( ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ.)


ಕರ್ನಾಟಕ ಎಂಬುದೇನು ಹೆಸರೆ ಬರಿ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ ಪಡೆದ ಚಲದ ಚಂಡಿ ಕಣಾ!
ಋಷಿಯ ಕಾಣ್ಬ ಕಣ್ಣಿಗೆ

– ರಾಷ್ಟ್ರಕವಿ ಕುವೆಂಪು

ಎಂದು ರಾಷ್ಟ್ರಕವಿ ಕುವೆಂಪು ತಮ್ಮ ‘ಅಖಂಡ ಕರ್ನಾಟಕ’ ಎನ್ನುವ ಪದ್ಯದಲ್ಲಿ ಬರೆದರು. ಕರ್ನಾಟಕ ಏಕೀಕರಣದ ಆರಂಭದ ದಿನಗಳಲ್ಲಿ ಕುವೆಂಪು ಅವರು ಅಖಂಡ ಕರ್ನಾಟಕ ಸ್ಥಾಪನೆಯ ಕುರಿತು ಮಾತನಾಡಿದ ಕುರಿತು ಅಧಿಕಾರಸ್ಥರು ವಿವರಣೆ ಕೇಳಿ ನೀಡಲಾದ ನೋಟಿಸಿಗೆ ಅವರು ನೀಡಿದ ಉತ್ತರ ಇದು. ಕುವೆಂಪು ಅವರ ದೃಷ್ಟಿಯಲ್ಲಿ ಕರ್ನಾಟಕ ಕೇವಲ ಒಂದು ಭೂಭಾಗ ಅಥವಾ ಅದರ ಹೆಸರಾಗಿಲಿಲ್ಲ. ಕರ್ನಾಟಕದಲ್ಲಿ ಅವರು ತಾಯಿ ಭುವನೇಶ್ವರಿಯನ್ನು ಕಂಡರು, ಕನ್ನಡದಲ್ಲಿ ಮಂತ್ರವನ್ನು ಕಂಡರು, ಶಕ್ತಿಯನ್ನು ಕಂಡರು. ಹಾಗಾಗಿಯೇ ಅವರ ಋಷಿಮನ ‘ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂದು ಹಾಡಲು ಸಾಧ್ಯವಾಯಿತು.


ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಎಲ್ಲ ಹಿರಿಯ ಚೇತನಗಳಿಗೆ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವುದು ಕೇವಲ ಭಾಷೆಯ ಅಭಿಮಾನದ ಕಾರಣದಿಂದಲ್ಲ. ಅದೊಂದು ರಾಷ್ಟ್ರೀಯ ಕಾರ್ಯವಾಗಿತ್ತು. ದೇಶದ ಹಿತವನ್ನು ಸಾಧಿಸುವ ಕಾರ್ಯವಾಗಿತ್ತು. ಹಾಗಾಗಿಯೇ ಇಂಗ್ಲೀಷ್ ಕಾವ್ಯಗಳಿಗೆ ಮನಸೋತಿದ್ದ ಬಿಎಂಶ್ರೀ ಮೈಸೂರಿನ ಬೀದಿಗಳಲ್ಲಿ ‘ಕನ್ನಡಕ್ಕೆ ಜಯವಾಗಲಿ’ ಎಂದು ಜಾಗಟೆ ಬಡಿಯುತ್ತ ಕರ್ನಾಟಕ ಏಕೀಕರಣದ ಚಳುವಳಿಗೆ ನಾಂದಿ ಹಾಡಿದರು. ಕನ್ನಡದ ಕಣ್ವರೆನಿಸಿದ ಅವರು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸಿ ಭಾಷೆಯನ್ನು ಬೆಳೆಸಿದ ಹತ್ತಾರು ಶಿಷ್ಯರನ್ನು ತಯಾರು ಮಾಡಿದರು. ತೆಲುಗು ಮಾತಾಡುತ್ತಿದ್ದ ಡಿವಿಜಿ, ಮರಾಠಿ ಮನೆಮಾತಾಗಿದ್ದ ಬೇಂದ್ರೆಯವರಾಗಲಿ, ತಮಿಳು ಮಾತಾಡುತ್ತಿದ್ದ ಮಾಸ್ತಿಯವರಾಗಲಿ, ಮಲೆಯಾಳಿ ಪ್ರದೇಶದ ಕಯ್ಯಾರ ಕಿಞ್ಞಣ್ಣ ರೈಗಳಿಗಾಗಲಿ, ಕೊಂಕಣಿ ಮನೆಮಾತಾಗಿದ್ದ ಗೋವಿಂದ ಪೈಗಳಾಗಲಿ ಕನ್ನಡ ಭಾಷೆಯನ್ನು ತಮ್ಮ ಹೃನ್ಮನಗಳಿಗೆ ಆಪ್ತವಾಗಿ ಕಂಡರು. ಅವರಿಗೆಲ್ಲ ಕನ್ನಡ ಭಾಷೆ ಭಾರತೀಯ ಸಂಸ್ಕøತಿಯ ಜ್ಞಾನಸಾಧನೆಯ ಮಾಧ್ಯಮವಾಗಿತ್ತು.


