Dr. Mohan Bhagwat, Sarsanghachalak, RSS

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಯನ್ನು ಸಂಘಟನೆಯ ಹೊರಗಿನವರಿಗೆ ತಿಳಿಸಲು ದೆಹಲಿಯ ವಿಜ್ಞಾನ ಭವನದಲ್ಲಿ ಸೆ.17 ರಿಂದ 19ರ ವರೆಗೆ 2 ದಿನಗಳ ಭಾಷಣ ಮತ್ತು 1 ದಿನದ ಪ್ರಶ್ನೋತ್ತರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲ 2 ದಿನ ಸಂಘದ ಸ್ವರೂಪ ಮತ್ತು ಚಿಂತನೆಯನ್ನು ಭಾಷಣದ ಮೂಲಕ ಭಾರತದ ಜನರಿಗೆ ತಲುಪಿಸಿದ ಸರಸಂಘಚಾಲಕರು 3ನೇ ದಿನ ಪ್ರಶ್ನೆಗಳಿಗೆ ಉತ್ತರಿಸಿದರು. ಸರಸಂಘಚಾಲಕರ ಭಾಷಣ ಮತ್ತು ಪ್ರಶ್ನೋತ್ತರದ ಮೂಲರೂಪ ಕನ್ನಡದಲ್ಲಿ…

ಸಂಘವನ್ನು ತಿಳಿಯಲು ಈ ಕಾರ್ಯಕ್ರಮದ ಆಯೋಜನೆಯಾಗಿದೆ. ಸಂಘವು ಒಂದು ಶಕ್ತಿಯಾಗಿ ನಿಂತಿರುವುದರಿಂದ ಅದರ ಕುರಿತಾದ ಚರ್ಚೆಗಳಾಗುವುದು ಸಹಜವೇ. ಅದು ನಡೆಯಬೇಕು ಕೂಡ. ಆದರೆ, ವಸ್ತುಸ್ಥಿತಿಯನ್ನು ತಿಳಿದು ಚರ್ಚೆ ನಡೆಸಿದಾಗ ಮಾತ್ರ ಸಾರ್ಥಕ ನಿಷ್ಕರ್ಷೆಗೆ ಬರಲು ಸಾಧ್ಯ.

ಸಂಘದ ಕಾರ್ಯ ಅನನ್ಯ. ಅದರ ತುಲನೆಗೆ ಮತ್ತೊಂದು ಪರ್ಯಾಯವಿಲ್ಲ. ಹೀಗಾಗಿ ಇದನ್ನು Known to Unknown ಆಗಿ ತಿಳಿದುಕೊಳ್ಳಲಾಗದು. ಸಂಘಕ್ಕೆ ತನ್ನದೇ ಆದ ವಿಶಿಷ್ಟ ಕ್ರಮವಿರುವುದರಿಂದಲೂ,  ಸಂಘದ ಕಾರ್ಯಕರ್ತರು ಪ್ರಸಿದ್ಧಿ ವಿಮುಖರಾಗಿ ಕೆಲಸಮಾಡುವುದರಿಂದಲೂ ಸಂಘದ ಶಕ್ತಿಯೂ ಹೆಚ್ಚುತ್ತದೆ ಮತ್ತು ಇದರಿಂದ ಮಾಧ್ಯಮಗಳಲ್ಲಿ ಅದರ ಕುರಿತಾಗಿ ಸುದ್ದಿಗಳು ಹರಡುತ್ತವೆ. ತಾನು ಮಾಡುವ ಕೆಲಸದಿಂದ ಶಕ್ತಿಗಳಿಸಿದಂತೆಲ್ಲ ಅದೇ ಶಕ್ತಿಯ ಕುರಿತಾಗಿ ಕೆಲವರ ಮನದಲ್ಲಿ ಸಂದೇಹಗಳೂ ಹುಟ್ಟುತ್ತವೆ ಮತ್ತು ಇದರಿಂದಾಗಿ ಅಪಪ್ರಚಾರಗಳೂ ನಡೆಯುತ್ತವೆ. ಇದರಲ್ಲಿ ಯಾವುದೂ ಅಸ್ವಾಭಾವಿಕವಲ್ಲ.

ಆದರೆ, ವಸ್ತುಸ್ಥಿತಿಯಲ್ಲಿ ಸಂಘವೇನು? ಅದರ ನಿಲುವೇನು ? ಇದರ ಕುರಿತಾಗಿ ಅಧಿಕೃತವಾಗಿ ದೆಹಲಿಯ ಪ್ರಭಾವಿ ಜನರಿಗೆ ತಿಳಿಸಬೇಕು. ಅದರ ಕುರಿತಾಗಿ ಪ್ರಶ್ನೋತ್ತರಗಳಾಗಬೇಕು  ಎಂದು ನಮ್ಮ ದೆಹಲಿಯ ಪ್ರಾಂತದ ಕಾರ್ಯಕರ್ತರಿಗೆ ಅನ್ನಿಸಿದೆ.  ಅದಕ್ಕಾಗಿಯೇ ಈ ಸಮಯವನ್ನು ಆಯ್ದುಕೊಳ್ಳಲಾಗಿದೆ. ವಸ್ತುಸ್ಥಿತಿಯ ಅರಿವು ಆವಶ್ಯಕವಾದುದರಿಂದ ಅದರ ನಿರೂಪಣೆಯನ್ನಷ್ಟೇ ನಾನು ನಿಮ್ಮ ಮುಂದಿಡಲಿದ್ದೇನೆ. ಇಲ್ಲಿ ನನ್ನ ವಿಷಯಮಂಡನೆಯಿಂದ ನಿಮ್ಮನ್ನು ಒಪ್ಪಿಸಲೇಬೇಕೆಂಬ ಉದ್ದೇಶ ನನಗಿಲ್ಲ. ಒಪ್ಪಿಕೊಳ್ಳುವುದು, ಬಿಡುವುದು ನಿಮ್ಮ ಅಧಿಕಾರಕ್ಕೆ ಬಿಟ್ಟಿದ್ದು.  ಇದ್ದದ್ದನ್ನು ಹೇಳುವುದಷ್ಟೇ ನನ್ನ ಕೆಲಸ. ನಿಮ್ಮ ಪ್ರಶ್ನೆಗಳಿಗೆ ನನ್ನ ತಿಳಿವಳಿಕೆಗನುಗುಣವಾಗಿಯೇ ಉತ್ತರವನ್ನು ಹೇಳುವೆ. ಮುಂದುವರೆದು ಅದರ ಮೇಲೆ ಸಂಶೋಧನೆಗಳನ್ನು ಮಾಡುವುದು ನಿಮಗೆ ಸೇರಿದ ವಿಷಯ. ಆದರೆ, ಈ ತಿಳಿವಳಿಕೆಯ ಆಧಾರದ ಮೇಲೆ ನಡೆಯುವ ಚರ್ಚೆಯು ಸಂಘದ ಸರಿಯಾದ ಅರಿವಿನ ಆಧಾರದ ಮೇಲೆಯೇ ನಡೆಯುವ ಚರ್ಚೆ ಎನ್ನುವುದಷ್ಟೆ ನಮಗೆ ಸಮಾಧಾನದ  ವಿಷಯ.

