ಸಾಹಿತ್ಯ ಸಂಗಮ, ಬೆಂಗಳೂರು ಇವರ ವತಿಯಿಂದ ಜಯನಗರದ ಯುವಪಥ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ಕೃ.ಸೂರ್ಯನಾರಾಯಣ್ ರಾವ್ ಅವರ ಜೀವನ ಚಿತ್ರಣದ “ಉತ್ತುಂಗ” ಪುಸ್ತಕದ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ಕೃ.ಸೂರ್ಯನಾರಾಯಣರಾವ್ ಅವರನ್ನು ಆತ್ಮೀಯವಾಗಿ ಸ್ಮರಿಸಿದ ಕ್ಷೇತ್ರೀಯ ಸಂಘಚಾಲಕರಾದ ವಿ.ನಾಗರಾಜ್‌ರವರು ಅವರ ಒಡನಾಟದ ನೆನಪುಗಳು ಅಚ್ಚಳಿಯದೆ ಉಳಿದಿದೆ, ಬಹಳ ಸಣ್ಣ ವಯಸ್ಸಿನಿಂದಲೇ ಬ್ರಹ್ಮ ಚೈತನ್ಯರ ಪ್ರಭಾವಕ್ಕೆ ಒಳಗಾಗಿದ್ದ ಅವರು ಪರಂಪರೆಯ ಬಗೆಗೆ ಅತ್ಯಂತ ಶ್ರದ್ಧೆಯಿಟ್ಟುಕೊಂಡಿದ್ದರು.1942ರಲ್ಲಿ ಗುರೂಜಿಯವರು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಶೇಷಾದ್ರಿಪುರಂನಲ್ಲಿ ಸ್ವಾತಂತ್ರ್ಯ ಚಳುವಳಿಗಾಗಿ ಬಂಧಿತರಾಗಬೇಕಾದಾಗ ವಿದ್ಯಾರ್ಥಿ ದೆಸೆಯಲ್ಲಿದ್ದರೂ ಆಗಿನ ಹಿರಿಯ ವಕೀಲರಾದ ವೆಂಕಟ ರಂಗ ಅಯ್ಯಂಗಾರ್ ಹಾಗು ಹಿರಿಯರಾದ ವೀರಕೇಸರಿ ಸೀತಾರಾಮ ಶಾಸ್ತ್ರಿಯವರ ಬಳಿ ಮಾತನಾಡಿ ಕಾನೂನಾತ್ಮಕವಾಗಿ ಸಮಸ್ಯೆಯನ್ನು ಬಗೆಹರಿಸಿದ್ದರು. 70 ವರ್ಷಗಳ ಪ್ರಚಾರಕರ ಜೀವನ ನಡೆಸಿದ ಅವರು ಸಂಘದ ಕಾರ್ಯಕ್ಕೆ ಅನೇಕ ಹೊಸ ಆಯಾಮ ನೀಡಿದವರು ಅಲ್ಲದೆ, ತಮಿಳುನಾಡಿನಲ್ಲಿ ಸಂಘವನ್ನು ಕಟ್ಟಿ ಬೆಳೆಸಿದವರು,ಸೇವಾ ಬಸ್ತಿ ಅನ್ನುವ ಶಬ್ದವನ್ನು ಬಳಸಿದ್ದೇ ಅವರು ಎಂದರು.1948ರ ಸಮಯಕ್ಕೆ  ಸಂಘದ ಮೇಲೆ ನಿಷೇದ ಹೇರಿ ಜೈಲಿಗೆ  ಕಳಿಸಿದಾಗ ಜೈಲಿನಲ್ಲಿ ನೀಡುತ್ತಿದ್ದ ಬೀಡಿಯ ಹಣವನ್ನ ಸಂಗ್ರಹಿಸಿ ಜೈಲಿನ ಗ್ರಂಥಾಲಯಕ್ಕೆ ವಿವೇಕಾನಂದರ ಪುಸ್ತಕಗಳನ್ನ ತರಿಸಿದ್ದವರು ಸೂರೂಜಿ ಎಂದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಜೋಷಿ (ಭಯ್ಯಾಜಿ) ಅವರು ಮಾತನಾಡಿ ಇದು ಕೇವಲ ವ್ಯಕ್ತಿಯೊಬ್ಬರ ಬಗೆಗಿನ ಪುಸ್ತಕವಲ್ಲ, ಬದಲಾಗಿ ಸಂಘದ ಇತಿಹಾಸ, ಅದರ ಸ್ವಭಾವ ಮತ್ತು ಪರಿಚಯ ಹೇಳುವ ನೆನಪಿನ ಸಾಹಿತ್ಯವಾಗಿದೆ‌.ಹೊಸ ಪೀಳಿಗೆಗಳಿಗೆ ಪ್ರೇರಣೆ ಮಾರ್ಗದರ್ಶನವಾಗಿ ಹೊರಹೊಮ್ಮಲಿದೆ.ತಮಗಾಗಿ ಏನನ್ನೂ ಮಾಡಿಕೊಳ್ಳದ ಅವರ ಆರಾಧ್ಯ ದೈವ, ಭಾರತಮಾತೆ ಮಾತ್ರ! ಭಾರತದ ಕುರಿತಾಗಿ ಅಂತಃಕರಣದಿಂದ ಕೆಲಸ ಮಾಡುವ ವ್ಯಕ್ತಿಗಳನ್ನು ಸಂಘ ಸಮಾಜದ ನಡುವೆ ಬಿತ್ತಿದೆ. ವ್ಯಕ್ತಿ ಸಂಸ್ಕಾರದ ಭಾಗವಾಗಿ ಕೆಲಸ ಮಾಡಿದೆ.ಆ ಮಾಲಿಕೆಯ ಪರಂಪರೆಯಿಂದ ಬಂದವರು ಸೂರ್ಯನಾರಾಯಣ್ ರಾವ್‌ಜೀ ಎಂದರು.

ಲೇಖಕರಾದ ಕೃಷ್ಣಪ್ರಸಾದ್ ಬದಿಯವರು ಪುಸ್ತಕದ ಮಾಹಿತಿ ಸಂಗ್ರಹಿಸಿದ ಹಿನ್ನೆಲೆ, ಆ ನಿಟ್ಟಿನಲ್ಲಿ ಅವರು ಕಂಡಕೊಂಡ ಹೊಸ ಹೊಳಹುಗಳ ಬಗೆಗೆ ಮಾತನಾಡುತ್ತಾ, ಸೂರ್ಯನಾರಾಯಣ್ ರಾವ್ ಜೀ‌ಯವರದ್ದು ಶುದ್ಧ ಸಾತ್ವಿಕ ಪ್ರೇಮದ ದರ್ಶನ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಸಿ.ಆರ್.ಮುಕುಂದ,ಕ್ಷೇತ್ರ ಪ್ರಚಾರಕರಾದ ಸುಧೀರ್, ಪ್ರಾಂತ ಪ್ರಚಾರಕರಾದ ಗುರುಪ್ರಸಾದ್ ಮೊದಲಾದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.