ABPS-2011-

ರಾಷ್ಟ್ರೀಯ ಸ್ವಯಂಸೇವಕ ಸಂಘ,  ಕರ್ನಾಟಕ

ಕೇಶವಕೃಪ, #74, ರಂಗರಾವ್ ರಸ್ತೆ, ಬೆಂಗಳೂರು – 560004

ಪತ್ರಿಕಾ ಹೇಳಿಕೆ

ಅಖಿಲ ಭಾರತೀಯ ಪ್ರತಿನಿಧಿ ಸಭಾ – ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ಸಭೆ. ಈ ವರ್ಷದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇದೇ ಮಾರ್ಚ್ 11, 12, 13 ರಂದು ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಲಿದೆ.

ABPS-2011-

ದೇಶಾದ್ಯಂತ ಹರಡಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳ ಮೂಲಕ ಆಯ್ಕೆಯಾದ ಪ್ರತಿನಿಧಿಗಳು, ಸಂಘದ ರಾಜ್ಯಮಟ್ಟದ ಹೊಣೆಗಾರಿಕೆಯ ಪದಾಧಿಕಾರಿಗಳು ಜೊತೆಗೆ ಸಂಘ ಪರಿವಾರದ 40ಕ್ಕೂ ಮಿಕ್ಕ ಸಂಘಟನೆಗಳ ರಾಷ್ಟ್ರೀಯ ಸ್ತರದ ಕಾರ್ಯಕರ್ತರು ಈ 3 ದಿನದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರಾವಳಿಯ ಮಂಗಳೂರಿನಿಂದ ದಕ್ಷಿಣಕ್ಕೆ  ಸುಮಾರು 50ಕಿ.ಮೀ. ದೂರದಲ್ಲಿರುವ ಪುತ್ತೂರಿನ ಹಸಿರ ಸಿರಿಯ ನಡುವಿನ ವಿವೇಕಾನಂದ ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ ಈ ಸಭೆ ನಡೆಯಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಹಾಗೂ  ಸರಕಾರ್ಯವಾಹರಾದ ಶ್ರೀ ಸುರೇಶ್‌ಜೋಷಿರವರ ನೇತೃತ್ವದಲ್ಲಿ ಸಭೆ ಜರುಗಲಿದೆ.

ರೈತಾಪಿ ಜನರ ನಡುವೆ ಕೆಲಸ ಮಾಡುತ್ತಿರುವ ಭಾರತೀಯ ಕಿಸಾನ್ ಸಂಘ, ಗುಡ್ಡಗಾಡಿನ ಜನರ ನಡುವೆ ಸೇವಾಕಾರ್ಯದ ಹಂದರ ನಿರ್ಮಿಸಿರುವ ವನವಾಸಿ ಕಲ್ಯಾಣಾಶ್ರಮ, ಕಾಲೇಜು ವಿದ್ಯಾರ್ಥಿಗಳ ನಡುವೆ ಕ್ರಿಯಾಶೀಲವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕಾರ್ಮಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮಜ್ದೂರ್ ಸಂಘ, ಸಾಧು, ಸಂತ, ಮಠಾಧೀಶರ ನಡುವಿನ ಧಾರ್ಮಿಕ ಸಂಘಟನೆ ವಿಶ್ವ ಹಿಂದು ಪರಿಷತ್, ರಾಜಕೀಯ ರಂಗದಲ್ಲಿ ಸಕ್ರಿಯವಾಗಿರುವ ಭಾರತೀಯ ಜನತಾ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಸಮಾಜ ಜೀವನದ ಅನ್ಯಾನ್ಯ ರಂಗಗಳಲ್ಲಿ ಕಾರ್ಯಶೀಲವಾಗಿರುವ ವಿದ್ಯಾಭಾರತಿ, ವಿಜ್ಞಾನಭಾರತಿ, ಕ್ರೀಡಾಭಾರತಿ, ಸೇವಾಭಾರತಿ, ಸಂಸ್ಕೃತಭಾರತಿ, ಸಂಸ್ಕಾರಭಾರತಿ, ಲಘುಉದ್ಯೋಗ ಭಾರತಿ ಅಲ್ಲದೆ ಸ್ತ್ರೀ ಶಕ್ತಿ ಜಾಗರಣದಲ್ಲಿ ತೊಡಗಿರುವ ರಾಷ್ಟ್ರಸೇವಿಕಾ ಸಮಿತಿ ಮಹಿಳಾ ಸಮನ್ವಯ, ಜನ ಜಾಗೃತಿಯ ರಂಗದಲ್ಲಿ ಸಕ್ರಿಯವಾಗಿರುವ ಸ್ವದೇಶಿ ಜಾಗರಣ ಮುಂಚ್, ದೀನದಯಾಳ್ ಸಂಶೋಧನಾ ಸಂಸ್ಥೆ, ಭಾರತ ವಿಕಾಸ ಪರಿಷತ್, ಶೈಕ್ಷಣಿಕ ಮಹಾಸಂಘ, ಧರ್ಮಜಾಗರಣದ ಪ್ರಮುಖರು ಭಾಗವಹಿಸಲಿದ್ದಾರೆ.