ಸಂಘವನ್ನು ತಿಳಿಯಬೇಕಾದರೆ ಮೊದಲು ತಿಳಿಯಬೇಕಾದ್ದು  ಡಾ.ಹೆಡಗೆವಾರರನ್ನು. ಸಂಘದ ನಿರ್ಮಾತೃ ಅವರು. ಡಾ.ಹೆಡಗೆವಾರರು ತಮ್ಮನ್ನೇ  ಬೀಜರೂಪದಲ್ಲಿ ಮೊಳೆಯಿಸಿ ಸಂಘವನ್ನು ಬೆಳೆಸಿದವರು.ಹೀಗಾಗಿ ಸಂಘದ ಎಲ್ಲ ಕಾರ್ಯಗಳಲ್ಲಿಯೂ ಡಾ.ಜೀಯವರ ಮಾನಸದ ಪ್ರತಿಬಿಂಬ ಕಾಣಸಿಗುತ್ತದೆ. ಡಾ.ಹೆಡಗೆವಾರರನ್ನು ಅರಿಯದೇ ಸಂಘವನ್ನು ತಿಳಿಯುವುದು  ಸಾಧ್ಯವೂ ಇಲ್ಲ. ಹೀಗಾಗಿ ತಿಳಿಯುವ ಪ್ರಯತ್ನ ಅಲ್ಲಿಂದಲೇ ಮೊದಲು ಮಾಡಬೇಕಾಗುತ್ತದೆ.

ನಾಗಪುರದ ಕನಿಷ್ಠ ಮಧ್ಯಮವರ್ಗದ, ಪೌರೋಹಿತ್ಯದಿಂದ ಉದರ ನಿರ್ವಹಣೆ ಮಾಡುತ್ತಿದ್ದ ಕುಟುಂಬವೊಂದರಲ್ಲಿ ಡಾ.ಹೆಡಗೆವಾರರ ಜನ್ಮವಾಯಿತು. ಮನೆಯ ಪರಿಸ್ಥಿತಿ ಹೇಳಿಕೊಳ್ಳುವಂಥದ್ದೇನಿರಲಿಲ್ಲ. ಇವರಿಗಿಂತ  ಹಿರಿಯ ಇಬ್ಬರು ಅಣ್ಣಂದಿರಿದ್ದರು. ಆ ಕಾಲಕ್ಕೆ ಸ್ವಾತಂತ್ರ್ಯಯದ ಕುರಿತಾದ ಮಾತುಗಳು ಸಮಾಜದಲ್ಲಿ ಕೇಳಿಬರಲು ಶುರುವಾಗಿತ್ತು. ನಾಗಪುರದಲ್ಲಿ ಬ್ರಿಟಿಷರ ಆಗಮನಕ್ಕೆ ಮೊದಲು ಭೊಂಸ್ಲೆ ರಾಜರ ಆಳ್ವಿಕೆಯಿತ್ತು. ಅವರ ರಾಜ್ಯವನ್ನು ಬ್ರಿಟಿಷರು ಹೇಗೆಲ್ಲ ಲಪಟಾಯಿಸಿದರು ಎಂಬುದರ ಕುರಿತಾಗಿ  ಲೋಕಕಲೆಗಳಲ್ಲಿ ಕಲಾಕಾರರು, ಮಂದಿರಗಳಲ್ಲಿ ಕಥಾವಾಚಕರು ಚರ್ಚಿಸುತ್ತಿದ್ದರು. ಇಂತಹ ವಾತಾವರಣದಲ್ಲಿ ಡಾ.ಹೆಡಗೆವಾರರು ಚಿಕ್ಕಂದಿನಿಂದಲೇ ಸ್ವಾತಂತ್ರ್ಯದ ಆಕಾಂಕ್ಷೆಗಳನ್ನೇ ಹೊತ್ತು ಬೆಳೆದವರಾಗಿದ್ದರು.

ಅವರೊಬ್ಬ ಜನ್ಮಜಾತ ದೇಶಭಕ್ತರು. ಅವರಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದಾಗ ವಿಕ್ಟೋರಿಯಾ ರಾಣಿಯ ರಾಜ್ಯಾರೋಹಣದ ಜುಬಿಲಿ ಸಮಾರಂಭ ನಡೆಯಿತು. ಬ್ರಿಟಿಷರ ಆಳ್ವಿಕೆ ಇದ್ದುದರಿಂದ ಎಲ್ಲ ಶಾಲೆಗಳಲ್ಲಿ ಸಂಭ್ರಮಾಚರಣೆಗಳು ನಡೆದವು. ಇವರ ಶಾಲೆಯಲ್ಲಿಯೂ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿಮಿತ್ತ ಸಿಹಿ ಹಂಚಲಾಯಿತು. ಇವರಾಗ 3ನೆಯ ತರಗತಿಯ ವಿದ್ಯಾರ್ಥಿ. ಸಿಹಿಯನ್ನು ತೆಗೆದುಕೊಂಡಿದ್ದೇ ಇವರು ಅದನ್ನು ಚರಂಡಿಗೆಸೆದರು. ಅದನ್ನು ಗಮನಿಸಿದ ಶಿಕ್ಷಕ ಕಾರಣ ಕೇಳಿದರು. ಉತ್ತರವಾಗಿ, ನಮ್ಮವರ ರಾಜ್ಯವನ್ನು ಕಸಿದುಕೊಂಡವರ ರಾಜ್ಯಾರೋಹಣದ ಸಿಹಿ ನಮಗೆ ಸಿಹಿ ಹೇಗಾದೀತು ? ಇದು ಉತ್ಸವವಾದರೂ ಹೇಗಾದೀತು? ಇದಂತೂ ಶೋಕದಿನ,  ಅಂದರು. ಈ ಘಟನೆಯಿಂದ ಬಾಲ್ಯದಿಂದಲೇ ಅವರ ಮಾನಸಿಕ ತಯಾರಿ ಯಾವ ರೀತಿಯಲ್ಲಿತ್ತು ಇದರ ಪರಿಚಯ ಸಿಗುತ್ತದೆ.

ಕೇಶವ ಹೆಡಗೆವಾರರ 11ನೇ ವಯಸ್ಸಿನಲ್ಲೇ ಪ್ಲೇಗ್ ರೋಗಕ್ಕೆ ತುತ್ತಾಗಿ ತಂದೆ-ತಾಯಿ ಒಂದೇ ದಿನ ಸಾವನ್ನಪ್ಪಿದರು.  ಹೀಗಾಗಿ ಮನೆಯಲ್ಲಿ ದುಡಿಯುವ ಕೈ ಇಲ್ಲದೇ ಅತ್ಯಂತ ಕಷ್ಟಕರ ದಿನಗಳನ್ನು ಕಾಣಬೇಕಾಯಿತು. ಇಂತಹ ಕಾಲಾವಧಿಯಲ್ಲಿಯೂ ಕೇಶವ ಹೆಡಗೆವಾರರ ಜೀವನಪರ್ಯಂತ ಕಾಣುವ ಗುಣವೆಂದರೆ, ತನ್ನ ಪಾಠಶಾಲೆಯ 10 ಅಗ್ರಣಿ ವಿದ್ಯಾರ್ಥಿಗಳಲ್ಲಿ ಅವರೂ ಒಬ್ಬರಾಗಿರುವುದು ಮತ್ತು  ದೇಶಹಿತದ ಯಾವುದೇ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು. ಹೀಗೆ ಸಾರ್ವಜನಿಕ ಜೀವನದ ದೀಕ್ಷೆ ಅವರಿಗೆ ಬಾಲ್ಯದಲ್ಲೇ ದೊರೆತಾಗಿತ್ತು.

