ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಮಾಲಿಕೆಯ ನಾಲ್ಕನೆಯ ದಿನದಂದು ಸಂತ ಜ್ಞಾನ ದೇವ ಸಿಂಗಜೀ ಹಾಗೂ ಸಾಧ್ವಿ ರಿತಾಂಭರಾ ಅವರು ತಮ್ಮ ಅಧ್ಯಾತ್ಮ ಚಿಂತನೆಯನ್ನು ಹಂಚಿಕೊಂಡರು. ಈ ಐದು ದಿನಗಳ ಉಪನ್ಯಾಸ ಸರಣಿಯನ್ನು ‘ಕೋವಿಡ್ ರೆಸ್ಪಾನ್ಸ್ ಟೀಮ್’ ಆಯೋಜಿಸಿದೆ, ಇದು ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯವನ್ನು ಹೊಂದಿದೆ.

ಭಾರತದ ಪ್ರಾಚೀನ ಹಾಗೂ ಶ್ರೀಮಂತ ಅಧ್ಯಾತ್ಮ ಚಿಂತನೆಯನ್ನು ಜಾಗೃತಗೊಳಿಸಿಕೊಂಡು ಕೊರೊನಾ ವಿರುದ್ಧದ ಸಮರವನ್ನು ಗೆಲ್ಲೋಣ ಎಂಬ ಸಂದೇಶವನ್ನು ಸಾರಿದರು. ಈ ಅನನುಕೂಲದ ಪರಿಸ್ಥಿತಿಯಲ್ಲಿ ಅಸಹಾಯಕರಾಗದೆ, ದೃಢವಾದ ಮನಸ್ಸಿನಿಂದ ಸಂಕಲ್ಪವನ್ನು ತೆಗೆದುಕೊಳ್ಳುವುದರಿಂದಲೇ ಈ ಸವಾಲನ್ನು ನಿವಾರಿಸಬಹುದಾಗಿದೆ ಎಂದು ಅವರು ಹೇಳಿದರು.

ಸಾಧ್ವಿ ರಿತಂಭರ ಜಿ ಅವರು ತಮ್ಮ ಭಾಷಣದಲ್ಲಿ, “ಒಂದು ಸಮಾಜದ ಬಲವನ್ನು ಇಂತಹ ಪ್ರತಿಕೂಲ ಸಂದರ್ಭಗಳು ಸವಾಲೆಸೆಯುತ್ತಿವೆ. ಈ ಪ್ರತಿಕೂಲ ಸಂದರ್ಭಗಳಲ್ಲಿ ನಮ್ಮ ಇಡೀ ದೇಶವು ವಿಚಿತ್ರ ಸಾಂಕ್ರಾಮಿಕ ರೋಗದಿಂದ ಹೋರಾಡುತ್ತಿರುವಾಗ, ನಮ್ಮ ಆಂತರಿಕ ಶಕ್ತಿಯನ್ನು ನಾವು ಜಾಗೃತಗೊಳಿಸಬೇಕಾದ ಸಮಯ ಇದಾಗಿದೆ” ಎಂದು ಹೇಳಿದರು.

“ದೊಡ್ಡ ಪರ್ವತಗಳನ್ನೂ ಧೈರ್ಯ ಮತ್ತು ದಿಟ್ಟತನದ ನಿಶ್ಚಯದಿಂದ ದೂಡಬಹುದಾಗಿದೆ. ನದಿ ಹರಿಯುವಾಗ, ದೊಡ್ಡ ಬಂಡೆಗಳನ್ನು ಮರಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ್ದರಿಂದ, ಈ ಸವಾಲಿನ ಪರಿಸ್ಥಿತಿಯಲ್ಲಿ ಅಸಹಾಯಕರಾಗಿರುವುದರಿಂದ ಬಿಕ್ಕಟ್ಟು ಪರಿಹಾರವಾಗುವುದಿಲ್ಲ. ನಾವು ನಮ್ಮ ಆಂತರಿಕ ಶಕ್ತಿಯನ್ನು ಬಳಸಿ ಈ ಸವಾಲನ್ನು ಎದುರಿಸಲು ಮುಂದಾಗಬೇಕು” ಎಂದು ತಿಳಿಸಿದರು.

ಸಾಧ್ವಿ ರಿತಾಂಭರಾ

“ಪ್ರತಿ ಬಿಕ್ಕಟ್ಟಿಗೂ ಪರಿಹಾರವಿದೆ ಆದರೆ ಆ ಪರಿಹಾರ ಗೋಚರವಾಗುವುದು ನಮ್ಮನ್ನು ಮತ್ತು ನಮ್ಮ ದೇವರನ್ನು ನಂಬಿದಾಗ ಮಾತ್ರವೇ. ಈ ಶ್ರದ್ಧೆ ಮತ್ತು ನಂಬಿಕೆಯಿಂದ ನಾವು ಈ ಸಾಂಕ್ರಾಮಿಕ ರೋಗವನ್ನು ನಿವಾರಿಸುತ್ತೇವೆ,” ಎಂದು ಅವರು ಹೇಳಿದರು,

