ಮಂಗಳೂರು: ಹಿಂದುತ್ವದ ಕುರಿತು ಸಂಶೋಧಕ ದೃಷ್ಟಿಯಿಂದ ಅಧ್ಯಯನ ಅಗತ್ಯ. ಹಿಂದುತ್ವದಲ್ಲಿ ಜಗತ್ತಿನ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಅಡಗಿದೆ ಎಂದು ಮಂಗಳೂರು ವಿಭಾಗದ ಸಾಮರಸ್ಯ ವೇದಿಕೆಯ ಸಂಯೋಜಕ ರವೀಂದ್ರ ಪುತ್ತೂರು ಹೇಳಿದರು.

ಸುರತ್ಕಲ್ ಗೋವಿಂದದಾಸ ಪದವಿ ಕಾಲೇಜಿನಲ್ಲಿ ಮಂಥನ ವೈಚಾರಿಕ ವೇದಿಕೆಯ ವತಿಯಿಂದ ಆಯೋಜಿಸಲಾದ “ಹಿಂದುತ್ವ ಮತ್ತು ಭಾರತೀಯ ಜೀವನ ದೃಷ್ಟಿ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಸುಮಾರು 150 ವರ್ಷಗಳಿಂದ ಅಪಾರ್ಥಕ್ಕೆ ಒಳಗಾದ ವಿಷಯ ಹಿಂದುತ್ವ. ಇಂದಿಗೂ ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೊಳಗಾಗಿರುವ ವಿಷಯ ಎಂದರೆ ಅದು ಹಿಂದೂ, ಹಿಂದುತ್ವ, ಸನಾತನ. ಭಾರತದ ಸಂಸ್ಕೃತಿಯ ಲವಶೇಷವು ಕೂಡ ತಿಳಿಯದವರು ದೇಶವನ್ನು ಆಳಿದ ಪರಿಸ್ಥಿತಿಯಿಂದ ನಮ್ಮ ಭಾರತೀಯ ಸಂಸ್ಕೃತಿಯ ಅರಿವು ಜನಸಾಮಾನ್ಯರಿಗೆ ತಲುಪುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್ ಶಿಕ್ಷಣ ಪದ್ಧತಿ ಧರ್ಮ ಮತ್ತು ರಿಲಿಜನ್ ಎರಡೂ ಕೂಡ ಒಂದೇ ಎಂಬ ಭಾವನೆಯನ್ನು ತಂದಿಡುವಂತೆ ಮಾಡಿದೆ. ಆದರೆ ಧರ್ಮ ಜೀವನದ ವಿಧಾನ, ರಿಲಿಜನ್ ಒಂದು ವೈಯಕ್ತಿಕ ವಿಷಯ ಮತ್ತು ಅದು ಪೂಜಾ ವಿಧಾನಕ್ಕೆ ಸಂಬಂಧಿಸಿದ್ದು. ಹಾಗಾಗಿ ನಾವು ಪರಸ್ಪರ ವಿಷಯವನ್ನು ತಿಳಿಯುವಲ್ಲಿ ಮುಂದಾಗಬೇಕು ಎಂದು ಹೇಳಿದರು.


ನಮ್ಮ ಜೀವನದಲ್ಲಿ ಧರ್ಮ, ಅರ್ಥ, ಕಾಮ,ಮೋಕ್ಷ ಇವುಗಳು ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಆದರೆ ಅರ್ಥ ಮತ್ತು ಕಾಮದ ಬಯಕೆ ಹೆಚ್ಚಾದರೆ ಅಪಘಾತ ಖಂಡಿತ. ಆದ್ದರಿಂದ ಧರ್ಮದ ಚೌಕಟ್ಟಿನಿಂದ ಆತನಿಗೆ ಮೋಕ್ಷ ಲಭಿಸುತ್ತದೆ. ಸತ್ಯದ ಹುಡುಕಾಟಕ್ಕೆ ಪರಸ್ಪರ ಸತ್ಯವನ್ನು ಒಪ್ಪಿಕೊಳ್ಳುವುದೇ ಹಿಂದೂ ಧರ್ಮ. ಹಾಗಾಗಿ ಪಾಪ ಮತ್ತು ಪುಣ್ಯದ ಕೆಲಸ ಎಂಬ ಕಲ್ಪನೆ ಹಿಂದೂ ಧರ್ಮದಲ್ಲಿ ಮಾತ್ರವೇ ಇದೆ ಎಂದು ಹೇಳಿದರು.

ನಮ್ಮ ಸನಾತನ ಸಂಸ್ಕೃತಿ ಗುರುಶಿಷ್ಯ ಪರಂಪರೆಯನ್ನು ಹೇಳಿಕೊಟ್ಟಿದೆ. ಗುರುವಿನ ಕೆಲಸ ಶಿಷ್ಯನ ಜೀವನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ತಿಳಿಸುವುದು. ನಮ್ಮ ಗ್ರಂಥಗಳು ಹಿಂದೂ ಸಂಸ್ಕೃತಿಯ ಆಧಾರ ಸ್ತಂಭಗಳು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್ ಅಧ್ಯಕ್ಷ ಜಯಚಂದ್ರ ಹತ್ವಾರ್ ವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.