ನಾಗಪುರದಲ್ಲಿ ವಂದೇ ಮಾತರಂ ಚಳವಳಿ ನಡೆಯಿತು. ಅದರ ಅಗ್ರಣಿ ಸಂಘಟಕರಲ್ಲಿ ಹೆಡಗೆವಾರರೂ ಒಬ್ಬರಾಗಿದ್ದರು. ಶಾಲಾ ಪರೀಕ್ಷಣೆಗೆ ತಪಾಸಕರು ಬಂದಾಗ ಪ್ರತಿಯೊಂದು ತರಗತಿಯಲ್ಲಿಯೂ ಆ ತಪಾಸಕನ  ಸ್ವಾಗತ ವಂದೇ ಮಾತರಂನಿಂದ ಆಗುತ್ತಿತ್ತು. ಸ್ವಾಭಾವಿಕವಾಗಿ ನಾಗಪುರದ ಎಲ್ಲ ಶಾಲೆಗಳನ್ನೂ ಬ್ರಿಟಿಷ್ ಸರ್ಕಾರ ಮುಚ್ಚಿತು. ಚಳವಳಿಯ ರೂವಾರಿಯ ಪತ್ತೆಗೆ ತೊಡಗಿತು. ಕೇಶವರ ಸಂಘಟನೆಯ ಅದ್ಭುತ ಶಕ್ತಿ ಹೇಗಿತ್ತೆಂದರೆ 4 ತಿಂಗಳಾದರೂ ಸರ್ಕಾರಕ್ಕೆ ಚಳವಳಿಯ ಹಿಂದಿರುವವರ ಪತ್ತೆಯೇ ಹತ್ತಲಿಲ್ಲ. ಕೊನೆಗೆ ಶಾಲೆಗಳ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಹೆತ್ತವರು ಒಪ್ಪಂದವೊಂದಕ್ಕೆ ಬಂದರು. ಅದರ ಪ್ರಕಾರ ಶಾಲೆಗೆ ಪ್ರವೇಶ ದ್ವಾರದಲ್ಲಿ ಮುಖ್ಯಗುರುಗಳು ನಿಂತಿರುವುದು ಮತ್ತು ವಿದ್ಯಾರ್ಥಿಗಳು ತಮ್ಮಿಂದ ತಪ್ಪಾಯಿತೆಂದು ತಲೆ ಆಡಿಸಿ ಒಳಕ್ಕೆ ಬರುವುದು ಎಂದಾಯಿತು. ಆದರೆ, ಇಂತಹ ನಾಮ ಮಾತ್ರದ ತಪ್ಪೊಪ್ಪಿಗೆಯನ್ನೂ ಧಿಕ್ಕರಿಸಿದ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬರು ಕೇಶವ ಹೆಡಗೆವಾರ್. ಹೀಗಾಗಿ ಅವರನ್ನು ಶಾಲೆಯಿಂದ ಹೊರಹಾಕಲಾಯಿತು.ಆದರೂ ಅಂದಿನ ರಾಷ್ಟ್ರೀಯ ನೇತಾರರು ನಡೆಸುತ್ತಿದ್ದ ವಿದ್ಯಾಲಯವೊಂದರಲ್ಲಿ ಪ್ರವೇಶಪಡೆದು ತಮ್ಮ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು ಬರೆದು ಮೊದಲ ದರ್ಜೆಯಲ್ಲಿ ಪಾಸಾದರು.

ಮುಂದಿನ ವಿದ್ಯಾಭ್ಯಾಸಕ್ಕೆ ಅವರು ತೆರಳಿದ್ದು ಕಲ್ಕತ್ತೆಗೆ. ಅಂದಿನ ದಿನಗಳಲ್ಲಿ ಕಲ್ಕತ್ತೆ ಕ್ರಾಂತಿಕಾರಿಗಳ ಬೀಡಾಗಿತ್ತು. ಅನುಶೀಲನ ಸಮಿತಿಯ ಸಂಪರ್ಕ ಬೆಳೆಸಿಕೊಂಡು ರಜೆಯ ಅವಧಿಯಲ್ಲಿ ಮನೆಗೆ ಮರಳಿದಾಗ ಆ ಎಲ್ಲ ಪ್ರಾಂತದಲ್ಲಿಯೂ ಕ್ರಾಂತಿಕಾರ್ಯವನ್ನು ಪ್ರಾರಂಭಿಸುವುದು ಅವರ ಕಲ್ಕತ್ತೆಗೆ ತೆರಳಿದ ಯೋಜನೆಯ ಹಿಂದಿನ ಪ್ರಮುಖ ಕಾರಣವಾಗಿತ್ತು. 4 ವರ್ಷಗಳ ಕಠಿಣ ವೈದ್ಯಕೀಯ ಅಭ್ಯಾಸ ಮತ್ತು ಅದರೊಡನೆ ಅನುಶೀಲನ ಸಮಿತಿಯ ಕೋರ್ ಕಮಿಟಿಯ ಸದಸ್ಯ ಹೀಗೆ ಎರಡನ್ನೂ ಅವರು ಸಮರ್ಥವಾಗಿ ನಿಭಾಯಿಸಿದರು. ರಾಜಸ್ಥಾನದಿಂದ ಆಂಧ್ರದವರೆಗೆ ಕ್ರಾಂತಿಕಾರಿಗಳನ್ನು ಸ್ಥಾಯಿಯಾಗಿಸುವುದು, ಅವರ ಆಜೀವಿಕೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡುವುದು ಅವರ ಜವಾಬ್ದಾರಿಯಾಗಿತ್ತು.

ಮುಂದೆ ದೇಶಕ್ಕಾಗಿಯೇ ಬದುಕುವ ತಮ್ಮ ಸಂಕಲ್ಪವನ್ನು ತಮ್ಮ ಮನೆಯ ಹಿರಿಯರಿಗೂ ತಿಳಿಸಿದರು. ಅಂದಿನ ಕಾಲದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ವಿದರ್ಭದ ಅಗ್ರ ಕಾರ್ಯಕರ್ತರಲ್ಲಿ ಅವರೂ ಒಬ್ಬರಾಗಿದ್ದರು. ಅಸಹಕಾರ ಚಳವಳಿಯ ಭಾಗವಾಗಿ ಅವರು ಮಾಡುತ್ತಿದ್ದ ಜನಜಾಗೃತಿಯ ಕೆಲಸಗಳಿಂದಾಗಿ ಅವರನ್ನು ರಾಜದ್ರೋಹದ ಆರೋಪದಲ್ಲಿ ಬ್ರಿಟಿಷ್ ಸರ್ಕಾರ ಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷೆಗಾಗಿ ಪ್ರಸ್ತುತಪಡಿಸಿತು.

ನಾಗಪುರದ ನ್ಯಾಯಾಲಯವೊಂದರಲ್ಲಿ ಅವರ ಮೇಲಿನ ಆರೋಪಗಳಿಗೆ ಉತ್ತರವಾಗಿ, ‘ಭಾರತದ ಮೇಲೆ ಆಂಗ್ಲರ ಆಳ್ವಿಕೆಯನ್ನು ಸರಿಯೆಂದು ಹೇಳುವ ಕಾನೂನನ್ನು ನನಗೆ ತೋರಿಸಿ, ನಿಮ್ಮ ಇಂತಹ ಅಧಿಕಾರವನ್ನೂ , ನಿಮ್ಮ ಕಾನೂನನ್ನೂ ನಾನು ಧಿಕ್ಕರಿಸುತ್ತೇನೆ. ಸ್ವಾತಂತ್ರ ್ಯದ ಅಧಿಕಾರ ಎಲ್ಲರಿಗೂ ಇದೆ. ಅದರ ಕುರಿತಾಗಿಯೇ ನಾನು ಜನರಲ್ಲಿ ಎಚ್ಚರಿಕೆ ಮೂಡಿಸಿದ್ದು. ಇದನ್ನೇ ರಾಜದ್ರೋಹ ಎನ್ನುವುದಾದರೆ ಆಂಗ್ಲ ಸರ್ಕಾರದ ಕೊನೆದಿನಗಳು ಎಣಿಕೆಯಲ್ಲಿವೆ ಎಂದೇ ತಿಳಿಯಬೇಕು’ ಎಂಬ ತಮ್ಮ ಪಕ್ಷವನ್ನು ಸ್ಪಷ್ಟಪಡಿಸಿದ್ದರು.  ಅವರಿಗೆ ಒಂದು ವರ್ಷದ ಸಶ್ರಮ ಶಿಕ್ಷೆಯನ್ನು ನಿಗದಿಪಡಿಸಿದ ನ್ಯಾಯಾಧೀಶ ತಮ್ಮ ತೀರ್ಪಿನಲ್ಲಿ , ‘ಡಾ. ಹೆಡಗೆವಾರರು ತಮ್ಮ ರಕ್ಷಣೆಯಲ್ಲಿ ಮಾಡಿದ ಭಾಷಣ ಅವರನ್ನು ಶಿಕ್ಷೆಗೆ ಗುರಿಮಾಡಿದ ಭಾಷಣಗಳಿಗಿಂತ ಕಟುವಾಗಿದೆ’ ಎಂದೇ ಅಭಿಪ್ರಾಯಪಟ್ಟಿದ್ದರು.

