ಅಜಿತ್‌ ಶೆಟ್ಟಿ ಹೆರಂಜೆ, ಸಹ ಸಂಪಾದಕರು, ಧ್ಯೇಯಕಮಲ ಮಾಸಿಕ

“ನಾನು ಅಧಿಕಾರದಲ್ಲಿ ಇರುವುದಕ್ಕಿಂತ ಅಧಿಕಾರದಲ್ಲಿ ಇಲ್ಲದೇ ಇದ್ದರೇ ನಿಮಗೆ ಹೆಚ್ಚು ಅಪಾಯಕಾರಿ, ಇಡಿ ಪಾಕಿಸ್ತಾವನ್ನು ಬೀದಿಗೆ ತಂದು ನಿಲ್ಲಿಸುತ್ತೇನೆ”, ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ತಮ್ಮ ಅಧಿಕಾರ ಕಳೆದುಕೊಳ್ಳುವ ಸಂದರ್ಭದಲ್ಲಿ ಹೇಳಿದ್ದರು. ನಂತರ ಅವರು ಅಧಿಕಾರವನ್ನ ತ್ಯಜಿಸಿದ ಮೇಲೆ ಮಾಡಿದ್ದು ಅದನ್ನೆ. ರಾಹುಲ್‌ ಗಾಂಧಿಯವರ ಭಾರತ ಜೋಡೋ (ತೊಡೋ) ಯಾತ್ರೆ ಈಗ ಸಾಗುತ್ತಿರುವ ವೈಖರಿ ನೋಡಿದರೆ ಪಾಕಿಸ್ತಾನದ ಇಮ್ರಾನ್‌ ಖಾನ್‌ ತಮ್ಮ ದೇಶದಲ್ಲಿ ಯಾವುದನ್ನ ಹೇಳಿ ಮಾಡುತ್ತಿದ್ದಾರೋ ರಾಹುಲ್‌ ಗಾಂಧಿ ಅದನ್ನ ಹೇಳದೇ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ, ಇವರಿಬ್ಬರ ಮಾನಸಿಕತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ . ಭಾರತದ ರಾಜಕಾರಣದಲ್ಲಿ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಈಗ ಅಳಿವು, ಉಳಿವಿನ ಪರಿಸ್ಥಿತಿ. ಅವರಿಗೆ ದೇಶದ ರಾಜಕಾರಣದಲ್ಲಿ ತನ್ನ ಅಸ್ತಿತ್ವವನ್ನ ಕಾಪಾಡಿಕೊಳ್ಳಲೇ ಬೇಕಾಗಿದೆ. ಈ ಮೂರು ಪ್ರಮುಖ ಕಾರಣಗಳಿಗೆ ಕಳೆದ ೮ ವರ್ಷಗಳಿಂದ ಕಾಂಗ್ರೆಸ್‌ ಮತ್ತು ಅದರ ದುಷ್ಟಕೂಟಗಳು ಈ ದೇಶದಲ್ಲಿ ಮಾಡುತ್ತಿರುವ  ಹೋರಾಟಗಳನ್ನ ಕೂಲಂಕುಶವಾಗಿ ಗಮನಿಸಬಹುದಾದ ಅದರ ಒಳಸುಳಿಗಳನ್ನು  ಸೂಕ್ಷ್ಮವಾಗಿ ನೋಡಿದಾಗ ತಿಳಿಯುತ್ತದೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕೇವಲ ಭಾರತದೊಳಗಿನ ಸ್ವಾತಂತ್ರ್ಯ ಹೋರಾಟದಿಂದ ಮಾತ್ರವಲ್ಲ. ಇದರ ಜೊತಗೆ ಆ ಕಾಲದ ಜಾಗತಿಕ ವಿದ್ಯಮಾನಗಳೂ ಕೂಡ ಕಾರಣವಾಗಿದ್ದವು. ಇದೇ ಕಾರಣಕ್ಕೆ ೧೯೪೦ರ ದಶಕದಲ್ಲೆ ಭಾರತ ಸೇರಿದಂತೆ ೪೦ ಕ್ಕೂ ಹೆಚ್ಚು ದೇಶಗಳಿಗೆ ಬ್ರಿಟೀಷರ ದಾಸ್ಯದಿಂದ ಮುಕ್ತಿ ಸಿಕ್ಕಿತ್ತು. ಹಾಗೆ ಬಿಟ್ಟು ಹೋಗುವುದು ಅವರಿಗೆ ಅನಿವಾರ್ಯ ಎಂದು ಗೊತ್ತಾದಾಗ, ಅವರ ಹಿತ ಕಾಯುವ ಒಂದಷ್ಟು ವ್ಯವಸ್ಥೆಗಳನ್ನು ಪ್ರತಿಷ್ಠಾಪಿಸಿ ಹೋಗಿದ್ದಾರೆ.

