ಆಗಸ್ಟ್ 1 ರಿಂದ ‘ನನ್ನ ಭಾರತ’ ರಾಷ್ಟ್ರಮಟ್ಟದ ಯುವ ಅಭಿಯಾನ


ಬೆಂಗಳೂರು, ಜುಲೈ 09, 2021: ದಿಶಾ ಭಾರತ್ ಸಂಸ್ಥೆಯು ಕಾಲೇಜು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪೋಷಿಸಿ ಬೆಳೆಸುವ ಕಾರ್ಯದಲ್ಲಿ ಕಳೆದ 16 ವರ್ಷಗಳಿಂದ ತೊಡಗಿಸಿಕೊಂಡಿದ್ದು ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ.
ಇದೀಗ ದಿಶಾ ಭಾರತ್ ಸಂಸ್ಥೆಯು ದೇಶದ 75ನೇ ಸ್ವಾತಂತ್ರ್ಯೋತ್ಸವ ವರ್ಷದ ಹಿನ್ನೆಲೆಯಲ್ಲಿ ಆಗಸ್ಟ್ 1 ರಿಂದ 15 ವರೆಗೆ 15 ದಿನಗಳ ರಾಷ್ಟ್ರಮಟ್ಟದ ನಮ್ಮ ಭಾರತ (My Bharat) ಎಂಬ ಆನ್‍ಲೈನ್ ಯುವ ಅಭಿಯಾನವನ್ನು ಆಯೋಜಿಸಿದೆ.

ಅಭಿಯಾನಕ್ಕೆ ಚಾಲನೆ:
09-07-2021 ರಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ|| ಸಿ. ಎನ್. ಅಶ್ವಥನಾರಾಯಣ್ ಅವರು ಟ್ವೀಟ್ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ|| ಕೆ. ಆರ್. ವೇಣುಗೋಪಾಲ್, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಡಾ|| ಶ್ರೀನಿವಾಸ್ ಬಳ್ಳಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಡಾ| ಎಲ್. ಗೋಮತಿದೇವಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ| ಜಯಕರ ಶೆಟ್ಟಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ ನರಸಿಂಹ ಮೂರ್ತಿ, ದಿಶಾ ಭಾರತ್ ಅಧ್ಯಕ್ಷ ಡಾ|| ಎನ್. ವಿ. ರಘುರಾಂ, ದಿಶಾಭಾರತ್ ಸಂಸ್ಥಾಪಕಿ ಶ್ರೀಮತಿ ರೇಖಾ ರಾಮಚಂದ್ರನ್ ಅಭಿಯಾನದ ಪೋಸ್ಟರ್-ಲಾಂಛನವನ್ನು ಬಿಡುಗಡೆ ಮಾಡಿದರು.

ಈ ಅಭಿಯಾನದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಆನ್‍ಲೈನ್ ಮೂಲಕ ನಡೆಯಲಿದ್ದು ದಿಶಾ ಭಾರತ್ ಫೇಸ್‍ಬುಕ್ www.facebook.com/DishaBharat ಮೂಲಕ ನೇರ ಪ್ರಸಾರವಾಗಲಿದೆ.

