ಬೆಂಗಳೂರಿನಲ್ಲಿ ಡಿಸೆಂಬರ್ 18ರಂದು ಭಾರತ ಸರಕಾರದ ಕೇಂದ್ರ ಮಾಹಿತಿ ಆಯುಕ್ತರಾದ ಉದಯ್ ಮೆಹ್ರೂರ್ಕರ್ ಅವರ ‘ಸಾವರ್ಕರ್ ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ್’ ಕೃತಿಯು ಶ್ರೀ ನಿರ್ಮಲಾನಂದ ಮಹಾಸ್ವಾಮಿಯವರ ಸಾನ್ನಿಧ್ಯದಲ್ಲಿ ನಗರದ ಪುಟ್ಟಣ ಚೆಟ್ಟಿ ಪುರಭವನದಲ್ಲಿ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಸಂವಾದ ತಂಡದ ಜೊತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

1.ಸಾವರ್ಕರ್ ಬಗೆಗೆ, ಅವರ ದೂರದೃಷ್ಟಿ ಮತ್ತು ದೇಶ ವಿಭಜನೆಯ ಕುರಿತು ಈಗಾಗಲೇ ಅನೇಕ ಕೃತಿಗಳ ರಚನೆಯಾಗಿದೆ, ಆದರೆ ನೀವು ಸಾವರ್ಕರ್ ಅವರ ಕುರಿತಾಗಿ ಬರೆಯಲು ಪ್ರೇರಣೆ ಏನು?

ಉ: ಕಳೆದ 25ವರ್ಷಗಳಿಂದಲೂ ಸಾವರ್ಕರ್ ಅವರ ವಿಚಾರಗಳ ಕುರಿತು ಬಹಳ ಆಸಕ್ತಿ ವಹಿಸಿ ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿಕೊಂಡಿದ್ದೆ. ಎಡಪಂಥೀಯ ಮತ್ತು ಸ್ಯೂಡೋ ಸೆಕ್ಯುಲರ್ ರಾಜಕಾರಣಿಗಳು ಸಾವರ್ಕರರ ವಿರುದ್ಧ ಆರೋಪಗಳ ಸರಮಾಲೆಯನ್ನೇ ಮಾಡಿದಾಗ, ಸಹಜವಾಗಿಯೇ ಸಂಶೋಧನೆ ಮಾಡಿ ಸತ್ಯದ ಅರಿವಿದ್ದ ನನಗೆ ಸಾವರ್ಕರರ ವಿಚಾರಗಳನ್ನು ಗಟ್ಟಿಯಾಗಿ ಮಂಡಿಸುವ ಅವರ ಪರವಾಗಿ ಮಾತನಾಡುವ ದನಿಗಳಿಗೆ ಬಲ ಬೇಕು ಎನಿಸಿತ್ತು.ಅಲ್ಲದೆ ಸಾವರ್ಕರರ ಪರವಾಗಿ ಮಾತನಾಡುವ ರಾಷ್ಟ್ರೀಯವಾದಿಗಳು ಬಹತೇಕ ಬಾರಿ ಅವರ ಕ್ರಾಂತಿಕಾರಿ ಮುಖವನ್ನಷ್ಟೆ ಜಗತ್ತಿನೆದುರು ತೆರೆದಿಡುತ್ತಿದ್ದರು. ಆದರೆ ಸಾವರ್ಕರ್ ಕೇವಲ ಕ್ರಾಂತಿಕಾರಿ ಹೋರಾಟಗಾರರು ಮಾತ್ರವಲ್ಲ,ಭಾರತದ ಭದ್ರತೆ ಮತ್ತು ರಾಜತಾಂತ್ರಿಕ ಸಂಬಂಧಗಳ ಕುರಿತಾಗಿ ಬಹಳ ಉನ್ನತವಾದ ದೃಷ್ಟಿಕೋನವನ್ನು ಹೊಂದಿದ್ದವರು.ಅವರ ನಿಲುವುಗಳು ಸಾಕಾರಗೊಂಡಿದ್ದರು ಭಾರತ ಈ ಹೊತ್ತಿಗೆ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿತ್ತು. ಜತೆಗೆ ದೇಶ ವಿಭಜನೆಯನ್ನು ತಡೆಯಲು ಸಾವರ್ಕರರ ಪ್ರಯತ್ನಗಳು ಸ್ಮರಣೀಯವಾದುದು. ಅದಲ್ಲದೆ ಅವರ ಹಿಂದುತ್ವದ ಪ್ರತಿಪಾದನೆ ಅನ್ನುವಂಥದ್ದು ಬೇಷರತ್ ರಾಷ್ಟ್ರವಾದದ ಪ್ರತಿಪಾದನೆ ಎನ್ನುವುದು ನನ್ನ ಅಭಿಪ್ರಾಯ ಏಕೆಂದರೆ ಮತ,ಜಾತಿ ಮತ್ತು ಪ್ರಾಂತೀಯತೆಗಳು ರಾಷ್ಟ್ರದ ಎದುರಿಗೆ ಎರಡನೆಯದಾಗಿ ನಿಂತುಬಿಡುತ್ತದೆ, ಆದರೆ ಅವರ ಹಿಂದುತ್ವವನ್ನ ವಿಘಟನಕಾರಿಯೆಂದು ಬಿಂಬಿಸಲಾಗುತ್ತದೆ. ಹಾಗಾಗಿ 2018ರ ಹೊತ್ತಿಗೆಲ್ಲ ಈ ಬಗ್ಗೆ ಉಪನ್ಯಾಸಗಳನ್ನು ನೀಡಲು ಆರಂಭಿಸಿದೆ, ಅದಕ್ಕೆ ಸಿಕ್ಕ ಪ್ರತಿಕ್ರಿಯೆಗಳನ್ನು ಗಮನಿಸಿ ನನ್ನ ಜತೆಗೆ ಸಹ ಲೇಖಕ ಚಿರಾಯು ಪಂಡಿತ್ ಇಬ್ಬರೂ ಈ ಪುಸ್ತಕ ಆರಂಭಿಸಿದೆವು.ಅಲ್ಲದೆ ಸಾವರ್ಕರರ ಮೇಲೆ ಮಾಡುತ್ತಿದ್ದ ಆರೋಪಗಳಿಗೆ ಮುಕ್ತಿ ನೀಡಿ, ಅವರ ಇತರ ಅನೇಕ ವಿಚಾರಗಳನ್ನು ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.

