ಹಿಂದುಗಳ ದಮನಕ್ಕೆ ಕಾಂಗ್ರೆಸ್ ಸಂಚು

ಮತೀಯ ಹಿಂಸಾಚಾರ ತಡೆ ಶಾಸನ – 2011

ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಹೊಸ ವಿಷಯವೇನಲ್ಲ. ದಿನಪತ್ರಿಕೆಗಳನ್ನು ಓದುವ ಟಿವಿ ನೋಡುವ ಎಲ್ಲರಿಗೂ ಗೊತ್ತಿರುವ ವಿಷಯ ಇದು. ಕಾಂಗ್ರೆಸ್ಸಿನ ಹಿಂದೂ ವಿರೋಧಿ ಕ್ರಮಕ್ಕೆ ಮತ್ತೊಂದು ಈಗ ಮತ್ತೊಂದು ಸೇರ್ಪಡೆಯಾಗಿದೆ. ಅದೇ ಮತೀಯ ಹಿಂಸಾಚಾರ ತಡೆ ಶಾಸನ. ಆದರೆ, ಇದು ಹಿಂದುಗಳ ಪಾಲಿಗೆ ಅತ್ಯಂತ ಭಯಾನಕ ಶಾಸನವೇ ಸರಿ. ಒಂದು ವೇಳೆ ಇದು ಜಾರಿಯಾದಲ್ಲಿ ನಮ್ಮ ದೇಶದಲ್ಲಿ ಮತೀಯ ಸಾಮರಸ್ಯಕ್ಕೆ ದೊಡ್ಡ ಕೊಡಲಿಯೇಟು ಬಿದ್ದಂತೆ. ಸರ್ಕಾರವೇ ಹಿಂದುಗಳ ಜೀವಹಾನಿ, ಮಾನಹಾನಿ ಮಾಡಲು ಅಲ್ಪಸಂಖ್ಯಾತರಿಗೆ ಪರವಾನಗಿ ಕೊಟ್ಟಂತೆ ಆದೀತು. ಈ ಕರಾಳ ಶಾಸನದ ಬಗ್ಗೆ ಎಲ್ಲ ಹಿಂದುಗಳು ಎಚ್ಚರಗೊಂಡು ಈಗಲೇ ಪ್ರತಿಭಟಿಸದಿದ್ದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾದೀತು.

ಬರಲಿರುವ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರಕಾರವು ‘ಮತೀಯ ಮತ್ತು ನಿರ್ದೇಶಿತ ಹಿಂಸಾಚಾರ ತಡೆ (ನ್ಯಾಯ ಮತ್ತು ಪರಿಹಾರ ಪ್ರಾಪ್ತಿಗಾಗಿ) ಮಸೂದೆ – 2011 [Prevention of Communal and Targeted Violence (Access to justice and reparation) Bill – 2011]’ ಇದನ್ನು ಚರ್ಚೆಗಾಗಿ ಮಂಡಿಸಲಿದೆ. ಈ ವಿವಾದಿತ ಮಸೂದೆಗೆ ಸಂಬಂಧಿಸಿದಂತೆ ಈಗಾಗಲೇ ಮಾಧ್ಯಮದಲ್ಲಿ ಮತ್ತು ಕಾನೂನುತಜ್ಞರ ಮಟ್ಟದಲ್ಲಿ ವ್ಯಾಪಕವಾದ ಚರ್ಚೆ ಆರಂಭವಾಗಿದೆ.

ಈ ಶಾಸನವನ್ನು ಯೋಜಿಸಿ, ರಚಿಸಿದುದು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಕಾರ ಮಂಡಳಿ. (National Advisory Council). ಅದರಲ್ಲಿರುವ ಪ್ರಮುಖರೆಂದರೆ- ಅಸ್ಘರ್ ಆಲಿ ಇಂಜಿನಿಯರ್, ಹರ್ಷ ಮಂಡಲ್, ತೀಸ್ತಾ ಸೆಟಲ್‌ವಾಡ್, ಶಬನಮ್ ಹಶ್ಮಿ, ಜಾನ್ ದಯಾಳ್, ಉಪೇಂದ್ರ ಭಕ್ಷಿ, ಸೈಯ್ಯದ್ ಶಹಾಬುದ್ದೀನ್ ಅಂತಹ ಸೋನಿಯಾ ನಿಕಟವರ್ತಿಗಳು.

ಏನಿದೆ ಈ ವಿಧೇಯಕದಲ್ಲಿ?

ಈ ವಿಧೇಯಕದಲ್ಲಿ ಒಂಭತ್ತು ಅಧ್ಯಾಯಗಳು ಮತ್ತು ೧೩೮ ವಿಧಿಗಳಿವೆ. ಈ ವಿಧಿಗಳಲ್ಲಿ ವಿವಾದಾಸ್ಪದವಾಗಿರುವಂತಹ ಹಲವು ವಿಷಯಗಳಿವೆ. ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ.

