BL Santhosh, RSS Pracharak

ಚಿಕ್ಕಮಗಳೂರು Sept 1 : ನಾವಿಂದು ಸಂಕ್ರಮಣ ಕಾಲಘಟ್ಟದಲ್ಲಿದ್ದೇವೆ. ನಮ್ಮ ಧನ ಸಂಪತ್ತು ಏರಿಕೆಯಾಗುತ್ತಿದೆ. ಖರ್ಚು ಮಾಡುವ ಸಾಮರ್ಥ್ಯ ಹಾಗೂ ಆರ್ಥಿಕ ಬೆಳವಣಿಗೆ ಏರುಮುಖವಾಗಿದ್ದರೂ ಒಪ್ಪೊತ್ತಿಗೂ ಊಟಕ್ಕೆ ಗತಿಯಿಲ್ಲದವರನ್ನು ಕಾಣಬಹುದು ಎಂದು ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಸಂತೋಷ್ ಅಭಿಪ್ರಾಯಿಸಿದರು.

BL Santhosh
BL Santhosh

ಅವರು ಭಾನುವಾರ ನಗರದ ಎಐಟಿ ಕಾಲೇಜಿನಲ್ಲಿ ಯುರೇಕಾ ಅಕಾಡೆಮಿಯ ಜಿಲ್ಲಾ ಸಂಯೋಜನಾ ಸಮಿತಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ ತಮ್ಮ ಆದರ್ಶ, ಮೌಲ್ಯಗಳ ಆಕರ್ಷಣೆಯಿಂದ ಸಮಾಜಕ್ಕೆ ಮಾದರಿಯಾದರೆ ವಿನಃ ವಿವೇಕಾನಂದರು ಮೂಢನಂಬಿಕೆಗಳ ಸಂಕೇತವಾಗಲಿಲ್ಲ ಎಂದು ಹೇಳಿದರು.

ಸಮಾಜವಾದಿ ನೆಲಗಟ್ಟಿನಿಂದ ಬಂದ ಕುವೆಂಪು ಸಹ ರಾಮಕೃಷ್ಣ ಪರಮ ಹಂಸರು ಹಾಗೂ ವಿವೇಕಾನಂದರ ಬಗ್ಗೆ ಬರೆದಿದ್ದು, ವಿವೇಕಾನಂದರ ಕುರಿತು ಇಂದು ಸಾಕಷ್ಟು ಕೃತಿಗಳು ಪ್ರಕಟವಾಗಿದ್ದರೂ, ಇದೀಗ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಹ ಅವರ ಕುರಿತು ನೂರಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಳ್ಳುತ್ತಿವೆ. ಅವರು ಬದುಕಿಲ್ಲದಿದ್ದರೂ ಅವರ ನುಡಿಗಳು ಪ್ರಸ್ತುತವೆನಿಸಿವೆ ಎಂದರು.

ಜಗದ್ಗುರು ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳದೆಯೇ ತಮ್ಮ ವಿಚಾರಧಾರೆಗಳಿಂದ ಸ್ವಾಮಿ ವಿವೇಕಾನಂದರು ಜಗದ್ಗುರುವಾದರೆ, ಇಂದಿನ ಕೆಲವರು ಜಗದ್ಗುರುಗಳಲ್ಲದೆ ತಮ್ಮ ಸೀಮಿತ ಕ್ಷೇತ್ರಗಳಲ್ಲಿ ಜಗದ್ಗುರುಗಳೆಂದು ಹೆಸರಿಟ್ಟುಕೊಂಡು ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ವಿವೇಕಾನಂದರನ್ನು ಅತ್ತ ಎಡಪಂಥೀಯರು, ಇತ್ತ ಬಲಪಂಥೀಯರು, ಅವರು ನಡುವಿನ ಸೌಮ್ಯವಾದಿಗಳು ಸಹ ಒಪ್ಪಿಕೊಂಡಿದ್ದಾರೆ ಎಂದರು ಭಾರತೀಯರಲ್ಲಿ ಕೊರತೆಯಾಗಿ ಪರಿಣಮಿಸಿದ್ದ ಆತ್ಮಾಭಿಮಾನ ಹಾಗೂ ಆತ್ಮವಿಶ್ವಾಸದ ಶಕ್ತಿಯನ್ನು ತುಂಬಿ ಎತ್ತರಕ್ಕೆ ಕೊಂಡೊಯ್ದವರು ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ, ನಿಲ್ಲದಿರಿ ಗುರಿ ಮುಟ್ಟುವ ತನಕ ಎನ್ನುವ ತಮ್ಮ ಘೋಷದ ಮೂಲಕ ಸರ್ವರಿಗೂ ಸಲ್ಲುವ ಸಂದೇಶ ನೀಡಿದ್ದಾರೆ ಎಂದರು.

ನಿಮ್ಮ ದೇವರನ್ನೆಲ್ಲ ಅರಬ್ಬೀ ಸಮುದ್ರಕ್ಕೆ ಎಸೆದು 25 ವರ್ಷಗಳ ಕಾಲ ಭಾರತ ಮಾತೆಯನ್ನು ಪೂಜಿಸಿ ಎಂದುದು ಎಡಪಂಥೀಯರಿಗೆ ಇಷ್ಟವಾದರೆ, ಜಗತ್ತಿನ ಮೂಲವನ್ನು ತಿಳಿದುಕೊಳ್ಳಲು ಉಪನಿಷತ್ತುಗಳಿಗೆ ಮರಳಿ ಎನ್ನುವ ನುಡಿಗಳು ಬಲಪಂಥೀಯರಿಗೆ ಇಷ್ಟವಾಯಿತು. ಇವೆರಡನ್ನೂ ಹೊರತಾಗಿ ಬದುಕಿನ ಬಗ್ಗೆ ಹೇಳಿದ್ದು ಸೌಮ್ಯವಾದಿಗಳಿಗೆ ಹಿತವೆನಿಸಿತು ಎಂದು ಹೇಳಿದರು.

ಇಂದು ಸನ್ಯಾಸ, ಶಿಕ್ಷಣ ಸೇರಿದಂತೆ ಯಾವುದೇ ರಂಗಗಳಲ್ಲೂ ಜಾತಿ ಪರಿಗಣಿತವಾಗುತ್ತದೆ. ಆದರೆ ವಿವೇಕಾನಂದರ ವಿಚಾರಕ್ಕೆ ಬಂದಾಗ ಅವರ ಮಾತುಗಳು ಮುಖ್ಯವಾಯಿತೇ ವಿನಃ ಜಾತಿ ಗೊತ್ತೇ ಆಗಲಿಲ್ಲ. ಶಿಕ್ಷಣ ತಜ್ಞರಿಂದ ಹಿಡಿದು ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಹ ವಿದ್ಯಾರ್ಥಿಗಳಿಗೆ ಅವರು ಆದರ್ಶರಾಗಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.