ಜೈಲಿಗೆ ಹೊರಡುವ ಮತ್ತು ಜೈಲಿನಿಂದ ಮರಳುವ ಹೊತ್ತಿಗೆ ಅವರ ಗೌರವಾರ್ಥ ಅಭಿನಂದನಾ ಸಭೆಗಳು ನಡೆದಿದ್ದವು. ಅವರು ಮರಳುವಾಗ ನಡೆದ ಸಭೆಯ ಅಧ್ಯಕ್ಷರಾಗಿ ಮೋತಿಲಾಲ್ ನೆಹರು ಇದ್ದರು, ಆ ಸಂದರ್ಭದಲ್ಲಿ ಡಾ.ಜೀ  ಹೇಳಿದ್ದು – ಕೇವಲ ಜೈಲಿಗೆ ಹೋಗುವುದೇ ದೇಶಭಕ್ತಿಯಲ್ಲ. ಜೈಲಿಂದ ಹೊರಗಿದ್ದೂ ಜನರಲ್ಲಿ ಜಾಗೃತಿ ಮೂಡಿಸುವುದೂ ದೇಶಭಕ್ತಿಯೇ . ಒಂದು ವರ್ಷದ ಕಾಲ ಜೈಲಿನ ಆರೈಕೆಯಲ್ಲಿ ನನ್ನ ದೇಹದ ತೂಕ ಹೆಚ್ಚಿದೆ. ಆದರೆ, ನಮ್ಮಂತಹ ಜನರ ಅನುಪಸ್ಥಿತಿಯಲ್ಲಿ ಈ ಕಾರ್ಯ ಸತತವಾಗಿ ನಡೆದಿದೆ ಎಂದೇ ಭಾವಿಸಿದ್ದೇನೆ ಎಂದು ಹೇಳಿದ್ದರು.

ದೇಶಹಿತದ ಭಾವವನ್ನು ಹೊಂದಿದ ಯಾವುದೇ ವ್ಯಕ್ತಿಯೊಂದಿಗೆ ತಮ್ಮನ್ನು ಜೋಡಿಸಿಕೊಳ್ಳುವಲ್ಲಿ ಅವರಿಗೆ ಯಾವುದೇ ಪೂರ್ವಗ್ರಹಗಳಿರಲಿಲ್ಲ. ನಾಗಪುರದ  ಕಮ್ಯುನಿಸ್ಟ್ ವಿಚಾರಗಳ ಓರ್ವ ಧನಿ ವಕೀಲ ರೂಯಿಕರರೊಡನೆಯೂ ಅವರಿಗೆ ಒಳ್ಳೆಯ ಮಿತ್ರಭಾವವಿತ್ತು. ವಿನೋದಕ್ಕಾಗಿ ರೂಯಿಕರರನ್ನು  You’re a rich labourer but I am a poor capitalist ಎಂದು ಛೇಡಿಸುತ್ತಿದ್ದರು. ಅದೊಮ್ಮೆ ರೂಯಿಕರರಲ್ಲಿ ‘ನಾಳೆಯೇ ನಮಗೆ ಸ್ವಾತಂತ್ರ ್ಯ ಸಿಕ್ಕಿ ಶಿವಾಜಿ ಮಹಾರಾಜರೇ ನಮ್ಮ ರಾಜರಾಗಿ ಆಳುತ್ತಾರೆ ಎಂಬ ಸುದ್ದಿ ತಿಳಿಸುತ್ತೇನೆ ಎಂದಿಟ್ಟುಕೊಳ್ಳಿ , ಆಗ ನೀವೇನು ಮಾಡುತ್ತೀರಿ?’ ಎಂದು ಪ್ರಶ್ನಿಸಿದರು. ಅದಕ್ಕುತ್ತರವಾಗಿ ರೂಯಿಕರರು , ‘ನಾನು ಖುಷಿಯಿಂದ ಆನೆಮೇಲೆ ಊರಿಗೆಲ್ಲ ಸಿಹಿ ಹಂಚುತ್ತೇನೆ’ ಎಂದರಂತೆ. ಅದಕ್ಕೆ ಡಾ.ಜೀ ಯವರು, ‘ನಮ್ಮ – ನಿಮ್ಮ ಗಂತವ್ಯಸ್ಥಾನ ಒಂದೇ ಆಗಿದೆ. ಹಾಗಾಗಿ ಪರಸ್ಪರರ ಬಗ್ಗೆ ವಿರೋಧವೇಕೆ’ ಎಂದು ಕೇಳಿದರು.  ಹೀಗೆ ಎಲ್ಲ ಮಾನಸಿಕತೆಯವರೊಂದಿಗೆ ಕೈಜೋಡಿಸಿ ಕೆಲಸಮಾಡುವ ಮನೋಭಾವ ಡಾ.ಹೆಡಗೆವಾರರದಾಗಿತ್ತು.

 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದಲ್ಲಿ ವಿದೇಶಿ ಆಳ್ವಿಕೆ ನಡೆಯಲು ಕಾರಣವಾದರೂ ಏನು ಎಂಬ ವಿಷಯದ ಚಿಂತನೆಯ ಪರಿಣಾಮವಾಗಿ 4 ಪ್ರಮುಖ ವಿಚಾರಧಾರೆಗಳು ಬೆಳೆದುಬಂದವು:

 ಮೊದಲನೆಯದ್ದು, ಸಶಸ್ತ್ರ ಸಂಘರ್ಷದ ಮಾರ್ಗದಲ್ಲೇ ಮುನ್ನಡೆಯುವ ಮಾರ್ಗದ್ದು. ದೇಶಕ್ಕಾಗಿ ತಮ್ಮೆಲ್ಲವನ್ನೂ ಧಾರೆಯೆರೆದ ಅನೇಕ ಧೀಮಂತರು ಈ ಪಂಥಕ್ಕೆ ಸೇರಿದ್ದಾರೆ. ನಾವು ಇಂದಿಗೂ ಅವರ ಜೀವನಗಳಿಂದ ಪ್ರೇರಣೆ ಪಡೆಯುತ್ತಿದ್ದೇವೆ. 

 ಎರಡನೆಯದ್ದು : ಜನರಲ್ಲಿ ರಾಜಕೀಯ ಅರಿವನ್ನು ಹಾಗೂ ಅಧಿಕಾರ ವರ್ಗದ ಕುರಿತಾಗಿ ಜಾಗೃತಿಯನ್ನು ಮೂಡಿಸಿ ಅದರ ಮೂಲಕ ಹೋರಾಡುವ ವಿಚಾರದ್ದು. ಅದು ಕಾಂಗ್ರೆಸ್ಸಿನ ರೂಪದಲ್ಲಿ ದೇಶದಲ್ಲಿ ಅಸ್ತಿತ್ವಕ್ಕೆ ಬಂದಿತು. ಅದರಲ್ಲಿಯೂ ದೇಶಕ್ಕಾಗಿ ಬಲಿದಾನ ಮಾಡಿದ ಅನೇಕ ಗಣ್ಯರು ಸೇರಿದ್ದಾರೆ.

