Mohan Bhagwat at Venoor Bahubali Mastakabhisheka

 ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ  ಭಾಗವಹಿಸಿದ  ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗ್ವತ್

Mohan Bhagwat at Venoor Bahubali Mastakabhisheka

ಬೆಳ್ತಂಗಡಿ Jan 31: ಶ್ರೀ ಭಗವಾನ್ ಬಾಹುಬಲಿ ಸಮಗ್ರ ಭಾರತದ ಪ್ರತಿನಿಧಿ. ಈತ ಎಲ್ಲರಿಗೂ ಸೇರಿದವ. ಬಾಹುಬಲಿ ಧರ್ಮವನ್ನು ಆಚರಣೆಯಲ್ಲೂ ತಂದ ಮಹಾಪುರುಷ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ಜೀ ಭಾಗವತ್ ನುಡಿದರು.

ಅವರು ವೇಣೂರಿನಲ್ಲಿ ಶ್ರೀಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ 4 ನೇ ದಿನದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಂಗಳವಾರ ಮಾತನಾಡಿದರು.

ತತ್ವಾಚರಣೆ ಮಾಡುವುದು ಕಠೋರ ವ್ರತ. ಧರ್ಮವನ್ನು ತಿಳಿಯುವುದು ಸುಲಭ. ಆಚರಣೆ ಮಾಡುವುದು ಕಷ್ಟ. ಧರ್ಮದ ಅವಶ್ಯಕತೆ ಜಗತ್ತಿಗೆ ಇದೆ. ಧರ್ಮ ಮನುಷ್ಯನ ಸ್ವಭಾವವೂ ಆಗಬೇಕು, ಕರ್ತವ್ಯವೂ ಆಗಬೇಕು. ಸ್ವಂತ ಜೀವನದಲ್ಲಿ ತ್ಯಾಗ -ಸಂಯಮವನ್ನು ಅನುಷ್ಠಾನದಲ್ಲಿ ತರಬೇಕೆಂದು  ಭಾಗವತ್ ಹೇಳಿದರು.

ಮನುಷ್ಯನ ಸ್ಥಿತಿ ಪಶುತ್ವದ್ದಾಗಿದೆ. ಪಶುತ್ವದಿಂದ ಮನುಷ್ಯನನ್ನಾಗಿ, ಮನುಷ್ಯತ್ವದಿಂದ ದೈವತ್ವಕ್ಕೇರಿಸುವ ಆದರ್ಶ ನಮ್ಮ ಧರ್ಮದಲ್ಲಿ ಲಭಿಸುತ್ತದೆ. ಜಗತ್ತಿನಲ್ಲಿ ಅನೇಕ ಸಮಸ್ಯೆಗಳು ಧರ್ಮದ ತಿಳುವಳಿಕೆಯ ಅಭಾವದಿಂದ ಉಂಟಾಗಿದೆ. ಭಾರತದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಯಾಕೆಂದರೆ ಇದನ್ನು ಮಹಾಪುರುಷರು,ಋಷಿಮುನಿಗಳು ಸ್ವಯಂ ಆಚರಣೆಯಲ್ಲಿ ಮಾಡಿತೋರಿಸಿದ್ದಾರೆ. ಮಾನವ ದುಃಖಗಳು ದೂರವಾಗಬೇಕಾದರೆ ಮೌಲ್ಯಗಳ ಆದರ್ಶ ಪುನ: ಸ್ಥಾಪನೆಯಾಗಬೇಕು.ಧರ್ಮ ಇದಕ್ಕೆ ಆಧಾರವಾಗಲಿ ಎಂದರು.

