ನವ ಉದ್ಯಮಕ್ಕೆ ಪ್ರೇರಣೆ 5ನೇ ಸ್ತಂಭ ಕಾರ್ಯಕ್ರಮ

ನಿರುದ್ಯೋಗ ಸಮಸ್ಯೆಗೆ ಪರಿಹಾರ ‘ಸ್ವಯಂ ಉದ್ಯೋಗ’. ಒಬ್ಬ ವ್ಯಕ್ತಿಯ ಸಾಮರ್ಥ್ಯ, ಕೌಶಲ್ಯ, ಪರಿಣಿತಿ ಸಂಪೂರ್ಣವಾಗಿ ಬೆಳಕಿಗೆ ಬರಲು ಸಾಧ್ಯವಾಗುವುದು ನವ ಉದ್ಯಮದಿಂದ ಅಥವಾ ಸ್ವಯಂ ಉದ್ಯಮದಿಂದ. ಒಂದು ರಾಷ್ಟ್ರದ ಬೆಳವಣಿಗೆಯಲ್ಲಿ ಅನಿಶ್ಚಿತತೆಯಿಂದಾದರೂ ಸರಿಯೇ, ನಿರಂತರವಾಗಿ ತೊಡಗಿಕೊಳ್ಳುವ ಚೈತನ್ಯಶೀಲ ಮಾಧ್ಯಮವೇ ನವ ಉದ್ಯಮ. ಆರ್ಥಿಕ ಕ್ಷೇತ್ರವು ಸದಾ ಚಟುವಟಿಕೆಯಿಂದ ಕೂಡಿರುವಂತೆ ಅಥವಾ ಸದಾ ಚಲನಶೀಲವಾಗಿ ಜಾಗೃತಾವಸ್ಥೆಯಲ್ಲಿರಲು ಸಹಕರಿಸುವ ಆಯಾಮವೇ ನವ ಉದ್ಯಮ.

ನಮ್ಮ ರಾಷ್ಟ್ರದಲ್ಲಿ ಇತ್ತೀಚಿಗಂತೂ ಹೆಚ್ಚು ಹೆಚ್ಚು ಸ್ಟಾರ್ಟ್ ಅಪ್ ಗಳು ಆರಂಭವಾಗುತ್ತಿವೆ ಹಾಗೂ ಬೆಳೆಯುತ್ತಿವೆ ಕೂಡ. ಎಷ್ಟೇ ಪ್ರಸಿದ್ಧಿ ಪಡೆದಿರುವ ಕಂಪನಿಗಳಾದರೂ ಆಗಲಿ, ಆರಂಭಿಕ ಹಂತದಲ್ಲಿ ಅದೂ ಕೂಡ ಒಂದು ಸ್ಟಾರ್ಟ್ ಅಪ್ ಕಂಪನಿಯೇ ಆಗಿತ್ತು ಎಂಬುದರಲ್ಲೇ ಯಶಸ್ಸಿನ ರಹಸ್ಯವಿದೆ. ಸ್ಟಾರ್ಟ್ ಅಪ್ ಅನ್ನು ಶುರು ಮಾಡುವುದಕ್ಕಿಂತಲೂ ಅದನ್ನು ನಿಭಾಯಿಸಿಕೊಂಡು ಮುನ್ನೆಡೆಸಬೇಕಾದ ಸುದೀರ್ಘ ಪ್ರಕ್ರಿಯೆಯ ಕಾರ್ಯದ ಮೇಲೆಯೇ ಭವಿಷ್ಯದ ಸುದೀರ್ಘ ಗೆಲುವು ನಿಂತಿರುವುದು. ಅನೇಕ ಬಾರಿ ಶುರು ಮಾಡಿರುವ ಸ್ಟಾರ್ಟ್ ಅಪ್ ಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗ ಅದನ್ನು ಸಶಕ್ತವಾಗಿ ಎದುರಿಸಲು ಮಾನಸಿಕ ಸ್ಥೈರ್ಯ ಹಾಗೂ ಬಲವಾದ ಪ್ರೇರಣೆಯ ಅವಶ್ಯಕವಿರುತ್ತದೆ. ಈ ನಿಟ್ಟಿನಲ್ಲಿ ಒಳ್ಳೆಯ ಪ್ರೇರಣಾದಾಯಿ ಕಾರ್ಯಕ್ರಮವನ್ನು ಆಯೋಜಿಸಲು ಹೊರಟಿದೆ ಸೋದರಿ ನಿವೇದಿತಾ ಪ್ರತಿಷ್ಠಾನ.