“ಇತರರ ಮೇಲೆ ಆರೋಪ ಹೊರಿಸುವ ಬದಲು ಪ್ರತಿಯೊಬ್ಬರೂ ತಮ್ಮ ಆತ್ಮವಿಶ್ವಾಸ, ಆತ್ಮ ಸಂಯಮ ಮತ್ತು ಸ್ವ-ನಿರ್ಣಯವನ್ನು ಜಾಗೃತಗೊಳಿಸಬೇಕು ಎಂದು ಭಾರತೀಯರನ್ನು ವಿನಂತಿಸುತ್ತೇನೆ. ಈ ಎಲ್ಲ ಸಂದರ್ಭಗಳ ಮಧ್ಯೆ, ನಮ್ಮ ಶಕ್ತಿಯನ್ನು ನಕಾರಾತ್ಮಕ ಚಿಂತನೆಯಲ್ಲಿ ಬಳಸಿದರೆ, ಹೊಸತನ್ನು ಯೋಚಿಸುವ ಸಾಮರ್ಥ್ಯವು ಕಣ್ಮರೆಯಾಗುತ್ತದೆ.” ಎಂದು ಅವರು ನುಡಿದರು.

ಸಂತ ಜ್ಞಾನ ದೇವ ಜಿ ಮಹಾರಾಜ್ ತಮ್ಮ ಭಾಷಣದಲ್ಲಿ, “ಇದು ಭಾರತ ಮಾತ್ರವಲ್ಲದೇ, ಇಡೀ ಜಗತ್ತು ಎದುರಿಸುತ್ತಿರುವ ಸಮಸ್ಯೆಯಾದ್ದರಿಂದ, ಅನಾವಶ್ಯಕವಾಗಿ ಭಯಪಡುವ ಅಗತ್ಯವಿಲ್ಲ. ಇಡಿಯ ಜಗತ್ತು ಪರಿವರ್ತನೆಯ ಹಾದಿಯಲ್ಲಿ ಸಾಗಿದೆ. ಈ ಜಗತ್ತಿನಲ್ಲಿ ಯಾವುದೂ ಬದಲಾಗದೇ ಉಳಿಯುವುದಿಲ್ಲ. ದುಃಖ ಬಂದಿದ್ದರೆ ಅದು ದೀರ್ಘಕಾಲಕ್ಕಲ್ಲ. ದುಃಖ ತಾನು ಬಂದ ದಾರಿಯಲ್ಲೇ ಹಿನ್ನಡೆಯುತ್ತದೆ. ಆದ್ದರಿಂದ, ಭಯಪಡುವ ಅಗತ್ಯವಿಲ್ಲ. ” ಎಂದು ಧೈರ್ಯ ತುಂಬಿದರು.

“ಯಾರಾದರೂ ಸೋಂಕಿಗೆ ಒಳಗಾಗಿದ್ದರೆ, ಅವನು ದೇವರನ್ನು ಧ್ಯಾನಿಸಿ, ಗೀತೆಯನ್ನು ಗುರುಬಾನಿಯನ್ನು ಓದಬೇಕು. ನಿಮ್ಮ ದೇಹವನ್ನು, ಮನಸ್ಸನ್ನು ಆರೋಗ್ಯವಾಗಿರಿಸಿಕೊಳ್ಳಿ. ನಿಮ್ಮ ಮನಸ್ಸನ್ನು ಗೆದ್ದರೆ, ನೀವು ಪ್ರಪಂಚವನ್ನು ಗೆದ್ದಂತೆ. ನಿಮ್ಮ ಮನಸ್ಸು ಆರೋಗ್ಯಕರವಾಗಿದ್ದರೆ, ನೀವು ಆರೋಗ್ಯವಾಗಿರುತ್ತೀರಿ, ನಿಮ್ಮ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ” ಎಂದು ನುಡಿದರು

ಸಂತ ಜ್ಞಾನ ದೇವ ಜಿ ಮಹಾರಾಜ್

ಈ ಸಾಂಕ್ರಾಮಿಕ ಸಮಯದಲ್ಲಿ ವೈದ್ಯರು ನೀಡುವ ಎಲ್ಲ ಸಲಹೆಗಳು ಯಾವಾಗಲೂ ಭಾರತೀಯ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ನಮ್ಮ ಶ್ರೀಮಂತ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಸಂಪ್ರದಾಯವನ್ನು ಅನುಸರಿಸುವ ಮೂಲಕ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯ. ಆದ್ದರಿಂದ, ಈ ಶ್ರೀಮಂತ ಸಂಪ್ರದಾಯಗಳನ್ನು ನಾವು ಗುರುತಿಸಿ ಅವುಗಳನ್ನು ನಮ್ಮ ಜೀವನದಲ್ಲಿ ಅನುಸರಿಸುವುದು ಸಧ್ಯದ ಅವಶ್ಯಕತೆಯಾಗಿದೆ. ಎಂದರು

ಈ ಉಪನ್ಯಾಸ ಸರಣಿಯನ್ನು ಮೇ 11 ರಿಂದ ಮೇ 15 ರವರೆಗೆ ಪ್ರತಿದಿನ ಸಂಜೆ 4: 30 ಕ್ಕೆ 100 ಕ್ಕೂ ಹೆಚ್ಚು ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಮೇ 15 ರಂದು ಆರ್‌ಎಸ್‌ಎಸ್ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಜಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.