ಇಂದು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳು ಒಂದು ರೀತಿಯ ಅಸ್ತಿತ್ವದ ತಳಮಳವನ್ನು ಎದುರಿಸುತ್ತಿವೆ. ಪ್ರಮುಖವಾಗಿ ಇಂಗ್ಲೀಷ್ ಭಾಷೆಯ ಹೊಡೆತ ಮತ್ತು ಭಾಷೆಯ ಮೂಲಕ ವಿದೇಶಿ ಸಂಸ್ಕøತಿ ಸದ್ದಿಲ್ಲದೇ ನಮ್ಮ ಮನೆಯ ಪಡಸಾಲೆಯನ್ನು ಆಕ್ರಮಿಸುತ್ತಿರುವುದು ಎಚ್ಚರಿಕೆ ಸಂದೇಶವನ್ನು ನೀಡುತ್ತಿವೆ. ಹಾಗೆಂದು ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಿಗೆ ಅನಿವಾರ್ಯ ಎನ್ನುವ ಮಿಥ್ಯಾ ಭಾವನೆಯನ್ನು ಮೂಡಿಸಿರುವ ಜಾಗತಿಕ ಸಂಪರ್ಕ ಮಾಧ್ಯಮವಾಗಿ ಬೆಳೆದಿರುವ ಇಂಗ್ಲೀಷ್ ಭಾಷೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗದ ಸನ್ನಿವೇಶದಲ್ಲಿಯೂ ನಾವಿದ್ದೇವೆ. ಹೀಗಿರುವಾಗ ನಮ್ಮ ಮಾತೃಭಾಷೆಯನ್ನು ಉಳಿಸಿಕೊಳ್ಳುವುದರ ಕುರಿತು ಮತ್ತು ಅದರ ಬೆಳವಣಿಗೆಯ ಕುರಿತು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.
ಸಾವಿರಾರು ವರ್ಷಗಳ ಇತಿಹಾಸ ಮತ್ತು ಅಪಾರ ಜ್ಞಾನ ಸಂಪತ್ತು ಹೊಂದಿರುವ ನಮ್ಮ ಕನ್ನಡ ಇಂದಿನ ಅಗತ್ಯಗಳನ್ನು ಪೋರೈಸದಷ್ಟು ಬಡವಲ್ಲ. ಆದರೆ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ಮನೆಯಿಂದಲೇ ಅದರ ಆರಂಭವಾಗಬೇಕು. ಹಾಗಾಗಿ ನಮ್ಮ ಮನೆಬಳಕೆಯಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ಮಾತೃಭಾಷೆಯನ್ನು ಬಳಸಿದರೆ ಭಾಷೆಯ ಜೊತೆಗೆ ನಮ್ಮ ಸಂಪ್ರದಾಯಗಳೂ ಉಳಿಯಬಲ್ಲವು ಎನ್ನುವುದನ್ನು ನಾವು ಮನಗಾಣಬೇಕು.