ದೃಷ್ಟಿಹೀನರ ನಡುವೆ ಕ್ರಿಯಾಶೀಲರಾಗಿರುವ ಸಕ್ಷಮ, ಭಾರತದ ಗಡಿ ಪ್ರದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವ ಸೀಮಾ ಸುರಕ್ಷಾ ಪರಿಷತ್, ನಿವೃತ್ತ ಸೈನಿಕರ ಸಮಾಜಮುಖಿ ವೇದಿಕೆ ಪೂರ್ವಸೈನಿಕ ಪರಿಷತ್‌ನಂತಹ ವಿಶಿಷ್ಟ ಸಂಘಟನೆಗಳ ಪ್ರಮುಖರು ಸಹ ಪ್ರತಿನಿಧಿಸಭಾದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಎಲ್ಲ ಸಂಘಟನೆಗಳ ಕಾರ್ಯಕಲಾಪದ ವರದಿ, ವಿಶ್ಲೇಷಣೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜ್ಯವಾರು ಕಾರ್ಯಚಟುವಟಿಕೆಗಳ ಅವಲೋಕನ ನಡೆಯಲಿದೆ. ಜೊತೆಗೆ ದೇಶದ ಆಗುಹೋಗುಗಳನ್ನು ಪ್ರಭಾವಿಸುವ ಪ್ರಮುಖ ವಿಷಯಗಳ ಕುರಿತು ಸಭೆ ಎಲ್ಲ ಮಗ್ಗಲುಗಳಲ್ಲಿ ಚರ್ಚಿಸಿ ನಿರ್ಣಯ ಅಂಗೀಕರಿಸಲಿದೆ.

ಸಮಾಜ ಜೀವನದ ಎಲ್ಲ ರಂಗಗಳಲ್ಲಿ ಕಾರ್ಯನಿರತರಾಗಿರುವ 1200 ಕ್ಕೂ ಹೆಚ್ಚು ಪ್ರತಿನಿಧಿಗಳು ದೇಶದ ಮೂಲೆ, ಮೂಲೆಗಳಿಂದ ಈ ಸಭೆಗೆ ಆಗಮಿಸುತ್ತಿದ್ದಾರೆ. 50 ಸಾವಿರ ಜನಸಂಖ್ಯೆಯ ಪುಟ್ಟ ತಾಲ್ಲೂಕು ಕೇಂದ್ರವಾಗಿರುವ ಪುತ್ತೂರಿನಲ್ಲಿ ಈ ಮಹತ್ವದ ಸಭೆ ನಡೆಯುತ್ತಿರುವುದು ವಿಶೇಷವೆನಿಸದೆ. ಪುತ್ತೂರಿನ ನಾಗರಿಕರು, ಆಸುಪಾಸಿನ ಗ್ರಾಮಸ್ಥರೆಲ್ಲರ ಸಹಕಾರದೊಂದಿಗೆ ಕಳದೆರಡು ತಿಂಗಳಿಂದ ಈ ಸಭೆಯ ವ್ಯವಸ್ಥೆಗಳನ್ನು ಸಜ್ಜುಗೊಳಿಸುವ ಕೆಲಸ ನಡೆದಿದೆ.

ಪತ್ರಕರ್ತರಿಗೆ ಆಹ್ವಾನ

ಪ್ರತಿನಿಧಿ ಸಭಾದ ಹಿನ್ನೆಲೆಯಲ್ಲಿ ಮಾರ್ಚ್ 6ರಂದು ಭಾನುವಾರ ಸಂಜೆ 5.೦೦ಕ್ಕೆ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ವಿವೇಕಾನಂದ ಪ್ರೌಢಶಾಲೆಯ ಮೈದಾನದಲ್ಲಿ ಸ್ವಯಂಸೇವಕರ ಬೃಹತ್ ಸಾಂಘಿಕ್ ನಡೆಯಲಿದೆ. 15ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಸಂಘದ ಗಣವೇಷದಲ್ಲಿ ಪಾಲ್ಗೊಳ್ಳಲಿದ್ದು ಸರಸಂಘಚಾಲಕರಾದ ಶ್ರೀಮೋಹನ್ ಭಾಗವತ್ ಮುಖ್ಯಭಾಷಣ ಮಾಡಲಿದ್ದಾರೆ.

ಮಾರ್ಚ್ 11, 12, 13 ರ ಈ ಸಭೆಯ ಕಾರ್ಯಕಲಾಪದ ವಿವರವನ್ನು ೩ ದಿನವೂ ಸಂಘದ ರಾಷ್ಟ್ರೀಯ ಪ್ರಮುಖರು ಪತ್ರಕರ್ತರಿಗೆ ಪ್ರತ್ಯೇಕ ಗೋಷ್ಠಿಯಲ್ಲಿ ವಿವರಿಸಲಿದ್ದಾರೆ. ಇದಕ್ಕಾಗಿಯೇ ಪುತ್ತೂರಿನ ವಿವೇಕಾನಂದ ಕಾಲೇಜಿನ ಪರಿಸರದಲ್ಲಿ ಮಾಧ್ಯಮ ಕೇಂದ್ರ (MEDIA CENTRE) ವನ್ನು ಸಜ್ಜುಗೊಳಿಸಲಾಗುತ್ತಿದೆ.

ಕಾರ್ಯಕ್ರಮಕ್ಕೆ ನಿಮ್ಮ ಸಹಕಾರವಿರಲಿ.

ವಂದನೆಗಳು

ಡಾ| ಪ್ರಭಾಕರ ಭಟ್

ಪ್ರಾಂತ ಕಾರ್ಯವಾಹ

ಸಂಪರ್ಕ ದೂರವಾಣಿ: 9480582027(ವಾದಿರಾಜ್), 9880621824(ರಾಜೇಶ್ ಪದ್ಮಾರ್)

Leave a Reply

Your email address will not be published.

This site uses Akismet to reduce spam. Learn how your comment data is processed.