ಬ್ರಿಟೀಷರ ಜೊತೆಗೆ ಬಹಳಷ್ಟು ಪರಕೀಯರು ಭಾರತವನ್ನ ಶತಮಾನಗಳ ಕಾಲ ಆಳಿದ್ದಾರೆ. ಆದರೆ ಅವರೆಲ್ಲರಿಗಿಂತ ಬ್ರಿಟೀಷ್‌ ಆಳ್ವಿಕೆ ಭಿನ್ನವಾಗಿ ನಿಲ್ಲುತ್ತದೆ. ಭಾರತವನ್ನ ಆಳಿದ್ದ ಅಷ್ಟೂ ವಿದೇಶಿಯರಿಗೆ ಭಾರತದ ಸಂಪತ್ತನ್ನಕೊಳ್ಳ ಹೊಡೆಯುವುದಷ್ಟೇ ಉದ್ದೇಶವಿತ್ತು.  ತುರ್ಕರಿಗೆ  ಸಂಪತ್ತಿನ ಜೊತೆಗೆ ಮತಾಂತರದ ಬಗ್ಗೆಯೋ ಆಸಕ್ತಿ ಇತ್ತು. ಆದರೆ ಏಕ ದೇವೋಪಾಸಕರಾಗಿದ್ದ ತುರ್ಕರಿಗೆ ಭಾರತದ ಬಹುತ್ವದ ಸಾಮಾಜಿಕ ಸಂರಚನೆಯನ್ನ ಭೇದಿಸಿ ಮತಾಂತರ ಮಾಡುವುದು ಕಷ್ಟವಾಯಿತು.

ವ್ಯಾಪಾರಕ್ಕೆ ಬಂದ ಬ್ರಿಟೀಷರು ನಿಧಾನಕ್ಕೆ ಭಾರತದ ರಾಜಕೀಯದಲ್ಲಿ ಕೈ ಆಡಿಸಿ ಭಾರತದ ಮೇಲೆ ಪ್ರಭುತ್ವ ಸಾಧಿಸಿದರು. ವಾಸ್ತವಾಗಿ ತನ್ನ ದೇಶಕ್ಕಿಂತ ಹತ್ತು ಪಟ್ಟು ದೊಡ್ಡದಾಗಿದ್ದ ಹತ್ತು ಪಟ್ಟು ಸಿರಿವಂತವಾಗಿದ್ದ ದೇಶದ ಮೇಲೆ ಆಳ್ವಿಕೆ ನಡೆಸುವಾಗ ಅವರಿಗೋ ಒಂದು ಕೀಳರಿಮ ಇದ್ದೇ ಇತ್ತು. ಭೌತಿಕವಾಗಿ ತಮ್ಮ ಅಧೀನದಲ್ಲಿದ್ದ ದೇಶವನ್ನು ಬೌದ್ದಿಕವಾಗಿಯೂ ತಮ್ಮ ಗುಲಾಮರನ್ನಾಗಿ ಮಾಡಬೇಕು ಎನ್ನುವ ಕಾರಣಕ್ಕೆ ಭಾರತದ ಸಾಮಾಜಿಕ ಸಂರಚನೆಯ ವೈಜ್ಞಾನಿಕ ಅಧ್ಯಯನ ಮಾಡಿದರು. ಅದಕ್ಕಾಗಿ ಹಿಂಡುಗಟ್ಟಲೆ ಪಾಶ್ಟಾತ್ಯ ಇತಿಹಾಸಕಾರರು, ಚಿಂತಕರು ಭಾರತದ ಕಲೆ, ಸಂಸ್ಕೃತಿ, ಭಾಷೆ, ಸಾಹಿತ್ಯಗಳ ಅಧ್ಯಯನ ನಡೆಸಿದರು. ಭಾರತವನ್ನ ಸಂಪೂರ್ಣವಾಗಿ ತಿಳಿಯವ ಪ್ರಯತ್ನ ಮಾಡಿದರು, ಅದರಲ್ಲಿ ಯಶಸ್ಸನ್ನೂ ಸಾಧಿಸದರು. ಯಾವ ಬಹುತ್ವ ಭಾರತದ ಶಕ್ತಿಯಾಗಿತ್ತೋ ಅದೇ ಬಹುತ್ವವನ್ನ ಭಾರತದ  ದೌರ್ಬಲ್ಯವನ್ನಾಗಿಸುವ ಕೆಲಸ ಮಾಡಿದರು. ಭಾರತದ ಸಮಾಜದ ಒಳಸುಳಿಗಳ ಅಧ್ಯಯನವನ್ನು ಮಾಡಿ ಪಾಶ್ಚಾತ್ಯ ಸಮಾಜ ಶಾಸ್ತ್ರದ ಪಂಡಿತರು, ಭಾರತದ ಶೈಕ್ಷಣಿಕ ವ್ಯವಸ್ಥೆ, ಕೌಟುಂಬಿಕ ರಚನೆ, ಜಾತಿ ವ್ಯವಸ್ಥೆ, ಬಹುದೇವತಾರಾಧನೆ ಇವುಗಳನ್ನು ಅಧ್ಯಯನ ಮಾಡಿ. ಈ ಅಧ್ಯಯನದಲ್ಲಿ ಸಿಕ್ಕ ಮಾಹಿತಿಗಳನ್ನ ಮಾನದಂಡವಾಗಿಸಿಕೊಂಡು ಭಾರತದ ಜನಗಣತಿ ಮಾಡುತ್ತಾರೆ, ಆ ಮೂಲಕ ತಮ್ಮ ಒಡೆದು ಆಳುವ ನೀತಿಯನ್ನ ಜಾರಿಗೆ ತರುತ್ತಾರೆ, ಸಮಾಜವನ್ನ ಒಂದು ಪ್ರಯೋಗಾಲಯ ಎಂದೇ ನಂಬಿರುವ ಇವರು, ಇವರೇ ಒಳಗೊಳ್ಳದ ಸಮಾಜದೊಳಗೆ ಇವರು ಕಲೆ ಹಾಕಿದ ಮಾಹಿತಿಗಳನ್ನ ಬಳಸಿಕೊಂಡು ಸಾಮಾಜಿಕ ಪ್ರಯೋಗಗಳನ್ನ ಮಾಡುತ್ತಾರೆ. ಒಂದು ಹಂತದಲ್ಲಿ ಭಾರತೀಯರು ಇವರಿಗೆ ಪ್ರಯೋಗಾಲಯದಲ್ಲಿ ಬಳಸಿಕೊಳ್ಳುವ ಇಲಿಮರಿಗಳಾದರು. ಈ ಕಾರಣಕ್ಕೆ ಮೆಕಾಲೆ ಶಿಕ್ಷಣ ಪದ್ದತಿಯನ್ನು ತರುತ್ತಾರೆ. ಅಲ್ಲಿಂದಲೇ ಭಾರತದ ಇತಿಹಾಸದಲ್ಲಿ ಮೊದಲಬಾರಿಗೆ ಜಾತಿಯ ಕಾರಣಕ್ಕೆ, ಭಾಷೆಯ ಕಾರಣಕ್ಕೆ, ಪ್ರಾದೇಶಿಕತೆಯ ಕಾರಣಕ್ಕೆ ಜಗಳಗಳು ಹುಟ್ಟಿದವು, ಒಡಕುಗಳು ಹೆಚ್ಚಾದವು, ಭಾರತದ ಸಂಸ್ಕ್ರತಿ ಪರಂಪರೆ ಗಳ ಬಗ್ಗೆ ಕೀಳರಿಮೆ ಹುಟ್ಟಿಸುವಂತ ಮಾನಸಿಕತೆ ಭಾರತೀಯರಲ್ಲಿ ಬೆಳಸುವ ಕೆಲಸ ಮಾಡತೊಡಗಿದರು. ಭಾರತಕ್ಕೆ ಭೌತಿಕ ಸ್ವಾತಂತ್ರ್ಯ ಕೊಟ್ಟ ಬ್ರಿಟೀಷರು ಬೌದ್ದಿಕವಾಗಿ ಭಾರತವನ್ನು ದಾಸ್ಯದಲ್ಲೆ ಇಡುವ ಕೆಲಸದ ಹೊಣೆಯನ್ನ ನೆಹರೂ ತಲೆಗೆ ಕಟ್ಟಿ ಹೋದರು. ಎಲ್ಲಿಯ ತನಕ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತೋ ಅಲ್ಲಿಯ ತನಕ ಭಾರತವನ್ನು ಬೌದ್ಧಿಕ ದಾಸ್ಯದಲ್ಲಿ ಇಡಲು ಬೇಕಾದ ಅಷ್ಟೂ ವ್ಯವಸ್ಥೆಗಳನ್ನ ಕಾಂಗ್ರೆಸ್, ಕಮ್ಯುನಿಷ್ಟ್‌ ಮತ್ತು ನಗರ ನಕ್ಸಲರು ಮಾಡುತ್ತಲೇ ಬಂದರು. ೨೦೧೪ರಿಂದ ದೇಶದಲ್ಲಾದ ರಾಜಕೀಯ ಸ್ಥಿತ್ಯಂತರ, ೧೯೪೭ರ ನಂತರ ಭಾರತವನ್ನು ಬೌದ್ದಿಕವಾಗಿ ದಾಸ್ಯದಲ್ಲಿ ಇಡುವ ಇವರ ನಿರಂತರವಾದ ಪ್ರಕ್ರಿಯೆಗೆ ಬಿದ್ದ ಮೊದಲ ಕೊಡಲಿಯೇಟು. ಆ ವ್ಯವಸ್ಥೆಯನ್ನು ಭಾರತದಲ್ಲಿ ಮರು ಸ್ಥಾಪನೆ ಮಾಡಬೇಕಾದರೆ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಆ ಕಾರಣಕ್ಕಾಗಿ ಈ ಭಾರತ ಜೊಡೋ ಎಂಬ ಮುಖವಾಡ ಹೊತ್ತ ತಿಣುಕಾಟ.

ಕಾಂಗ್ರೆಸ್‌ ಪಕ್ಷ ತನ್ನ ಕಳೆದ ೬೫ ವರ್ಷಗಳ ಆಳ್ವಿಕೆಯಲ್ಲಿ, ಜೀಪ್‌ ಸ್ಕ್ಯಾಮ್‌, ಬೋಫೋರ್ಸ್‌ ಸ್ಕ್ಯಾಮ್,  ಅಗಸ್ಟಾ ವೆಸ್ಟ್ ಲ್ಯಾಂಡ್‌ ಹಗರಣ,  ಸ್ಕಾರ್ಪಿಯಾನ್‌ ಸಬಮರೀನ್‌ ಹಗರಣ, ಕಾಮನ್‌ ವೆಲ್ತ್‌ ಹಗರಣ, ಮಹಾರಾಷ್ಟ್ರ ನೀರಾವರಿ ಹಗರಣ, ಕಲ್ಲಿದ್ದಿಲು ಹಗರಣ, ನ್ಯಾಶನಲ್‌  ಹೆರಾಲ್ಡ್ ಹಗರಣಗಳಂತಹ ಹಗರಣಗಳ ಮುಖಾಂತರ ದೇಶದ ಸುಮಾರು  ೫ ಲಕ್ಷ ಕೋಟಿ ರುಪಾಯಿಗಳನ್ನ (48,20,69,00,00,000) ಕೊಳ್ಳೆ ಹೊಡೆದಿದೆ (https://zeenews.india.com/india/congress-saga-of-scams-rs-4820690000000-public-money-looted-in-70-years-2229289.html)  ಇವುಗಳನ್ನ ಪಕ್ಷ, ದೇಶದ  ಉದ್ದಗಲಕ್ಕೂ ಅನೇಕ ಆಸ್ತಿಪಾಸ್ತಿಗಳಲ್ಲಿ ವಿನಿಯೋಗ ಮಾಡಿದೆ ( ಬೇನಾಮಿಯೇ ). ಯಾರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಾರೋ ಸಹಜವಾಗಿಯೇ ಅವರು ಇಷ್ಟು ದೊಡ್ಡ ಸಂಪತ್ತಿನ ಅಧಿಕಾರಿಯೂ ಆಗುತ್ತಾರೆ. ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಧಿಕಾರ ನಿರಂತರವಾಗಿ ನೆಹರೂ ಗಾಂದಿ ಪರಿವಾರದಲ್ಲೇ ಉಳಿದದ್ದು ಇದೇ ಕಾರಣಕ್ಕೆ. ಕಾಂಗ್ರೆಸ್‌ ಪಕ್ಷದಲ್ಲಿ ಗಾಂಧಿ ಪರಿವಾರದಾಚೆಗೆ ಯಾರೂ ಅಧ್ಯಕ್ಷರು ಆಗಲಿಲ್ಲ, ಆದರೂ ಅಂತಹವರನ್ನ ಪಕ್ಷದಲ್ಲಿ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಅದಕ್ಕೆ ಕಾರಣ ಈ ಮಟ್ಟದ ಸಂಪತ್ತು ತನ್ನ ಕೈ ತಪ್ಪಿ ಹೋಗುವುದೋ ಎಂಬ ಭಯ. ಎಲ್ಲಿಯ ತನ್ನ ಗಾಂಧಿ ಪರಿವಾರದ ಕೈಯಲ್ಲಿ ರಾಜಕೀಯ ಅಧಿಕಾರ ಇಲ್ಲದೇ ಹೋದರೂ ಕಾಂಗ್ರೆಸ್ ಪಕ್ಷದ ಗದ್ದುಗೆ ಉಳಿಯುತ್ತದೆಯೋ ಅಲ್ಲಿ ತನಕ ಈ ಆಸ್ತಿಗಳು ಅವರ ಕೈಯೊಳಗೆ ಇರುತ್ತದೆ. ಪಕ್ಷದ ಮೇಲೆ ಹಿಡಿತ ಹೋದರೆ ಪಕ್ಷದ ಆಸ್ತಿಯ ಮೇಲೂ ಹಿಡಿತ ಹೋಗಲಿದೆ ಎಂಬ ವಾಸ್ತವದ ಅರಿವು ಗಾಂಧಿ ಕುಟುಂಬಕ್ಕೆ ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ಗಾಂಧೀ ಪರಿವಾರದ ಬಳಿ ರಾಜಕೀಯ ಸಾಮರ್ಥ್ಯ ಇಲ್ಲದೇ ಹೋದರೂ ಪಕ್ಷದ ಅಧ್ಯಕ್ಷ ಸ್ಥಾನ ಕುಟುಂಬದ ಒಳಗೆ ಉಳಿಸಿಕೊಳ್ಳುವುದು. ಯಾವ ಯಾವ ಸಂದರ್ಭದಲ್ಲಿ ಪಕ್ಷದೊಳಗೆ ಪಕ್ಷದ ನಾಯಕತ್ವದ ಅಂದರೆ ಗಾಂಧಿ ಪರಿವಾರದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಏಳುತ್ತವೆಯೋ ಅಂತಹಾ ಕಾಲದಲ್ಲಿ ಇವರಿಗೆ ತಮ್ಮ ಔಚಿತ್ಯದ ಅಗ್ನಿಪರೀಕ್ಷೆ ಕೊಡುವುದು ಅನಿವಾರ್ಯವಾಗುತ್ತದೆ. ಅದಕ್ಕಾಗಿ ಈ ಭಾರತ್‌ ಜೋಡೋ ಎಂಬ ಬೃಹನ್ನಾಟಕದ ಮುಖವಾಡದ ಶಕ್ತಿ ಪ್ರದರ್ಶನ.

