Dr Siddalingaiah addressing on Dalit issues at Mythic Society

ಬೆಂಗಳೂರು ೦6-೦7-2014: ’ದಲಿತರು ಏಳಿಗೆ ಹೊಂದುವುದರಲ್ಲಿ ಮಾನವೀಯ ಕಾಳಜಿ ಹೊಂದಿರುವ ಮೇಲ್ವರ್ಗದವರ ಪ್ರಯತ್ನ ಅತ್ಯಮೂಲ್ಯವಾಗಿದೆ. ದಲಿತರಲ್ಲಿ ದಲಿತೇತರ ಹಿಂದೂ ಸಮಾಜ ಸುಧಾರಕರ ಬಗ್ಗೆ ಗೌರವವನ್ನು ಬೆಳೆಸಬೇಕಾಗಿದೆ. ಅವರ ಪ್ರಯತ್ನಗಳನ್ನು ಎಂದೂ ಮರೆಯಬಾರದು’ ಎಂದು ಹಿರಿಯ ಕವಿ, ಚಿಂತಕ ಡಾ. ಸಿದ್ದಲಿಂಗಯ್ಯ ಅಭಿಪ್ರಾಯ ಪಟ್ಟರು. ನಗರದ ಮಿಥಿಕ್ ಸೊಸೈಟಿಯ ಆಶ್ರಯದಲ್ಲಿ ದಲಿತಗುರು ದಿ. ಶ್ರೀ ತಲಕಾಡು ರಂಗೇಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದಲಿತ ಸಮಸ್ಯೆಯ ಹೊಸ ಆಯಾಮಗಳು ಎನ್ನುವ ವಿಷಯವನ್ನು ಕುರಿತು ಅವರು ಉಪನ್ಯಾಸ ನೀಡಿದರು.

Dr Siddalingaiah addressing on Dalit issues at Mythic Society
Dr Siddalingaiah addressing on Dalit issues at Mythic Society

’ಆರ್ಯಸಮಾಜ ಥಿಯೋಸೋಫಿಕಲ್ ಸೊಸೈಟಿ, ರಾಮಕೃಷ್ಣ ಆಶ್ರಮ ಮೊದಲಾದ ದಲಿತೇತರ ಸಂಘ ಸಂಸ್ಥೆಗಳು, ಮಹಾತ್ಮಾ ಗಾಂಧಿ, ಜ್ಯೋತಿಬಾ ಫುಲೆಯವರರತಹ ಮೇಲ್ವರ್ಗದ ಹಿಂದೂ ಸಮಾಜ ಸುಧಾರಕರ ಪ್ರಯತ್ನದಿಂದ ಅನೇಕ ದಲಿತರು ಜೀವನದಲ್ಲಿ ಮುಂದೆಬಂದರು. ಕರ್ನಾಟಕದಲ್ಲೂ ಗೋಪಾಲಸ್ವಾಮಿ ಐಯ್ಯರ್ರವರು, ವರದರಾಜ ಅಯ್ಯಂಗಾರರು ಮುಂತಾದವರು ದಲಿತರ ಸುಧಾರಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ’ ಎಂದು ನುಡಿದ ಸಿದ್ದಲಿಂಗಯ್ಯನವರು, ಗೋಪಾಲಸ್ವಾಮಿ ಐಯ್ಯರ್ರವರು ಬೆಂಗಳೂರಿನಲ್ಲಿ ದಲಿತ ವಿದ್ಯಾರ್ಥಿಗಳ ವಸತಿ ಸಮಸ್ಯೆಯನ್ನು ಸರ್ ಸಿ ವಿ ರಾಮನ್ರಲ್ಲಿ ಪ್ರಸ್ತಾಪಿಸಿದಾಗ ರಾಮನ್ರವರು ದಲಿತ ವಿದ್ಯಾರ್ಥಿಗಳ ಹಾಸ್ಟೆಲ್ಗಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟ ಘಟನೆಯನ್ನು ಸ್ಮರಿಸಿದರು.
ದಲಿತಗುರುವೆಂದೇ ಹೆಸರಾದ ದಿ. ಟಿ ರಂಗೇಗೌಡರು ದಲಿತರ ಶಾಲೆಗೆ ಉಪಾಧ್ಯಾಯರಾಗಿ ಬಂದು ಅನೇಕ ದಲಿತ ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆಗೆ ಕಾರಣರಾಗಿದ್ದನ್ನೂ, ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಹಾಗೆಯೇ ಅವರಿಂದ ಕಲಿತ ವಿದ್ಯಾರ್ಥಿಗಳು ನೀಡಿ ಗೌರವಿಸಿದ ಬಿನ್ನವತ್ತಳೆಯ ಸಾಲುಗಳನ್ನು ವಾಚಿಸುತ್ತ ರಂಗೇಗೌಡರ ಬಗ್ಗೆ ಇರುವ ಗೌರವಾಭಿಮಾನವನ್ನು ಉಲ್ಲೇಖಿಸಿದರು.
’ಗಾಂಧೀಜಿಯವರಿಗೆ ಹರಿಜನರ ಬಗ್ಗೆ ಕಾಳಜಿಯಿದ್ದರೂ ಬ್ರಿಟಿಷರನ್ನು ಭಾರತದಿಂದ ಓಡಿಸಿ ಸ್ವಾತಂತ್ರ್ಯ ಗಳಿಸುವುದೇ ಅವರ ಮೊದಲ ಗುರಿಯಾಗಿದ್ದರಿಂದ ಅಸ್ಪೃಷ್ಯತೆ ನಿವಾರಣೆ, ದಲಿತೋದ್ಧಾರ ಅವರ ಪ್ರಾಥಮಿಕ ಆದ್ಯತೆಯಾಗಿರಲಿಲ್ಲ. ಆದರೆ ಅಂಬೇಡ್ಕರ್ರವರೊಂದಿಗಿನ ಸಂವಾದದ ನಂತರ ದಲಿತೋದ್ಧಾರದ ಬಗ್ಗೆ ಗಾಂಧಿಜಿಯವರ ಕಾಳಜಿ ಹೆಚ್ಚಾಯಿತು. ಪೂನಾ ಒಪ್ಪಂದದ ಸಂಧರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವ ವಿಷಯದಲ್ಲಿ ಗಾಂಧೀಜಿಯವರು ಉಪವಾಸಕ್ಕೆ ಕುಳಿತಾಗ, ದಲಿತರ ಹಿತ ಮತ್ತು ದೇಶದ ಹಿತದ ಪ್ರಶ್ನೆ ಬಂದಾಗ ಅಂಬೇಡ್ಕರ್ರವರು ದೇಶದ ಹಿತವನ್ನು ಆಯ್ದುಕೊಂಡು ಒಪ್ಪಂದಕ್ಕೆ ಒಪ್ಪಿದರು. ಪ್ರತ್ಯೇಕ ಮತಾಧಿಕಾರವನ್ನು ಕೈಬಿಟ್ಟರು. ಆದರೆ ದುರದೃಷ್ಟದಿಂದ ಇಂದಿನ ದಲಿತರ ರಾಜಕಾರಣವೆಂದರೆ ಮೇಲ್ವರ್ಗದ ರಾಜಕಾರಣಿಗಳನ್ನು ಓಲೈಸುವುದೇ ಆಗಿದೆ. ಅಂಬೇಡ್ಕರ್ರಂತವರೇ ಕಾಂಗ್ರೆಸ್ ನಿಲ್ಲಿಸಿದ ಅನಕರಸ್ಥ ಅಭ್ಯರ್ಥಿಯ ವಿರುದ್ಧ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತಾಯಿತು. ಕರ್ನಾಟಕದಲ್ಲೂ ಆರ್ ಭರಣಯ್ಯನವರು, ಎಲ್ ಶಿವಲಿಂಗಯ್ಯನವರು, ಎನ್ ಸಿ ಬಡಿಗೇರಿಯಂತಹ ಮಹನೀಯರೂ ಚುನಾವಣೆಗಳಲ್ಲಿ ಸೋಲುಂಡರು. ಏಕೆಂದರೆ ಇಂದಿಗೂ ದಲಿತ ಮೀಸಲು ಕ್ಷೇತ್ರಗಳಲ್ಲೂ ಮೇಲ್ವರ್ಗದವರೇ ನಿರ್ಣಾಯಕವಾಗಿದ್ದಾರೆ. ಆದ್ದರಿಂದ ದಲಿತರಿಗೆ ಸ್ವತಂತ್ರವಾಗಿ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಈಗಲೂ ಏಕೆ ಹೀಗೆ ಆಗುತ್ತಿದೆಯೆಂದರೆ ಬಹುಶಃ ಗಾಂಧೀಜಿ ಮತ್ತು ಅಂಬೇಡ್ಕರ್ರವರು ಅಂದುಕೊಂಡ ರೀತಿಯಲ್ಲಿ ಸಮಾಜ ಸುಧಾರಣೆಯಾಗಿಲ್ಲ ಅನ್ನಿಸುತ್ತದೆ’ ಎಂದು ಅವರು ನುಡಿದರು.