ಅದೇ The fifth pillar- ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇಬೇಕು. ಮೊದಲನೆಯದು ಸ್ವತಃ ನೀವೇ, ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವು ಇದ್ದಾಗಲೂ ಪರಾಭವಗೊಳ್ಳುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಆದ್ದರಿಂದಲೇ ಹಲವಾರು ವರ್ಷಗಳಿಂದ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸೋದರಿ ನಿವೇದಿತಾ ಪ್ರತಿಷ್ಠಾನವು ನವ ಉದ್ಯಮದಾರರಿಗೆ ಶಕ್ತಿ ತುಂಬುವ ಪ್ರಯತ್ನವನ್ನು ಮಾಡುತ್ತಿದೆ.

ಒಬ್ಬ ವ್ಯಕ್ತಿಯ ಕೈ ಕೆಳಗೆ ನಾವು ದುಡಿಯುವುದಕ್ಕಿಂತ 10 ಜನಕ್ಕೆ ಉದ್ಯೋಗವನ್ನು ಕೊಡುವಂತಾದರೆ ಎಷ್ಟು ಹೆಮ್ಮೆಯ ವಿಚಾರ ಎನಿಸುತ್ತದೆ ಅಲ್ಲವೆ? ಸಧೃಡ ಭಾರತದ ನಿರ್ಮಾಣಕ್ಕೆ ಅವಶ್ಯವಿರುವುದೂ ಕೂಡ ಇದೇ. ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ ಎಂಬಂತೆ ಕಲಿತ ವಿದ್ಯೆ, ಕೂಡಿಟ್ಟ ಸಂಪತ್ತು ಎಲ್ಲವೂ ಸದುಪಯೋಗ ಆಗಬೇಕೆಂದರೆ ಒಂದಷ್ಟು ಜನರಿಗೆ ನೆರವಾಗಬೇಕು. ಹಾಗಾಗಿ ಈಗಾಗಲೇ ತಮ್ಮ ಉದ್ಯಮದಲ್ಲಿ ಯಶಸ್ಸನ್ನು ಗಳಿಸಿರುವವರ ಯಶೋಗಾಥೆಯ ಪ್ರೇರಣೆಯನ್ನು ಮುಂದಿರಿಸಿ, ನವ ಉದ್ಯಮವನ್ನು ಆರಂಭಿಸಬೇಕೆನ್ನುವವರಿಗೆ ಅಥವಾ ಈಗಾಗಲೇ ಆರಂಭಿಸುವವರ ಪ್ರೇರಣೆಗೆ ಅಥವಾ ವಿಫಲವಾಗಿ ತಮ್ಮ ಗುರಿಗಳನ್ನು ದೂರ ಸರಿಸಿರುವವರಿಗೆ ಶಕ್ತಿ ನೀಡುತ್ತದೆ.

ಈ ಹಿಂದೆ ಯುವಾಬ್ರಿಗೇಡ್ ಮೂರು ಬಾರಿ Fifth pillar ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ ಈ ಬಾರಿ ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಕನ್ನಡ ನೆಲದ ಯಶಸ್ವಿ ಮಹಿಳಾ ಉದ್ಯಮಿಗಳನ್ನು ಆಹ್ವಾನಿಸಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಹಾಗಾಗಿ ಇದೊಂದು ವಿಶಿಷ್ಟ ಕಾರ್ಯಕ್ರಮ. ನಾವೂ ಕೂಡ ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸಬಹುದು ಎಂದು ನಮ್ಮ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸುವ ಕಾರ್ಯಕ್ರಮವೇ ಇದಾಗಿದೆ ಎನ್ನಬಹುದು. ಹಾಗಾದರೆ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ.ಮಹಿಳಾ ಉದ್ಯಮಿ ಅತಿಥಿಗಳು ಯಾರೆಂದು ತಿಳಿಯೋಣ ಬನ್ನಿ.

