ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಅಣಿಯಾಗೋಣ : ಮೋಹನ್‌ಜೀ ಭಾಗವತ್

ಮೈಸೂರು  September-10: ಸಶಕ್ತ ಹಿಂದು ಸಮಾಜ ನಿರ್ಮಾಣಕ್ಕೆ ಸಂಘದ ಸ್ವಯಂಸೇವಕರು ಕಟಿಬದ್ದರಾಗಬೇಕು. ಈ ದೇಶವನ್ನು ಕಾಡುತ್ತಿರುವ ಹಲವು ಬಗೆಯ ಸಮಸ್ಯೆಗಳಿಗೆ ಅದೊಂದೇ ಸೂಕ್ತ ಉತ್ತರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಮೋಹನ್ ಭಾಗವತ್ ಕರೆ ನೀಡಿದರು.

ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಮಾವೇಶಗೊಂಡ ದಕ್ಷಿಣ  ಪ್ರಾಂತದ ತಾಲ್ಲೂಕುಸ್ತರದ ಕಾರ‍್ಯಕರ್ತರು ಹಾಗೂ ಮೈಸೂರು ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ 2500ಕ್ಕೂ  ಹೆಚ್ಚು ಗಣವೇಷಧಾರಿ ಸ್ವಯಂಸೇವಕರನ್ನುದ್ದೇಶಿಸಿ ಅವರು ಬೌದ್ದಿಕ್‌ವರ್ಗದಲ್ಲಿ ಮಾತನಾಡಿ, ಶುದ್ದ ಚಾರಿತ್ಯದ ವ್ಯಕ್ತಿಗಳನ್ನು ನಿರ್ಮಿಸಿ ಮೇಲ್ಪಂಕ್ತಿಹಾಕಿದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ವಿಶ್ವಾಸವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಅಣ್ಣಾಹಜಾರೇನೇತೃತ್ವದ ಭ್ರಷ್ಠಾಚಾರ ವಿರೋಧಿ ಆಂದೋಲನದ ಪ್ರಸ್ತಾಪ ಮಾಡಿದ ಭಾಗವತ್‌ರವರು, ಕೇವಲ ಆಂದೋಲನ ಮಾಡಿದ ಮಾತ್ರದಿಂದ ಭ್ರ್ರಷ್ಟಾಚಾರ ನಿರ್ಮೂಲನೆಯಾಗದು ಭ್ರಷ್ಟಾಚಾರ ಜನರ ಮನದಿಂದ ದೂರವಾಗಬೇಕು. ಅಂತಹ ಮಾನಸಿಕತೆ ಸರ್ವತ್ರ ನಿರ್ಮಾಣವಾದರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೆಂದು ಚೆನ್ನೈ ಬೌದ್ದಿಕ್‌ನಲ್ಲಿ ತಿಳಿಸಿದ್ದೆ. ಅದೇದಿನ ಅಣ್ಣಾ ಹಜಾರೆ ನಿರಶನ ಸಮಾಪ್ತಿಗೋಳಿಸಿ ಇದೇ ಅಂಶಗಳನ್ನು ತಿಳಿಸಿದ್ದರು. ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪುತ್ತೂರು ಬೈಠಕ್‌ನಲ್ಲಿ ಕೈಗೊಂಡ ನಿರ್ಣಯದಂತೆ ಸಂಘವು, ಯಾರೇ ಇದರ ವಿರುದ್ದ ಹೋರಾಟ ನಡೆಸಿದರೂ ಅದಕ್ಕೆ ಬೆಂಬಲ ನೀಡಲಿದೆ. ಸಂಘದ ಸ್ವಯಂಸೇವಕರು ಅದರಂತೆಯೇ ನಡೆದುಕೊಂಡಿದ್ದಾರೆ ಎಂದರು. ಸಮಾಜದಲ್ಲಿ ಎಲ್ಲರೂ ಸಂಯಮಿತ ಸರಳ ಪ್ರಾಮಾಣಿಕ ಜೀವನ ನಡೆಸಿದಾಗಲೇ ಭ್ರಷ್ಟಾಚಾರದ ಪಿಡುಗಿಗೆ ಕಡಿವಾಣ ಹಾಕಬಹುದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಯೋತ್ಪಾದನೆ, ಭ್ರಷ್ಠಾಚಾರ, ಅಸ್ಪೃಷ್ಯತೆ ಮುಂತಾದ ಹಲವು ದೋಷಗಳು ನಮ್ಮ ಸಮಾಜವನ್ನು ಕಾಡುತ್ತಿದೆ. ಅವನ್ನೆಲ್ಲ ತೆಗೆದು ಹಾಕದೆ ದೇಶ ಪರಮವೈಭವ ಸ್ಥಿತಿಗೆ ತಲುಪಲು ಸಾಧ್ಯವಿಲ್ಲ. ಹಿಂದು ಸಮಾಜದಲ್ಲಿ ಹುದುಗಿರುವ ಆತ್ಮವಿಸ್ಮೃತಿ, ಅಸಂಘಟಿತ ಸ್ಥತಿ ತೊಲಗಿಸಿ ಇದೊಂದು ಚೈತನ್ಯಮಯ ಸಮಾಜ ಎಂಬ ಭಾವನೆ ಮೂಡಿಸಬೇಕಾಗಿದೆ. ಜಾತಿ ಭಾಷೆ, ಪಂಥ, ಪ್ರಾಂತ, ಮೊದಲಾದ ಸಂಕುಚಿತ ದೃಷ್ಠಿ ತೊರೆದು ಸ್ವಾಭಿಮಾನಸಂಪನ್ನ ರಾಷ್ಟ್ರವಾಗಬೇಕು. ಇದು ಸಂಘದ ದೃಷ್ಠಿ ಎಂದರು. ಗಾಂಧೀಜಿ, ಅಂಬೇಡ್ಕರ್, ಸುಭಾಶ್ಚಂದ್ರಬೋಸ್ ಮೊದಲಾದ ಮಹನೀಯರು ಕೂಡ ಡಾ.ಜೀ ಪ್ರತಿಪಾದಿಸಿದ ಅಂಶಗಳನ್ನೇ ಪ್ರತಿಪಾದಿಸಿದ್ದರು ಎಂದವರು ಹೇಳಿದರು.

