಂ’ ಸಾಲನ್ನೇ ಅಪಭ್ರಂಶ ಮಾಡಿದ್ದರು. ಎಲ್ಲವೂ ವಿನಾಶಕಾರಿ, ವಿಧ್ವಂಸಕ ಕೃತ್ಯಗಳೇ. ಎಲ್ಲವೂ ಇಂಡಿಯಾಕ್ಕಾಗಿ. ಇಂಡಿಯಾ ಆಗಬೇಕಿದ್ದರೆ ಭಾರತ ಮುರಿಯಬೇಕು. ಮುರಿದು ಕಟ್ಟಿದರೆ ಇಂಡಿಯಾ. ಮುರಿಯದೇ ಗಟ್ಟಿಯಾಗಿರುವುದೇ ಭಾರತ. ಹೀಗೆ ಮುರಿಯಲಾಗದಿದ್ದರೂ ಕಟ್ಟುವ ಭರದಲ್ಲಿ ದೇಶ ‘ಫಂಡಮೆಂಟಲ್ ಯುನಿಟಿ ಆಫ್ ಇಂಡಿಯಾ’ ಆಗಿಹೋಯಿತು. ನೋಡನೋಡುತ್ತಲೇ ದೇಶ  India that is Bharat ಆಗಿಯೇಹೋಯಿತು. ತಲೆಯೊಳಗೆ ಬುದ್ಧಿ ಇರುವುದು ಒಂದು. ಬುದ್ಧಿ ತಲೆಯೊಳಗೆ ಇದೆ ಎಂದು ತೋರಿಸಿಕೊಳ್ಳುವುದು ಇನ್ನೊಂದು. ಬುದ್ಧಿ ತನ್ನ ಪಾಡಿಗೆ ತಲೆಯೊಳಗೆ ಭದ್ರವಾಗಿದ್ದರೆ ಒಳಿತು. ತೋರಿಸಲು ಪ್ರಯಾಸ ಪಡುವುದು ಎಡವಟ್ಟು. ಇಂಡಿಯಾ ನಿರ್ಮಿಸುವ ಭರದಲ್ಲಿ ಆಗಿದ್ದೂ ಕೂಡಾ ಇದೇ. ನೆಹರೂ, ಸೋಷಿಯಲಿಸ್ಟರು, ಕಾಂಗ್ರೆಸಿಗರು ಎಲ್ಲರೂ ಬುದ್ಧಿಯ ಪ್ರದರ್ಶನದಲ್ಲಿ ಇಂಡಿಯಾವನ್ನು ಕಟ್ಟಲು ಹೊರಡುತ್ತಿದ್ದಂತೆಯೇ ಭಾರತ ಮತ್ತೆ ಮತ್ತೆ ಮೇಲೇಳುತ್ತಿತ್ತು. ಮತ್ತು ಇಂಡಿಯಾದೊಳಗೆ ಭಾರತ ಮತ್ತೆ ಮತ್ತೆ ನುಸುಳಿ ಬರುತ್ತಿತ್ತು. India that is Bharat ಎಂದು ಸಂವಿಧಾನ ರಚಿಸಿದರೂ, ರಾಷ್ಟ್ರ ಗೀತೆ ‘ಭಾರತ ಭಾಗ್ಯವಿಧಾತಾ’ ಎಂದೇ ಉಳಿಯಿತು. ಭಾರತ ಎಂಬ ಹೆಸರನ್ನು ಮೂಲೆಗುಂಪು ಮಾಡಿದಷ್ಟೂ ಅದರ ಅರ್ಥ, ಮೌಲ್ಯ ಆಪ್ತವಾಗುತ್ತಾ ಬಂತು. ‘ಭಾರತ್ ಮಾತಾ ಕೀ ಜಯ್’ ಎಂಬುದು ಇಂಡಿಯಾದ ಅಬ್ಬರದಲ್ಲೂ ಕೇಳಿಬರತೊಡಗಿತು. ಕೇಳಿಬರದೆ ಇನ್ನೇನಾದೀತು?

