ರಾಷ್ಟ್ರೀಯ ಸ್ವಯಂಸೇವಕ ಸಂಘ
ಪ್ರಾಂತ ಪ್ರಚಾರಕ್ ಸಭೆ, ಝುಂಝುನು, ರಾಜಸ್ಥಾನ
7-9 ಜುಲೈ 2022
   
ಪತ್ರಿಕಾ ಪ್ರಕಟಣೆ

ಝುಂಝುನು – 9 ಜುಲೈ 2022 : ಖೇಮಿ ಶಕ್ತಿ ದೇವಾಲಯದ ಸಂಕೀರ್ಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಾಂತ ಪ್ರಚಾರಕರ ಬೈಠಕ್‌ ಸಂಪನ್ನಗೊಂಡಿದ್ದು ಅಖಿಲ ಭಾರತ ಪ್ರಚಾರ ಪ್ರಮುಖ್ ಶ್ರೀ ಸುನೀಲ್ ಅಂಬೇಕರ್ ಅವರು ಪತ್ರಕರ್ತರಿಗೆ ಮಾಹಿತಿ ನೀಡುತ್ತಾ “ಕರೋನಾ ಅವಧಿಯ ನಂತರ ಮೊದಲ ಬಾರಿಗೆ ಪ್ರತ್ಯಕ್ಷವಾಗಿ ನಡೆಯುತ್ತಿರುವ ಪ್ರಾಂತ ಪ್ರಚಾರಕರ ಸಭೆ ಇದಾಗಿದ್ದು ಸಂಘಟನಾತ್ಮಕ ಕಾರ್ಯದ ಜೊತೆಗೆ, ಮುಂಬರುವ ಯೋಜನೆಗಳು ಮತ್ತು ಗತಿವಿಧಿಗಳ ಬಗ್ಗೆಯೂ ಚರ್ಚಿಸಲಾಯಿತು” ಎಂದರು.

ಅವರು ಮಾತನಾಡುತ್ತಾ, “ಎರಡು ವರ್ಷಗಳ ನಂತರ ನಡೆದ ಸಂಘ ಶಿಕ್ಷಣ ವರ್ಗಗಳಲ್ಲಿ 40 ವರ್ಷದೊಳಗಿನ 18,981 ವಿದ್ಯಾರ್ಥಿಗಳು ಹಾಗೂ 40 ವರ್ಷ ಮೇಲ್ಪಟ್ಟ 2,925 ಶಿಕ್ಷಾರ್ಥಿಗಳು ಭಾಗವಹಿಸಿದ್ದಾರೆ. ಈ ವರ್ಷ ಇಡೀ ದೇಶದ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ 101 ವಿಭಾಗಗಳಲ್ಲಿ ಒಟ್ಟು 21,906 ಸಂಖ್ಯೆಯ ಶಿಕ್ಷಾರ್ಥಿಗಳಿದ್ದರು” ಎಂದರು.

“ಸಂಘದ ಕಾರ್ಯ ಪುನಃ ವೇಗ ಪಡೆಯುತ್ತಿದ್ದು  ಕರೋನಾದಿಂದ ಕುಂಠಿತಗೊಂಡಿದ್ದ ಶಾಖೆಯ ಕೆಲಸ ಪುನರಾರಂಭಗೊಂಡಿದೆ. ಪ್ರಸ್ತುತ ಶಾಖೆಗಳ ಸಂಖ್ಯೆ 56,824. ನೀರಿನ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಪರಿಸರ ಮತ್ತು ಸ್ವಚ್ಛತೆ ಇತ್ಯಾದಿ ಸಾಮಾಜಿಕ ಕಾರ್ಯಗಳಲ್ಲಿ ಸ್ವಯಂಸೇವಕರ ಭಾಗವಹಿಸುವಿಕೆ ಸಮಾಜದ ಸಹಯೋಗವೂ ಜೊತೆಗೂಡಿ ಹೆಚ್ಚುತ್ತಿದೆ.  ಅದೇ ರೀತಿ ಕುಟುಂಬ ಪ್ರಬೋಧನ ಹಾಗು ವ್ಯಸನ ಮುಕ್ತಿ ಕೇಂದ್ರದ ಕೆಲಸವನ್ನು ಸಾಮಾಜಿಕ ಸಂಸ್ಥೆಗಳ,ಮಠ-ಮಂದಿರಗಳ ಸಹಯೋಗದೊಂದಿಗೆ ಸ್ವಯಂಸೇವಕರು ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ” ಎಂದರು.

ಅವರು ಮಾತನಾಡುತ್ತಾ,”ಬೈಠಕ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದಿರುವ ಹಿನ್ನೆಲೆಯಲ್ಲಿ ಸಮಾಜ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸ್ವ-ಆಧಾರಿತ ಚಿಂತನೆಗಳು ನಡೆಯಬೇಕು ಹಾಗೂ ಸಮಾಜದ ನಾನಾ ಸಂಘ ಸಂಸ್ಥೆಗಳು ಅಜ್ಞಾತ ಹಾಗೂ ಅಪರಿಚಿತ ವೀರರ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪ್ರಚಾರ ಮಾಡಬೇಕಾದ ಅವಶ್ಯಕತೆ ಹೆಚ್ಚಿದೆ.”ಎಂದರು.