IMG_4750
’ಇಂದು ಸಮಾಜದಲ್ಲಿ ಎರಡು ತರಹದ ಗುಂಪನ್ನು ಕಾಣುತ್ತೇವೆ. ಒಂದು ಗುಂಪು ಜಾತೀಯತೆ ಅಸ್ಪೃಷ್ಯತೆಯನ್ನು ಪಾಲಿಸುತ್ತ ಇನ್ನೂ ಮೌಢ್ಯ ಆಚರಣೆಗಳನ್ನೇ ಮುಂದುವರಿಸುತ್ತಿದೆ. ಇನ್ನೊಂದು ಗುಂಪು ವೇದ ಉಪನಿಷತ್ತುಗಳ ಕಾಲದಿಂದಲೂ ಸಮಾನತೆ ಮಾನವೀಯ ಕಾಳಜಿಗಳನ್ನು ಪೋಷಿಸುತ್ತ ಬಂದಿದೆ. ಇತ್ತೀಚೆಗೆ ದಲಿತರ ಶಿಕ್ಷಣ ಮಟ್ಟದಲ್ಲಿ ಸುಧಾರಣೆಯಾಗಿದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ವರ್ಗದವರಿಗಿಂತ ದಲಿತರೇ ಹೆಚ್ಚು ಶಿಕ್ಷಣವಂತರಾಗುತ್ತಿರುವುದನ್ನು ಕಾಣಬಹುದು. ಇದರಲ್ಲಿ ಮೇಲ್ವರ್ಗದ ಸುಧಾರಕರ ಪ್ರಾಮಾಣಿಕ ಪ್ರಯತ್ನವನ್ನು ಮರೆಯುವಂತಿಲ್ಲ. ಆದ್ದರಿಂದ ಮೇಲ್ವರ್ಗದವರೆಲ್ಲ ಕೆಟ್ಟವರು ದಲಿತರೆಲ್ಲ ಒಳ್ಳೆಯವರು ಎಂದು ನಿರ್ಣಯಿಸಲಾಗುವುದಿಲ್ಲ. ಅವರವರ ಹಿನ್ನೆಲೆ, ಸಾಮಾಜಿಕ ಸನ್ನಿವೇಶ, ಸಂಸ್ಕಾರಗಳಿಗನುಗುಣವಾಗಿ ಅವರವರ ವಿಚಾರಗಳು ಬದಲಾಗುತ್ತವೆ. ದಲಿತರ ಸಮಸ್ಯೆಯು ತುಂಬ ಸಂಕೀರ್ಣವಾಗಿದ್ದು ದಲಿರಿಂದ ಮಾತ್ರ ಅವರ ಉದ್ಧಾರ ಸಾಧ್ಯವಿಲ್ಲ. ದಲಿತೇತರರಲ್ಲಿ ಸುಧಾರಣೆಯ ಮಾನಸಿಕತೆ ಹೆಚ್ಚು ಹೆಚ್ಚು ಬೆಳೆದಷ್ಟು ಜಾತೀಯತೆ, ಅಸ್ಪೃಷ್ಯತೆಯಂತಹ ಸಮಸ್ಯೆಗಳು ತೊಲಗುತ್ತವೆ, ದಲಿತರಲ್ಲಿ ಶಿಕ್ಷಣದ ಮಟ್ಟ ಹೆಚ್ಚುತ್ತದೆ, ಸಮಾಜ ಸುಧಾರಣೆಯಾಗುತ್ತದೆ. ಜೊತೆಗೆ ದಲಿತರಲ್ಲೂ ಕೂಡ ನಾವು ಕೀಳು, ಅಸ್ಪೃಷ್ಯರು ಎನ್ನುವುದನ್ನು ಒಪ್ಪದಿರುವ ಭಾವ ಬೆಳಯಬೇಕು, ನಾವು ಸಮಾನರು ಎನ್ನುವ ಮಾನಸಿಕತೆ ಜಾಗೃತವಾಗಬೇಕು. ದಲಿತ ಜಾಗೃತಿಯೆಂದರೆ ಮೇಲ್ವರ್ಗದವರ ದ್ವೇಷವಲ್ಲ. ದಲಿತರ ಬಗ್ಗೆ ಮಾನವೀಯ ಕಾಳಜಿಯ ಜಾಗೃತಿ. ದಲಿತ ಸುಧಾರಣೆಯಲ್ಲಿ ಮೇಲ್ವರ್ಗದವರು ಮಾಡಿದ ಕಾರ್ಯಗಳಿಗೆ ನಮ್ಮ ನಮನ ಸದಾ ಇರಲಿ.’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಆರೆಸ್ಸೆಸ್ ಪ್ರಚಾರಕರೂ, ಸಾಹಿತಿಗಳೂ ಚಿಂತಕರೂ ಆದ ಚಂದ್ರಶೇಖರ ಭಂಡಾರಿಯವರು ’ಸ್ವಾತಂತ್ರ್ಯಾನಂತರ ಇದವರೆಗೂ ಸಮಾಜದಲ್ಲಿ ದಲಿತರ ವಿಷಯದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಸಂವಿಧಾನ ನೀಡಿರುವ ಹಕ್ಕು ಮೀಸಲಾತಿಯಂತಹ ಕಾರ್ಯಕ್ರಮಗಳಿಂದ ದಲಿತರ ಉನ್ನತಿ ಸಾಧ್ಯವಾಗಿದೆ. ಒಂದು ರೀತಿಯಲ್ಲಿ ಈಗ ಅರ್ಧ ಸುಧಾರಣೆಯಾಗಿದೆ ಎನ್ನಬಹುದು’ ಎಂದು ನುಡಿದರು.
’ಸಮಾಜದ ಜಾಗೃತಿಯ ಜೊತೆಗೆ ದಲಿತರಲ್ಲಿ ಆತ್ಮಗೌರವವೂ ಬೆಳೆಯಬೇಕು. ಸರ್ಕಾರ ಸಮಾಜ ನೀಡುವ ಸೌಲಭ್ಯಗಳು ನಡೆಯುತ್ತ ಇರಲಿ, ಆದರೆ ಈ ಸೌಲಭ್ಯಗಳ ಅಗತ್ಯ ನಮಗಿಲ್ಲ ಎಂದು ಹೇಳುವ ಸಾಮರ್ಥ್ಯ ದಲಿತರಲ್ಲಿ ಬೆಳೆಯಬೇಕು. ತಾತ್ಕಾಲಿಕವೆಂದು ನೀಡಲಾಗಿದ್ದ ಮೀಸಲಾತಿಯಂತಹ ಸೌಲಭ್ಯ ನಮಗೆ ಬೇಡ ಎಂದು ಹೇಳುವ ಧೈರ್ಯ ಬೆಳೆಯಬೇಕು. ನಾವು ಎಂದಿಗೂ ದಲಿತರಾಗಿಯೇ ಇರುತ್ತೇವೆ ಎನ್ನುವ ಮಾನಸಿಕತೆಯಿಂದ ದಲಿತರು ಹೊರಬರಬೇಕು. ನಮ್ಮ ಕಾಲ ಮೇಲೆ ನಾವು ನಿಲ್ಲಬಲ್ಲೆವೆನ್ನುವ ಅಭಿಮಾನ ದಲಿತರಲ್ಲಿ ಜಾಗೃತವಾಗಬೇಕು. ಆಗ ಸಮಸ್ಯೆಯ ಪರಿಹಾರ ಸಾಧ್ಯ. ಪ್ರಯತ್ನ ಎರಡೂ ಕಡೆಯಿಂದ ನಡೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