2.ನೀವು ಸಾವರ್ಕರರನ್ನ ಭಾರತದ ರಾಷ್ಟ್ರೀಯ ಭದ್ರತೆಯ ಪಿತಾಮಹ ಎಂದಿದ್ದೀರಿ, ಯಾಕೆ ಎನ್ನುವುದನ್ನ ವಿಸ್ತರಿಸಿ ಮತ್ತು  ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸಾವರ್ಕರರ ವಿಚಾರಧಾರೆಗಳಿಂದ ದೂರ ಸರಿದಿದ್ದರಿಂದ ಭಾರತದ ಸ್ವಾತಂತ್ರ್ಯಾನಂತರದ ಸ್ಥಿತಿಗತಿಗಳ ಮೇಲೆ ಆದ ಪರಿಣಾಮಗಳೇನು?

ಉ :ಸಾವರ್ಕರರನ್ನ ರಾಷ್ಟ್ರೀಯ ಭದ್ರತೆಯ ಪಿತಾಮಹ ಎಂದಿರುವುದು ನನ್ನ ಬಹಳ ಸ್ಪಷ್ಟವಾದ ನಿಲುವು. ೭೦/೮೦ವರ್ಷಗಳ ಮೊದಲೇ ಭಾರತ ಪ್ರಸ್ತುತ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಕರಾರುವಾಕ್ಕಾಗಿ ಹೇಳುತ್ತಾರೆ, ಅಲ್ಲದೆ ಚೀನಾ ಪಾಕಿಸ್ತಾನದ ಜೊತೆಗಿರುವ ನಮ್ಮ ತಿಕ್ಕಾಟಗಳು ಸಾಮಾಜಿಕ ಭಿನ್ನತೆ ಮತ್ತು ಆಂತರಿಕ ಭದ್ರತೆಯ ಕುರಿತಾಗಿಯೂ ಸವಿಸ್ತಾರವಾದ ವಾದಗಳನ್ನು ಮಂಡಿಸುತ್ತಾರೆ. ಉದಾಹರಣೆಗೆ ಅಸ್ಸಾಮಿನಲ್ಲಿ ಪೂರ್ವ ಬಂಗಾಲದ ಮುಸಲ್ಮಾನರ ಅಕ್ರಮ ವಲಸೆಗಳಿಂದಾಗುತ್ತಿದ್ದ ಸಮಸ್ಯೆಗಳನ್ನು 1941ರಲ್ಲೇ ಹೇಳುತ್ತಾರೆ, ಇಂಡೋ- ಚೈನಾ ಯುದ್ಧವನ್ನು 1954ರಲ್ಲೇ ಭವಿಷ್ಯ ನುಡಿದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಆಚಾರ್ಯ ಕೃಪಲಾನಿಯವರ ಬಳಿ ಮಾತನಾಡುತ್ತಾ ಪಾಕಿಸ್ತಾನವನ್ನು ಮುಸಲ್ಮಾನರಿಗಾಗಿ ನೀಡುವುದರಿಂದ ಭಾರತದ ಹಿಂದೂ-ಮುಸ್ಲಿಂ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದರು ಅಲ್ಲದೆ ಪಾಕಿಸ್ತಾನವನ್ನು ಕೇಳುತ್ತಿರುವ, ಇಲ್ಲದಿದ್ದರೆ ಭಾರತದ ವಿರುದ್ಧ ಮುಸಲ್ಮಾನ ಜನತೆಯನ್ನ ಎತ್ತಿಕಟ್ಟುತ್ತಿದ್ದ ಅಂದಿನ ನಾಯಕರುಗಳು ಒಮ್ಮೆ ದೇಶವಾಗಿ ಅಸ್ತಿತ್ವಕ್ಕೆ ಬಂದು,ಕೈಯಲ್ಲಿ ಶಸ್ತ್ರಾಸ್ತ್ರಗಳು ಸಿಕ್ಕಾಗ ಪರಿಣಾಮಗಳು ಯಾವತ್ತೂ ಭಾರತದ ಪರವಾಗಿ ಇರಲು ಸಾಧ್ಯವಿಲ್ಲ ಎಂದಿದ್ದರು.ಅವರ ಎಚ್ಚರಿಕೆಯ ನುಡಿಗಳು ನಮ್ಮ ಸೈನಿಕರು, ಭಾರತದ ಜನರು ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆಯುವ ಚಟುವಟಿಕೆಗಳಿಂದ ಪ್ರಾಣ ಕಳೆದುಕೊಂಡಾಗ ಮನದಟ್ಟಾಗುತ್ತದೆ, ಮನಸ್ಸಿಗೆ ನೋವಾಗುತ್ತದೆ.

