ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ಬಾಂಗ್ಲಾದೇಶದ ಹಿಂದುಗಳ ಮೇಲೆ ಇಸ್ಲಾಂ ಮೂಲಭೂತವಾದಿಗಳಿಂದ ನಡೆದ ಹಿಂಸೆಯನ್ನು ಖಂಡಿಸುತ್ತದೆ.

ಅಭಾಕಾಮ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ಹಿಂಸೆಯನ್ನು ಬಲವಾಗಿ ಖಂಡಿಸುತ್ತದೆ. ಬಾಂಗ್ಲಾದೇಶವನ್ನು ಮತ್ತಷ್ಟು ಇಸ್ಲಾಮೀಕರಣಗೊಳಿಸಬೇಕು ಎಂಬ ಹುನ್ನಾರದಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಮುಂದುವರಿಯುತ್ತಿರುವ ಬರ್ಬರತೆಯನ್ನು ಸಭೆಯು ಖಂಡಿಸುತ್ತದೆ.


ಹಿಂದುಗಳು ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ಆಕ್ರಮಣವು ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಇತ್ತೀಚಿಗೆ ದುರ್ಗಾ ಪೂಜೆಯ ಸಂದರ್ಭದಲ್ಲಿ ಸ್ಫೋಟಗೊಂಡ ಕೋಮು ಹಿಂಸಾಚಾರದಲ್ಲಿ ನೂರಾರು ಹಿಂದುಗಳು ಬಲಿಯಾಗಿ, ಹಲವರು ಗಾಯಗೊಂಡು ಸಾವಿರಾರು ಕುಟುಂಬಗಳು ನೆಲೆಯಿಲ್ಲದೆ ವಿಸ್ಥಾಪಿತಗೊಂಡಿವೇ. ಹಿಂದು ಸಮಾಜದ ಹಲವು ಹೆಣ್ಣು ಮಕ್ಕಳು, ಮಹಿಳೆಯರು ಹಲ್ಲೆಗೆ ಒಳಗಾಗಿದ್ದಾರೆ ಮತ್ತು ದುರ್ಗಾ ಪೂಜೆಯ ಸ್ಥಳ ಮತ್ತು ದೇವಸ್ಥಾನಗಳನ್ನು ಕಳೆದ ಎರಡು ವಾರಗಳಲ್ಲಿ ಛಿದ್ರಗೊಳಿಸಲಾಗಿದೆ.

ಈ ಕೃತ್ಯದಲ್ಲಿ ಭಾಗಿಗಳಾಗಿದ್ದರು ಎನ್ನಲಾದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹಿಂಸಾಕೃತ್ಯಗಳು ಇಸ್ಲಾಂ ಮೂಲಭೂತವಾದಿಗಳ ಯೋಜಿತ ಕಾರ್ಯಾಚರಣೆ ಎಂಬುದು ಬೆಳಕಿಗೆ ಬಂದಿದೆ.

ಈ ಹಲ್ಲೆಗಳು, ಭಾರತದ ವಿಭಜನೆಯ ನಂತರ ತೀವ್ರವಾಗಿ ಇಳಿಮುಖ ಕಾಣುತ್ತಿರುವ ಅಲ್ಪಸಂಖ್ಯಾತ ಹಿಂದೂ ಸಮಾಜವನ್ನೇ ಗುರಿಯಾಗಿಸಿಕೊಂಡು ಹಿಂದುಗಳನ್ನು ಬೇರುಸಹಿತ ಕಿತ್ತೊಗೆಯಬೇಕು ಎಂಬ ಉದ್ದೇಶದಿಂದ ನಡೆಯುತ್ತಿರುವ ಸುವ್ಯವಸ್ಥಿತ ಕೃತ್ಯವಾಗಿದೆ.

ವಿಭಜನೆಯ ಸಮಯದಲ್ಲಿ ಪೂರ್ವ ಬಂಗಾಳದಲ್ಲಿ ಹಿಂದುಗಳ ಜನಸಂಖ್ಯೆ 28% ಇದ್ದು ಈಗ ಅದು 8% ಕ್ಕೆ ಕುಸಿದಿದೆ. ಜಮಾತ್ – ಇ – ಇಸ್ಲಾಮೀ (ಬಾಂಗ್ಲಾದೇಶ) ಯಂತಹ ಮೂಲಭೂತವಾದಿ ಗುಂಪುಗಳ ಹಿಂಸಾಕೃತ್ಯವು ವಿಭಜನೆಯ ನಂತರ, ವಿಶೇಷವಾಗಿ 1971 ರ ಯುದ್ಧದ ನಂತರ ಭಾರಿ ಪ್ರಮಾಣದಲ್ಲಿ ಹಿಂದುಗಳನ್ನು ಭಾರತಕ್ಕೆ ವಲಸೆ ಹೋಗುವಂತೆ ಮಾಡಿದೆ. ಈ ಗುಂಪುಗಳು ಇಂದಿಗೂ ಬಾಂಗ್ಲಾದೇಶದಲ್ಲಿ ಕೋಮು ಭಾವನೆಯನ್ನು ಪ್ರಚೋದಿಸುವುದರ ಮೂಲಕ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮನಸ್ಸಿನಲ್ಲಿ ಅಭದ್ರತೆಯನ್ನು ನಿರ್ಮಿಸಿವೆ.