  1. ಶ್ರೀಮತಿ ಶೈಲಜಾ ವಿಠ್ಠಲ್ (ಸಂಸ್ಥಾಪಕರು, ಧರ್ಮ ಟೆಕ್ನಾಲಜಿ)
  2. ಡಾ. ಶಾಲಿನಿ ನಲ್ವಾಡ್ (ಸಹ ಸಂಸ್ಥಾಪಕರು ಮತ್ತು ನಿರ್ದೇಶಕರು, ICATT ಏರ್ ಆಂಬುಲೆನ್ಸ್)
  3. ಶ್ರೀಮತಿ ಶ್ರಾವಣಿ ಪವಾರ್ (ಸಂಸ್ಥಾಪಕರು ಸೇಫ್ ಹ್ಯಾಂಡ್ಸ್ 24*7 ಸರ್ವೀಸಸ್ ಪ್ರೈ.ಲಿ)
  4. ಅನಿತರಾವ್ (MSME ಕೌನ್ಸಿಲ್ ಮುಖ್ಯಸ್ಥರು, ಕಾರ್ಯಕಾರಿ ಮಂಡಳಿ ಸದಸ್ಯರು)
  5. ಶ್ರೀಮತಿ ಕಮಲಮ್ಮ (ಮಾದರಿ ಕೃಷಿಕರು)
  6. ಸ್ವಾತಿ (ಉದ್ಯಮಿ, ವಾಸವಿ ಕಾಂಡಿಮೆಂಟ್ಸ್)
    ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅದಮ್ಯಚೇತನ ಫೌಂಡೇಶನ್ ನ ಸಂಸ್ಥಾಪಕರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ನೆರವೇರಿಸಲಿದ್ದಾರೆ. ಹಾಗೆಯೇ ಯುವಾಬ್ರಿಗೇಡ್ ಸಂಸ್ಥಾಪಕರು, ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕರೂ ಆದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಎಲ್ಲಾ ಅತಿಥಿಗಳು ಮಹಿಳಾ ಉದ್ಯಮಿಗಳೇ ಆಗಿದ್ದಾರೆಂದು, ಮಹಿಳೆಯರಿಗೆ ಮಾತ್ರ ಪ್ರವೇಶಾವಕಾಶವಿದೆ ಎಂದು ತಪ್ಪಾಗಿ ತಿಳಿಯಬೇಡಿ. ಎಲ್ಲರಿಗೂ ಮುಕ್ತ ಪ್ರವೇಶವಿದೆ.
    ಕಾರ್ಯಕ್ರಮವು ಇದೇ ಭಾನುವಾರ ದಿನಾಂಕ 28ರಂದು ಬೆಂಗಳೂರಿನ ಅವರ್ ಸ್ಕೂಲ್ ಆಡಿಟೋರಿಯಂನಲ್ಲಿ ನಡೆಯುತ್ತದೆ (ಸಮಯ: ಬೆಳಿಗ್ಗೆ 9.30-1.30). ಹೆಚ್ಚಿನ ಮಾಹಿತಿಗಾಗಿ 9141751761ಕ್ಕೆ ಕರೆಮಾಡಿ ವಿಚಾರಿಸಬಹುದಾಗಿದೆ.

ನಿಮ್ಮಲ್ಲಿ ಇರುವ ಕೆಲವು ಐಡಿಯಾಗಳು ನಿಮಗೆ ಹೊಸದೆನಿಸಬಹುದು, ಆದರೆ ಅದು ಉದ್ಯಮವಲಯಕ್ಕೆ ಹಳೆಯದಾಗಿರಬಹುದು ಅಥವಾ ನಿಮಗೆ ಐಡಿಯಾದ ಹೊಸತನದ ಬಗ್ಗೆ ಗೊಂದಲವಿರಬಹುದು, ಆದರೆ ಅದು ಉದ್ಯಮವಲಯಕ್ಕೆ ಅವಶ್ಯಕವಾಗಿರಬಹುದು. ಹೀಗೆ ನಿಮ್ಮ ಅನೇಕ ಗೊಂದಲಗಳಿಗೆ ಮಾರ್ಗದರ್ಶನ ನೀಡುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಸೊನ್ನೆಯಿಂದ ಉದ್ಯಮದ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದವರ ಪರಿಚಯ ಮಾಡಿಕೊಂಡು ನಿಮ್ಮ ಪ್ರಯತ್ನಕ್ಕೆ ಶಕ್ತಿ ತುಂಬಿಕೊಳ್ಳಲು ಈ ಕಾರ್ಯಕ್ರಮಕ್ಕೆ ಬರುವಿರಿ ತಾನೆ? ಮರೆಯದೇ ಬನ್ನಿ.

Leave a Reply

Your email address will not be published.

This site uses Akismet to reduce spam. Learn how your comment data is processed.