 ಮೂರನೆಯದ್ದು: ನಮ್ಮ ಸಮಾಜದಲ್ಲೇ ಇಷ್ಟೆಲ್ಲ ಒಡಕುತೊಡಕುಗಳಿರುವಾಗ ಅದನ್ನು ಮೊದಲು ಸರಿಪಡಿಸಬೇಕು, ಅದರ ಹೊರತಾಗಿ ಆಂಗ್ಲರೊಡನೆ ಹೋರಾಟ ಸಾಧ್ಯವಿಲ್ಲ ಎಂದು ನಂಬಿದ್ದ ಸಮಾಜ ಸುಧಾರಣೆಯ ಭಾವದ ಮಾರ್ಗ.

 ನಾಲ್ಕನೆಯದ್ದು  : ನಮ್ಮ ಮೂಲದಲ್ಲಿಯೇ ನೆಲೆನಿಂತು ಸೇವೆಯ ಆಧಾರದಲ್ಲಿ ಸಮಾಜದ ದಾರಿದ್ರ್ಯ ಮತ್ತು ಅಜ್ಞಾನಗಳನ್ನು ದೂರಗೊಳಿಸುವ ಪ್ರಯತ್ನದಲ್ಲಿ ನಂಬಿಕೆಯುಳ್ಳವರದ್ದು.

ಈ ಎಲ್ಲ ಮಾರ್ಗಗಳ ಹೊರತಾಗಿಯೂ  ಸ್ವಾತಂತ್ರ್ಯದ ಪೂರ್ವದಿಂದ ಇಂದಿನವರೆಗೂ ಸಮಾಜದಲ್ಲಿ  ಗುಣತತ್ತೆಯ ಆಧಾರದ ಬದಲಾವಣೆಗಳು ಕಂಡಿದ್ದು ಕಡಿಮೆಯೇ. ಕವಿ ರವೀಂದ್ರರ ಪ್ರಸಿದ್ಧ ಪ್ರಬಂಧ ’ಸ್ವದೇಶೀ ಸಮಾಜ’ದಲ್ಲಿ  ತಿಳಿಸುವಂತೆ… ಏಕಾತ್ಮರಾಗಿ ನಡೆಯಬೇಕಾದ್ದು ಅತ್ಯಗತ್ಯ. ಇಂತಹ ಕೆಲಸಕ್ಕೆ ಬೇಕಾದ ಪರಂಪರೆ, ಸಂಸ್ಕೃತಿಗಳು  ಈ ಮೊದಲೇ ನಮ್ಮ ದೇಶದಲ್ಲಿವೆ. ಆದರೆ ಇವುಗಳ ಮೂಲಕ ಆಗಬೇಕಿರುವ ಪರಿವರ್ತನೆ ರಾಜಕೀಯ ನೆಲೆಯಿಂದ ಆಗವುದಿಲ್ಲ .ಅದು ಆಗುವುದು ಸಮಾಜದ ಒಳಗಿನಿಂದ. ಇದಕ್ಕಾಗಿ ಶುದ್ಧ ಚಾರಿತ್ರ್ಯಸಂಪನ್ನ ನಾಯಕರ ಆವಶ್ಯಕತೆ ಇದೆ, ಎಂದೂ ತಿಳಿಸಿದ್ದಾರೆ.

ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸರ್ ಮಾನವೇಂದ್ರ ರಾಯ್ ತಮ್ಮ ಪ್ರಸಿದ್ಧ ಕೃತಿ ‘ರಾಡಿಕಲ್ ಹ್ಯುಮಾನಿಸಂ’ನಲ್ಲಿ ಮೇಲುಮೇಲಿನ ತೋರಿಕೆಯ ಬದಲಾವಣೆಗಳಿಂದ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಸಮಾಜದ ಸಾಮಾನ್ಯರಲ್ಲಿ ತೆರಳಿ ಆತನ ವಿಚಾರ ಮತ್ತು ಆಲೋಚನೆಗಳಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಹೇಳಿದ್ದಾರೆ.

ಪೂರ್ವ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಸಂದರ್ಭದಲ್ಲಿ 3 ವಿಷಯಗಳನ್ನು ಪ್ರಸ್ತಾಪಿಸಿದ್ದರು: ನಮಗೆ ನಮ್ಮ ಸಮಾಜದಲ್ಲಿ ವಿಶ್ವಾಸ ಮೂಡಿಸಬೇಕಿದೆ. ಅದನ್ನು ಮೂಡಿಸಲು ಲೋಕಶಕ್ತಿಯನ್ನು ಎಚ್ಚರಿಸಬೇಕಿದೆ. ಈ ಲೋಕಶಕ್ತಿಯನ್ನು  ಎಚ್ಚರಗೊಳಿಸಲು ನಮಗೆ ನಮ್ಮ  ಪ್ರಾಚೀನ ಸಂಸ್ಕೃತಿಯ ಪುನರುಜ್ಜೀವನ ಮಾಡಬೇಕಿದೆ.

ಅಮುಲ್ನ ಸ್ಥಾಪಕ ವರ್ಗಿಸ್ ಕುರಿಯನ್ ತಮ್ಮ ಜೀವನಚರಿತ್ರೆಯಲ್ಲಿ:  ಕೇವಲ ಶಾಸಕೀಯ ಉಪಕ್ರಮಗಳನ್ನೇ ನಂಬಿದಲ್ಲಿ ಈ ದೇಶದಲ್ಲಿ ಮಹತ್ತರ ಕೆಲಸಗಳಾಗುವುದು ಸಾಧ್ಯವಿಲ್ಲ. ಸಮಾಜವನ್ನು ಮೇಲೆತ್ತಬೇಕು, ಅದರ ಆಧಾರದ ಮೇಲೆಯೇ ಪೂರಕ ಬದಲಾವಣೆಗಳನ್ನು ಕಾಣಬಹುದು, ಎಂದು ತಿಳಿಸುತ್ತಾರೆ.

ಇದೆಲ್ಲವನ್ನೂ ಹೇಳುವ ಉದ್ದೇಶ, ಸ್ವಸ್ಥ ಸಮಾಜಕ್ಕೆ ಆವಶ್ಯಕವಾದ ಗತಿವಿಧಿಗಳೆಲ್ಲವೂ ತನ್ನಷ್ಟಕ್ಕೆ ಘಟಿಸುತ್ತವೆ. ನಮ್ಮ ಸಮಾಜದಲ್ಲಿ ಮೇಲಿಂದಮೇಲೆ ಇಂತಹ ಪ್ರಯತ್ನಗಳ ಅವಶ್ಯಕತೆ ಬೇಕಾಗಿದೆ ಎಂದಾದರೆ ಅದರರ್ಥ ನಮ್ಮ ಸಮಾಜದಲ್ಲಿ ಕೊರತೆಗಳಿವೆ. ಆ ಕೊರತೆಗಳನ್ನು ನೀಗಿಸದೆ ಹೋದಲ್ಲಿ ನಮ್ಮ ಪ್ರಯತ್ನಗಳೆಲ್ಲವೂ ಅಪೂರ್ಣವಾಗಿಯೋ, ತಾತ್ಕಾಲಿಕವಾಗಿಯೇ ಉಳಿಯಬಹುದು. ಇದು ಸಮಾಜಕ್ಕಾಗಿ ಜೀವ ಸವೆಸಿದ ಎಲ್ಲರ ಮನದಲ್ಲಿನ ದಿಗಿಲು ಎಂದು ಡಾ.ಜೀ ಅರಿತುಕೊಂಡಿದ್ದರು. ಹಿರಿಯ ಕ್ರಾಂತಿಕಾರಿ ತ್ರಿಲೋಕನಾಥ್  ಚಕ್ರವರ್ತಿಯವರೇ ಒಂದು ಸಂದರ್ಭದಲ್ಲಿ ತಿಳಿಸಿರುವಂತೆ, 1911 ರಲ್ಲಿ ಡಾ.ಜೀ  ನನ್ನ ಮನೆಗೆ ಬಂದಿದ್ದರು. ಆಗ ನಮ್ಮ   ಸಮಾಜಕ್ಕೆ ಸ್ವಲ್ಪ ತರಬೇತಿಯ ಆವಶ್ಯಕತೆಯಿದೆ ಮತ್ತು ಆ ಕೆಲಸ ನಾನೇ ಮಾಡಬೇಕಾಗಬಹುದೇನೋ ಎಂದು ಹೇಳಿಕೊಂಡಿದ್ದರು.