  • ಮೊದಲ ಅಧ್ಯಾಯದಲ್ಲಿ ಮಸೂದೆಯ ಇಂಗಿತವನ್ನು ವಿವರಿಸುವಾಗ ದೇಶದ ನಾಗರಿಕರನ್ನು ‘ಗುಂಪು’ ಮತ್ತು ‘ಅನ್ಯರು’ ಎಂದು ಎರಡು ಹೆಸರಿನಲ್ಲಿ ವ್ಯಾಖ್ಯಾನಿಸಲಾಗಿದೆ. ‘ಗುಂಪು’ ಎನ್ನಲಾಗುವುದರಲ್ಲಿ ಭಾಷಾ ಅಲ್ಪಸಂಖ್ಯಾತರು ಮತ್ತು ಮತೀಯ ಅಲ್ಪಸಂಖ್ಯಾತರು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟಿನವರು ಒಳಗೊಳ್ಳುತ್ತಾರೆ. ಮಿಕ್ಕವರೆಲ್ಲರೂ (ಅರ್ಥಾತ್ ಬಹುಸಂಖ್ಯಾತ ಹಿಂದುಗಳು) ‘ಅನ್ಯರು’ ಎನ್ನುವ ಗುಂಪಿನಡಿ ಬರುತ್ತಾರೆ. ಕೇವಲ ‘ಅಲ್ಪಸಂಖ್ಯಾತರು’ ಎಂದು ಕರೆದರೆ ತುಷ್ಟೀಕರಣದ ಪ್ರಯತ್ನವೆಂದು ಆರೋಪಿಸಲು ವಿರೋಧಪಕ್ಷದವರಿಗೆ ಅಸ್ತ್ರ ಒದಗಿಸಿದಂತಾಗುತ್ತದೆ ತಾನೇ. ಅದರಿಂದ ಬಚಾವಾಗಲು ಆದರೆ, ಅದು ಒಂದು ಗುರಾಣಿಯಾಗಿ ಮಾತ್ರ. ಅಷ್ಟೇ ಅಲ್ಲ, ಹಿಂದುಗಳಿಂದ ಅವರೆಲ್ಲರನ್ನೂ ಪ್ರತ್ಯೇಕಿಸಿ ಸಮಾಜದಲ್ಲಿ ಒಡಕು ಬೆಳೆಸುವುದು ಹಾಗೂ ತನ್ನ ‘ವೋಟ್ ಬ್ಯಾಂಕ್’ ರಾಜಕಾರಣಕ್ಕೆ ಅವರನ್ನು ಬಳಸುವುದು ಇದರ ಹಿಂದಿರುವ ಹುನ್ನಾರ.
  • ಮತೀಯ ದಂಗೆ, ಲೈಂಗಿಕ ಅಪರಾಧ, ದ್ವೇಷಪೂರಿತ ಪ್ರಚಾರ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಮಸೂದೆಯಲ್ಲಿ ನೀಡಲಾಗಿರುವ ವಿವರಣೆ ಹೀಗಿದೆ: ಅಲ್ಪಸಂಖ್ಯಾತರ ಪ್ರಾಣಹಾನಿ, ಆಸ್ತಿ-ಸಂಪತ್ತು ನಷ್ಟವಾದಲ್ಲಿ ಮಾತ್ರ ಅದನ್ನು ‘ಮತೀಯ ದಂಗೆ’ ಮತ್ತು ‘ದುರುದ್ದೇಶಪೂರಿತ ಹಿಂಸೆ’ ಎಂದು ತಿಳಿಯಲಾಗುವುದು. ಅಲ್ಪಸಂಖ್ಯಾತರು ಹಿಂದುಗಳ ಪ್ರಾಣಹಾನಿ, ಸಂಪತ್ತು ನಷ್ಟ ಎಸಗಿದಲ್ಲಿ ಅದು ಮತೀಯ ದಂಗೆ ಮತ್ತು ದುರುದ್ದೇಶಪೂರಿತ ಹಿಂಸೆ ಎನಿಸಿಕೊಳ್ಳುವುದಿಲ್ಲ. (ಅಂದರೆ, ಗೋಧ್ರ್ರಾದಲ್ಲಿ ರೈಲಿಗೆ ಬೆಂಕಿ, ಕಾರಸೇವಕರ ಸಜೀವ ದಹನ, ಇತ್ಯಾದಿಗಳು ಅಪರಾಧವಲ್ಲ. ಆದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಗುಜರಾತಿನಲ್ಲಿ ನಂತರ ನಡೆದುದು ಮಾತ್ರ ‘ಮತೀಯ ದಂಗೆ’)
  • ಅಲ್ಪಸಂಖ್ಯಾತ ಸಮುದಾಯದ ಯಾವನೇ ವ್ಯಕ್ತಿಯ ವ್ಯಾಪಾರ ಅಥವಾ ಜೀವನಕ್ಕೆ ಹಾನಿಯೆಸಗಿದಲ್ಲಿ ಅಥವಾ ಸಾರ್ವಜನಿಕವಾಗಿ ಅವನನ್ನು ಅಪಮಾನಿಸಿದಲ್ಲಿ, ಅದು ‘ದ್ವೇಷ ಸೃಷ್ಟಿಸಿದ ಅಪರಾಧ’ ಎನಿಸುತ್ತದೆ. ಆದರೆ, ಗಲಭೆಯಲ್ಲಿ ಯಾವನೇ ಹಿಂದು ಸತ್ತಲ್ಲಿ, ಗಾಯಗೊಂಡಿದ್ದಲ್ಲಿ, ಅವನ ಸಂಪತ್ತು ನಷ್ಟವಾಗಿದ್ದಲ್ಲಿ, ಅವನು ಅಪಮಾನಿತನಾಗಿದ್ದಲ್ಲಿ, ಬಹಿಷ್ಕೃತನಾಗಿದ್ದಲ್ಲಿ ಅವನನ್ನು ‘ಪೀಡಿತ ವ್ಯಕ್ತಿ’ (victim) ಎಂಬಂತೆ ತಿಳಿಯಲಾಗುವುದಿಲ್ಲ. ಒಟ್ಟಿನಲ್ಲಿ ಈ ಮಸೂದೆಯಂತೆ ‘ಪೀಡಿತ’ನೆನಿಸಿಕೊಳ್ಳುವವನು ಅಲ್ಪಸಂಖ್ಯಾತ ಮಾತ್ರ! ಅರ್ಥಾತ್, ಅಲ್ಪಸಂಖ್ಯಾತರು ಏನೇ ಮಾಡಿದರೂ ಅವರಿಗೆ ಕಾನೂನಿನಡಿ ಶಿಕ್ಷೆಯಿಲ್ಲ. ಕಾನೂನಿನ ಭೀತಿಯಿಲ್ಲದೆ ‘ಹಿಂಸೆ’, ‘ದಂಗೆ’ ನಡೆಸಲು ಅವರಿಗೆ ಮುಕ್ತ ಅವಕಾಶ. ಅವರಿಗೆ ನಷ್ಟವಾಗಿದ್ದಲ್ಲಿ ಪರಿಹಾರವೂ ನಿಶ್ಚಿತ. ಆದರೆ, ಗಲಭೆಗಳಲ್ಲಿ ಹಿಂದುವಿಗೆ ಕಾನೂನಿಂದಾಗಲೀ, ಸರಕಾರದ್ದಾಗಲೀ ರಕ್ಷಣೆಯ ಭರವಸೆಯೂ ಇಲ್ಲ. ಅವನಿಗೆ ‘ದೇವರೇ ಗತಿ’.
