ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಜನವರಿ 15ರಿಂದ ಇಡೀ ದೇಶದಲ್ಲಿ ಆರಂಭವಾಗಿದೆ. ಇದು ಕೊರೊನಾದಿಂದಾಗಿ ಬೇಸತ್ತ ಜನರಿಗೆ ಹೊಸ ಸ್ಫೂರ್ತಿಯನ್ನುಂಟುಮಾಡಿದೆ. ಯುವಕರಿಗೆ ಇನ್ನಷ್ಟು ಕೆಲಸಮಾಡುವ ಉತ್ಸಾಹ ಹಾಗೂ ಹಿರಿಯರಿಗೆ ತಮ್ಮ ಕಾಲದಲ್ಲಿಯೇ ರಾಮ ಮಂದಿರದ ವಿಷಯವಾಗಿ ಘನ ನ್ಯಾಯಾಲಯ ನೀಡಿರುವ ತೀರ್ಪು, ನಂತರದಲ್ಲಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ, ಭವ್ಯ ಮಂದಿರ ಕಾರ್ಯ ನಡೆಯುತ್ತಿರುವುದು ಸಂತೃಪ್ತಿಯನ್ನು ನೀಡಿದೆ.

ಅಭಿಯಾನದ ಆರಂಭ ದಿನವಾದ ಜನವರಿ 15ರಂದು ಹಲಸೂರಿನ ಆರೆಸ್ಸೆಸ್ ಸ್ವಯಂಸೇವಕರು ಕರಪತ್ರ ಮತ್ತು ರಶೀದಿ ಪುಸ್ತಕಗಳನ್ನು ಐತಿಹಾಸಿಕ ಸೋಮೇಶ್ವರ ದೇವಾಲದಲ್ಲಿ ಪೂಜೆ ಮಾಡಿಸಿ ಅಭಿಯಾನ ಆರಂಭ ಮಾಡಿದರು. ಬೆಂಗಳೂರು ಮತ್ತು ವಿಶೇಷವಾಗಿ ದಂಡು ಪ್ರದೇಶದಲ್ಲಿ ಸಾವಿರಾರು ಜನರಿಗೆ “ಶ್ರೀಮದ್ಭಗವದ್ಗೀತೆ” ಹೇಳಿಕೊಟ್ಟಂತಹ,90ವರ್ಷದ, ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಕಾರ್ಯಕರ್ತರಾದ ಮಹಾಲಕ್ಷ್ಮಿ(ಅಮ್ಮಾಯೀ) ಅವರ ಮನೆಗೂ ಭೇಟಿ ನೀಡಿದರು. ತಮ್ಮ ಎರಡು ಬಾರಿಯ ಅಯೋಧ್ಯೆಯ ಕರಸೇವೆಯನ್ನು ಮೆಲುಕುಹಾಕಿ “ಅಯೋಧ್ಯೆಯ ರಾಮಮಂದಿರ ನಿಧಿ ಸಮರ್ಪಣೆ” ಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ತಿಳಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

80ರ ದಶಕದ ಉತ್ತರಾರ್ಧದಲ್ಲಿ ಇಡೀ ದೇಶದಲ್ಲಿ ಬಿರುಗಾಳಿಯೊಂದು ಬೀಸಿತ್ತು. ಪ್ರಭು ಶ್ರೀರಾಮನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಮಾಡಲು ಇಡೀ ಹಿಂದೂ ಸಮಾಜವೇ ಒಗ್ಗೂಡತೊಡಗಿತು. ಹಳ್ಳಿ ಹಳ್ಳಿಗಳಲ್ಲಿ ರಾಮನಾಮ ಸ್ಮರಣೆ, ಹನುಮನ ಭಜನೆ ಜೋರಾಗಿ ನಡೆಯತೊಡಗಿತು. ರಾಮ ರಥಯಾತ್ರೆ ಹೋದ ಊರುಗಳಲ್ಲಿ ಅದಕ್ಕೆ ಸಿಕ್ಕ ಸ್ವಾಗತ ನೋಡಿದವರಿಗೆ, ಆ ದಿನಗಳಲ್ಲಿ ಜನರಲ್ಲಿದ್ದ ಉತ್ಸಾಹ ಎಂಥದ್ದು ಎಂದು ತಿಳಿದುಬರುತ್ತಿತ್ತು. ಇದೆ ರೀತಿ ಹಲಸುರಿನ ಸೋಮೇಶ್ವರ ದೇವಾಲದಲ್ಲಿ ಅಮ್ಮಾಯಿ ಅವರು ರಾಮಜ್ಯೋತಿ ಇಟ್ಟು ಅದರ ಮುಂದೆ ಪ್ರತೀ ಸೋಮವಾರ ರಾಮ ಭಜನೆ ಆರಂಭಿಸಿದರು. ಭಜನೆಗೆ ಬಂದ ಭಕ್ತರು ಹಾಗೂ ದೇವಾಲಯಕ್ಕೆ ಬಂದವರು ಅಮ್ಮಾಯಿ ಅವರಿಗೆ ದಕ್ಷಿಣೆ ಕೊಟ್ಟು ಹೋಗುತ್ತಿದ್ದರು. ಎಷ್ಟೇ ಆದರೂ ಅಯೋಧ್ಯೆ ರಥಯಾತ್ರೆಯ ಸಮಯದಲ್ಲಿ ಪ್ರಾರಂಭವಾದ ಭಜನೆ ಇನ್ನು ದಕ್ಷಿಣೆ ಶ್ರೀರಾಮನಿಗೆ ಸಮರ್ಪಣೆಯಾಗಬೇಕು, ಅಯೋಧ್ಯೆಗೆ ತಲುಪಬೇಕು ಎಂದು ಅದನ್ನು ಹುಂಡಿಯಲ್ಲಿ ಹಾಕಿಡುತ್ತಿದ್ದರು.