Mohan Bhagwat speaks at Venoor Mastabkaabhisheka Religious meet

ಭಾರತೀಯ ಜೀವನ ಎಂದರೆ ಎರಡು ಕೈಗಳಿಂದ ದುಡಿದು ಸಾವಿರ ಕೈಗಳಿಗೆ ಹಂಚುವ ತ್ಯಾಗಮಯ ಜೀವನ. ಧರ್ಮವನ್ನು ಎತ್ತಿ ಹಿಡಿಯಬೇಕು. ಧರ್ಮವೆಂಬುದು ಪರೋಪಕಾರ ಮತ್ತು  ಆತ್ಮ ಸಾಕ್ಷಾತ್ಕಾರಕ್ಕಾಗಿ ಇರುವುದು. ವ್ಯಾಪಾರಕ್ಕಾಗಿ ಅಲ್ಲ. ನಮ್ಮ ಜೀವನವೇ ಒಂದು ಗ್ರಂಥವಾಗಬೇಕು. ಪರಿಸರ  ನಾಶದಿಂದ ಮಾನವೀಯತೆಯ ನಾಶ. ಧರ್ಮದ  ತತ್ವಾದರ್ಶಗಳನ್ನು ನಾವು ಮರೆತಿದ್ದೇವೆ. ಧರ್ಮ ಮಾತ್ರ ಒಂದುಗೂಡಿಸುತ್ತದೆ ಎಂದು ಮೋಹನ್ ಭಾಗವತ್ ವಿಶ್ಲೇಷಿಸಿದರು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಎಲ್ಲಾ ಮತಗಳನ್ನು ಸ್ವೀಕರಿಸುವ ಸಮನ್ವಯ ದೃಷ್ಟಿ ಜೈನಧರ್ಮದ ಮಹತ್ವದ ಕೊಡುಗೆ . ಜೈನ ಧರ್ಮದಿಂದ ವೈದಿಕ ಧರ್ಮಕ್ಕೆ ಹೊಸ ತಿರುವು -ಹೊಸ ಸ್ಫೂರ್ತಿಯಿಂದಾಗಿ  ಯಜ್ಞಯಾಗಾದಿಗಳಲ್ಲಿ ಹಿಂಸಾ ಪ್ರವೃತ್ತಿ ನಿಂತಿದೆ. ತ್ಯಾಗ,ಕರುಣೆಯ ಸಂದೇಶದ ಮೂಲಕ ಜೈನ ಧರ್ಮ  ಮೇಲ್ಪಂಕ್ತಿ ಹಾಕಿಕೊಟ್ಟಿದೆ.ಮಹಾಮಸ್ತಕಾಭಿಷೇಕ ಜನರ ಮಸ್ತಕಕ್ಕೆ ತ್ಯಾಗ ಚಾರಿತ್ಯ್ರವನ್ನು ತುಂಬಿಸುವ ಅಭಿಷೇಕವಾಗಬೇಕು ಎಂದರು.

ಶ್ರವಣಬೆಳಗೊಳ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮಂಗಲ ಪ್ರವಚನ ನೀಡಿದರು. ಧರ್ಮ ಖಿಲವಾದರೆ ಮಾನವ ಸಮಾಜ ನಾಶವಾಗುತ್ತದೆ. ಪ್ರತಿ ಓರ್ವನ ಕೈಯಲ್ಲಿ ಮೊಬೈಲ್ ಫೋನ್ ಇದ್ದ ಹಾಗೆ .ಧರ್ಮವನ್ನು ಪ್ರತಿಯೊಬ್ಬನ ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕು ಎಂದರು.

ಆಚಾರ್ಯ ಶ್ರೀಗುಣಧರನಂದಿ ಮಹಾರಾಜರು,ಮುನಿಶ್ರೀ ಸುದೇಶ್ ಸಾಗರ್, ಆರ್ಯಿಕಾ ಜಿನವಾಣಿ ಮಾತಾಜಿ,ಮೂಡಬಿದರೆ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಉಪಸ್ಥಿತರಿದ್ದರು.

ಕಾರ್ಕಳದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ರಾಮಚಂದ್ರ ಅವರು ತ್ಯಾಗ,ಜಿನತತ್ವ,ಜೀವನ ಸತ್ವದ ಬಗ್ಗೆ ಉಪನ್ಯಾಸ ನೀಡಿದರು.

ಮೋಹನ್‌ಜೀ ಭಾಗವತ್ ಅವರನ್ನು ಮಸ್ತಕಾಭಿಷೇಕದ ಪರವಾಗಿ ಧರ್ಮಸ್ಥಳ ಧರ್ಮಾಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಮ್ಮಾನಿಸಿದರು.

ವೇದಿಕೆಯಲ್ಲಿ ಕೆಲ್ಲಗುತ್ತು ಸಬರಬೈಲ್ ಜಯವರ್ಮರಾಜ್ ಬಲ್ಲಾಳ್, ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲ, ಕಾರ್ಯಾಧ್ಯಕ್ಷ ವಿ. ಧನಂಜಯ ಕುಮಾರ್, ರಾ. ಸ್ವ. ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಜೀವಂಧರ ಕುಮಾರ್ ಉಪಸ್ಥಿತರಿದ್ದರು.

ಪೂಜಾ ಸೇವಾಕರ್ತೃ ಜ್ಯೇಷ್ಠ ಪಡಿವಾಳ ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು. ಮಹಾವೀರ ಜೈನ್ ಮೂಡುಕೋಡಿ ಸಮ್ಮಾನ ಪತ್ರ ವಾಚಿಸಿದರು.ಮಾಧ್ಯಮ ಕೇಂದ್ರದ ಸಂಚಾಲಕ ಸಂಚಾಲಕ ಅಭಿಜಿತ್ ಎಂ.ಮೂಡಬಿದ್ರಿ ವಂದಿಸಿದರು.

RSS Senior functionaries at Venoor Bahubali Statue

Leave a Reply

Your email address will not be published.

This site uses Akismet to reduce spam. Learn how your comment data is processed.