ಇದನ್ನು ವ್ಯಾವಹಾರಿಕವಾಗಿ ಸಾಧಿಸುವುದು ಹೇಗೆ ಅಂದರೆ – ಬಹುಭಾಷಾ ಜ್ಞಾನ ಭಾರತೀಯರಿಗೆ ಸಾಮಾನ್ಯ. ಯಾವುದೇ ವಿಶೇಷ ಪ್ರಯತ್ನವಿಲ್ಲದೇ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಮಾತನಾಡುವುದು ನಮ್ಮಲ್ಲಿ ವಿಶೇಷವಲ್ಲ. ಮಕ್ಕಳಲ್ಲಿಯೂ ಸಹ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಸುಲಭವಾಗಿ ಕಲಿಯುವ ಸಾಮಥ್ರ್ಯವಿರುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಜಗದ ನಡುವಿನ ಅಂತರ ಕಿರಿದಾಗಿರುವ ಇಂದಿನ ದಿನಗಳಲ್ಲಿ ಹಲವು ಭಾಷೆಗಳನ್ನು ತಿಳಿದಿರುವುದು ಅನಿವಾರ್ಯವೂ ಹೌದು. ಬೆಂಗಳೂರಿನಂತಹ ನಗರದಲ್ಲಿ ಒಂದು ನೂರಕ್ಕೂ ಹೆಚ್ಚು ಬೇರೆ ಬೇರೆ ಭಾಷೆಗಳು ಆಡಲ್ಪಡುತ್ತವೆ ಎಂದು ಒಂದು ಅಧ್ಯಯನದಿಂದ ಕಂಡು ಬಂದಿದೆ. ಇಂತಹ ಸನ್ನಿವೇಶದಲ್ಲಿ ಇಂಗ್ಲೀಷ್‍ನಂತಹ ವಿದೇಶಿ ಭಾಷೆಯನ್ನು ಒಪ್ಪಿಕೊಳ್ಳುವುದರ ಜೊತೆಗೆ ನಮ್ಮ ಮಾತೃಭಾಷೆಯಾದ ಕನ್ನಡ, ಕರ್ನಾಟಕದಲ್ಲಿ ನಾವು ವಾಸಿಸುವ ಸ್ಥಳದ ವಿಶಿಷ್ಟ ಉಪಭಾಷೆಯನ್ನು ನಿತ್ಯದ ಬಳಕೆಯಲ್ಲಿ ಬಳಸಿ ಉಳಿಸುವುದು ಖಂಡಿತ ಕಷ್ಟವಲ್ಲ. ನಮ್ಮ ಮಾತೃಭಾಷೆ ಅದರಲ್ಲೂ ನಮ್ಮ ಸ್ಥಳೀಯ ಭಾಷೆ ಒಂದು ರೀತಿಯ ಆಪ್ತ ಭಾವನೆಯನ್ನು ಮೂಡಿಸುತ್ತದೆ ಎನ್ನುವುದು ಎಲ್ಲರ ಅನುಭವವಾಗಿದೆ.