  • ಹಿಂದು ಮಹಿಳೆಯನ್ನು ಅಲ್ಪಸಂಖ್ಯಾತ ವ್ಯಕ್ತಿಯೊಬ್ಬ ಬಲಾತ್ಕರಿಸಿದಲ್ಲಿ ಅದು ಬಲಾತ್ಕಾರದ ವ್ಯಾಪ್ತಿಗೆ ಬರುವುದಿಲ್ಲ (ವಿಧಿ 7). ಆದರೆ, ಹಿಂದುವೊಬ್ಬ ಅಲ್ಪಸಂಖ್ಯಾತ ವರ್ಗದ ಮಹಿಳೆಯೊಬ್ಬಳ ಬಲಾತ್ಕಾರವೆಸಗಿದಲ್ಲಿ ಅವನು ‘ಲೈಂಗಿಕ ಅಪರಾಧಿ’ಯಾಗಿ ಶಿಕ್ಷೆಗೊಳಪಡುತ್ತಾನೆ. ಗಮನಿಸಬೇಕಾದ ಸಂಗತಿ: ಉತ್ತರ ಪ್ರದೇಶದಲ್ಲಿ ಇಮ್ರಾನಾಳೊಂದಿಗೆ ಸ್ವತಃ ಆಕೆಯ ಮಾವ ಎಸಗಿರುವ ಅತ್ಯಾಚಾರ ಈ ಮಸೂದೆಯ ಪ್ರಕಾರ ಅತ್ಯಾಚಾರವೇ ಅಲ್ಲ!
  • ಈ ಮಸೂದೆಯಂತೆ ಅಲ್ಪಸಂಖ್ಯಾತರ ಜತೆ ಎಸಗಲಾದ ಕೃತ್ಯಗಳ ಮಾಹಿತಿ ಒದಗಿಸುವವನು ಮಾತ್ರ ‘ಸಾಕ್ಷಿ’ ಎನಿಸಿಕೊಳ್ಳುತ್ತಾನೆ. ಬಹುಸಂಖ್ಯಾತರಿಗಾದ ಹಾನಿಗೆ ಸಂಬಂಧಿಸಿ ಹೇಳಲಾಗುವ ಯಾವುದೇ ಮಾಹಿತಿ ‘ಸಾಕ್ಷಿ’ ಎನಿಸಿಕೊಳ್ಳುವುದಿಲ್ಲ. (ತೀಸ್ತಾ ಸೆತಲ್‌ವಾಡ್ ಅಂತಹವರಿಗೆ ಇನ್ನು ಮುಂದೆ ಸುಳ್ಳು ಸಾಕ್ಷಿ ಒದಗಿಸಲು ದಾರಿ ಸುಗಮವಾಯಿತಲ್ಲವೇ?)
  • ಮಸೂದೆಯ ಎರಡನೇ ಅಧ್ಯಾಯದಲ್ಲಿನ ವಿಧಿ ೮ರಂತೆ ಅಲ್ಪಸಂಖ್ಯಾತರ ಭಾವನೆ ನೋಯಿಸುವಂತೆ ಯಾವುದೇ ಸಂಗತಿ – ಅಂದರೆ ಬೈಬಲ್, ಕುರಾನ್, ಮುಸಲ್ಮಾನ ವೈಯಕ್ತಿಕ ಕಾನೂನು, ಮುಸಲ್ಮಾನರ ರೀತಿರಿವಾಜುಗಳು, ಅವರ ಬೇಡಿಕೆಗಳು, ಅವರ ಸಂಘಟನೆಗಳು, ಅದರ ಆಂದೋಲನಗಳು, ಇವ್ಯಾವುದರ ಬಗ್ಗೆಯೂ ಟೀಕಿಸುವುದು, ವಿಶ್ಲೇಷಣಾತ್ಮಕ ಲೇಖನ ಬರೆಯುವುದು, ಇತ್ಯಾದಿ ಮಾಡುವಂತಿಲ್ಲ. ಹಿಂದುಗಳ ಮಾತು, ಲೇಖನ, ಜಾಹಿರಾತು, ಸುದ್ದಿ, ಅಥವಾ ಇನ್ನಾವುದೇ ರೀತಿಯಲ್ಲಿ ಅಲ್ಪಸಂಖ್ಯಾತರ ಮನನೋಯಿಸುವಂತಹ ಕೃತ್ಯವೆಸಗಿದಲ್ಲಿ, ಅವನನ್ನು ಹಿಂಸೆಯನ್ನು ಪ್ರಚೋದಿಸಿದ ಎಂದು ತಿಳಿಯಲಾಗುತ್ತದೆ. ಈ ಅಪರಾಧಕ್ಕಾಗಿ ಅವನು ಶಿಕ್ಷೆಗೊಳಗಾಗುತ್ತಾನೆ. (ಒಂದು ಪೂರಕ ಮಾಹಿತಿ: ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಲಾಲ್-ಬಾಲ್-ಪಾಲ್ ಅವರು ಅಲ್ಪಸಂಖ್ಯಾತರನ್ನು ಸ್ವಾತಂತ್ರ್ಯ ಆಂದೋಲನದಿಂದ ಬೇರ್ಪಡಿಸಿ ದೂರಗೊಳಿಸಿದ ಅಪರಾಧಿಗಳು ಎಂದು ಇತಿಹಾಸಕಾರ ಮುಶಿರುಲ್ ಹಸನ್ ಆರೋಪಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಯಾರಾದರೂ ಲಾಲ್-ಬಾಲ್-ಪಾಲ್ ಅವರ ಬಗ್ಗೆ ಗ್ರಂಥ ಪ್ರಕಟಿಸಿದಲ್ಲಿ, ಅವರ ಕುರಿತಾಗಿ ಪಾಠ ಮಾಡಿದ್ದಲ್ಲಿ, ಅವರನ್ನು ಉದ್ಧರಿಸಿದ್ದಲ್ಲಿ (Quote) ಯಾವನೇ ಅಲ್ಪಸಂಖ್ಯಾತ ವ್ಯಕ್ತಿ ತನ್ನ ಮನನೋಯಿಸಲಾಗಿದೆ ಎಂದು ದೂರು ಸಲ್ಲಿಸಬಹುದು. ಆಗ, ಆ ಪ್ರಕಾಶಕ ಅಥವಾ ಅಧ್ಯಾಪಕ, ಸೆರೆಮನೆ ಸೇರಲು ಸಹ ತಯಾರಿರಬೇಕಾಗುತ್ತದೆ)