ಆದರೆ ಸಾವರ್ಕರರ ಸುರಕ್ಷತಾ ಭದ್ರತಾ ನೀತಿಗಳನ್ನು ಭಾರತ ಅನುಸರಿಸಿದ್ದರೆ ಇಂದು ಭಾರತ ಸೂಪರ್ ಆಗಿರುತ್ತಿದ್ದುದರಲ್ಲಿ ಸಂದೇಹವೇ ಇಲ್ಲ.

3.ರಾಜತಾಂತ್ರಿಕ ಸಂಬಂಧಗಳ ಕುರಿತಾದ ಸಾವರ್ಕರರ ವಿಚಾರಗಳ ಮೂಲಭೂತ ಅಂಶಗಳು ಯಾವುವು?ಇವು ಇಂದಿನ ಮಲ್ಟಿ ಪೋಲಾರ್ ಜಗತ್ತಿಗೆ ಎಷ್ಟರಮಟ್ಟಿಗೆ ಪ್ರಸ್ತುತ?

ಉ: ಸಾವರ್ಕರರ ರಾಜತಾಂತ್ರಿಕ ವಿಚಾರಗಳ ಮೂಲಭೂತ ಅಂಶವೆಂದರೆ ಯಾವುದೇ ಎರಡು ದೇಶಗಳು ಖಡಾಖಂಡಿತವಾಗಿ ಯಾವತ್ತಿಗೂ ಸ್ನೇಹಿತರೂ ವೈರಿಗಳೂ ಆಗಿರಲು ಸಾಧ್ಯವಿಲ್ಲ.ಏಕೆಂದರೆ ಆ ಎಲ್ಲ ಸಂಬಂಧಗಳು ಆಯಾ ದೇಶದ ಅಗತ್ಯತೆಗಳ ಮೇಲೆ ಅವಲಂಬಿತವಾಗಿರುತ್ತದೆ, ಮತ್ತು ನಮ್ಮ ಶತ್ರುಗಳ ಶತ್ರುಗಳನ್ನ ನಾವು ಮಿತ್ರನೆಂದೇ ಕರೆಯಬೇಕಾಗುತ್ತದೆ. ಪಂಡಿತ್ ನೆಹರುರವರು ತಮ್ಮ ಆಲಿಪ್ತ ನೀತಿಯಲ್ಲಿ ತೇಲಿ ಮುಳಿಗುವಾಗ ಸಾವರ್ಕರರು ಬಹಳ ಸ್ಪಷ್ಟವಾಗಿ ಸಮರ್ಥವಾದ ರಾಜತಾಂತ್ರಿಕತೆ ಮತ್ತು ಸೇನೆಯ ಬಲಿಷ್ಠತೆ ಮಾತ್ರವೇ ಭಾರತವನ್ನು ಗಟ್ಟಿಯಾಗಿಸಬಲ್ಲದು ಎಂದಿದ್ದರು.ಸಾವರ್ಕಕರು ದೇಶದ ಸುರಕ್ಷತೆ ಮತ್ತು ಭದ್ರತೆಯ ಸಲುವಾಗಿ ಬಹಳ ನಿಖರವಾದ ಮತ್ತು ಆಳವಾದ ಒಳನೋಟವನ್ನು ಹೊಂದಿದ್ದರು.ಸೇನಾ ಸಾಮರ್ಥ್ಯ ಪ್ರತಿ ದೇಶದ ಮಹಾನತೆಯನ್ನು ನಿರ್ಧರಿಸುತ್ತದೆ ಎಂಬುದನ್ನ ನಂಬಿದ್ದವರು ಅವರು.ಇದರ ಕುರಿತಾಗಿ ತಾಲಿಬಾನ್ ಮತ್ತು ಚೈನಾದ ಕುರಿತಾಗಿ ಗಮನ ಹರಿಸಿದರೆ ನಮಗೆ ಬಹಳ ಸ್ಪಷ್ಟವಾದ ಚಿತ್ರಣ ದೊರಕುತ್ತದೆ. ತಾಲಿಬಾನ್ ತಾನು ಮುಸಲ್ಮಾನ ಮತದ ರಕ್ಷಕನೆಂದು ಸ್ವಯಂ ಘೋಷಿಸಿಕೊಳ್ಳುತ್ತದೆ ಆದರೆ ಅದು ಚೀನಾದ ದೊಡ್ಡ ಸೇನೆಯ ಎದುರು ತನ್ನ ಕಿರು ಬೆರಳನ್ನೂ ಎತ್ತುವುದಿಲ್ಲ.