ಇನ್ನೊಂದೆಡೆ ಭಾಷಾ ಅಸ್ಮಿತೆಯನ್ನು ಭಾವನಾತ್ಮಕವಾಗಿ ದುರುಪಯೋಗಪಡಿಸಿಕೊಂಡು ಭಿನ್ನ ಭಿನ್ನ ಭಾಷಿಕ ಜನರ ಮಧ್ಯೆ ಬಿರುಕನ್ನು ಮೂಡಿಸುವ, ಪ್ರಾಂತಗಳ ಮಧ್ಯೆ ದ್ವೇಷವನ್ನು ಬಿತ್ತುವ ಮತ್ತು ಭಾರತದ ಏಕತೆಯನ್ನು ಶಿಥಿಲಗೊಳಿಸುವ ಒಂದು ಹುನ್ನಾರ ನಡೆದುಕೊಂಡು ಬಂದಿದೆ. ಸ್ವಭಾಷಾ ಪ್ರೇಮದ ಹೆಸರಿನಲ್ಲಿ ಪರಭಾಷಾ ದ್ವೇಷವನ್ನು ಪೋಷಿಸುವ ಕಾರ್ಯವೂ ನಡೆಯುತ್ತಿದೆ. ಹಾಗೆಯೇ ಭಾಷಾಭಾವನೆಯನ್ನು ಎತ್ತಿಕಟ್ಟಿ ಗಡಿ, ನೆಲ, ಜಲ, ಕ್ರೀಡೆ, ಸಿನಿಮಾ, ತಿಂಡಿ, ತಿನಿಸುಗಳವರೆಗಿನ ವಿಷಯಗಳಲ್ಲಿ ಪ್ರತ್ಯೇಕತೆಯ ವಿಷಬೀಜವನ್ನು ಬಿತ್ತುವ ಕೆಲಸವನ್ನು ಜನಮಾನಸವನ್ನು ಒಡೆದು ವರ್ಗಸಂಘರ್ಷ ಹುಟ್ಟು ಹಾಕುವ ವಿಚಾರಧಾರೆಯ ಗುಂಪುಗಳು ನಡೆಸುತ್ತಿರುವುದನ್ನೂ ನಾವು ಕಾಣಬಹುದು. ಈ ರೀತಿ ಸಮಾಜ ಒಡೆದರೆ ರಾಜ್ಯಗಳು ಒಡೆದು ಬೇರೆಬೇರೆ ಆದರೆ, ದೇಶದ ಜನರು ಭಾಷೆಯ ಆಧಾರದಲ್ಲಿ ವೈರಿಗಳಾದರೆ ದೇಶ ಸುರಕ್ಷಿತವಾಗಿರಬಲ್ಲದೇ? ಮತಾಂಧ ಜಿಹಾದಿ ಭಯೋತ್ಪಾದಕರು, ಕಮ್ಯುನಿಸ್ಟ್ ಚೀನಾದ ದಾಳಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಸಾಧ್ಯವೇ? ಹಾಗಾಗಿ ಈ ದಿಕ್ಕುತಪ್ಪಿಸಿ ಒಡೆಯುವ ವಿಚಾರಧಾರೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾದ ಅಗತ್ಯವಿದೆ. ಹಾಗೆಯೇ ರಾಜಕೀಯ ಲಾಬಕ್ಕೋಸ್ಕರ ಭಾಷಾ ಅಭಿಮಾನವನ್ನು ದುರುಪಯೋಗಗೊಳಿಸಿಕೊಳ್ಳುವ ಕ್ಷುದ್ರ ಯೋಜನೆಗಳ ಕುರಿತೂ ನಾವು ಎಚ್ಚರವಹಿಸಬೇಕಾದ ಅಗತ್ಯವಿದೆ.