ಇತಿಹಾಸಕಾರ ರಾಧಾಕುಮುದ ಮುಖರ್ಜಿ ಎನ್ನುವವರು “ಇಡಿಯ ದೇಶಕ್ಕೆ ಭರತವರ್ಷವೆಂಬ ಒಂದೇ ಹೆಸರಿಡಲಾಗಿತ್ತು. ಇದು ಏಕತೆಯ ಸಂದೇಶವನ್ನು ನೀಡುತ್ತದೆ. ಆದರೆ ಪರಕೀಯರು ಇದೇ ಭಾರತವನ್ನು ‘ಇಂಡಿಯಾ’ ಎಂದು ಕರೆದರು. ‘ಇಂಡಿಯಾ’ ಎಂಬುದು ಒಂದು ಭೌಗೋಳಿಕ ಸೀಮೆಯ ಕಲ್ಪನೆಯಲ್ಲಿ ಹುಟ್ಟಿಕೊಂಡಿದ್ದು. ಆದರೆ ‘ಭರತ ವರ್ಷ’ಹೆಸರು ಭೌಗೋಳಿಕವಾಗಷ್ಟೇ ಅಲ್ಲ. ಅದು ದೇಶದ ಮೂಲಭೂತ ಏಕತೆಯನ್ನು ಸೂಚಿಸುವ ಅತ್ಯಂತ ಆಳವಾದ ಐತಿಹಾಸಿಕ ಮಹತ್ತ್ವವನ್ನು ಪಡೆದಿದೆ ಎಂಬುದನ್ನು ಪೂರ್ವಜರು ಮನಗಂಡಿದ್ದರು” ಎನ್ನುತ್ತಾರೆ. ಹಾಗಾದರೆ ‘ಭಾರತ್ ಮಾತಾ ಕೀ ಜಯ್’ ಎನ್ನುವುದರಲ್ಲಿ ಎಂಥಾ ಗಹನವಾದ ಭಾವನೆಯಿದೆ! ಅದೇ ‘ಇಂಡಿಯಾ ಮಾತಾ ಕೀ ಜಯ್’ ಎಂದರೆ ದಿನಪೂರ್ತಿ ನಗಾಡುವುದರಲ್ಲಿ ಸಂಶಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸಿದ ಘೋಷಣೆ ‘ಭಾರತ್ ಮಾತಾ ಕೀ ಜಯ್’ ಆಗಿತ್ತೆಂದರೆ ಹೋರಾಟಗಾರರು ಹೋರಾಡಿದ್ದು ಭಾರತಕ್ಕೆಂದೇ ತಾನೇ? ಹಾಗಿದ್ದರೂ ಇಂಡಿಯಾದ ಆಸೆ ಏಕೆ ಹುಟ್ಟಿತು? ಭಾರತದ ವಿಶಿಷ್ಠ ಗುಣಗಳ ಸ್ತುತಿಗೈಯಲು ವಿಷ್ಣು ಪುರಾಣವೆಂಬ ಹಿಂದೂ ಪುರಾಣ ಸಂಪೂರ್ಣವಾಗಿ ಒಂದು ಅಧ್ಯಾಯವನ್ನು ಮೀಸಲಿಟ್ಟಿದೆ. ಅದರಲ್ಲಿ “ಸಮುದ್ರದ ಉತ್ತರಕ್ಕಿರುವ, ಹಿಮಾಲಯದ ದಕ್ಷಿಣಕ್ಕಿರುವ ಭೂಭಾಗವೇ ‘ಭಾರತ’ ಮತ್ತು ಈ ಭೂಭಾಗದಲ್ಲಿ ವಾಸಿಸುವ ಜನರೇ ಭಾರತೀಯರು” ಎನ್ನಲಾಗಿದೆಯಂತೆ.