  • ಹಿಂದು ಸಂಘಟನೆ, ಸಂಸ್ಥೆಗಳಿಗೆ ಕೊಡಲಿಯೇಟು ಹಾಕುವಂತಹ ಮಸಲತ್ತು ಸಹ ಅತಿ ಜಾಣತನದಿಂದ ಈ ಮಸೂದೆಯಲ್ಲಿ ರೂಪಿಸಲಾಗಿದೆ. ತುಸು ಗಮನಿಸಿ: ಯಾವನೇ ಓರ್ವ ಹಿಂದು ಈ ಮೇಲಿನ ಯಾವುದೇ ಅಪರಾಧ ಮಾಡಿರುವಂತೆ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬನಿಗೆ ಅನಿಸಿ, ಅವನು ದೂರು ಸಲ್ಲಿಸಿ, ಅದು ಸಾಬೀತಾದಲ್ಲಿ ಆಗ ಆ ವ್ಯಕ್ತಿಯೊಂದಿಗೆ ಅವನ ಸಂಘಟನೆಯ ಪ್ರಮುಖರು ಸಹ – ಅವರ ಪಾತ್ರವಿರಲಿ, ಇಲ್ಲದಿರಲಿ; ಆ ಸಂಸ್ಥೆ ನೊಂದಾಯಿತವಾಗಿರಲಿ, ಇಲ್ಲದಿರಲಿ – ಈ ಕಾನೂನಿನ ವ್ಯಾಪ್ತಿಗೊಳಪಡುತ್ತಾರೆ. ಉದಾಹರಣೆಗೆ, ಒಂದೂರಿನಲ್ಲಿ ಒಂದು ಗಣೇಶೋತ್ಸವ ಸಮಿತಿಯೋ, ಹೋಲಿ ಉತ್ಸವ ಸಮಿತಿಯೋ ಇದೆ ಎಂದಿಟ್ಟುಕೊಳ್ಳಿ. ಅದರ ಯಾವನೇ ಒಬ್ಬ ಸದಸ್ಯ ತನ್ನನ್ನು ರೇಗಿಸಿದ, ತನ್ನ ಮೇಲೆ ಬಣ್ಣ ಎರಚಿದ, ಜಗಳವಾಡಿದ, ಇತ್ಯಾದಿ ದೂರನ್ನು ಅಲ್ಪಸಂಖ್ಯಾತನೊಬ್ಬ ಸಲ್ಲಿಸಿದಲ್ಲಿ, ಆಗ ಆ ಹಿಂದುವಿನೊಂದಿಗೆ, ಆ ಸಮಿತಿಯ ಇನ್ನಿತರರು ಸಹ ನ್ಯಾಯಾಲಯದ ಕಟಕಟೆಗೆ ಬರಬೇಕಾಗಬಹುದು. ಪ್ರಾಯಶಃ ಅವರೆಲ್ಲರಿಗೂ ಶಿಕ್ಷೆ ಆಗಬಹುದು!
  • ನಮ್ಮ ಸಂವಿಧಾನದಂತೆ ಕಾನೂನು ಮತ್ತು ಸುವ್ಯವಸ್ಥೆಗಳು ಆಯಾ ರಾಜ್ಯ ಸರಕಾರಗಳ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಂತವು. ಕೇಂದ್ರ ಸರಕಾರವು ಅದರಲ್ಲಿ ಮೂಗು ತೂರಿಸುವಂತಿಲ್ಲ. ರಾಜ್ಯ ಸರಕಾರದಿಂದ ಬೇಡಿಕೆ ಬಂದಾಗ ಮಾತ್ರ ಕೇಂದ್ರವು ಅಗತ್ಯದ ಸಲಹೆ ಹಾಗೂ ನೆರವು ನೀಡಬಹುದು. ಆದರೆ, ಪ್ರಸ್ತುತ ಮಸೂದೆಯಲ್ಲಿ ಯಾವುದೇ ದಂಗೆಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆಯ ತನ್ನ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ರಾಜ್ಯಸರಕಾರವು ವಿಫಲಗೊಂಡಿದೆ ಎನಿಸಿದಲ್ಲಿ, ಅಲ್ಪಸಂಖ್ಯಾತರ ಹಿತರಕ್ಷಣೆಯ ನೆಪ ಮಾಡಿಕೊಂಡು ಕೇಂದ್ರ ಸರಕಾರವು ರಾಜ್ಯ ಸರಕಾರದ ಬೇಡಿಕೆಗೆ ಕಾಯದೆ, ತಾನೇ ನೇರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು.
  • ಗುಜರಾತ್ ದಂಗೆ, ಒರಿಸ್ಸಾದ ಕಂದಮಾಲ್ ಗಲಭೆ, ಕರ್ನಾಟಕದಲ್ಲಿ ಚರ್ಚ್ ಮೇಲೆ ದಾಳಿ – ಇವೆಲ್ಲ ಪ್ರಸಂಗಗಳಲ್ಲಿ ಆಯಾ ರಾಜ್ಯಸರಕಾರಗಳು ನಿರ್ವಹಿಸಿದ ಪಾತ್ರ ತನಗೆ ಸಮಾಧಾನ ನೀಡಿರಲಿಲ್ಲ ಎಂದು ಕೇಂದ್ರ ಸರಕಾರವು ಅಪ್ರತ್ಯಕ್ಷವಾಗಿ ಹೊರಿಸುವ ಆರೋಪವಿದು ಎಂಬುದು ಸುಸ್ಪಷ್ಟ. ಮುಂದೆ ಇಂತಹ ಪ್ರಸಂಗಗಳಲ್ಲಿ ಕೇಂದ್ರ ಸರಕಾರವು – ವಿಶೇಷವಾಗಿ ತನ್ನ ವಿರೋಧಿ ಪಕ್ಷಗಳ ಸರಕಾರಗಳಿರುವಲ್ಲಿ – ಹೇಗೆ ನಡೆದುಕೊಳ್ಳುವುದೆಂಬುದರ ಪೂರ್ವ ಸಂಕೇತ ಕಣ್ಣಿಗೆ ರಾಚುವಂತೆ ಇದರಲ್ಲಿದೆ. ನಮ್ಮ ಒಕ್ಕೂಟ ಸಂರಚನೆಗೆ ಸುರಂಗವಿಡುವ ಅಪಾಯವಿರುವುದನ್ನು  ಗುರುತಿಸಬೇಕಾದ ಅಗತ್ಯವಿದೆ.