ಸ್ವತಂತ್ರ ದೇಶವೊಂದಕ್ಕೆ ಬೇಕಾದ ಪ್ರಬುದ್ಧ ಸಮಾಜದ ತಯಾರಿಗೆ ಬೇಕಾದ ಅನೇಕ ಪ್ರಯೋಗಗಳನ್ನು ಅವರು ಕೈಗೊಂಡರು. ಆ ಕಾಲಕ್ಕೆ ಸಮಾಜದಲ್ಲಿದ್ದ ಅನೇಕ ಸಂಸ್ಥೆಗಳ ಕಾರ್ಯಪದ್ಧತಿ, ಪ್ರಣಾಲಿಗಳನ್ನು ಅಭ್ಯಸಿಸಿದರು. ವರ್ಧಾದಲ್ಲಿ ಅವರು ‘ರಾಷ್ಟ್ರೀಯ ಸ್ವಯಂಸೇವಕ ಮಂಡಲ್’ ಎಂಬ ಪ್ರಶಿಕ್ಷಣ ಮಂಡಲವೊಂದನ್ನೂ ನಡೆಸಿದ್ದರು. ಈ ಎಲ್ಲ ಪ್ರಯೋಗಗಳ ಮೂಲಕ ಸಮಾಜವನ್ನು ಎತ್ತಿ ನಿಲ್ಲಿಸುವ ಕ್ರಮವೊಂದನ್ನು ಅವರು ಹುಟ್ಟುಹಾಕಿದರು. 1925 ರ ವಿಜಯದಶಮಿಯ ದಿನ ಅವರು ವಿಧ್ಯುಕ್ತವಾಗಿ ತಮ್ಮ ಮೂಲಕ ಈ ಕೆಲಸ ಪ್ರಾರಂಭವಾಗುತ್ತಿದೆ ಎಂದು ಘೋಷಿಸಿದರು. ಹೀಗೆ ಅನೇಕಾನೇಕ ಪ್ರಯೋಗಗಳ ಮೂಲಕ ಕಂಡುಕೊಂಡಿರುವ ಕಾರ್ಯ ಪದ್ಧತಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಈ ಸಂಘಟನೆ ಮಾಡುವ ಕೆಲಸವೇ ವ್ಯಕ್ತಿ ನಿರ್ಮಾಣದ್ದು.

ನಮಗೆ ಇಂದಿಗೂ ಸಮತೆಯ ಸಮಾಜ ಬೇಕು. ಸ್ವಾರ್ಥರಹಿತ, ಶೋಷಣೆ ಮುಕ್ತ ಸಮಾಜ ಬೇಕು. ಆದರೆ ಬರಿಯ ಬೇಡಿಕೆಗಳಿಂದಲೇ ಸಮಾಜದಲ್ಲಿ ಬದಲಾವಣೆಗಳು ಸಾಧ್ಯವಿಲ್ಲ. ಅದಕ್ಕೆ ಬೇಕಾದ್ದು ಪ್ರತ್ಯಕ್ಷ ಉದಾಹರಣೆಗಳು. ಆದರ್ಶಗಳು. ಆದರೆ ಆದರ್ಶಗಳನ್ನು ಬೆನ್ನಟ್ಟಿ ಅದರ ಅನುಸರಣೆಗಿಳಿಯುವ ಕಾರ್ಯ ಆಗುವುದಿಲ್ಲ. ಎಂತಹ ಪರಿಸ್ಥಿತಿಯಲ್ಲಿಯೂ ಸಮಾಜದಲ್ಲಿ ಆದರ್ಶ ಆಚರಣೆಯ ಮೂಲಕ ವಿಶ್ವಾಸಾರ್ಹ ನಡವಳಿಕೆ ತೋರಬಲ್ಲ, ಅದರ ಮೂಲಕ ಸಮಾಜದ ಆಮೂಲಾಗ್ರ ಬದಲಾವಣೆಗೆ ಕಾರಣರಾಗಬಲ್ಲ ನಾಗರಿಕರ ತಯಾರಿಯೇ ಸಂಘದ ಕಾರ್ಯೋದ್ದೇಶ ಮತ್ತು ಇದನ್ನು ಮಾಡಬಲ್ಲವರೇ ಸ್ವಯಂಸೇವಕರು. ಈ ಯೋಜನೆಯೊಂದಿಗೆ ಪ್ರಾರಂಭವಾಗಿದ್ದೇ ಸಂಘ. ಇದಕ್ಕಿಂತ ಮಿಗಿಲಾದ್ದು ಅದರಲ್ಲೇನೂ ಇಲ್ಲ.

ಸಮಾಜದ ಆಚರಣೆ ಬದಲಾಗುವುದು ವ್ಯಕ್ತಿ ನಿರ್ಮಾಣದಿಂದಾಗಿ. ಆದರೆ  ದೌರ್ಭಾಗ್ಯದಿಂದ ಭಾರತದ ವೈವಿಧ್ಯಪೂರ್ಣ ಸಮಾಜದಲ್ಲಿ ಈ ವಿವಿಧತೆಗಳಿಂದಾಗಿಯೇ  ಮೇಲುಕೀಳು ಭಾವನೆಯ ಪ್ರವೇಶವಾಯಿತು. ವಿದೇಶಿಗರು ಇದರ ಲಾಭವನ್ನೇ ತೆಗೆದುಕೊಂಡಿದ್ದು. ಹಾಗಾದರೆ ಈ ಎಲ್ಲ ವಿವಿಧತೆಗಳನ್ನು ಕೂಡಿಸುವ ಸಾಮಾನ್ಯ ಅಂಶ ಯಾವುದು?

ಸೌಭಾಗ್ಯವಶಾತ್ ನಮ್ಮ ದೇಶದಲ್ಲಿನ ವಿಚಾರಗಳಿಂದ ಮೂಡಿದ ಮೌಲ್ಯಗಳೇ ಹೊರಗಿನ ವೈವಿಧ್ಯಗಳ ಹೊರತಾಗಿಯೂ ಅವುಗಳು ಮೊಳೆಯುವ ಪ್ರಸ್ಥಾನ ಬಿಂದುಗಳು ಮತ್ತು ಅವುಗಳ ಸಮಾಪ್ತಿಯಾಗುವ ಪ್ರತ್ಯಕ್ಷ ಉಪದೇಶ. ಇವೇ  ಆ ಎಲ್ಲ ವಿವಿಧತೆ, ಭೇದಗಳನ್ನು  ಒಗ್ಗೂಡಿಸುವ ಅಂಶಗಳಾಗಿವೆ. ಹೀಗಾಗಿ ಎಲ್ಲ ವಿವಿಧತೆಗಳೂ ಸತ್ಯವೇ. ಎಲ್ಲ ವಿವಿಧತೆಗಳನ್ನು ಗೌರವಿಸಿ ಎಲ್ಲರೊಡನೆ ಸೇರಿ ಬದುಕು. ಇಂತಹ ಜೀವನಕ್ಕೆ ತ್ಯಾಗದ ಭಾವವೇ ಸ್ಥಾಯಿ. ಇಲ್ಲಿ ನಮ್ಮ ಆವಶ್ಯಕತೆಗಳು ಕಡಿಮೆಗೊಳಿಸಲೇಬೇಕು ಎಂಬ  ಸಮನ್ವಯದ, ಸಂಯಮದ ಮತ್ತು  ಕೃತಜ್ಞತಾ ಭಾವದ ಮೂಲ ನಮ್ಮ ಪರಂಪರೆಗಳಲ್ಲೇ ಇದೆ.