ಆಫ್ಘಾನಿಸ್ತಾನದ ಗಡಿರೇಖೆಯ ಬಳಿಯ ಜಿನಜಯಾಂಗ್ ಪ್ರಾಂತದ ಮುಸಲ್ಮಾನ ವೀಗರ್ ಸಮುದಾಯದ ಮೇಲೆ ದೌರ್ಜನ್ಯ ಎಸಗಿ ಮಾನವ ಹಕ್ಕುಗಳ ಉಲ್ಲಂಘನೆಯಾದರೂ ತುಟಿ ಎರಡು ಮಾಡುತ್ತಿಲ್ಲ ಎಂಬುದನ್ನ ಆಲೋಚಿಸಿದರೆ  ಸಾವರ್ಕರರ ದೃಷ್ಟಿಕೋನ ಬಹಳ ಪಕ್ವವಾಗಿತ್ತು ಎಂಬುದು ಬರಿಗಣ್ಣಿಗೆ ಅರ್ಥವಾಗುತ್ತದೆ‌.ಸಾವರ್ಕರರ ಭದ್ರತೆಯ ಮತ್ತು ಸುರಕ್ಷತೆಯ ಕುರಿತಾದ ನಿಲುವುಗಳು ಸಾರ್ವಕಾಲಿಕವಾದುದು.ಅದು ಭೀಮನ ಬಲ ಮತ್ತು ಚಾಣಕ್ಯನ ತಂತ್ರದ ಆಧಾರದ ಮೇಲೆ ರೂಪಿತವಾಗಿದೆ‌

4.ಸಾವರ್ಕರರ ಸುಭಾಷ್ ಚಂದ್ರ ಬೋಸರಿಗೆ ಆಕ್ಸಿಸ್ ದೇಶಗಳ ಜೊತೆಗೆ ಸೇರಲು ಪ್ರೇರಣೆ ನೀಡುತ್ತಾರೆ. ಅವರ ತಂತ್ರಗಾರಿಕೆ ಅವತ್ತಿನ ಮುಖ್ಯವಾಹಿನಿಯ ಸ್ವಾತಂತ್ರ್ಯ ಆಂದೋಲನದ ಮಟ್ಟಿಗೆ ಬಹಳ ಪಾಪುಲಿಸ್ಟ್ ಆದ ನಿಲುವೇನಾಗಿರಲಿಲ್ಲ. ಅವರ ನಿಲುವುಗಳ ಕುರಿತು ನಿಮ್ಮ ಅಭಿಪ್ರಾಯ ಏನು? ಅವರ ಸೈನಿಕೀಕರಣದ ಪ್ರಯತ್ನಗಳು ಭಾರತಕ್ಕೆ ಸಹಾಯವಾಗುತ್ತಿದ್ದವೇನು?

ಉ : ಬಹುಶಃ ಸುಭಾಷ್ ಚಂದ್ರಬೋಸರು ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಜರ್ಮನಿ ಮತ್ತು ಜಪಾನ್‌ನ ಸಹಾಯ ತೆಗೆದುಕೊಂಡದ್ದು ಸಾವರ್ಕರರ ಪ್ರೇರಣೆಯಿಂದ ಎನ್ನುವುದು ತಪ್ಪಾಗುತ್ತದೆ.ಯಾಕೆಂದರೆ ಶತ್ರುವಿನ ಶತ್ರು ಮಿತ್ರ ಎನ್ನುವುದು ಪಾಪುಲಿಸ್ಟ್ ಆದುದಲ್ಲ. ಮತ್ತು ಅದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ಸಿನ ಪ್ರಾಪಗಾಂಡಾದ ಆಚೆಗೂ ಮಿಲಿಟರೀಕರಣದ ಕುರಿತಾಗಿ ಸಾರ್ವಜನಿಕರ ಬೆಂಬಲ ಬಹಳ ಹೆಚ್ಚಿತ್ತು.