IMG_4721
ಕಾರ್ಯಕ್ರಮದ ಪ್ರಾರಂಭದಲ್ಲಿ ತಮ್ಮ ಅನುವಾದ, ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೃತಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ ಭಂಡಾರಿಯವರನ್ನು ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ಮಾಜಿ ಸಚಿವ ಲೇಖಕ ಡಾ. ಮಮ್ತಾಜ್ ಅಲೀ ಖಾನರು ರಚಿಸಿರುವ ದಲಿತರು ಅಂದು ಮತ್ತು ಇಂದು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಸ್ವಾಗತಿಸುತ್ತ ಪ್ರಾಸ್ತಾವಿಕ ನುಡಿಗಳನ್ನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ವಿ. ನಾಗರಾಜರವರು ದಿ ಟಿ ರಂಗೇಗೌಡರ ಕಾರ್ಯಗಳನ್ನು ಸ್ಮರಿಸಿದರು.
ಮಿಥಿಕ್ ಸೊಸೈಟಿಯ ಅಧ್ಯಕ್ಷರಾದ ಎಮ್ಎಲ್ಎನ್ಕೆ ಶಾಸ್ತ್ರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಎಮ್ ಜಿ ನಾಗರಾಜರವರು ವಂದಿಸಿದರು.

DSCN0066a

 

Report by Satyanarayana Shanubhag for VSK Karnataka

 

Leave a Reply

Your email address will not be published.

This site uses Akismet to reduce spam. Learn how your comment data is processed.