  1. ಪ್ರತಿದಿನ ಬೆಳಗ್ಗೆ 11 ರಿಂದ ವಿದ್ಯಾರ್ಥಿಗಳಿಂದ ದೇಶಭಕ್ತಿ ಕಾರ್ಯಕ್ರಮ: ಪ್ರತಿನಿತ್ಯ ಬೆಳಗ್ಗೆ 11 ರಿಂದ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟ್ರೀಯ ವಿಚಾರಗಳ ಕುರಿತು ಭಾಷಣ, ದೇಶಭಕ್ತಿಗೀತೆಗಳ ಗಾಯನ, ಸಾಮಾಜಿಕ ವಿಷಯಗಳ ಕುರಿತು ಏಕಪಾತ್ರಾಭಿನಯ, ರಾಷ್ಟ್ರಭಾವಜಾಗರಣದ ನೃತ್ಯಗಳು ಸೇರಿದಂತೆ ವಿವಿಧ ಚಟುವಟಿಕೆಗಳು ಮೂಡಿಬರಲಿವೆ.
  2. ಪ್ರತಿದಿನ ಸಂಜೆ 6ಕ್ಕೆ ಉಪನ್ಯಾಸ ಸರಣಿ: ಪ್ರತಿನಿತ್ಯ ಸಂಜೆ 6 ಕ್ಕೆ ಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಗಣ್ಯ ವಿಷಯತಜ್ಞರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಭಾರತ, ಭವಿಷ್ಯದ ಭಾರತ, ಇತ್ಯಾದಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ.
  3. ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: 75ನೇ ಸ್ವಾತ್ರಂತ್ಯೋತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸ್ವರಾಜ್ಯ-75: ಸ್ವಾತಂತ್ರ್ಯಾನಂತರದ ಭಾರತ (“Swarajya – 75 – Bharat after Independence”) ಎಂಬ ವಿಷಯದ ಕುರಿತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಈಸ್ಟ್ ವೆಸ್ಟ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ಏರ್ಪಡಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು (ವಿಭಾಗ-1) ಹಾಗೂ ಕಾಲೇಜು ವಿದ್ಯಾರ್ಥಿಗಳು (ವಿಭಾಗ-2) ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
    ಸ್ವಹಸ್ತಾಕ್ಷರದಲ್ಲಿ 2500 ಶಬ್ದಮಿತಿಯಲ್ಲಿ ಬರೆದ ಪ್ರಬಂಧವನ್ನು ಅಗಸ್ಟ್ 15, 2021ರ ಒಳಗೆ ಈ ವಿಳಾಸಕ್ಕೆ ಕಳುಹಿಸಿಕೊಡಲು ಕೋರಲಾಗಿದೆ.
    ವಿಳಾಸ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ, ಈಸ್ಟ್ ವೆಸ್ಟ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಂ. 63, ಬಿ.ಇ.ಎಲ್ ಲೇಔಟ್ ಬಳಿ, ವಿಶ್ವನೀಡಂ ಪೋಸ್ಟ್, ಅಂಜನಾನಗರ, ಬೆಂಗಳೂರು – 560091. ದೂರವಾಣಿ: 9483150527, 8861938180, 9141372839
  4. ಭಗತ್‍ಸಿಂಗ್ ಕುರಿತ ನಾಟಕ: ಕ್ರಾಂತಿಕಾರಿ ಭಗತ್‍ಸಿಂಗ್ ಕುರಿತ ಕಿರುನಾಟಕ ಪ್ರದರ್ಶನವೊಂದನ್ನು ಆಯೋಜಿಸಲಾಗಿದ್ದು ಅಗಸ್ಟ್ 14, 2021ರ ರಾತ್ರಿ 7.30ಕ್ಕೆ ದಿಶಾಭಾರತ್ ಫೇಸ್‍ಬುಕ್ ಪೇಜ್ ಮೂಲಕ ನೇರಪ್ರಸಾರವಾಗಲಿದೆ.
  5. ವಾಕಥಾನ್: ಅಗಸ್ಟ್ 15, 2021ರಂದು ಬೆಳಗ್ಗೆ 7.30ಕ್ಕೆ ಜಯನಗರ 4ನೇ ಬ್ಲಾಕ್‍ನ ಶಾಲಿನಿ ಗ್ರೌಂಡ್ಸ್ ಪರಿಸರದಿಂದ ‘ಸ್ವರಾಜ್ಯ-75’ ಆಶಯದೊಂದಿಗೆ ಯುವಜನತೆಯ ವಾಕಥಾನ್ ಕಾಲ್ನಡಿಗೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
