ನೀರು ಜೀವನದ ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದ್ದು, ಅತ್ಯಂತ ಕಾಳಜಿಯೊಂದಿಗೆ ಬಳಸಬೇಕಾದ ಜೀವದ್ರವ್ಯ. ಆದರೆ ನಮ್ಮ ನಿರ್ಲಕ್ಷ್ಯದಿಂದ ಇತ್ತೀಚಿನ ದಿನಗಳಲ್ಲಿ ನೀರಿನ ಅಭಾವ ಕಾಡುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಕಾಡುಗಳು ನಾಶವಾಗುತ್ತಿರುವುದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿ ಜಲಮೂಲಗಳು ಬರಿದಾಗುತ್ತಿವೆ. ಪರಿಶುದ್ಧ ಕುಡಿಯುವ ನೀರಿಲ್ಲದ ಕಾರಣ ವಾರ್ಷಿಕವಾಗಿ ಸುಮಾರು 1.4 ಮಿಲಿಯನ್ ಜನರು ಸಾಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಜಗತ್ತಿಗೆ ಜಾಗತಿಕ ಜಲದ ಬಿಕ್ಕಟ್ಟಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್‌ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಜಲದ ದಿನದ ಈ ವರ್ಷದ ಥೀಮ್ ‘ಶಾಂತಿಗಾಗಿ ನೀರು’ ಎನ್ನುವುದಾಗಿದೆ.


ಇತಿಹಾಸ
ವಿಶ್ವ ಜಲ ದಿನದ ಆಚರಣೆಯ ಬಗ್ಗೆ 1992 ರಲ್ಲಿ ಬ್ರೆಜಿಲ್‌ ನ ರಿಯೋ ಡಿ ಜನೈರೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಯಿತು. ನಂತರ ಡಿಸೆಂಬರ್‌ 22, 1992 ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯಕ್ಕೆ ಒಪ್ಪಿಗೆ ಸಿಕ್ಕಿತ್ತು. ಮಾರ್ಚ್‌ 22, 1993 ರಂದು ಮೊದಲ ವಿಶ್ವ ಜಲ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಶ್ವದಾದ್ಯಂತ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಹಲವು ವರ್ಷಗಳಿಂದ ವಿಶ್ವ ಜಲ ದಿನವು ಮಹತ್ವದ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ಇದು ನೀರಿಗೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸಲು ರಾಷ್ಟ್ರಗಳು, ಸಂಸ್ಥೆಗಳು ಮತ್ತು ಸಮುದಾಯಗಳ ಸಾಮೂಹಿಕ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಮಹತ್ವ
ವಿಶ್ವ ಜಲ ದಿನವು ನೀರಿನ ಸುಸ್ಥಿರ ನಿರ್ವಹಣೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇದು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಪ್ರಯೋಜನಕ್ಕಾಗಿ ಆ ಅಮೂಲ್ಯ ಸಂಪನ್ಮೂಲವನ್ನು ಸಮರ್ಥನೀಯ ಮತ್ತು ಸಮಾನ ರೀತಿಯಲ್ಲಿ ನಿರ್ವಹಿಸುವ ಅಗತ್ಯವನ್ನು ಒದಗಿಸುತ್ತದೆ. ಅದರಲ್ಲೂ ನಾವು ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ನೀರನ್ನು ಮಿತವಾಗಿ ಬಳಸಿ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.


ಸುಸ್ಥಿರ ನೀರಿನ ನಿರ್ವಹಣೆಯ ಕೆಲವು ಪ್ರಮುಖ ಅಂಶಗಳು
• ನೀರಿನ ವ್ಯರ್ಥವನ್ನು ಕಡಿಮೆ ಮಾಡುವುದು ಮತ್ತು ನೀರನ್ನು ಸಮರ್ಥವಾಗಿ ಬಳಸುವುದು ನೀರನ್ನು ಸರಿಯಾಗಿ ನಿರ್ವಹಿಸುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ.
• ನದಿಗಳು, ಸರೋವರಗಳು ಮತ್ತು ಜಲಮೂಲಗಳನ್ನು ಮಾಲಿನ್ಯ ಮತ್ತು ಇತರ ರೀತಿಯ ಅವನತಿಯಿಂದ ರಕ್ಷಿಸುವುದು ಸುಸ್ಥಿರ ನೀರಿನ ನಿರ್ವಹಣೆಗೆ ಅತ್ಯಗತ್ಯ
•  ಸಿಹಿ ನೀರಿನ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ನೀರಿನ ಕೊರತೆಯ ಪ್ರದೇಶಗಳಲ್ಲಿ ನೀರಿನ ಒತ್ತಡವನ್ನು ನಿವಾರಿಸಲು ನೀರಿನ ಮರುಬಳಕೆ ಸಹಾಯ ಮಾಡುತ್ತದೆ.
• ಅಣೆಕಟ್ಟುಗಳು, ಜಲಾಶಯಗಳು ಮತ್ತು ಪೈಪ್‌ ಲೈನ್‌ ಗಳಂತಹ ನೀರಿನ ಮೂಲಸೌಕರ್ಯದಲ್ಲಿನ ಹೂಡಿಕೆಯು ನೀರಿನ ಸಂಪನ್ಮೂಲಗಳನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

• ಮಳೆ ನೀರು ಕೊಯ್ಲು ಅಳವಡಿಕೆ, ಇಂಗು ಗುಂಡಿಗಳ ನಿರ್ಮಾಣ, ಪೋಲಾಗುವ ನೀರನ್ನು ಸಂರಕ್ಷಿಸುವುದು, ಅಗತ್ಯಕ್ಕೆ ತಕ್ಕಂತೆ ನೀರಿನ ಬಳಕೆ ಮಾಡುವುದು ಮುಂತಾದವುಗಳು ವೈಯಕ್ತಿಕ‌ ಸ್ವಭಾವದ ಮೂಲಕ ಅನುಷ್ಠಾನಕ್ಕೆ ಬಂದರೆ ಸಣ್ಣ ಮಟ್ಟಿನ ಬದಲಾವಣೆ ಸಾಧ್ಯ.

Leave a Reply

Your email address will not be published.

This site uses Akismet to reduce spam. Learn how your comment data is processed.