 ಎರಡನೆಯ ಮಹಾಯುದ್ಧದ ಸಮಯದಲ್ಲಿ ಹಿಂದೂಗಳು ಬ್ರಿಟಿಷ್‌ ಸೇನೆಯನ್ನು ಸೇರಿ ಅಲ್ಲಿ ಮಿಲಿಟರಿ ಶಿಕ್ಷಣವನ್ನು ಪಡೆದುಕೊಂಡು ಮುಂದೆ ಸ್ವಾತಂತ್ರ್ಯ ನಂತರ ಭಾರತವನ್ನು ಸುರಕ್ಷಿತವಾಗಿಡಬೇಕು ಅನ್ನುವ ಸಾವರ್ಕರರ ನಿಲುವುಗಳು ಕೆಲವೇ ಜನರಿಗೆ ತಿಳಿದಿರುವಂಥದ್ದು, ಅಲ್ಲದೆಅದೊಂದು ಮಾಸ್ಟರ್ ಸ್ಟ್ರೋಕ್ ನಡೆ, ಅದರಿಂದ ಭಾರತಕ್ಕೆ ಬಹಳ ದೊಡ್ಡ ಮಟ್ಟದ ಲಾಭವಾಗಿದೆ.ಭಾರತದ ಸೇನಾ ಸಾಮರ್ಥ್ಯ ಕಡಿಮೆಯಾಗಿದ್ದರೆ ಜಮ್ಮು ಕಾಶ್ಮೀರದಂತೆ ಗುಜರಾತ್ ಮತ್ತು ರಾಜಸ್ಥಾನದಲ್ಲೂ ದಾಳಿಗೆ ಸಂಚು ನಡೆಯುತ್ತಿತ್ತು. ಇದು ಸ್ವಾತಂತ್ರ್ಯಾನಂತರ ಮುಸಲ್ಮಾನರ ಸ್ಲೋಗನ್ನುಗಳಲ್ಲಿ ಹೇಳುತ್ತಿದ್ದ “ಹಸ್ ಕೆ ಲಿಯಾ ಪಾಕಿಸ್ಥಾನ್ , ಲಡ್ ಕೆ ಲೇಂಗೆ ಹಿಂದೂಸ್ಥಾನ್ ” ಎನ್ನುವುದರಲ್ಲೇ ತಿಳಿಯುತ್ತದೆ‌

 5.2021,ಮೋಪ್ಲಾ ಹತ್ಯಾಕಾಂಡದ ಶತಮಾನದ ವರ್ಷ. ಹತ್ಯಾಕಾಂಡಕ್ಕೆ ಸಾವರ್ಕರರ ಪ್ರತಿಕ್ರಿಯೆ ಏನಾಗಿತ್ತು? ಕಾಂಗ್ರೆಸ್ ಹತ್ಯಾಕಾಂಡಕ್ಕೆ ಅಗತ್ಯವಾಗಿ ಬೇಕಾದ ದನಿಯಲ್ಲಿ ಪ್ರತಿಕ್ರಿಯೆ ನೀಡಿದ್ದರೆ ಇವತ್ತಿನ ಅನೇಕ ಭಯೋತ್ಪಾದಕ ದಾಳಿಗಳನ್ನು ಎದುರಿಸುವ ಸಂದರ್ಭ ಬರುತ್ತಿರಲಿಲ್ಲ ಎಂದು ನಿಮಗೆ ಅನ್ನಿಸುತ್ತದೆಯೇ?