            ಭಾರತ ಇಸ್ಲಾಂ ಮತ್ತು ಕ್ರೈಸ್ತ ಮತಗಳೆರಡಕ್ಕೂ ತಮ್ಮ ಮತಾಂತರದ ದೃಷ್ಟಿಯಿಂದ ಮುಗಿಯದ ಅಧ್ಯಾಯ. ಆ ಎರಡೂ ರಿಲೀಜಿಯನ್‌ಗಳಿಗೆ ಭಾರತವನ್ನ ಪೂರ್ತಿಯಾಗಿ ತಮ್ಮ ಕಡೆ ಮತಾಂತರ ಮಾಡಬೇಕು  ಅದಕ್ಕಾಗೆ ದೇಶದೊಳಗೆ ಒಂದಷ್ಟು ಮತಾಂತರ ಮಾಡುವ ಸಂಸ್ಥೆಗಳನ್ನ  NGO ಗಳ ರೂಪದಲ್ಲಿ ಸ್ಥಾಪಿಸಿ ಅದಕ್ಕೆ ವಿದೇಶಗಳಿಂದ ಯಥೇಚ್ಚ ಹಣ ವಿದೇಶಗಳನ್ನು ಕೊಡುತ್ತಾರೆ. ಈ ಎಲ್ಲ ಭಾರತ ವಿರೋಧಿ ಕೆಲಸಗಳಿಗೆ ಕಾಂಗ್ರೆಸ್ ಸರಕಾರದ ರಾಜಾಶ್ರಯ ಇತ್ತು. ಇದು ಒಂದು ಕಡೆಯಾದರೆ ಭಾರತ ಆರ್ಥಿಕವಾಗಿ ಬೆಳೆಯಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲು ಇನ್ನೊಂದಿಷ್ಟು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಈ ನರ್ಮದಾ ಬಚಾವೋ  ಆಂದೋಲನದ   ಮೇಧಾ ಪಾಟ್ಕರ್‌, ತಮಿಳುನಾಡಿನ  ಕೂಡಂಕುಲಂ ಅಣು ವಿದ್ಯುತ್‌ ಸ್ಥಾವರದ ವಿರೋಧ ಮಾಡುತ್ತಿದ್ದ ಉದಯ್‌ ಕುಮಾರ್.‌ ದೆಹಲಿಯ  ರೈತ ಹೋರಾಟ ಪ್ರತಿಭಟನೆ ನಾಟಕದ ಸಂಯೋಜಕ ಯೋಗೆಂದರ್‌ ಯಾದವ್.‌ ತುಕ್ಡೇ ಗ್ಯಾಂಗಿನ ರೂವಾರಿ ಕನಯ್ಯ ಕುಮಾರ್‌  ಹೀಗೆ  ಅನೇಕರಿಗೆ ರಾಜಾಶ್ರಯಕೊಟ್ಟು ಬೆಳಿಸಿದ್ದು  ನಂತರ ಅವರು ಸೇವೆಯನ್ನ ಪಡೆದಿದ್ದು ಕಾಂಗ್ರೆಸ್‌ ಪಕ್ಷವೇ . ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಇವರಿಗೆ ಇದ್ದ ರಾಜಾಶ್ರಯವೂ ತೀರಿತು ಜೊತೆಗೆ ವಿದೇಶಗಳಿಂದ ಅನಾಯಸಾವಾಗಿ ಬರುತ್ತಿದ್ದ ಹಣದ ಮೂಲಗಳಿಗೂ ಕತ್ತರಿ ಬಿದ್ದಿದೆ.  ಇವುಗಳೆಲ್ಲಾ ಕಾಂಗ್ರೆಸ್‌ ಎಂಬ ಬ್ರಹತ್‌ ಮರವನ್ನ ಆಶ್ರಯಿಸಿರುವ ಬಳ್ಳಿಗಳು. ಮರ ಬಿದ್ದರೆ ಇವುಗಳ ಅಸ್ತಿತ್ವಕ್ಕೂ ದಕ್ಕೆಯೇ ಆ ಕಾರಣಕ್ಕೆ ಇವರೆ ಮುಂದೆ ನಿಂತು ಭಾರತ್‌ ಜೋಡೋ ಯಾತ್ರೆಯ ಸಂಯೋಜನೆ ಮಾಡುತ್ತಿದ್ದಾರೆ.


