ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಲ್ಲೊಂದಾದ ರಾಷ್ಟ್ರೋತ್ಥಾನ ಸಾಹಿತ್ಯವು ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್ 30, 2021ರಿಂದ ನವೆಂಬರ್ 28ರ ವರೆಗೆ ‘ಕನ್ನಡ ಪುಸ್ತಕ ಹಬ್ಬ – ಪುಸ್ತಕ ಪ್ರದರ್ಶನ ಮತ್ತು ಮಾರಾಟ’ ಎಂಬ 30 ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ಈ ‘ಕನ್ನಡ ಪುಸ್ತಕ ಹಬ್ಬಕ್ಕೆ ಇಂದು ಪದ್ಮಶ್ರೀ ಮಂಜಮ್ಮ ಜೋಗುತಿ ಅವರು ಭೇಟಿ ನೀಡಿದರು. ಅವರನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಸನ್ಮಾನಿಸಿ ಗೌರವಿಸಿದರು.


ಪುಸ್ತಕ ಹಬ್ಬಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, 10,000ಕ್ಕೂ ಅಧಿಕ ಮಂದಿ ಪುಸ್ತಕಪ್ರಿಯರು ಆಗಮಿಸಿ ಪುಸ್ತಕಗಳನ್ನು ಖರೀದಿಸಿದ್ದಾರೆ. ಸಮಾಜದ ವಿವಿಧ ಕ್ಷೇತ್ರದ ಅನೇಕ ಗಣ್ಯರು ಆಗಮಿಸಿ, ಪುಸ್ತಕಗಳನ್ನು ನೋಡಿ ಮತ್ತು ಕೊಂಡು ವ್ಯವಸ್ಥೆ ಹಾಗೂ ಪುಸ್ತಕ ಲಭ್ಯತೆಯ ಕುರಿತು ಮೆಚ್ಚುಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಈ ಕನ್ನಡ ಪುಸ್ತಕ ಹಬ್ಬದಲ್ಲಿ ನಾಳೆ ಶನಿವಾರ, ನವೆಂಬರ್ 13 ಬೆಳಗ್ಗೆ 11.00 ಗಂಟೆಗೆ “ಕನ್ನಡ ಸಾಹಿತ್ಯ ಮತ್ತು ಸಿನೆಮಾ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಹಿರಿಯ ಪತ್ರಕರ್ತರು ಮತ್ತು ಲೇಖಕರಾದ ಶ್ರೀ ಎನ್.ಎಸ್. ಶ್ರೀಧರಮೂರ್ತಿ ಅವರು ಉಪನ್ಯಾಸ ನೀಡಲಿದ್ದಾರೆ. ಪ್ರಸಿದ್ಧ ಭರತನಾಟ್ಯ ಕಲಾವಿದರು ಹಾಗೂ ಚಲನಚಿತ್ರ ನಟರಾದ ಡಾ. ಶ್ರೀಧರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.


ಶನಿವಾರ, ನವೆಂಬರ್ 13, ಸಂಜೆ 5.00 ಗಂಟೆಗೆ ‘ನಾಡೋಜ ಎಸ್. ಆರ್. ರಾಮಸ್ವಾಮಿಯವರ ಕೃತಿಗಳು’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬಹುಶ್ರುತ ವಿದ್ಯಾಂಸರು ಮತ್ತು ಲೇಖಕರಾದ ಶತಾವಧಾನಿ ಡಾ. ಆರ್. ಗಣೇಶ್ ಉಪನ್ಯಾಸ ನೀಡಲಿದ್ದಾರೆ.


ನವೆಂಬರ್ 28ರ ವರೆಗೆ ನಡೆಯಲಿರುವ ಈ ಕನ್ನಡ ಪುಸ್ತಕ ಹಬ್ಬದಲ್ಲಿ ಶೇ. 40ರಷ್ಟು ರಿಯಾಯಿತಿಯಲ್ಲಿ ಪುಸ್ತಕಗಳು ಲಭ್ಯವಿದೆ. ಮಕ್ಕಳು, ಯುವಕರು, ಚಿಂತಕರು, ವಿದ್ವಾಂಸರು, ಆಧ್ಯಾತ್ಮಿಕ, ವ್ಯಕ್ತಿ ಚರಿತ್ರೆ, ವ್ಯಕ್ತಿತ್ವ ವಿಕಾಸ, ಕಾದಂಬರಿ, ಯೋಗ, ಆರೋಗ್ಯ ಸೇರಿದಂತೆ ಎಲ್ಲ ವಯೋಮಾನದವರ ಓದುವ ಆಸಕ್ತಿಗೆ ಪೂರಕವಾದ ಪುಸ್ತಕಗಳು ಈ ಕನ್ನಡ ಪುಸ್ತಕಹಬ್ಬದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯ ಇವೆ. ಸುಮಾರು 50ಕ್ಕೂ ಅಧಿಕ ಪ್ರಕಾಶಕರ 5000ಕ್ಕೂ ಅಧಿಕ ಶೀರ್ಷಿಕೆಯ ಪುಸ್ತಕಗಳು ಇಲ್ಲಿ ಲಭ್ಯ ಇವೆ. ಈ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಜತೆಗೆ ಪ್ರತಿ ಶನಿವಾರ ಮತ್ತು ಬಾನುವಾರ ವಿಶೇಷ ಉಪನ್ಯಾಸಗಳು, ಪುಸ್ತಕ ಲೋಕಾರ್ಪಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಅಷ್ಟೇ ಅಲ್ಲದೆ, ಲೇಖಕರೊಂದಿಗೆ ಸಂವಾದ, ಲೇಖಕರ ಹಸ್ತಾಕ್ಷರದೊಂದಿಗೆ ಪುಸ್ತಕ ಖರೀದಿ ಹಾಗೂ ಲೇಖಕರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶವಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.