ಸುಮಾರು 25 ವರ್ಷಗಳ ಕಾಲ ಈ ಭಜನೆ ನಿರಂತರ ನಡೆದಿದೆ. ನಾಲ್ಕೈದು ವರ್ಷಗಳ ಹಿಂದೆ ದೇವಾಲಯದ ಅಭಿವೃದ್ಧಿಯಾಗುವಾಗ ಆ ಭಜನೆಮನೆ ತೆರವುಗೊಳಿಸಿದ್ದರಿಂದ ಭಜನೆ ನಿಂತು ಹೋಗಿದೆ. ವಿಹಿಂಪ ಕಾರ್ಯಕರ್ತರು ಅಮ್ಮಾಯಿ ಅವರ ಮನೆಗೆ ಹೋದಾಗ 25 ವರ್ಷದ ಈ ಸುದೀರ್ಘ ತಪಸ್ಸಿನಲ್ಲಿ ಸಂಗ್ರಹವಾದ ಅಷ್ಟೂ ಮೊತ್ತವನ್ನು ಅಮ್ಮಾಯಿ ಅಯೋಧ್ಯೆಗೆಂದು ಸಮರ್ಪಿಸಿದರು. 5 ಪೈಸೆಯ ನಾಣ್ಯದಿಂದ ಹಿಡಿದು 500₹ ವರೆಗೂ ಎಲ್ಲ ರೀತಿಯ ನಾಣ್ಯಗಳು,ನೋಟುಗಳು ಅದರಲ್ಲಿತ್ತು. “ಇಂತಹ ಘಟನೆಗಳಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುತ್ತದೆ. ಇನ್ನಷ್ಟು ರಾಮನ ಕಾರ್ಯ ಮಾಡಲು ಪ್ರೇರಣೆ ಸಿಗುತ್ತದೆ. ನಾವು ಸಾಗುತ್ತಿರುವ ಹಾದಿಯ ಬಗ್ಗೆ ಹೆಮ್ಮೆಯಾಗುತ್ತದೆ.” ಎಂದು ವಿಹಿಂಪ ಕಾರ್ಯಕರ್ತರೊಬ್ಬರು ಹೇಳಿಕೊಂಡರು.

ಅಸಲಿಗೆ ಇದು ಕೇವಲ ಕಾರ್ಯಕರ್ತರನ್ನು ಸಮರ್ಪಣೆಗೆ ಪ್ರೇರೇಪಿಸುವುದಲ್ಲದೇ ಸಮಸ್ತ ಭಾರತೀಯರಿಗೆ ಪ್ರೇರಣೆಯಾಗುತ್ತದೆ. ಸಮಾಜದಿಂದ ಸಂಗ್ರಹವಾದ ಹಣವನ್ನು ಸ್ವಂತಕ್ಕಾಗಿ ಉಪಯೋಗಿಸದೇ ಸಮಾಜದ ಗುರಿಯಾಗಿದ್ದ ರಾಷ್ಟ ಮಂದಿರವಾದ ರಾಮ ಮಂದಿರ ನಿರ್ಮಾಣಕ್ಕೆ ಅಮ್ಮಾಯಿ ನೀಡಿರುವ ನಿಧಿ ಶ್ಲಾಘನೀಯ ಹಾಗೂ ಅನುಕರಣೀಯ.

Leave a Reply

Your email address will not be published.

This site uses Akismet to reduce spam. Learn how your comment data is processed.