ಇದೆಲ್ಲದರೆ ಜೊತೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರು ಕಾಂಗ್ರೆಸ್ ಚೋಡೋ ಅಭಿಯಾನ ಪ್ರಾರಂಭಿಸಿದ್ದಾರೆ. ಗುಲಾಂ ನಬಿ ಆಜಾದ್‌ ಇದಕ್ಕೂ ಹಿಂದೆ ಮಾಜಿ ರಾಷ್ಟ್ರಪತಿಗಳಾದ ಪ್ರಣವ್‌ ಮುಖರ್ಜಿ, ಮಾಜಿ ವಿದೇಶಾಂಗ ಸಚಿವ ನಟವರ್‌ ಸಿಂಗ್‌, ಆನಂದ್‌ ಸಿಂಗ್‌, ಜ್ಯೋತಿರಾದಿತ್ಯ ಸಿಂಧಿಯಾ, ಹೆಮಂತ್‌ ಬಿಸ್ವ ಶರ್ಮ. ಇವರ ಜೊತೆಗೆ ಈಗಿರುವ ಹಿರಿಯ ಕಾಂಗ್ರೆಸ್ ನಾಯಕರಿಗೂ ಕಾಂಗ್ರೆಸ್‌ ಪಕ್ಷ ಗಾಂಧೀ ಪರಿವಾರದ ನಾಯಕತ್ವದಲ್ಲಿ ಮುಂದುವರಿಯುವುದರಲ್ಲಿ ಸಹಮತ ಇಲ್ಲ. ಈ ಕಾರಣಕ್ಕೆ ಇವರುಗಳು ಪಕ್ಷದೊಳಗೆ ಹೊರಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕಳೆದ ೮ ವರ್ಷದಲ್ಲಿ ನಡೆದ ಅಷ್ಟೂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ.  ಜೊತೆಗೆ ನ್ಯಾಶನಲ್‌ ಹೆರಾಲ್ಡ್‌ ಪ್ರಕರಣ ಗಾಂಧೀ ಪರಿವಾರಕ್ಕೆ ಕೊರಳ ಕುಣಿಕೆಯಂತೆ ಸಿಕ್ಕಿಹಾಕಿಕೊಂಡಿದೆ. ಇದೂ ಕೂಡ ಪಕ್ಷಕ್ಕೆ ಮುಜುಗರ ತರುತ್ತಿದೆ. ಯಾವಾಗ ರಾಜಕೀಯವಾಗಿ ತನ್ನ ಔಚಿತ್ಯ ಸಾಬೀತು ಮಾಡಲು ಸಾಧ್ಯವಾಗದೇ ಹೋಯಿತೋ,ಆಗ ಅಷ್ಟೂ ದೇಶವಿರೋಧಿ ಗಲಬೆಗಳನ್ನ ಪ್ರಾಯೋಜಿಸಿತು. ಭಾರತವನ್ನ ವಿಭಜಿಸುವ ಶಕ್ತಿಗಳ ಜೊತೆಗೆ ಕೈ ಜೋಡಿಸಿತು, ಪಾಕಿಸ್ತಾನ ಮತ್ತು ಚೀನಾಗಳು ತಮಗೆ ಅನುಕೂಲಕರವಾದ ಹೇಳಿಕೆಗಳನ್ನ ಈ ಗಾಂಧೀ ಪರಿವಾರದ ಮುಖಾಂತರ ಕೊಡಿಸಲು ಪ್ರಾರಂಭಿಸಿದರು. ಭಾರತ ಚೀನಿ ಸೈನಿಕರ ಜೊತೆಗೆ ಗಡಿಯಲ್ಲಿ ಯುದ್ದಸನ್ನದ್ದ ಸ್ಥಿತಿಯಲ್ಲಿ ಇದ್ದಾಗ ಇದೇ ರಾಹುಲ್‌ ಗಾಂಧೀ ಚೀನಿ ರಾಯಭಾರಿಯನ್ನು ಗುಪ್ತವಾಗಿ ಭೇಟಿಯಾಗಿದ್ದ.  ಇದೇ ಕಾರಣಕ್ಕೆ ಅಧಿಕಾರದಲ್ಲಿ ಇಲ್ಲದ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್‌ಗಿಂತಲೂ ಹಚ್ಚು ಅಪಾಯಕಾರಿ ಅನ್ನಿಸಿರುವುದು. ಈಗ ಇದೇ ಭಾರತ ವಿರೋಧಿ ಶಕ್ತಿಗಳನ್ನ ಮತ್ತೆ ಸಂಘಟಿಸಲು ಭಾರತ ಜೋಡೋ ಯಾತ್ರೆಯ ಹೆಸರಿನಲ್ಲಿ ಭಾರತ್‌ ತೋಡೋ ಕಾರ್ಯಕ್ರಮದ ಸಂಘಟನೆ ಮಾಡುತ್ತಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.