ಗಂಭೀರವಾಗಿ ಚಿಂತಿಸಬೇಕಾದ ಇನ್ನೂ ಕೆಲವು ಅಂಶಗಳು:

  • ಈ ಶಾಸನವನ್ನು ರೂಪಿಸುವುದರ ಹಿಂದೆ ಗುಜರಾತ್ ದಂಗೆ, ಒರಿಸ್ಸಾದ ಕಂದಮಾಲ್ ಹಿಂಸಾಚಾರ, ಇವುಗಳೇ ಪ್ರಮುಖವಾಗಿ ಇದೆಯೆಂದು ಮಸೂದೆಯ ಅವಲೋಕನದಿಂದ ಸಾಮಾನ್ಯರಿಗೂ ಗೊತ್ತಾಗುತ್ತದೆ. ಗುಜರಾತಿನಲ್ಲಿ ತಾನು ಪೂರಾ ಅಪ್ರಸ್ತುತಗೊಂಡಿದ್ದರೂ ಆ ರಾಜ್ಯ ಸರಕಾರಕ್ಕೆ ಅಂಕುಶ ಬಿಗಿಯಬೇಕೆಂಬ ಹಾಗೂ ಒರಿಸ್ಸಾದಲ್ಲಿ ಪುನಃ ಅಧಿಕಾರ ಗಳಿಸುವ ಸಲುವಾಗಿ ಅಲ್ಪಸಂಖ್ಯಾತರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಇರಾದೆ ಕಾಂಗ್ರೆಸ್ಸಿಗೆ ಇರುವುದು ಇಲ್ಲಿ ಗಮನಿಸಬೇಕಾದ ಸಂಗತಿ.
  • ಈ ಹಿಂದೆ ರಚಿಸಲಾಗಿದ್ದ ರಂಗನಾಥ ಮಿಶ್ರಾ ಆಯೋಗ, ಸಾಚಾರ್ ಆಯೋಗ ಮೊದಲಾದವುಗಳ ಸಾಲಿನಲ್ಲಿ, ಅದರ ಮುಂದುವರೆದ ಕ್ರಮವಾಗಿ ಈ ಶಾಸನ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ’ಹಿಂದು ಭಯೋತ್ಪಾದಕತೆ’, ಇತ್ಯಾದಿ ಇಲ್ಲಸಲ್ಲದ ಭ್ರಮೆಗಳನ್ನು ಸೃಷ್ಟಿಸಿ ಅತ್ಯಧಿಕ ಪ್ರಚಾರ ಮಾಡುವುದು ಸಹ ಅದೇ ದುರುದ್ದೇಶದಿಂದ. ಹೆಚ್ಚುತ್ತಿರುವ ಹಿಂದುತ್ವದ ಶಕ್ತಿ ಮತ್ತು ಪ್ರಭಾವದಿಂದಾಗಿ ಕೇಂದ್ರ ಸರಕಾರವು ಚಿಂತಿತವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಣ್ಣಾ ಹಜ಼ಾರೆ, ಬಾಬಾ ರಾಮದೇವ್ ಅವರ ಹೋರಾಟಗಳೊಂದಿಗೆ ಸಹ ಸರಕಾರವು ಆರೆಸ್ಸೆಸ್ ಅನ್ನು ತಳಕು ಹಾಕುತ್ತಿರುವುದು ಇದೇ ಕಾರಣಕ್ಕಾಗಿ. ಇದೀಗ ಕಾನೂನಿನ ಮೂಲಕ ಹಿಂದುತ್ವದ ಶಕ್ತಿ ತಲೆಯೆತ್ತದಂತೆ ಮಾಡಲು ಸರಕಾರ ಹೊರಟಿದೆ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೇ!
  • ಈ ಶಾಸನದಿಂದಾಗಿ ಯಾವುದೇ ಗುಂಪಿಗೆ ಲಾಭವಾಗುವುದಕ್ಕಿಂತ ಸಾಮಾಜಿಕ ವಿರಸ ಹೆಚ್ಚುವುದೇ ಸಂಭವನೀಯ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ನಿರಂತರ ಸಂಘರ್ಷ ಹೆಚ್ಚಾಗಿ ಒಕ್ಕೂಟ ವ್ಯವಸ್ಥೆಗೆ ಹಾನಿಯುಂಟಾಗಬಹುದೆಂದು. ಅದೇ ರೀತಿಯಲ್ಲಿ ಈ ಶಾಸನದ ಮೂಲಕ ಸರಕಾರವೇ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ವಿರುದ್ಧ ಎತ್ತಿಕಟ್ಟುತ್ತಿರುವ ಕಾರಣದಿಂದಾಗಿ ಮತೀಯ ಸಂಘರ್ಷಗಳು ಸಹ ಹೆಚ್ಚಬಹುದು.
