ಇಂದು ಪುಣ್ಯಸ್ಮರಣೆ


“ಭಾರತದ ಗಾನ ಕೋಗಿಲೆ” ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಸರೋಜಿನಿ ನಾಯ್ದು ಅವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಹೆಸರಾಂತ ಕವಿಯಾಗಿ, ರಾಜಕೀಯ ನಾಯಕಿಯಾಗಿ ಪ್ರಸಿದ್ಧಿ ಗಳಿಸಿದವರು. ಅದಮ್ಯ ಧೈರ್ಯದಿಂದ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್‌ ನಾಯಕಿ. ಇಂದು ಅವರ ಪುಣ್ಯತಿಥಿ


ಪರಿಚಯ
ಸರೋಜಿನಿ ನಾಯ್ಡು ಫೆಬ್ರವರಿ 13, 1879 ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್‌ ನಲ್ಲಿ ಜನಿಸಿದರು. ಇವರ ತಂದೆ ಅಗೋರೆನಾಥ್ ಚಟ್ಟೋಪಾಧ್ಯಾಯರು, ತಾಯಿ ಸುಂದರಿದೇವಿ. ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದರು.ಇವರು ಪ್ರಾಥಮಿಕ ಶಿಕ್ಷಣವನ್ನು ಹೈದರಾಬಾದ್‌ ನಲ್ಲಿ ಮುಗಿಸಿದರು. ನಂತರ 1891ರಲ್ಲಿ ತಮ್ಮ ಹನ್ನೆರಡನೆ ವಯಸ್ಸಿನಲ್ಲಿ ಮೆಟ್ರಿಕ್ಯುಲೆಷನ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ ಕಿಂಗ್ಸ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು.


ಸರೋಜಿನಿ ನಾಯ್ಡು ಅವರು ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ಮಾತನಾಡುತ್ತಿದ್ದರು. ಮನೆಯಲ್ಲಿ ಇವರು ಗಣತಜ್ಞೆ ಅಥವಾ ವಿಜ್ಞಾನಿ ಆಗಲಿ ಎಂಬ ಬಯಕೆ ಇದ್ದರೆ, ಅವರು ಕವಿಯಾಗಲು ಇಚ್ಛಿಸಿದ್ದರು. ಇವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಪೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ನೀಡಿದರು.


ರಾಜಕೀಯ ಜೀವನ
ಸರೋಜಿನಿ ನಾಯ್ಡು ಅವರು 1905 ರಲ್ಲಿ ಬಂಗಾಳದ ವಿಭಜನೆಯ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡರು. 1917 ರಲ್ಲಿ ಮುತ್ತುಲಕ್ಷ್ಮಿ ರೆಡ್ಡಿ ಅವರೊಂದಿಗೆ ಸರೋಜಿನಿ ನಾಯ್ಡು ಅವರು ಭಾರತೀಯ ಮಹಿಳಾ ಸಂಘವನ್ನು ಸ್ಥಾಪಿಸಿದರು. ತಮ್ಮ ಭಾಷಣಗಳ ಮೂಲಕ ರಾಷ್ಟ್ರೀಯ ಚಳವಳಿಯಲ್ಲಿ ಮಹಿಳೆಯರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿದರು. ಮಹಿಳಾ ಸಬಲೀಕರಣ, ಯುವ ಕಲ್ಯಾಣ, ಕಾರ್ಮಿಕ ಘನತೆ, ಮಹಿಳಾ ಶಿಕ್ಷಣ ಮತ್ತು ರಾಷ್ಟ್ರೀಯತೆ ಕುರಿತು ಜಾಗೃತಿ ಮೂಡಿಸಿದರು. ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರಿದರು. ಅವರು 1925ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1927 ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ಮಹಿಳಾ ಸಮ್ಮೇಳನದ ಸಂಸ್ಥಾಪಕ ಸದಸ್ಯರಾಗಿದ್ದರು. 1947 ರಲ್ಲಿ ಯುನೈಟೆಡ್‌ ಪ್ರಾವಿನ್ಸ್ ನ ಗವರ್ನರ್‌ ಆಗಿದ್ದರು. ಹೀಗಾಗಿ ಅವರು ಭಾರತದ ಗವರ್ನರ್‌ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಾತ್ಮ ಗಾಂಧಿಯವರ ನಿಕಟ ಸಹವರ್ತಿಯಾಗಿದ್ದು, ಬ್ರಿಟಿಷ್ ಆಡಳಿತದ ವಿರುದ್ಧ ಅಹಿಂಸಾತ್ಮಕ ಪ್ರತಿರೋಧ ಚಳವಳಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಸರೋಜಿನಿ ನಾಯ್ಡು ಅವರು ಸಾಹಿತ್ಯದ ಕಡೆ ಹೆಚ್ಚು ಒಲವು ತೋರಿದವರು. ಅವರ ಪುಸ್ತಕಗಳು ಮತ್ತು ಕವನಗಳು ದೇಶಭಕ್ತಿ ಮತ್ತು ಸಾಮಾಜಿಕ ಜಾಗೃತಿಯನ್ನು ಆಧರಿಸಿವೆ. 1905ರಲ್ಲಿ ಇವರು ಬರೆದ “ದಿ ಗೋಲ್ಡನ್ ಥ್ರೆಶೋಲ್ಡ್”, 1912 ರಲ್ಲಿ ಪ್ರಕಟವಾದ ಇನ್‌ ದಿ ಬಜಾರ್ಸ್‌ ಆಫ್‌ ಹೈದರಾಬಾದ್‌ ಎಂಬ ಕವನ ಅತ್ಯಂತ ಜನಪ್ರಿಯಗೊಂಡಿತ್ತು.
1914ರಲ್ಲಿ ರಾಯಲ್‌ ಸೊಸೈಟಿ ಆಫ್‌ ಲಿಟರೇಚರ್‌ ನ ಫೆಲೋ ಆಗಿ ಆಯ್ಕೆಯಾದರು. ಅದರ ಮೂಲಕ ಇವರ ಕವಿತೆಗಳ ಪುಸ್ತಕ ‘ದಿ ಬರ್ಡ್‌ ಆಫ್‌ ಟೈಮ್’ ಅನ್ನು ಪ್ರಕಟಿಸಲಾಯಿತು. ಸರೋಜಿನಿ ನಾಯ್ಡು ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಅಥವಾ ‘ಭಾರತ್ ಕೋಕಿಲಾ’ ಎಂದು ಕರೆಯಲಾಗುತ್ತಿತ್ತು.


ಸರೋಜಿನಿ ನಾಯ್ಡು ಅವರು ಮಾರ್ಚ್‌ 2, 1949 ರಲ್ಲಿ ಲಕ್ನೋದಲ್ಲಿ ಹೃದಯಾಘಾತದಿಂದ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.