ಸುನಿಲ್ ಅಂಬೇಕರ್ ಅವರು ಮುಂದುವರೆದು ಮಾತನಾಡುತ್ತಾ “ಅಖಿಲ ಭಾರತ ಪ್ರತಿನಿಧಿ ಸಭೆಯು ಮಾರ್ಚ್‌ನಲ್ಲಿ ಪೂರ್ಣಗೊಂಡಿದ್ದು ಸ್ವಯಂ ಉದ್ಯೋಗದ ವಿಷಯ ಚರ್ಚಿಸಲಾಯಿತು. ಅದರ ಅಡಿಯಲ್ಲಿ 22 ಸಂಸ್ಥೆಗಳು ‘ಸ್ವಾವಲಂಬಿ ಭಾರತ ಅಭಿಯಾನ’ದಡಿ 4,000ಕ್ಕೂ ಹೆಚ್ಚು ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿವೆ.  ಜುಲೈ 15 ರ ಅಂತರರಾಷ್ಟ್ರೀಯ ಯುವ ಕೌಶಲ್ಯ ದಿನದಿಂದ ಆಗಸ್ಟ್ 21ರ ಉದ್ಯಮಿಗಳ ದಿನದವರೆಗೆ ಇದೇ ವಿಚಾರದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ” ಎಂದರು‌.

“2025ಕ್ಕೆ ನೂರು ವರ್ಷಗಳ ಸಂಘದ ಕಾರ್ಯ ಪೂರ್ಣಗೊಳ್ಳುತ್ತಿದ್ದು, ಸಂಘದ ಶತಮಾನೋತ್ಸವ ವರ್ಷಕ್ಕೆ ಸಮಗ್ರ ವಿಸ್ತರಣಾ ಯೋಜನೆಯನ್ನು ಮಾಡಲಾಗಿದೆ. 2024ರ ವೇಳೆಗೆ ದೇಶಾದ್ಯಂತ ಒಂದು ಲಕ್ಷ ಸ್ಥಳಗಳಿಗೆ ಶಾಖೆಗಳನ್ನು ವಿಸ್ತರಿಸಲು ಮತ್ತು ಸಂಘದ ಕಾರ್ಯವು ಸಮಾಜದ ಎಲ್ಲಾ ವರ್ಗಗಳನ್ನು ತಲುಪಬೇಕು ಎಂಬ ದೃಷ್ಟಿಯಿಂದ, ಸಾಮಾಜಿಕ ಜಾಗೃತಿಯ ಜೊತೆಗೆ  ಸಮಾಜದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ‌.  ಸಭೆಯಲ್ಲಿ ಕಳೆದ ವರ್ಷದ ಸಮೀಕ್ಷೆ ಮತ್ತು ಮುಂದಿನ ಎರಡು ವರ್ಷಗಳ ಕಾರ್ಯ ಯೋಜನೆಗಳ ಪರಾಮರ್ಶೆಯನ್ನು ನಡೆಸಲಾಯಿತು.

ಸುನೀಲ್ ಅಂಬೇಕರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ,”ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಲೋಕ ಭಾವನೆಯ ಕಾಳಜಿಯನ್ನೂ ವಹಿಸಬೇಕು. ಉದಯಪುರದಲ್ಲಿ ನಡೆದ ಭೀಕರ ಹತ್ಯೆ ಅತ್ಯಂತ ಖಂಡನೀಯ. ಆ ಘಟನೆಯನ್ನು ಎಷ್ಟು ಖಂಡಿಸಿದರೂ ಕಡಿಮೆಯೇ.  ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ.  ಸಾಂವಿಧಾನಿಕ ಪ್ರಜಾಸತ್ತಾತ್ಮಕ ಹಕ್ಕುಗಳಿವೆ.  ಯಾರಾದರೂ ಏನನ್ನಾದರೂ ಇಷ್ಟಪಡದಿದ್ದರೆ, ಅದಕ್ಕೆ ಪ್ರತಿಕ್ರಿಯಿಸಲು ಪ್ರಜಾಸತ್ತಾತ್ಮಕ ಮಾರ್ಗವಿದೆ. ಇಂತಹ ಘಟನೆಯನ್ನು ಸಭ್ಯ ಸಮಾಜವು ಖಂಡಿಸುತ್ತದೆ.  ಹಿಂದೂ ಸಮಾಜವು ತನ್ನ ಪ್ರತಿಕ್ರಿಯೆಯನ್ನು ಶಾಂತಿಯುತವಾಗಿ, ಸಾಂವಿಧಾನಿಕ ರೀತಿಯಲ್ಲಿ ನೀಡುತ್ತಿದೆ. ಮುಸಲ್ಮಾನ ಸಮುದಾಯವೂ ಇಂತಹ ಘಟನೆಯನ್ನು ನಿಷೇಧಿಸಬೇಕಿದೆ.  ಕೆಲವು ಬುದ್ಧಿಜೀವಿಗಳು ಇದನ್ನು ಖಂಡಿಸಿದ್ದಾರೆ.ಆದರೆ ಈಗ ಮುಸಲ್ಮಾನ ಸಮಾಜವೂ ಮುಂದೆ ಬಂದು ಇದನ್ನು ತೀವ್ರವಾಗಿ ವಿರೋಧಿಸಬೇಕಿದೆ‌.  ಇಂತಹ ಘಟನೆಗಳು ಸಮಾಜದ ಹಿತದೃಷ್ಟಿಯಿಂದಾಗಲೀ, ದೇಶದ ಹಿತದೃಷ್ಟಿಯಿಂದಾಗಲೀ ಒಳ್ಳೆಯದಲ್ಲ.  ಎಲ್ಲರೂ ಒಟ್ಟಾಗಿ ಅದನ್ನು ನಿಷೇಧಿಸುವುದು ಅವಶ್ಯಕ.

Leave a Reply

Your email address will not be published.

This site uses Akismet to reduce spam. Learn how your comment data is processed.