  • ಈ ಶಾಸನವನ್ನು ಕಾರ್ಯಾನ್ವಯ ಮಾಡಲು ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದು ವಿಶೇಷ ಪ್ರಾಧಿಕಾರವನ್ನು ರಚಿಸಲಾಗುತ್ತದೆ. ಈ ಪ್ರಾಧಿಕಾರದಲ್ಲಿ ೭ ಸದಸ್ಯರಿದ್ದು , ಅವರಲ್ಲಿ ನಾಲ್ವರು ಅಲ್ಪಸಂಖ್ಯಾತರೇ ಆಗಿರುತ್ತಾರೆ. ಅದರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಂತೂ ಅವರೇ ಆಗಿರುತ್ತಾರೆ. ಈ ಪ್ರಾಧಿಕಾರಕ್ಕೆ ಪೊಲೀಸ್, ಆಡಳಿತ ಮತ್ತು ನ್ಯಾಯಾಂಗ – ಈ ಮೂರೂ ವಿಧದ ಅಧಿಕಾರಗಳಿರುತ್ತವೆ. ಯಾರೇ ಒಬ್ಬ (ಅಲ್ಪಸಂಖ್ಯಾತ ವ್ಯಕ್ತಿ) ಸಲ್ಲಿಸಿದ ದೂರಿನಂತೆ ಆರೋಪಿಯಾಗಿರುವವನು – ಅವನು ಪೊಲೀಸ್, ಸರಕಾರಿ ಅಧಿಕಾರಿ ಅಥವಾ ಓರ್ವ ಹಿಂದು ನಾಗರಿಕನೇ ಇರಬಹುದು; ಆದರೂ, ಆತನನ್ನು ಅಪರಾಧಿ ಎಂದೇ ಪರಿಗಣಿಸಲಾಗುವುದು. ಅವನಿಗೆ ವಿಧಿಸಲಾಗುವ ಶಿಕ್ಷೆ ಸುಮಾರಾಗಿ ’ಪೋಟಾ’ ಕಾನೂನಿನ 58, 73 ಮತ್ತು 74ನೇ ವಿಧಿಗನುಗುಣವಾದ ಕಠಿಣಶಿಕ್ಷೆ – ಎಂದರೆ, ಹಿಂದೆ ನಾಜ಼ಿ ಜರ್ಮನಿಯಲ್ಲಿ ಯಹೂದಿಗಳು ಅನುಭವಿಸುತ್ತಿದ್ದರಲ್ಲ, ಆ ರೀತಿಯದಾಗಬಹುದು!
  • ಈ ಶಾಸನವನ್ನು ಯೋಜಿಸಿ, ರಚಿಸಿದುದು ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಕಾರ ಮಂಡಳಿ. (National Advisory Council). ಅದರಲ್ಲಿರುವ ಪ್ರಮುಖರೆಂದರೆ- ಅಸ್ಘರ್ ಆಲಿ ಇಂಜಿನಿಯರ್, ಹರ್ಷ ಮಂಡಲ್, ತೀಸ್ತಾ ಸೆಟಲ್‌ವಾಡ್, ಶಬನಮ್ ಹಶ್ಮಿ, ಜಾನ್ ದಯಾಳ್, ಉಪೇಂದ್ರ ಭಕ್ಷಿ, ಸೈಯ್ಯದ್ ಶಹಾಬುದ್ದೀನ್ ಅಂತಹ ಸೋನಿಯಾ ನಿಕಟವರ್ತಿಗಳು. ಮಾನವಾಧಿಕಾರ ಮತ್ತು ಸೆಕ್ಯುಲರ್‌ವಾದಿಗಳ ಪಟಾಲಂ ಇದು. ಈ ಶಾಸನ ಪೂರಾ ಹಿಂದು ವಿರೋಧಿ ದುರುದ್ದೇಶದಿಂದ ಪ್ರೇರಿತವಾದುದೆಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಯ ಅಗತ್ಯವಿದೆಯೇ?
  • ವಾಸ್ತವಿಕವಾಗಿ ಅಲ್ಪಸಂಖ್ಯಾತರಿಗೆ ಭಾರತದಲ್ಲಿರುವಷ್ಟು ಸುರಕ್ಷತೆ ವಿಶ್ವದ ಇನ್ಯಾವ ದೇಶದಲ್ಲೂ ಇಲ್ಲ. ನಮ್ಮ ದೇಶದ ಇತಿಹಾಸದ ಸಾಕ್ಷಿ ಇದೆ ಅದಕ್ಕೆ. ಆದರೆ, ಇಲ್ಲಿ ಅವರಿಗೆ ಸುರಕ್ಷತೆಯೇ ಇಲ್ಲ ಎಂಬಂತಹ ಭ್ರಮೆ ನಿರ್ಮಿಸುವ ಹೀನ ಮಾನಸಿಕತೆ ಈ ಶಾಸನದಲ್ಲಿದೆ. ಮತ್ತು ಕೇಂದ್ರ ಸರಕಾರದ ಪ್ರತಿಮೆಗೇ ಕಲಂಕ ಹಚ್ಚುವಂತಹ ನಾಚಿಕೆಗೇಡಿನ ಸಂಗತಿಯಿದು ಎಂದು ಸರಕಾರಕ್ಕೆ ಅನ್ನಿಸದಿರುವುದು ಆಶ್ಚರ್ಯವೇ!
  • ಈ ವಿಧೇಯಕವು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕೃತವಾಗುವುದೇ, ಮುಂದೆ ರಾಷ್ಟ್ರಪತಿಯವರ ಅಂಕಿತ ಅದಕ್ಕೆ ದೊರೆತು ಅದು ಶಾಸನವಾಗುವುದೇ? ಅಕಸ್ಮಾತ್ ಶಾಸನವಾದರೂ ಸಂವಿಧಾನಾತ್ಮಕವಾಗಿ ಸರ್ವೋಚ್ಚ ನ್ಯಾಯಾಲಯದ ವಿಮರ್ಶೆಗೆ ಒಳಗಾಗಲಾರದೇ? ಇತ್ಯಾದಿ… ಕಾದು ನೋಡಬೇಕಾದ ಸಂಗತಿಗಳು.