ಉ : ಮೋಪ್ಲಾ ಹತ್ಯಾಕಾಂಡ ನಡೆದಾಗ ಸಾವರ್ಕರರು ಜೈಲಿನಲ್ಲಿದ್ದರು.ಹಾಗಾಗಿ ಅವರ ಸಾರ್ವಜನಿಕ ಅಭಿಪ್ರಾಯದ ಕುರಿತಾಗಿ ಪ್ರಶ್ನೆ ಏಳುವುದಿಲ್ಲ.ಅವರ ಪ್ರತಿಕ್ರಿಯೆ ತಣ್ಣಗಿತ್ತು ಆದರೆ ಬಹಳ ಶಕ್ತಿಶಾಲಿಯಾಗಿಯೂ ಇತ್ತು. ಅದು ಅವರ ಐತಿಹಾಸಿಕ ಪುಸ್ತಕ” ಹಿಂದುತ್ವ”ದ ಮೂಲಕ ವ್ಯಕ್ತವಾಗಿ ಹೊರಬಂದಿದೆ‌. ಅದು ಹಿಂದೂ ರಾಷ್ಟ್ರೀಯವಾದದ ಕುರಿತಾಗಿ ಸ್ಪಷ್ಟವಾದ ಚಿತ್ರಣವನ್ನು ನೀಡುವ ಮತ್ತು ಅದನ್ನು ಹಿಂದೂಯಿಸಮ್ಮಿನಿಂದ ಬೇರ್ಪಡಿಸುವಂತಹ ಖಚಿತವಾದ ವಾದವನ್ನು ನಮ್ಮೆದುರು ನೀಡಿದೆ. ಜೈಲಿನ ಸರಳುಗಳಲ್ಲಿ ಬಂಧಿಯಾಗಿದ್ದರೂ ಸಾವರ್ಕರರಿಗೆ ಕಾಂಗ್ರಸ್ಸಿನ ಮುಸ್ಲಿಂ ಓಲೈಕೆ ಮತ್ತು ಅದರ ನೇರ ಪರಿಣಾಮವಾಗಿ ನಡೆದ ಮೋಪ್ಲಾ ಹತ್ಯಾಕಾಂಡದ ಸಂಪೂರ್ಣ ಚಿತ್ರಣವಿತ್ತು.  ಅವರ ಹಿಂದುತ್ವ ಪುಸ್ತಕದ ನಂತರದಲ್ಲಿ ಡಾ.ಹೆಡ್ಗೆವಾರರ ರಾಷ್ಟ್ರೀಯ ಸ್ವಯಂಸೇವಕ ಸಂಘವು   ಮುಂದುವರೆದ ಭಾಗವಾಗಿ ಸ್ಥಾಪನೆಯಾಗಿರುವುದು ಕಾಣಬಹುದು.ಡಾ.ಹೆಡ್ಗೇವಾರರು 1924ರಲ್ಲಿ ಸಾವರ್ಕರರನ್ನ ಅಂಡಮಾನಿನ ಕಾಲಾಪಾನಿಯ ನಂತರ ರತ್ನಾಗಿರಿಯಲ್ಲಿ ಭೇಟಿಯಾಗಿದ್ದರು.ಅವರಿಬ್ಬರ ನಡುವೆ ಹಿಂದೂಗಳನ್ನ ಓಲೈಕೆಯ ರಾಜಕಾರಣದ ಕಪಿಮುಷ್ಠಿಯಿಂದ ಹೊರತರುವ ಕುರಿತಾಗಿ,ಮೋಪ್ಲಾ ಹತ್ಯಾಕಾಂಡದ ಕುರಿತಾಗಿ ಚರ್ಚೆಗಳು ನಡೆದಿರಬಹುದು ಎನ್ನುವುದು ನನ್ನ ಅಭಿಪ್ರಾಯ. ಮೋಪ್ಲಾ ಹತ್ಯಾಕಾಂಡಕ್ಕೆ ಪ್ರತಿಕ್ರಿಯಾತ್ಮಕವಾಗಿ ಒಂದು ಅಕಾಡೆಮಿಕ್ ಆದ ಥಿಯಾರೆಟಿಕಲ್ ಪುಸ್ತಕವಾಗಿ “ಹಿಂದುತ್ವ”ವನ್ನು ಬರೆದರೆ, ಮತ್ತೊಂದು ಆರ್‌ಎಸ್‌ಎಸ್‌ನ ಸ್ಥಾಪನೆಗೆ ಪ್ರೇರಣೆ ಪ್ರಾಯೋಗಿಕವಾದ ಪ್ರತಿಕ್ರಿಯೆಯೆಂದು ಪರಿಗಣಿಸಬಹುದು.

ಮೋಪ್ಲಾ ಹತ್ಯಾಕಾಂಡವು ಭಯೋತ್ಪಾದನೆಯೇ ಮತ್ತು ಕಾಂಗ್ರೆಸ್ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರೆ ಭಾರತವನ್ನು ಮುಸಲ್ಮಾನ ಓಲೈಕೆಯ ರಾಜಕಾರಣದ ಮಗ್ಗುಲಿನಿಂದ ಮತ್ತು ವಲಾಬೀ ಎಕ್ಸ್ಟ್ರೀಮಿಸಮ್ಮಿನಿಂದ ಕಡೆ ಪಕ್ಷ ಸ್ವಲ್ಪವಾದರೂ ದೂರವಾಗಲು ಸಹಾಯವಾಗುತ್ತಿತ್ತು.