ಬೆಂಗಳೂರಿನಲ್ಲಿ ಕಳೆದ ವರ್ಷ ೪೦ ಸಾವಿರ ಸ್ವಯಂಸೇವರ ಸಮಾವೇಶ ನಡೆದಾಗ ಅಲ್ಲಿ ಸೇರಿದ್ದ ಸುಮಾರು ೨ಲಕ್ಷ ಜನರು ಕಾರ‍್ಯಕ್ರಮ ಮುಗಿದ ಬಳಿಕ ಕೇವಲ ೪೫ ನಿಮಿಷಗಳಲ್ಲಿ ತಮ್ಮ ವಾಹನಗಳಲ್ಲಿ ಯಾವುದೇ ಟ್ರಾಫಿಕ್ ಜಾಂ ಸಮಸ್ಯೆಗೀಡಾಗದೆ ಚದರಿದರು. ಇಂತಹ ಜಾದು ಸಂಘದಿಂದ ಹೇಗೆ ಸಾಧ್ಯವಾಯಿತು ಎಂಬುದು ಪೋಲೀಸ್ ಅಧಿಕಾರಿಗಳ ಪ್ರಶ್ನೆ. ಅಂತಹ ವಾತಾವರಣ, ಮಾನಸಿಕತೆ ಸಂಘದಲ್ಲಿ ನಿರ್ಮಿಸಿದ್ದರಿಂದಲೇ ಅದು ಸಾಧ್ಯವಾಯಿತು. ದೇಶದ ಪ್ರತಿಯೊಂದು ಗ್ರಾಮದಲ್ಲೂ ಶಾಖೆಯ ಮೂಲಕ ಚಾರಿತ್ರ್ಯಶುದ್ದ, ಪ್ರಾಮಾಣಿಕ ಸ್ವಯಂಸೇವಕರು ತಯಾರಾದರೆ ಇಡೀ ಸಮಾಜದಲ್ಲಿ ಅದರ ಛಾಪು ದಟ್ಟವಾಗಿ ಹರಡಲು ಸಾಧ್ಯವಿದೆ. ಅದಕ್ಕಾಗಿ ಹೆಚ್ಚು ಸಮಯ ಸಂಘಕಾರ‍್ಯಕ್ಕಾಗಿ ಕೊಡಬಲ್ಲ ಪ್ರವಾಸಿ ಕಾರ‍್ಯಕರ್ತರು ಹೊರಬರಬೇಕಾಗಿದೆ. ಎಂದರು. ಸಂಘದ ಚಿಂತನೆಗೆ ಅನುಗುಣವಾಗಿ ನನ್ನ ಕುಟುಂಬ ಇದೆಯಾ? ನನ್ನ ಸಮಯದ ದುಡಿಮೆಯ ೧/೩ಭಾಗ ಸಂಘಕ್ಕಾಗಿ ಮಿಸಲಾಗಿಡುತ್ತಿದ್ದೇನೆಯೇ? ಇಂತಹ ಸಮಾಜಮುಖಿ ಪ್ರಶ್ನೆಗಳನ್ನು ಸ್ವಯಂಸೇವಕರು ತಮ್ಮ ಅಂತರಂಗಕ್ಕೆ ಕೇಳಿಕೊಳ್ಳಬೇಕಾಗಿದೆ. ಈ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಳ್ಳುವಲ್ಲೇ ದೇಶದ ಪರಮವೈಭವಸ್ಥಿತಿಯ ಸಾಕಾರರೂಪ ಅಡಗಿದೆ ಎಂದವರು ಮಾರ್ಮಿಕವಾಗಿ ತಿಳಿಸಿದರು.

ಸಂಘದ ಕ್ಷೇತ್ರೀಯ ಸಂಘಚಾಲಕರಾದ ಮಾ. ಪರ್ವತರಾವ್, ದಕ್ಷಿಣ ಪ್ರಾಂತ ಸಂಘಚಾಲಕ್ ಮಾ.ವೆಂಕಟರಾಮು, ಮೈಸೂರು ವಿಭಾಗ ಸಂಘಚಾಲಕ್ ಮಾ.ಡಾ.ವಾಮನರಾವ್ ಬಾಪಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕ್ಷೇತ್ರೀಯ ಕಾರ‍್ಯವಾಹ ರಾಮಕೃಷ್ಣ, ಕ್ಷೇತ್ರೀಯ ಪ್ರಚಾರಕ್ ಮಂಗೇಶ್‌ಬೇಂಡೆ, ಮೊದಲಾದ ಪ್ರಮುಖರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Leave a Reply

Your email address will not be published.

This site uses Akismet to reduce spam. Learn how your comment data is processed.