ಆದರೆ, ಕಾನೂನು ಆದ ಮಾತ್ರದಿಂದಲೇ ಸಮಸ್ಯೆ ಪರಿಹಾರವಾಗುವುದೇ? ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೆಮ್ಮದಿಯ, ಸುರಕ್ಷಿತ ಬದುಕಿನ ಅವಕಾಶವಾಗಿರುವುದು ಬಹುಸಂಖ್ಯಾತ ಹಿಂದುಗಳ ಆತ್ಮೀಯ ಹಾಗೂ ಸೌಹಾರ್ದಪೂರ್ಣ ಮನೋಧರ್ಮ ಮತ್ತು ವ್ಯವಹಾರದಿಂದಾಗಿ ಎಂಬುದು ಅಲ್ಲಗಳೆಯಲಾಗದ ಸಂಗತಿ. ಇಲ್ಲಿ ಆಗಾಗ ಶಾಂತಿ ಭಂಗವಾಗುತ್ತಿರುವುದಕ್ಕೆ ಕಾರಣ, ಅಲ್ಪಸಂಖ್ಯಾತರು ಮಾಡುವ ಗೋವಧೆ, ಮತಾಂತರ, ಮಂದಿರಗಳ ನಾಶ ಇತ್ಯಾದಿಗಳ ಮೂಲಕ ಬಹುಸಂಖ್ಯಾತರ ಭಾವನೆಗಳನ್ನು ನೋಯಿಸುವ ಕಾರಣದಿಂದ ಎಂಬುದು ಗೊತ್ತಿಲ್ಲದ ಸಂಗತಿಯೇನಲ್ಲ.