6. ಸಾವರ್ಕರರ ಕುರಿತಾದ ಯಾವುದೇ ಚರ್ಚೆಗಳು ಗಾಂಧಿಸಾವರ್ಕರರ ನಡುವಿನ ಬೈನರಿ ಚರ್ಚೆಯಾಗಿ ನಿಲ್ಲುತ್ತದೆ‌. ಕುರಿತಾದಂತೆ ನಿಮ್ಮ ನಿಲುವೇನು, ಇದನ್ನ ಸಾಮಾನ್ಯ ಭಾರತಿಯನೊಬ್ಬ ಹೇಗೆ ತೆಗೆದುಕೊಳ್ಳಬೇಕು? ಹೇಗೆ ಕುರಿತಂತೆ ನೋಡಬೇಕೆಂಬುದು ನಿಮ್ಮ ಅಪೇಕ್ಷೆ?

ಉ : ಈ ನಿಟ್ಟಿನಲ್ಲಿ ಎರಡು ಮಾತಿಲ್ಲ ಯಾವುದೇ ಗೊಂದಲವೂ ಇಲ್ಲ‌.ಗಾಂಧೀಜಿಯವರ ಟ್ರಸ್ಟೀಶಿಪ್ ಅನ್ನುವಂತಹ ವಿಚಾರಗಳು ಇವತ್ತಿನ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ (ಸಿಎಸ್‌ಆರ್)ನ ರೂಪದಲ್ಲಿ ಮತ್ತು ಅವರ ಗ್ರಾಮ ಸ್ವರಾಜ್ಯ, ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸುವ ಆರ್ಥಿಕ ನೀತಿಗಳು ಇಂದಿಗೂ ಪ್ರಸ್ತುತ. ಆದರೆ ಯಾವುದೇ ಪ್ರಾಮಾಣಿಕ ಇತಿಹಾಸತಜ್ಞರು ಭಾರತದ ವಿಭಜನೆಯ ಕುರಿತಾಗಿ ಅವರ ನಿಲುವುಗಳನ್ನು , ಹಿಂದೂ ಮುಸ್ಲಿಂ ಐಕ್ಯತೆಯ ಹೆಸರಿನಲ್ಲಿ ಹಿಂದೂಗಳಿಗಿಂತ ಮುಸಲ್ಮಾನರ ಓಲಯಕೆ ಮಾಡಿದ್ದು ಮತ್ತು ಅದರ ಸಂಪೂರ್ಣ ಲಾಭವನ್ನು ಮುಸ್ಲಿಂ ಲೀಗ್ ಪಡೆದುಕೊಂಡಿದ್ದು ಅಥವಾ ಅವರ ಸಂಪೂರ್ಣ ಅಹಿಂಸೆಯ ತತ್ತ್ವಗಳಿರಬಹುದು ಇದನ್ನ ಸಮರ್ಥಿಸಲು ಸಾಧ್ಯವಿಲ್ಲ. 

 ಇನ್ನೊಂದೆಡೆ ಸಾವರ್ಕರರ ರಾಷ್ಟ್ರೀಯ ಭದ್ರತೆ ಮತ್ತು ರಾಜತಾಂತ್ರಿಕ ನೀತಿಗಳ ದೂರದೃಷ್ಟಿ ಭಾರತವನ್ನು ಒಡೆಯುವ ಶಕ್ತಿಗಳಿಂದ ಕಾಪಾಡುವ ನಿಟ್ಟಿನಲ್ಲಿ ಬಲಿಷ್ಠ ದೇಶವಾಗುವ ನಿಟ್ಟಿನಲ್ಲಿ ಪೂರಕವಾಗಿದ್ದವು.ಭಾರತದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಮತ್ತು ವಿಭಜನೆಯ ವಿಚಾರದಲ್ಲಿ ಗಾಂಧೀಜಿಯವರು ಮತ್ತು ಸಾವರ್ಕರರ ನಿಲುವುಗಳ ಬಹಳ ಭಿನ್ನ ಸ್ತರದಲ್ಲಿದ್ದವು‌.ಹಾಗಾಗಿ ಬೈನರಿಯಾಗಿ ಕಾಣುವುದು ಸಹಜ.ಈ ಎಲ್ಲಾ ವೈಚಾರಿಕ ಭಿನ್ನತೆಯ ಆಚೆಗೂ ಅವರಿಬ್ಬರ ನಡುವೆ ದೇಶ ಹಿತದ ವಿಚಾರದಲ್ಲಿ ಮತ್ತು ವೈಯಕ್ತಿಕವಾಗಿ ಬಹಳ ಗೌರವದ ಭಾವನೆಯಿತ್ತು.ಒಮ್ಮೆ 1040ರ ಆಸುಪಾಸಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವಾಗ ಗಾಂಧೀಜಿಯವರು ಬಹಳ ನಿಶ್ಯಕ್ತಿಯಿಂದ ಬಳಲುವಾಗ ಸಾವರ್ಕರರು ಗಾಂಧೀಜಿಯವರು ನಮ್ಮ “ದೇಶದ  ಆಸ್ತಿ” ಎಂದು ಕರೆದಿದ್ದರು.ಅದೇ ರೀತಿ ಗಾಂಧೀಜಿಯವರೂ ಅನೇಕ ಬಾರಿ ಸಾವರ್ಕರರನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

