ಪ್ರಸ್ತುತ ಇರುವ ಸಡಿಲ ಕಾನೂನಿನಿಂದಾಗಿ ಆಮಿಷದ ಮೂಲಕ ಮತಾಂತರ ಮಾಡುವ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಾಗುತ್ತಿದ್ದು ಕನ್ನಡ ನೆಲದ ಮೂಲಸಂಸ್ಕೃತಿಯ ಉಳಿವಿಗಾಗಿ ಮತಾಂತರ ನಿಷೇಧ ಕಾನೂನಿನ ಅವಶ್ಯಕತೆ ಇದೆ ಎಂದು ವಿಶ್ವ ಸಂವಾದ ಕೇಂದ್ರದ ವಿಶ್ವಸ್ತರಾದ ರಾಧಾಕೃಷ್ಣ ಹೊಳ್ಳ ಅವರು ಅಭಿಪ್ರಾಯಪಟ್ಟರು.

ಶ್ವ ಸಂವಾದ ಕೇಂದ್ರದ ವಿಶ್ವಸ್ತರಾದ ರಾಧಾಕೃಷ್ಣ ಹೊಳ್ಳ ‘ಮಂಥನ’ ವೇದಿಕೆಯಲ್ಲಿ ಮಾತನಾಡಿದರು

ಬೆಂಗಳೂರಿನ ಜೆ. ಪಿ. ನಗರ ಮಂಥನ ವೈಚಾರಿಕ ವೇದಿಕೆ ಹಮ್ಮಿಕೊಂಡಿದ್ದ ‘ಕರ್ನಾಟಕಕ್ಕೆ ಮತಾಂತರ ನಿಷೇಧ ಕಾಯ್ದೆ ಅಗತ್ಯವೇ?’ ಎಂಬ ವಿಷಯದ ಮೇಲಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೂರಾರು ವರ್ಷಗಳಿಂದ ಕ್ರಿಶ್ಚಿಯನ್ ಮಿಷನರಿಗಳು ನಿರಂತರವಾಗಿ ಭಾರತದಲ್ಲಿ ಮತಾಂತರವನ್ನು ನಡೆಸಿಕೊಂಡು ಬಂದಿದ್ದಾರೆ. ಕ್ರಿಶ್ಚಿಯನ್ ರಿಲಿಜನ್ ಅನ್ನು ಅರ್ಥ ಮಾಡಿಕೊಂಡು ಮತಾಂತರವಾದರೆ ಅದಕ್ಕೆ ಆಕ್ಷೇಪವಿಲ್ಲ. ಆದರೆ, ಇಂದು ನಡೆಯುತ್ತಿರುವ ಹೆಚ್ಚಿನ ಮತಾಂತರಗಳು ಆಮಿಷಗಳ ಮೂಲಕ ನಡೆಯುತ್ತಿವೆ ಎಂದರು.

ಬೌದ್ಧಿಕ ಸ್ವಾತಂತ್ರ, ವಿಚಾರ ವಿಮರ್ಶೆ ಮತ್ತು ಬದಲಾವಣೆಗೆ ಹಿಂದೂ ಧರ್ಮದಲ್ಲಿ ಅವಕಾಶವಿದೆ. ಬಹುತ್ವ ಎನ್ನುವುದು ಹಿಂದೂ ಧರ್ಮದಲ್ಲಿ ಸಹಜವಾಗಿಯೇ ಇರುವಂಥದ್ದು. ಹಾಗಾಗಿ, ಹಿಂದುಗಳಿಗೆ ಬೇರೆ ದೇವರನ್ನು ಪೂಜಿಸುವವರ ಮೇಲೆ ಅಸಹಣೆಯಿಲ್ಲ. ಆದರೆ ರಿಲಿಜನ್ ಗಳಲ್ಲಿನ ಸಿದ್ಧಾಂತಗಳು ಕಲ್ಲಿನ ಮೇಲೆ ಬರೆದ ಶಾಸನದಂತೆ, ಅಲ್ಲಿನ ಗ್ರಂಥಗಳು ಯಾವ ಕಾಲದಲ್ಲಿ ಬರೆದಿದ್ದಾದರೂ ಇವತ್ತಿಗೂ ಅದರಲ್ಲಿ ಕಾಲಕ್ಕೆ ತಕ್ಕಂತೆ ಬೇಕಾದ ಬದಲಾವಣೆಗೆ ಅವಕಾಶಗಳಿಲ್ಲ. ಹಾಗಾಗಿ, ತಮ್ಮ ದೇವರು ಮಾತ್ರ ಸತ್ಯ, ಉಳಿದದ್ದೆಲ್ಲ ಮಿಥ್ಯೆ ಎನ್ನುವ ಸಿದ್ಧಾಂತವುಳ್ಳ ಈ ರಿಲಿಜನ್ ಗಳಿಂದಾಗಿ ನಮ್ಮ ಸಮಾಜದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತಿದೆ. ಎಲ್ಲರನ್ನೂ ಮತಾಂತರ ಮಾಡುವ ರಿಲಿಜನ್ ಗಳ ಆವೇಶ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ ಎಂದರು.