ಭಾರತವನ್ನು ಸ್ತುತಿಸುವ ಇನ್ನೊಂದು ಶ್ಲೋಕಾರ್ಥ ಹೀಗಿದೆಯಂತೆ : “ಈ ಭೂಮಿಯಲ್ಲಿನ ಆಶೀರ್ವದಿಸಲ್ಪಟ್ಟ ಭಾಗವೇ ಭಾರತ ಎಂದು ದೇವತೆಗಳು ಈ ದೇಶದ ಮಹಾನತೆಯನ್ನು ಹೊಗಳಿ ಹಾಡುತ್ತಾರೆ” . ಇಂಥ ಒಂದು ಪವಿತ್ರ ಭೂಮಿಯನ್ನು, ಬಿಡಿಸಲಾಗದ ಬಾಂಧವ್ಯ ನಮ್ಮ ಮಾತೃಭೂಮಿಯೊಂದಿಗೆ ನಮಗೆ ಇರುವ ಹಿನ್ನೆಲೆಯಲ್ಲಿ, ಭಾರತವನ್ನು, ಉಳಿಸಲು ಇಂಡಿಯಾವನ್ನು ಅಳಿಸುವುದು ರಾಷ್ಟ್ರೀಯ ಹಿತಾಸಕ್ತಿಯಿಂದ ಅಗತ್ಯವಾಗಿದೆ ಎಂದು ಎನಿಸುವುದಿಲ್ಲವೇ? ಇಂಥ ವಿಶಾಲ, ಸಾರ್ವಭೌಮ, ಗೌರವದ, ಸಾಂಸ್ಕೃತಿಕ ಹಿರಿಮೆಯ ದೇಶಕ್ಕೇಕೆ ಸಂವಿಧಾನದಲ್ಲಿ ಎರಡೆರಡು ಹೆಸರುಗಳು? ಸರ್ ನೇಮ್(ಉಪನಾಮ) ಇಟ್ಟುಕೊಳ್ಳಲು ದೇಶವೇನು ಇಂದು ಹುಟ್ಟಿ ನಾಳೆ ಅಳಿದುಹೋಗುವ ಯಕಶ್ಚಿತ್ ಮನುಷ್ಯನೇ?ಭಾರತವನ್ನೆ ಇಂಡಿಯಾ ಮಾಡಿ ಅಮೆರಿಕಾ- ಬ್ರಿಟನ್- ರಷ್ಯಾಗಳ ಪಡಿಯಚ್ಚಾಗಿ ರೂಪಿಸಬೇಕು ಎಂಬ ರಾಜಕಾರಣದ ಕನಸ್ಸು ನನಸಾಗಿದೆಯೇ? ಇಂಡಿಯಾವನ್ನು ಸಭ್ಯರ ನಾಡನ್ನಾಗಿ ರೂಪಿಸಲು ಇವರು ಯಶಸ್ವಿಯಾಗಿದ್ದಾರೆಯೇ? ಜಯಪ್ರಕಾಶ್ ನಾರಾಯಣರ ನಿಕಟವರ್ತಿಗಳಾದ ಅಚ್ಯುತ ಪಟವರ್ಧನ ಎಂಬುವವರು ಇಂಡಿಯಾದ ಎಡವಟ್ಟುಗಳನ್ನು ನೋಡಿ “ಇಂಥ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಲಿಲ್ಲ” ಎಂದು ಹೇಳಿದ್ದು ಆಗ ಸುದ್ದಿಯಾಗಿತ್ತಂತೆ.

ಮೋಹನ್ ಭಾಗವತರು ಹೇಳಿದ್ದೂ ಇದನ್ನೇ. ಆದರೆ ಅದನ್ನು ಅರ್ಥೈಸಲಾಗದೆ ಕೆಲವರು ಹುಲುಬಿದ್ದರು. ನಿರಾಸೆಯಿಂದ ಕುಸಿಯುತ್ತಿರುವಾಗಲೂ ಕಾಣದ ಶಕ್ತಿಗೆ ಮೊರೆಯಿಡುವುದು,ಭರವಸೆಯ ಬೆಳಕನ್ನು ಕಾಣುವುದು ಭಾರತೀಯವೋ ಇಂಡಿಯಾವೋ? ಜನರು ಆಸ್ಪತ್ರೆಗಳಿಗಿಂತಲೂ ದೇವಸ್ಥಾನಗಳ ಮೇಲೆ ನಂಬಿಕೆ ಇಡುವುದು ಇಂಡಿಯಾವೋ ಭಾರತೀಯವೋ? ಯಂತ್ರ, ವ್ಯವಹಾರಗಳಿಂದ ಒತ್ತಡವನ್ನು ನಿರ್ಮಿಸಿಕೊಂಡಿರುವುದು ಇಂಡಿಯಾ. ಆದರೆ ಭಾವನೆಗಳಿಗೆ ಬೆಲೆಕೊಟ್ಟು ಸಂತೃಪ್ತ ಜೀವನವನ್ನು ನಡೆಸುವುದು ಭಾರತ. ಹಾಗಾದರೆ ಮೇಲು ಯಾವುದು? ಎಷ್ಟೇ ಆಧುನಿಕ, ವೈಜ್ಞಾನಿಕ, ಮೂಢನಂಬಿಕೆ ಎಂದುಕೊಂಡರೂ ಇನ್ನೂ ಮರೆಯಾಗದ ಆಧ್ಯಾತ್ಮಿಕ ಶ್ರದ್ಧೆಗೆ ಇಂಡಿಯಾ ಎನ್ನಬೇಕೋ ಭಾರತ ಎನ್ನಬೇಕೋ? ಸೆಕ್ಯುಲರಿಸಂ ಅನ್ನು ಆಲಾಪಿಸುವ ಇಂಡಿಯಾ ಮತ್ತು ಸಹಜ ಧರ್ಮಸಹಿಷ್ಣುತೆಯ ಭಾರತ. ಇದರಲ್ಲಿ ನಮ್ಮ ಆಯ್ಕೆ ಯಾವುದಿರಬೇಕು. ಇಂಡಿಯಾ ಸೃಷ್ಟಿಸಿದ ಎಡವಟ್ಟುಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಸಮಗ್ರ ಇತಿಹಾಸದ ಪಠ್ಯವಾಗಬಹುದು. ಇಂಡಿಯಾದಲ್ಲಿ ಇಂದು ಎಂಜಿನಿಯರಿಂಗ್‌ನ ಅಬ್ಬರ! ಇಂಡಿಯಾದ ಪೋಷಕರೆಲ್ಲರಿಗೂ ಮಕ್ಕಳನ್ನು ಎಂಜಿನಿಯರ್ ಆಗಿಸಬೇಕೆಂಬ ಅದಮ್ಯ ಅಭಿಲಾಷೆ. ಪರಿಣಾಮ ಇಂಡಿಯಾದ ತುಂಬೆಲ್ಲಾ ಎಂಜಿನಿಯರಿಂಗ್ ಕಾಲೇಜುಗಳು, ಸೋಡಾ ಗ್ಲಾಸು ಹಾಕಿಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಸುಳಿದಾಡುವೆಡೆಯಲ್ಲೆಲ್ಲಾ ಎಂಜಿನಿಯರರೇ ಎಂಜಿನಿಯರರು. ಇಂಡಿಯಾ ಸಾರ್ಥಕವಾಯಿತು ಎನ್ನುವಂತೆ ಕಾಣುವುದು! ಅದೇ ಇಂಡಿಯಾದಲ್ಲಿ ವಾಸ್ತು ಶಾಸ್ತ್ರಜ್ಞರಿಗೂ ಅತಿಯಾದ ಬೇಡಿಕೆ. ಎಂಜಿನಿಯರರ ಕಾಲದಲ್ಲಿ ಇವರಿಗೇನು ಕೆಲಸ ಎಂದು ಯೋಚಿಸುವಾಗ ಬರುವುದು ಅದೇ ಭಾರತ. ಮೋಹನ್ ಜೀ ಹೇಳಿದ ಭಾರತ. ಅದು ಎಂದಿಗೂ ಅಳಿಯದೇ ಉಳಿದಿರುವ ಮಾನಸ ಭಾರತ. ಅದು ಸತ್ವವಿರುವ ಸ್ವತ್ವವಿರುವ ಭಾರತ. ಇನ್ನು ಆಧುನಿಕ ಇಂಡಿಯಾದ ನವನಿರ್ಮಾಪಕರು ಏನೇ ಹೇಳಲಿ ಉಪಗ್ರಹ ಉಡಾವಣೆಗೂ ರಾಹುಕಾಲ ನೋಡುವ, ಶಸ್ತ್ರಚಿಕಿತ್ಸೆ ನಡೆವಾಗ ಹರಕೆ ಕಟ್ಟುವ, ಕೃಷಿ ವಿ.ವಿಗಳ ಹೊಲಗದ್ದೆಗಳಲೆಲ್ಲಾ ಬೆರ್ಚಪ್ಪಗಳನ್ನು ನಿಲ್ಲಿಸುವ ಭಾರತ ಇಂಡಿಯಾದ ಜೊಳ್ಳನ್ನು ತೋರಿಸುತ್ತವೆ. ಮೋಹನ್‌ ಜೀ ತೋರಿಸಿದ್ದು ಅದೇ ಜೊಳ್ಳನ್ನು. ಏನು ತಪ್ಪಾಗಿಬಿಟ್ಟಿತು ಅದರಲ್ಲಿ?