ಸಂಘದ ಅಪೇಕ್ಷೆಯೆಂದರೆ, ಸಂಪೂರ್ಣ ದೇಶವೇ ಈ ಭಾವನೆಯನ್ನು ಹೊಂದುವಂತಾಗುವುದು. ನಮಗೆ ಇದಕ್ಕೆ ಹೊರತಾಗಿ ಇನ್ನೇನೂ ಸಾಧಿಸಲು ಇಲ್ಲ. ಸಂಘದ ಪ್ರಭಾವದಿಂದಾಗಿ ದೇಶದಲ್ಲಿ ಯಾವುದೋ ಮಹತ್ತರ ಕಾರ್ಯವಾಯಿತು ಎಂದು ಇತಿಹಾಸದಲ್ಲಿ ದಾಖಲಾದಲ್ಲಿ ಅದು ಸಂಘದ ಮಟ್ಟಿಗೆ ಅತಿ ದೊಡ್ಡ ಪರಾಜಯವಾದೀತು. ಇದಕ್ಕೆ ಹೊರತಾಗಿ, ದೇಶದ ಇತಿಹಾಸ, ದೇಶದ ವರ್ತಮಾನಗಳೆಲ್ಲ ದೇಶದ ಜನರಿಂದಾಗಿ ಆಗಬೇಕು ಎಂಬುದೇ ಸಂಘದ ಇಚ್ಛೆ.  ನಮ್ಮ ಪ್ರಾರ್ಥನೆಯಲ್ಲಿಯೂ ನಾವು ಹೇಳುವುದು ಇದನ್ನೇ ‘ವಿಜೇತ್ರೀ ಚ ನಃ ಸಂಹತಾ ಕಾರ್ಯಶಕ್ತಿರ್’ ಎಂದು. ಹೀಗೆ ಸಾಮಾನ್ಯರ ಕರ್ತೃತ್ವದಿಂದಾಗಿಯೇ ದೇಶದ ಮಹತ್ತರ ಕೆಲಸಗಳಾಗಬೇಕು ಎಂಬುದೇ ಸಂಘದ ಉದ್ದೇಶ. ಹಿಂದೂ ಸಮಾಜದ ಸಾಮೂಹಿಕ ಪ್ರಯತ್ನಗಳಿಂದ ದೇಶದ ಕಾರ್ಯಗಳು ಸಾಧ್ಯವಾಗಲಿ ಎಂಬುದೇ ಸಂಘದ ಪ್ರಯತ್ನ.

ಈ ಕಾರಣದಿಂದಾಗಿ ಸಂಘದ ಪ್ರಸಿದ್ಧಿಗೆ ನಮ್ಮಲ್ಲಿ ಯಾವುದೇ ಪ್ರಯತ್ನಗಳಾಗಲಿಲ್ಲ. ಬದಲಾಗಿ, ಮಾಡಿದ ಕೆಲಸಕ್ಕೆ ಪ್ರಸಿದ್ಧಿ ಸಿಕ್ಕಲ್ಲಿ, ಅದರಿಂದ ಇನ್ನಷ್ಟು ಜನರಿಗೆ ಸ್ಫೂರ್ತಿ ಸಿಗುವಂತಾದಲ್ಲಿ ಅದರ ಕುರಿತಾಗಿ ನಮ್ಮ ಪ್ರಯತ್ನಗಳಿವೆ. ನಮ್ಮ ಕೋಳಿ ಕೂಗಿದ್ದರಿಂದಲೇ ಸೂರ್ಯೋದಯವಾಯಿತು ಎಂಬ ಅಹಂಕಾರದ ಭಾವ ಸಂಘಕ್ಕೆ ಬೇಕಿಲ್ಲ. ಸೂರ್ಯೋದಯವಾಗುವುದಷ್ಟೇ ನಮಗೆ ಆಗಬೇಕಾಗಿರುವುದು. ಇಂತಹ ಸಾಮರ್ಥ್ಯವುಳ್ಳ ಸಮಾಜದ ತಯಾರಿಗಾಗಿಯೇ ನಾವು ಕೆಲಸ ಮಾಡುತ್ತಿರುವುದು.

ಒಳ್ಳೆಯ ಕಾರ್ಯಗಳಿಗೆ ತತ್ಪರರಾಗಿರುವ ವ್ಯಕ್ತಿ ಮತ್ತು ಸಂಸ್ಥೆಗಳೊಂದಿಗೆ ಸಮನ್ವಯದ ಆಧಾರದಲ್ಲಿ ಕೆಲಸಮಾಡುವುದೇ ಸಂಘದ ಪದ್ಧತಿ. ಇಲ್ಲಿ ನಿಯಂತ್ರಣದ ಪ್ರಶ್ನೆಯೇ ಇಲ್ಲ. ಮತ್ತೊಂದು ಪ್ರಶ್ನೆಯೆಂದರೆ ಸಂಪೂರ್ಣ ಹಿಂದೂ ಸಮಾಜದ ಸಂಘಟನೆಯಲ್ಲಿ ತೊಡಗಿರುವವರಿಗೆ ಮಹಿಳೆಯರ ಕುರಿತಾಗಿರುವ ನಿಲುವೇನು ? ಈ ಪ್ರಶ್ನೆಯನ್ನು ಸ್ವತಃ ಡಾ.ಹೆಡಗೆವಾರರಲ್ಲಿ ಓರ್ವ ಮಹಿಳೆಯೇ 1931ರಲ್ಲಿ  ಕೇಳಿದ್ದರು. ಅದಕ್ಕುತ್ತರವಾಗಿ ಡಾ.ಜೀ ಹೇಳಿದ್ದೆಂದರೆ – ಒಬ್ಬ ಮಹಿಳೆಯೇ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾದರೆ ನಮ್ಮ ಸಂಪೂರ್ಣ ಸಹಕಾರ ಈ ಕಾರ್ಯಕ್ಕೆ ಇರಲಿದೆ ಎಂದು. ಹೀಗೆ ಜನ್ಮ ತಳೆದದ್ದೆ ರಾಷ್ಟ್ರ ಸೇವಿಕಾ ಸಮಿತಿ.

ಇದುವೇ ಸಂಘದ ಕಾರ್ಯಪದ್ಧತಿಯಾಗಿದೆ. ಇದರಲ್ಲಿ ಸಂಘಕ್ಕೆ ಯಾರೂ ಹೊರಗಿನವರಲ್ಲ. ಅನ್ಯರಲ್ಲ. ನಮ್ಮ ವಿರೋಧಿಗಳೂ ನಮ್ಮವರೇ. ಈ ಭಾವವೇ ನಮ್ಮದು. ವಿರೋಧವಾಗುವುದೇ ಆದಲ್ಲಿ ವಸ್ತುಸ್ಥಿತಿಯ ಆಧಾರದ ಮೇಲಾಗಲಿ ಎಂಬುದೇ ನಮ್ಮ ನಂಬಿಕೆ.