ಅಭಾಕಾಮಂ’ಯು ಬಾಂಗ್ಲಾದೇಶದ ಸರ್ಕಾರವು ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಡುತ್ತದೆ. ಹಿಂದೂ ವಿರೋಧಿ ಕೃತ್ಯವನ್ನು ಎಸಗಿದವರಿಗೆ ಅಲ್ಲಿನ ಸರ್ಕಾರವು ಕಠೋರ ಶಿಕ್ಷೆಯನ್ನು ವಿಧಿಸುವುದರ ಮೂಲಕ ಅಲ್ಪಸಂಖ್ಯಾತ ಹಿಂದುಗಳು ಸುರಕ್ಷಿತವಾಗಿ, ಗೌರವಪೂರ್ವಕವಾಗಿ ಮತ್ತು ಸಕಲ ಹಕ್ಕುಗಳನ್ನು ಬಳಸಿಕೊಂಡು ಬದುಕು ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಕು.

ಅಭಾಕಾಮ ಸ್ವಘೋಷಿತ ಮಾನವ ಹಕ್ಕುಗಳ ಕಾವಲುಪಡೆಯ ಮತ್ತು ವಿಶ್ವಸಂಸ್ಥೆಗೆ ಸಂಲಗ್ನವಾಗಿರುವ ಇತರ ಸಂಸ್ಥೆಗಳ ಕಿವಿಗಡಚಿಕ್ಕುವ ಮೌನವನ್ನು ಅಣಕಿಸುತ್ತದೆ. ಜಾಗತಿಕ ಸಮುದಾಯವು ಸ್ವಪ್ರೇರಿತವಾಗಿ ಮುಂದೆ ಬಂದು ಬಾಂಗ್ಲಾದೇಶದ ಹಿಂದೂ, ಬೌದ್ಧ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲಾಗುತ್ತಿರುವ ಹಿಂಸೆಯನ್ನು ಖಂಡಿಸಬೇಕೆಂದು ಸಭೆಯು ಆಹ್ವಾನ ನೀಡುತ್ತದೆ. ಇಸ್ಲಾಂ ಮೂಲಭೂತವಾದದ ಬೆಳವಣಿಗೆಯು ಬಾಂಗ್ಲಾದೇಶವಾಗಿರಲಿ ಅಥವಾ ಇನ್ನಾವುದೇ ಶಾಂತಿಪ್ರಿಯ ದೇಶವಾಗಿರಲಿ ಅಲ್ಲಿನ ಮಾನವ ಹಕ್ಕುಗಳಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ‌ ಎಂಬುದನ್ನು ಸಭೆಯು ಎಚ್ಚರಿಸುತ್ತದೆ.

ಲಭ್ಯವಿರುವ ಸರ್ವ ರೀತಿಯ ರಾಜತಾಂತ್ರಿಕ ಅವಕಾಶಗಳನ್ನು ಬಳಸಿಕೊಂಡು ಪ್ರಪಂಚದ ಹಿಂದೂ ಸಮಾಜ ಮತ್ತು ಸಂಘಟನೆಗಳ ಕಾಳಜಿಯನ್ನು ಬಾಂಗ್ಲಾದೇಶದ ಸರ್ಕಾರಕ್ಕೆ ಮನನ ಮಾಡಿಸಿ ಅಲ್ಲಿನ ಹಿಂದೂ ಮತ್ತು ಬೌದ್ಧ ಸಮಾಜದ ಸುರಕ್ಷತೆಯನ್ನು ಕಾಪಾಡಲು ಮುಂದಾಗಬೇಕು ಎಂದು ಭಾರತ‌ ಸರ್ಕಾರವನ್ನು ಕಾರ್ಯಕಾರಿ ಮಂಡಳಿಯು ಆಗ್ರಹಿಸುತ್ತದೆ.

ಹಿಂದೂ ಸಂಘಟನೆಗಳು ಮತ್ತು ಸಂಸ್ಥೆಗಳಾದ ಇಸ್ಕಾನ್, ರಾಮಕೃಷ್ಣ ಮಿಷನ್, ಭಾರತ‌ ಸೇವಾಶ್ರಮ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ಉಳಿದೆಲ್ಲರೂ ಇಸ್ಲಾಂ ಮೂಲಭೂತವಾದದ ಹಿಂಸೆಗೆ ಬಲಿಯಾದವರ ಪರವಾಗಿ ನಿಂತದ್ದನ್ನು ಸಭೆಯು ಅನುಮೋದಿಸುತ್ತದೆ.


ಇಂತಹ ಕಠಿಣ ಸವಾಲಿನ ಸನ್ನಿವೇಶದಲ್ಲಿ ಆರೆಸ್ಸೆಸ್ ಸಂಪೂರ್ಣ ಹಿಂದೂ ಸಮಾಜದ ಜೊತೆ ಬಾಂಗ್ಲಾದೇಶದಲ್ಲಿ ಪೀಡಿತರಾಗಿರುವ ಹಿಂದುಗಳು ಮತ್ತು ಉಳಿದ ಅಲ್ಪಸಂಖ್ಯಾತ ಸಮಾಜದ ಬೆಂಬಲಕ್ಕಿದೆ ಎಂಬುದನ್ನು ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ದೃಢೀಕರಿಸುತ್ತದೆ.

ಆರೆಸ್ಸೆಸ್ ನ ಸಹಸರಕಾರ್ಯವಾಹರಾದ ಶ್ರೀ ಅರುಣ್ ಕುಮಾರ್ ಹಾಗೂ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಸುನಿಲ್ ಅಂಬೇಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published.

This site uses Akismet to reduce spam. Learn how your comment data is processed.