ದಕ್ಷಿಣ ಕನ್ನಡ ಜಿಲ್ಲೆಗೆ ದಿನನಿತ್ಯ ಸಾವಿರಾರು ಜನರು ಹೋಗುತ್ತಾರೆ. ಅದರಲ್ಲಿ ಮುಕ್ಕಾಲು ಪಾಲು ಜನರೂ ನವಮಂಗಳೂರು ಬಂದರನ್ನು ನೋಡಲು ಹೋಗುವವರಲ್ಲವೇ ಅಲ್ಲ. ಆದರೆ ಧರ್ಮಸ್ಥಳ, ಸುಬ್ರಹ್ಮಣ್ಯಗಳನ್ನು ದರ್ಶಿಸದೆ ಮರಳುವವರಲ್ಲ. ನಮ್ಮ ಕರ್ನಾಟಕದ ಬಹುತೇಕ ಜನರು ತಿರುಪತಿಯನ್ನು ನೋಡಿರುತ್ತಾರೆ. ಆದರೆ ಹೈದರಾಬಾದನ್ನು ನೋಡಿರುವುದಿಲ್ಲ. ಹಾಗಾದರೆ ವಾಸ್ತವವಾಗಿ ಈ ನೆಲದಲ್ಲಿ ಅಸ್ತಿತ್ವದಲ್ಲಿರುವುದು ಭಾರತವೋ ಇಂಡಿಯಾವೋ? ನೈಜ ಭಾರತೀಯ ಮಾನಸಿಕತೆಯನ್ನು ಅಧ್ಯಯನ ಮಾಡಿದವರಲ್ಲಿ ಚಿಂತಕ ಧರ್ಮಪಾಲರು ಪ್ರಮುಖವಾಗಿ ಕಂಡುಬರುತ್ತಾರೆ. ಸ್ವಾತಂತ್ರ್ಯಾನಂತರದ ಭಾರತೀಯ ಮಾನಸಿಕತೆಯ ಬಗ್ಗೆ ಅವರು ‘ಭಾರತೀಯ ಚಿತ್ತ, ಮಾನಸಿಕತೆಯ ಕಾಲ’ ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ಆ ಗ್ರಂಥದಲ್ಲಿ ಅವರು ಹೀಗೆ ಬರೆಯುತ್ತಾರೆ. “ಒಮ್ಮೆ ನಾನು ಗ್ವಾಲಿಯರ್‌ನಿಂದ ದೆಹಲಿಗೆ ಮೂರನೇ ದರ್ಜೆ ರೈಲಿನಲ್ಲಿ ಹೊರಟಿದ್ದೆ. ಮೂರ‍್ನಾಲ್ಕು ಜನ ಹೆಂಗಸರು ಮತ್ತು ಏಳೆಂಟು ಜನ ಗಂಡಸರು ಪಕ್ಕದಲ್ಲೇ ಕೂತಿದ್ದರು. ನಾನು ಅವರನ್ನು ಮಾತಾಡಿಸುತ್ತಲೇ ಹೋದೆ. ಅವರು ಉತ್ತರ ಪ್ರದೇಶದ ಯಾವುದೋ ಹಳ್ಳಿಯವರಾಗಿದ್ದರು. ಅವರದ್ದು ಮೂರು ತಿಂಗಳಷ್ಟು ಸುದೀರ್ಘ ಯಾತ್ರೆಯಾಗಿತ್ತು. ಅವರ ಬಳಿ ಕೆಲವು ಮಣ್ಣಿನ ಮಡಿಕೆಗಳಿದ್ದವು. ವಿಚಾರಿಸಿದಾಗ ಅವು ಊಟದ ಪದಾರ್ಥಗಳೆಂದರು. ‘ನೀವೆಲ್ಲಾ ಒಂದೇ ಜಾತಿಯವರಿರಬೇಕಲ್ಲವೇ?’ ಎಂದು ನಾನು ಕೇಳಿದೆ. ‘ಇಲ್ಲ, ನಾವೆಲ್ಲಾ ಬೇರೆ ಬೇರೆ ಜಾತಿಗಳವರು’ ಎಂದರು. ‘ಒಟ್ಟಿಗೆ ಪ್ರಯಾಣಿಸುತ್ತಿರುವಿರಿ, ಒಟ್ಟಿಗೆ ಊಟ ಮಾಡುವಿರಿ’ ಎಂದು ಕೇಳಿದೆ. ‘ ತೀರ್ಥಯಾತ್ರೆ ಹೋಗುವಾಗ ಜಾತಿಯು ಲೆಕ್ಕಕ್ಕೆ ಬರುವುದಿಲ್ಲ’ ಎಂದರು ಅವರು. ವಿಚಾರಿಸಿದಾಗ ಅವರು ರಾಮೇಶ್ವರಕ್ಕೆ ಹೋಗಿದ್ದರು. ಮದರಾಸಿಗೆ ಹೋಗಿರಲಿಲ್ಲ. ‘ನೀವು ದೆಹಲಿಯಲ್ಲಿ ಕೆಲಕಾಲ ತಂಗುವಿರಾ?’ ಎಂದು ಕೇಳಿದೆ. ಅವರು ‘ಸಮಯವಿಲ್ಲ. ದೆಹಲಿಯಲ್ಲಿ ರೈಲು ಬದಲಿಸಿ ಹರಿದ್ವಾರಕ್ಕೆ ಹೋಗಬೇಕಾಗಿದೆ’ ಎಂದರು. ಅವರಿಗೆ ಇಂಡಿಯಾ ಬೇಕಾಗಿರಲಿಲ್ಲ. ಭಾರತ ಬೇಕಿತ್ತು”. ಇದೇ ಅಳಿಯದೇ ಉಳಿದಿರುವ ಭಾರತೀಯ ಮಾನಸಿಕತೆ. ದೇಶದ ಬಹುಪಾಲು ಜನರ ದೇಶ ಎಂದರೆ ಇದುವೇ. ಮೋಹನ್ ಜೀ ಹೇಳಿದ್ದೂ ಇಂಥದ್ದೇ ಭಾರತವನ್ನು. ಆ ಭಾರತದಲ್ಲಿ ಶ್ರವಣಕುಮಾರನಂಥ ಪುತ್ರನಿರುತ್ತಾನೆ. ವೃದ್ದಾಶ್ರಮಗಳಿರುವುದಿಲ್ಲ. ಕೀಚಕ, ದುಶ್ಯಾಸನರಿದ್ದರೂ ಭೀಮಾರ್ಜುನರಿರುತ್ತಾರೆ. ಸಂಸ್ಕೃತಿಯಿರುತ್ತದೆ. ಇಂಡಿಯಾದಂತೆ ಸಂಹಾರವಿರುವುದಿಲ್ಲ.

ಸ್ವಾಮಿ ವಿವೇಕಾನಂದರ ನೂರೈವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಮಾಧ್ಯಮಗಳು ಭಾರತವನ್ನು ಮೂಡಿಸಬೇಕಿತ್ತು. ಆದರೆ ಇಂಡಿಯಾದ ಅಬ್ಬರದಲ್ಲಿ ಅವರೆಲ್ಲರೂ ಮುಳುಗಿಹೋದರು. ಭಾರತದಲ್ಲಿ ಎಲ್ಲಕ್ಕೂ ಪರಿಹಾರವಿದೆ. ಎಲ್ಲಕ್ಕೂ ಉತ್ತರವಿದೆ ಎಂಬುದನ್ನು ಅರಿಯಲಾರದೇ ಹೋದವು. ಅವರೆಲ್ಲರೂ ಇಂಡಿಯಾದಲ್ಲಿ ಹುಟ್ಟುತ್ತಿರುವ ಪಾಕಿಸ್ಥಾನಗಳು ಮತ್ತು ವ್ಯಾಟಿಕನ್‌ಗಳನ್ನೂ ಅರಿಯಲಾರದೇ ಹೋಗುತ್ತಿದ್ದಾರೆ.

(ಲೇಖಕರು ಅಸೀಮಾ ಮಾಸಿಕದ ಸಂಪಾದಕರು )

 

Leave a Reply

Your email address will not be published.

This site uses Akismet to reduce spam. Learn how your comment data is processed.