 ಸಂಘದ ಕಾರ್ಯವನ್ನು ಹೊರಗಿನಿಂದ ನೋಡಿದ ಅನೇಕರಿಗೆ ಅದು ಆಜ್ಞೆಗಳ ಆಧಾರದಲ್ಲಿ ನಡೆಯುವ ಸರ್ವಾಧಿಕಾರಿ ಸಂಸ್ಥೆ ಎಂಬಂತೆ ಕಾಣುವುದಿದೆ. ಆದರೆ, ಸಂಘದ ಒಳಹೊಕ್ಕು ನೋಡಿದರೆ ಮಾತ್ರ ಈ ಮೊದಲು ನಾನು ಹೇಳಿದ ವಿಷಯಗಳ ದರ್ಶನ ಆಗಲು ಸಾಧ್ಯ. ಡಾ.ಹೆಡಗೆವಾರರಿಗೆ ಈ ಎಲ್ಲ ವಿಷಯಗಳ ಕಲ್ಪನೆ ಮೊದಲೇ ತಮ್ಮ ಪ್ರಯೋಗಗಳ ಮೂಲಕ ಸ್ಪಷ್ಟವಾಗಿ ತಿಳಿದಿತ್ತು. ಸಂಘದ ಸ್ಥಾಪನೆಯ ಘೋಷಣೆಯನ್ನಷ್ಟೇ ಅವರು ಮಾಡಿದ್ದು. ಅದರ ರೂಪರೇಷೆ, ಕಾರ್ಯಪದ್ಧತಿ, ಸಾತತ್ಯಗಳೆಲ್ಲ ಕಾರ್ಯಕರ್ತರ  ವಿಚಾರ -ವಿಮರ್ಶೆಗಳ ಸಹಮತಿಯ ಆಧಾರದಲ್ಲಿಯೇ  ವಿಕಸಿತಗೊಂಡಿದ್ದು. ಹೀಗೆ ಮುಕ್ತತೆಯ ಸಂಸ್ಕಾರದಿಂದಲೇ ಬೆಳೆದು ಬಂದ ಸಂಘವು ಅತ್ಯಂತ ಪ್ರಜಾತಾಂತ್ರಿಕ , ಮುಕ್ತ ಸಂಘಟನೆಯಾಗಿದೆ. ಎಲ್ಲರೂ ಮಾಡಬಲ್ಲ , ಎಲ್ಲರಿಗೂ ಇರುವ ಸಂಸ್ಥೆ ಸಂಘವಾಗಿದೆ. ಸಂಘ ಇಂದಿಗೂ ಬೆಳೆದಿರುವುದು ಭಗವಾಧ್ವಜವನ್ನು ಗುರುಸ್ಥಾನದಲ್ಲಿರಿಸಿ ಅದರ ಸಾಕ್ಷಿಯಲ್ಲಿ ನಡೆಯುವ ಸ್ವಯಂಸೇವಕರ ಸ್ವಂತ ಅರ್ಪಣೆಗಳಿಂದ. ಇದನ್ನು ಯಾವುದೇ ಬಾಹ್ಯ ಆಧಾರಗಳಿಲ್ಲದೇ ಸ್ವಯಂಸೇವಕನೇ ಪೋಷಿಸಿ, ಸ್ವಾವಲಂಬಿಯಾಗಿ  ನಡೆಸುತ್ತಾನೆ. ಹೀಗಾಗಿ ಇದರಲ್ಲಿ ಪ್ರಚಾರದ ಅವಶ್ಯಕತೆ ಕಂಡುಬರುವುದಿಲ್ಲ. ಹೀಗೆ  ಸಂಘದ ಸ್ವಯಂಸೇವಕರು ತಮಗೆ ದೊರೆತ ಸಮಾಜದ ಬಗೆಗಿನ ನಿಜವಾದ ಅಂತಃಕರಣದ ಭಾವನೆಯಿಂದಲೇ ಎಲ್ಲೇ ಅವರ ಅವಶ್ಯಕತೆ ಕಂಡುಬಂದರೂ ಮೊದಲಿಗರಾಗಿ ತಲುಪುತ್ತಾರೆ. ಇದರ ಉದಾಹರಣೆ ಕೇರಳದ ಪ್ರವಾಹದ ಸಂದರ್ಭದಲ್ಲಿ ಕಾಣಬಹುದು.

ನಮ್ಮ ಇತಿಹಾಸದ ಅವಲೋಕನೆಗೆ ತೊಡಗಿದಾಗ ಕಾಣುವ ಅಂಶವೆಂದರೆ, ಈ ಮೌಲ್ಯಗಳನ್ನು ಕಡೆಗಣಿಸಿದಾಗೆಲ್ಲ ನಮ್ಮ ಸಮಾಜವೂ ಪತನಗೊಂಡಿದೆ. ಅನುಶಾಸಿತ ಸಮಾಜವೇ ವೈಭವವನ್ನು ಹೊಂದಲು ಸಾಧ್ಯ. ಆದರೆ ಸ್ವತಂತ್ರ ದೇಶದ ನಾಗರಿಕರಾದ ನಮ್ಮಲ್ಲಿ ನಿಜಕ್ಕೂ ನಾಗರಿಕ ಪ್ರಜ್ಞೆ ಇದೆಯೇ?  ನಾಗರಿಕ ಪ್ರಜ್ಞೆಯ ಪಾಲನೆಯೇ

ದಿನನಿತ್ಯದ ಜೀವನದಲ್ಲಿ ದೇಶಭಕ್ತಿಯ ಆವಿಷ್ಕಾರವಾಗಿದೆ. ದೇಶಕ್ಕಾಗಿ  ನಾವೇನೂ ಸಾಯಬೇಕಿಲ್ಲ, ಆದರೆ ಕ್ಷಣಕ್ಷಣಕ್ಕೂ ಬದುಕಬೇಕು. ಈ ಭಾವನೆಯ ಕಾರ್ಯಾಚರಣೆಗೆ ಎಳಸುವ ಪದ್ಧತಿಯೇ ಸಂಘದ ಕಾರ್ಯವಾಗಿದೆ.

ಭಾರತೀಯ ದರ್ಶನಗಳು ಬಾಹ್ಯ ವಿಚಾರದಲ್ಲಿ ಪರಸ್ಪರರ ಖಂಡನೆ – ಮಂಡನೆಗಳಲ್ಲಿ ತೊಡಗಿರಬಹುದು. ಆದರೆ ತಥಾಗತನ ಕಥನ ’ಕುಸಲಸ್ಯ ಉಪಸಂಪದ’ ಎಂಬಂತೆ, ಮತ್ತೊಬ್ಬರನ್ನು ನೋಯಿಸುವ ಪಾಪ ಮಾಡುವಂತಿಲ್ಲ. ಇನ್ನೊಬ್ಬರ ಕುರಿತಾಗಿ ಒಳ್ಳೆಯ ಭಾವನೆಯುಳ್ಳವನಾಗು. ನೀನು ಬದುಕು ಇನ್ನೊಬ್ಬರನ್ನೂ ಬದುಕಲು ಬಿಡು, ಇದೇ  ನಮ್ಮನ್ನು ಜೋಡಿಸುವ ಭಾಷೆ. ಪರಂಪರಾಗತವಾಗಿ ನಮ್ಮ ದೇಶದ ಎಲ್ಲ ದರ್ಶನಗಳ ಕಲಿಕೆ ಇದೇ ಆಗಿದೆ. ಈ ದೇಶದ್ದಲ್ಲದ  ಕ್ರಿಸ್ತ, ಇಸ್ಲಾಂ ಮತಗಳ ಭಾರತೀಯ ಪರಿವಾರಗಳಲ್ಲಿಯೂ  ಇಂದಿಗೂ  ಇರುವುದು ಇದೇ  ಭಾವ. ಇದೇ ನಮ್ಮನ್ನು ಜೋಡಿಸುವ ಮೌಲ್ಯಾಧಾರಿತ ಸಂಸ್ಕೃತಿಯಾಗಿದೆ.

ಎರಡನೆಯ ದಿನದ ಉಪನ್ಯಾಸಕ್ಕಾಗಿ ಇಲ್ಲಿ ನೋಡಿ
ಮೂರನೆಯ ದಿನದ ಉಪನ್ಯಾಸಕ್ಕಾಗಿ ಇಲ್ಲಿ ನೋಡಿ
ಸಂಪೂರ್ಣ ಕಾರ್ಯಕ್ರಮದ ವಿಡಿಯೋಗಾಗಿ ಇಲ್ಲಿ ನೋಡಿ

ಕೃಪೆ : ವಿಕ್ರಮ ವಾರಪತ್ರಿಕೆ

Mohan Bhagwat addressing on ‘Future of Bharat’ at New Delhi

Leave a Reply

Your email address will not be published.

This site uses Akismet to reduce spam. Learn how your comment data is processed.