ಇಂದು ಕನ್ನಡಕ್ಕೆ ಅಥವಾ ಯಾವುದೇ ಭಾರತೀಯ ಭಾಷೆಗೆ ಬೇಕಿರುವುದು ಪ್ರೀತಿಯೇ ಹೊರತು ಬೇರೆ ಭಾಷೆಯ ದ್ವೇಷವಲ್ಲ. ಕರ್ನಾಟಕದಲ್ಲಿ ನಡೆದಿರುವ ಪ್ರತಿ ಚಳುವಳಿಗಳು ಸಾತ್ವಿಕವಾಗಿ ಆರಂಭವಾಯಿತಾದರೂ, ನಂತರದಲ್ಲಿ ಕೆಲವು ಸ್ವಾರ್ಥ ಹಿತಾಸಕ್ತಿಗಳಿಂದಾಗಿ ಕನ್ನಡ ಹೋರಾಟ ಎಂದರೆ ಸಂಸ್ಕೃತವನ್ನು ವಿರೋಧಿಸುವ, ಹಿಂದಿಯನ್ನು ವಿರೋಧಿಸುವ ಕೆಲಸ ಎನ್ನುವಂತಾಗಿದೆ. ಆದರೆ ಯಾವುದೇ ಭಾಷೆಯಲ್ಲಿರುವ ಜ್ಞಾನ ಸಂಪತ್ತನ್ನು ಶೋಧಿಸಿ ಸಂಕಲನಗೊಳಿಸಿ ಪ್ರಸಾರಗೊಳಿಸುವುದು ನಿಜವಾಗಿ ಭಾಷೆಯ ಏಳಿಗೆಯ ಕಾರ್ಯ. ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಜ್ಞಾನದ ಆಗರ. ಈ ಜ್ಞಾನವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದು ಭಾಷಾ ಹೋರಾಟದ ಮುಖ್ಯ ಕಾರ್ಯವಾಗಬೇಕು. ಕನ್ನಡದ ಅಸ್ಮಿತೆ ಎನ್ನುವುದ ದೇಶದ ಏಕತೆಗೆ ಹಾಗೂ ರಾಷ್ಟ್ರೀಯತೆಗೆ ವಿರೋಧವಾಗುವಂತಹ ಕೆಲಸವಲ್ಲ. ಕನ್ನಡದ ಹಿತಾಸಕ್ತಿಯು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಬೇಕು. ಕನ್ನಡಾಂಬೆಯ ಸೇವೆ ಭಾರತಾಂಬೆಯ ಸೇವೆಗಿಂತ ಭಿನ್ನವಲ್ಲ. ಪ್ರಾದೇಶಿಕ ಹಿತಾಸಕ್ತಿಯನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯ ಹಿತವನ್ನು ಉಳಿಸುವ ಕಾರ್ಯವನ್ನು ನಿರ್ವಹಿಸಬೇಕಿದೆ.


ಈ ಹಿನ್ನೆಲೆಯಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು ತಮ್ಮ ‘ಕರ್ನಾಟಕತ್ವದ ವಿಕಾಸ’ ಪುಸ್ತಕದಲ್ಲಿ ಉಲ್ಲೇಖಿಸಿದ ಮಾತುಗಳು ನಮಗೆ ಮಾರ್ಗದರ್ಶಿಯಾಗಬಲ್ಲವು :

“ಭಾರತಿದೇವಿಯು ಭುವನೇಶ್ವರಿದೇವಿಯ ಪ್ರತಿಮೆ. ಕರ್ನಾಟಕದೇವಿಯು ಭಾರತಾಂಬೆಯ ಪ್ರತಿಮೆ. ಭಾರತಿದೇವಿ ವಿಶಿಷ್ಟದೇವತೆ; ಕರ್ನಾಟಕದೇವಿ ಇಷ್ಟದೇವತೆ. ಆದಕಾರಣ, ರಾಸಕ್ರೀಡೆಯಲ್ಲಿ ಗೋಪಿಕಾಸ್ತ್ರೀಯರು ಹೇಗೆ ಒಬ್ಬನೇ ಕೃಷ್ಣನನ್ನು ತಮ್ಮ ತಮ್ಮ ಹತ್ತಿರವೇ ಕಾಣುತ್ತಿದ್ದರೋ, ಹಾಗೆ ರಾಷ್ಟ್ರೀಯತ್ವವನ್ನು ಹೊಸ ರಾಜ್ಯಗಳು ಸದಾ ತಮ್ಮ ಹತ್ತಿರವೇ ಕಾಣುತ್ತಿರಬೇಕು.”

Leave a Reply

Your email address will not be published.

This site uses Akismet to reduce spam. Learn how your comment data is processed.