  6. ಯುವ ಸಂವಾದ: ಅಗಸ್ಟ್ 1, 8, 15ರ ಭಾನುವಾರಗಳಂದು ಮಧ್ಯಾಹ್ನ 3.00ಕ್ಕೆ ಭಾರತದ ಪ್ರಾಚೀನ ವೈಭವ, ವರ್ತಮಾನದ ತಲ್ಲಣಗಳು ಹಾಗೂ ಭವಿಷ್ಯದ ಭಾರತ ಎಂಬ ಮೂರು ವಿಷಯಗಳ ಕುರಿತು ಯುವಚಿಂತಕರಿಂದ ಸಂವಾದ ಕಾರ್ಯಕ್ರಮಗಳು ಮೂಡಿಬರಲಿದೆ.
  7. ನನ್ನರಾಜ್ಯ – ನಮ್ಮ ಸ್ವಾತಂತ್ರ್ಯ ಹೋರಾಟಗಾರರು: ಭಾರತದ ಎಲ್ಲಾ ರಾಜ್ಯಗಳ ವಿಶೇಷತೆಗಳನ್ನು ಬಿಂಬಿಸುವ ಹಾಗೂ ಆಯಾ ರಾಜ್ಯಗಳ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ನೀಡುವ ‘ನನ್ನ ರಾಜ್ಯ-ನಮ್ಮ ಸ್ವಾತಂತ್ರ್ಯ ಹೋರಾಟಗಾರರು’ ಎಂಬ ವಿಶಿಷ್ಟ ಕಾರ್ಯಕ್ರಮ ಅಗಸ್ಟ್ 1 ರಿಂದ 15ರ ತನಕ ಪ್ರತಿನಿತ್ಯ ಸಂಜೆ 8ಕ್ಕೆ ಪ್ರಸಾರವಾಗಲಿದೆ.
  8. ಸ್ವರಾಜ್ಯ– 75 ವಿಶೇಷ ಸಂಚಿಕೆ: ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಯುವ ಬರಹಗಾರರಿಂದ ಆಹ್ವಾನಿತ ಬರಹಗಳ ಸಂಗ್ರಹದ ಡಿಜಿಟಲ್ ಸಂಚಿಕೆ ‘ಸ್ವರಾಜ್ಯ– 75’ ಈ ಅಭಿಯಾನದ ವೇಳೆ ಮೂಡಿ ಬರಲಿದ್ದು, ಅಗಸ್ಟ್ 15 ರಂದು ಸಂಜೆ ಸಮಾರೋಪ ಭಾಷಣದ ಸಂದರ್ಭದಲ್ಲಿ ಆನ್‍ಲೈನ್ ಮೂಲಕ ಬಿಡುಗಡೆ ಮಾಡಲಾಗುವುದು.
  9. 75ನೇ ವರ್ಷಕ್ಕೆ 75 ಕಾಲೇಜುಗಳಲ್ಲಿ ಉಪನ್ಯಾಸ: ಸ್ವಾತಂತ್ರ್ಯೋತ್ಸವಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದ ಆಯ್ದ 75 ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
  10. ಸ್ವರಾಜ್ಯ– 75ರ ಕುರಿತು ಗಣ್ಯರ ಅನಿಸಿಕೆ – ವಿಡಿಯೋ ಪ್ರಸರಣ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನನ್ನ ಹೆಮ್ಮೆಯ ಭಾರತ, ದೇಶದ ಸ್ಥಿತಿ-ಗತಿಗಳ ಕುರಿತು, ಭವಿಷ್ಯದ ಭಾರತದ ಯುವಕರ ಕನಸುಗಳ ಕುರಿತು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರಇತ್ಯಾದಿ ವಿಷಯಗಳ ಕುರಿತು ಗಣ್ಯರು, ಶಿಕ್ಷಣ ತಜ್ಞರು ನೀಡಿರುವ ವಿಶೇಷ ವಿಡಿಯೋ ಸಂದೇಶಗಳು ಜುಲೈ 11 ರಿಂದ ಪ್ರತಿನಿತ್ಯ ಬೆಳಿಗ್ಗೆ 8.30ಕ್ಕೆ ದಿಶಾ ಭಾರತ್ ಫೇಸ್‍ಬುಕ್ ಪೇಜ್‍ನಲ್ಲಿ ಪ್ರಸಾರವಾಗಲಿದೆ.
    ಈ ಯುವ ಅಭಿಯಾನಕ್ಕೆ ಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅನೇಕ ಶಿಕ್ಷಣ ತಜ್ಞರು, ಉಪಕುಲಪತಿಗಳು, ಪ್ರಾಧ್ಯಾಪಕರು ಶುಭಹಾರೈಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:
ಹರೀಶ್: 9113263342 ಲಾವಣ್ಯ: 8105417265 ರೇಖಾ ರಾಮಚಂದ್ರನ್: 9845681573

Leave a Reply

Your email address will not be published.

This site uses Akismet to reduce spam. Learn how your comment data is processed.