ಪ್ರಸ್ತುತ ಶಾಸನದ ಮೂಲಕ ಸರಕಾರವೇ ಅಲ್ಪಸಂಖ್ಯಾತರನ್ನು ಅಂತಹ ಕೃತ್ಯಗಳಿಗೆ ಇನ್ನಷ್ಟು ಪ್ರೋತ್ಸಾಹಿಸಿದಂತೆ ಆಗುವುದು ಖಂಡಿತ. ಅವರಲ್ಲಿನ ಮತಾಂಧ, ಮೂಲಭೂತವಾದಿಗಳಿಗೆ ತಮ್ಮ ಕೈಬಲಗೊಂಡಂತೆ ಅನ್ನಿಸಲೂಬಹುದು. ಆದರೆ, ತಮ್ಮ ದೇಶದಲ್ಲಿ ತಮಗೇ ಸುರಕ್ಷತೆ ಇಲ್ಲ ಎನ್ನಿಸಿದಾಗ, ಹಿಂದುಗಳು ಸಿಡಿದೆದ್ದರೆ ಸರಕಾರದಿಂದಾಗಲೀ, ಇನ್ನಾವುದೇ ವಿಧದ ಶಕ್ತಿಯಿಂದಾಗಲೀ ಅಲ್ಪಸಂಖ್ಯಾತರ ರಕ್ಷಣೆಯಾಗಲಾರದು ಎಂಬುದನ್ನು ಅವರು ತಿಳಿದಿರುವುದು ಉಚಿತ. ಹಾಗೆಯೇ ಈ ಶಾಸನ ರಚನೆಗೆ ಹೊರಟಿರುವವರೂ ಇದನ್ನು ಮನಗಾಣುವುದು ಸೂಕ್ತ.

 

Leave a Reply

Your email address will not be published.

This site uses Akismet to reduce spam. Learn how your comment data is processed.