ಶಿಕ್ಷಣ ಮತ್ತು ಆರೋಗ್ಯ ಇಂದು ನಮ್ಮ ದೇಶದ ಎಲ್ಲರಿಗೂ ಬೇಕಾದ ಮಟ್ಟದಲ್ಲಿ ಸಿಗುತ್ತಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡು ಮತಾಂತರ ನಡೆಸಲಾಗುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯ, ಶಿಕ್ಷಣ, ಆರೋಗ್ಯ ಸೌಲಭ್ಯ ಕೊಡುವ ಮೂಲಕ ಮುಗ್ಧ ಕುಟುಂಬಗಳ ಸ್ನೇಹ ಗಳಿಸಿ, ಕ್ರಮೇಣ ಮತಾಂತರ ಮಾಡುತ್ತಿರುವ ಮಿಷನರಿಗಳ ಹಾಗೂ ಎನ್ ಜಿ ಓ ಗಳ ಸಂಖ್ಯೆ ನಮಲ್ಲಿ ಹೆಚ್ಚುತ್ತಿದೆ ಎಂದರು.

ಇಂದು ಮಿಷನರಿಗಳು ನಡೆಸುವ ಅನೇಕ ಶಾಲೆಗಳಲ್ಲಿ ಕೂಡ ಹಿಂದೂ ಸಂಪ್ರದಾಯ ಮತ್ತು ಆಚಾರ ವಿಚಾರಗಳನ್ನು ಕೀಳಾಗಿ ಕಾಣುವ ಪ್ರವೃತ್ತಿಯಿದೆ. ಮಕ್ಕಳ ಮೂಲಕ ಮನೆಗಳನ್ನೂ ತಲುಪುತ್ತಾರೆ ಮಿಷನರಿಗಳು. ಮತಾಂತರದಿಂದಾಗಿ ಕುಟುಂಬದ ಸದಸ್ಯರ ನಡುವೆ ಒಡಕು, ಭಿನ್ನಾಭಿಪ್ರಾಯ ಮತ್ತು ಒತ್ತಡಗಳು ಹೆಚ್ಚಾಗುತ್ತಿವೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ನಮ್ಮ ಸಮಾಜದಲ್ಲಿ ಇದು ಒಡಕನ್ನು ಮೂಡಿಸುತ್ತಿದೆ.

1956ರಲ್ಲೇ ಮಧ್ಯಪ್ರದೇಶದಲ್ಲಿ ನಿಯೋಗಿ ಕಮಿಷನ್ ಆಯೋಗದ ವರದಿ ಬಂದಿದ್ದರೂ ಅದರ ಅನುಷ್ಠಾನ ಮಾತ್ರ ಇನ್ನೂ ಆಗಿಲ್ಲ. ಮತಾಂತರಕ್ಕೆ ತಡೆ ಹಾಕಲು ಅದರ ಜಾರಿಯ ಅವಶ್ಯಕತೆ ಇದೆ. ಸಂವಿಧಾನದಲ್ಲಿ ಮತ ಪ್ರಸಾರಕ್ಕೆ ನೀಡಿರುವ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಕ್ರಿಶ್ಚಯನ್ ಮಿಷನರಿಗಳಿಗೆ ತಡೆ ಹಾಕಬೇಕಿದೆ ಎಂದರು.

ಪ್ರಕೃತಿಯ ಆರಾಧಕರಾಗಿದ್ದ ಆಫ್ರಿಕಾ ದೇಶಗಳು ಇಂದು ಧಾರ್ಮಿಕ ಮತಾಂತರದಿಂದ ಮೂಲ ಸಂಸ್ಕೃತಿಯನ್ನು ಕಳೆದುಕೊಂಡಿದೆ. ಮತಾಂತರದಿಂದ ರಾಷ್ಟ್ರಾಂತರವೂ ನಡೆದೀತು ಎಂಬುದರ ಮುನ್ಸೂಚನೆ ಈಗಾಗಲೇ ಅನೇಕ ಕಡೆಗಳಲ್ಲಿ ಕಾಣಿಸುತ್ತಿದೆ. ಮತಾಂತರಕ್ಕೆ ಕಡಿವಾಣ ಹಾಕದಿದ್ದರೆ ಭಾರತಕದ ಅಸ್ತಿತ್ವಕ್ಕೇ ಅಪಾಯ ಕಾದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಐ ಆರ್ ಎಸ್ ಅಧಿಕಾರಿ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆ ಪಿ ನಗರದ ಆರೆಸ್ಸೆಸ್ ಸಂಘಚಾಲಕರಾದ ರಾಧಾಕೃಷ್ಣ, ವಿಭಾಗ ಪ್ರಚಾರ ಪ್ರಮುಖ್ ರಾಘವೇಂದ್ರ ಕುಲಕರ್ಣಿ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.