7.ಸಾವರ್ಕರರ ಕಲ್ಪನೆಯ ಅಖಂಡ ಭಾರತದ ವಿಚಾರಗಳು ಇಂದಿಗೂ ಪ್ರಸ್ತುತವೇ? ಸ್ವಾತಂತ್ರ್ಯಾನಂತರದ ಇಷ್ಟೆಲ್ಲ ಘಟನಾವಳಿಗಳ ನಂತರವೂ, ಡೆಮಾಗ್ರಫಿಕ್ ಬದಲಾವಣೆಗಳ ನಂತರವೂ ಅಖಂಡ ಭಾರತದ ಕುರಿತಾಗಿ ಆಶಾವಾದವಿದೆಯೆ?

ಉ : ಅಖಂಡ ಭಾರತದ ಕಲ್ಪನೆ ಈ ಎಲ್ಲ ಸವಾಲುಗಳ ಆಚೆಗೂ ಇಂದಿಗೂ ಬಹಳವೇ ಪ್ರಸ್ತುತವಾಗಿದೆ.

8.ಒಟ್ಟಾರೆಯಾಗಿ, ಸಾವರ್ಕರರನ್ನ ಮತ್ತವರ ವಿಚಾರಗಳನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಯುವಕರು ಹೇಗೆ ನೋಡಬೇಕು?ಸಾವರ್ಕರರ ಜೀವನದಿಂದ ಇಂದಿನ ಯುವಕರು ಕಲಿಯಬೇಕಾದ ಅಂಶಗಳೇನು?ಮೌಲ್ಯಗಳೇನು

ಉ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮಾನನೀಯ ಮೋಹನ್ ಭಾಗವತ್‌ಜೀವರು ಪುಸ್ತಕದ ಕುರಿತು ಮಾತನಾಡುತ್ತಾ ಭಾರತವನ್ನು ಮತ್ತೆ ಬಲಿಷ್ಠಗೊಳುಸುವ ಸಲುವಾಗಿ ದೇಶವನ್ನು ಒಡೆಯುವ ಮನಸ್ಥಿತಿಯ ವಿರುದ್ಧ ಹೋರಾಡಲು ಒಂದು ದೀವಿಗೆಯಾಗಲಿದೆ ಎಂದಿದ್ದಾರೆ.ರಾಷ್ಟ್ರೀಯ ಭದ್ರತೆಯೆಂಬುದು ಇಂದು ಬಹಳ ಮಹತ್ವದ ವಿಚಾರ ಮತ್ತು ನಮ್ಮ ದೇಶದ ಯುವ ಪೀಳಿಗೆ ಈ ಕುರಿತಂತೆ ಸಾವರ್ಕರರ ದೃಷ್ಟಿಕೋನವನ್ನು ಕುರಿತು ತಿಳಿಯುವುದರಿಂದ ಭವಿಷ್ಯದ ದೃಷ್ಟಿಯಿಂದ ಸುರಕ್ಷತೆಯ ಕುರಿತು ಸ್ಪಷ್ಟವಾದ ನಿಲುವುಗಳು ಒಡಮೂಡುತ್ತದೆ‌.ಅಲ್ಲದೆ ಯುವಪೀಳಿಗೆ ಸಾವರ್ಕರರ ದೃಷ್ಟಿಯಿಂದ ನೈಜ ಇತಿಹಾಸದ ಪುಟಗಳನ್ನು ಅರಿಯಬೇಕಾಗಿದೆ. ಆದರೆ ಅದೆಲ್ಲದಕ್ಕಿಂತ ಮುಖ್ಯವಾಗಿ ಸಾವರ್ಕರರ ಅತಿ ಮಹತ್ವದ ಚಿಂತನೆ “ದೇಶ ಮೊದಲು” ಎನ್ನುವುದನ್ನ ಇವತ್ತಿನ ಯುವಜನತೆ ಹೃದ್ಗತಗೊಳಿಸಿಕೊಳ್ಳಬೇಕಾಗಿದೆ‌. ಅವರ ದೇಶ ಮೊದಲು ಎನ್ನುವ ಚಿಂತನೆಯನ್ನು ಯುವಜನತೆ ಅಳವಡಿಸಿಕೊಂಡಾಗ ಭಾರತ ಅನೂಹ್ಯವಾದ ಗತಿಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.