ಸಿಖ್ ಸಮುದಾಯದ ಹತ್ತನೇ ಗುರು, ಗುರು ಗೋಬಿಂದ್ ಸಿಂಗ್  ಅವರು ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ  ಒಬ್ಬರು. ಗುರು ಗೋವಿಂದ್  ಸಿಂಗ್  ಅವರು  ಕೇವಲ  ಆಧ್ಯಾತ್ಮಿಕ ಗುರುಗಳು ಮಾತ್ರವಲ್ಲ, ಅವರು ಕವಿ , ತತ್ವಜ್ಞಾನಿ, ಸಮಾಜ ಸುಧಾರಕ  ಮತ್ತು ಪರಾಕ್ರಮಿ. ರಾಷ್ಟ್ರಧರ್ಮದ ರಕ್ಷಣೆಗೆ ತಮ್ಮ ಜೀವನವನ್ನು ಸಮರ್ಪಿಸಿದ ಮಹಾನ್ ಹೋರಾಟಗಾರ. ಇಂದು ಅವರ  ಜಯಂತಿ.

ಪರಿಚಯ

ಗುರು ಗೋವಿಂದ್ ಸಿಂಗ್ ಡಿಸೆಂಬರ್  22, 1666 ರಂದು ಬಿಹಾರದ ಪಾಟ್ನದಲ್ಲಿ ಜನಿಸಿದರು.  ಅವರ  ತಂದೆ ಗುರು ತೇಗ್  ಬಹದ್ಧೂರ್, ತಾಯಿ ಮಾತಾ ಗುಜ್ರಿ. ಅವರು ಪಟ್ನಾದಲ್ಲೇ  ತಮ್ಮ ಶಿಕ್ಷಣವನ್ನು ಪಡೆದರು. ಅವರು ಪರ್ಷಿಯನ್, ಸಂಸ್ಕೃತ ಪಾಠಗಳನ್ನು ಅಭ್ಯಾಸ ಮಾಡಿರುವುದರ ಜೊತೆಗೆ ಯುದ್ಧಕಲೆಗಳಲ್ಲಿ ಪರಿಣಿತರು. 1675 ರಲ್ಲಿ ಇಸ್ಲಾಂ  ಧರ್ಮವನ್ನು ಸ್ವೀಕರಿಸದಿದ್ದಕ್ಕಾಗಿ ಔರಂಗಜೇಬ್ ಗುರು ತೇಜ್ ಬಹದ್ಧೂರ್ ಅವರ ಶಿರಚ್ಚೇದನವನ್ನು ಮಾಡಿದನು.

ಗುರು ಗೋಬಿಂದ್ ಸಿಂಗ್ ಅವರು ಸಿಖ್ ಧರ್ಮದ ಸಾಮೂಹಿಕ ರೂಪವಾದ ಖಾಲ್ಸಾವನ್ನು ನಿರ್ಮಿಸಿದರು, ಇದು 1699 ಬೈಸಾಖಿ ದಿನದಂದು ಆರಂಭವಾಯಿತು. ಗುರು ಗೋವಿಂದ್ ಸಿಂಗ್ ಅವರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಖಾಲ್ಸಾ ಅನುಯಾಯಿಗಳು ಆಧ್ಯಾತ್ಮಿಕ ಶಿಸ್ತನ್ನು ಕಟ್ಟುನಿಟ್ಟಾಗಿ ಅನುಸರಿಸಿದರು. ಜೊತೆಗೆ ನಿರ್ಭೀತಿಯಿಂದ ಮೊಘಲ್ ದೊರೆಗಳ ವಿರುದ್ಧ ಹೋರಾಡಿದರು.

ಗುರು ಗೋವಿಂದ್ ಸಿಂಗ್ ಅವರು ಹಲವಾರು ಸಾಹಿತ್ಯವನ್ನು ಬರೆದಿದ್ದು, ಒಬ್ಬ ಶ್ರೇಷ್ಠ ಕವಿಯಾಗಿ ಹೊರಹೊಮ್ಮಿದರು. ಗುರು ಗೋವಿಂದ್ ಸಿಂಗ್ ಸುಮಾರು 14 ವರ್ಷಗಳ ಕಾಲ ಮೊಘಲರು ಮತ್ತು ಅವರ ಸಹಯೋಗಿ ರಾಜ್ಯಗಳೊಂದಿಗೆ ವಿವಿಧ ಯುದ್ಧಗಳಲ್ಲಿ ಹೋರಾಡಿದರು. ಗುರುಗೋವಿಂದ್ ಸಿಂಗರ ನಾಲ್ವರು ಮಕ್ಕಳು ಸ್ವಧರ್ಮದ ರಕ್ಷಣೆಗಾಗಿ ನಿರ್ದಯ ಮೊಘಲ್ ಆಕ್ರಮಣಕಾರರಿಂದ ಪ್ರಾಣ ಕಳೆದುಕೊಂಡರು. ಗುರು ಗೋವಿಂದ್ ಸಿಂಗ್ ಅವರ ಇಬ್ಬರು ಹಿರಿಯ ಪುತ್ರರಾದ ಅಜಿತ್ ಸಿಂಗ್ ಮತ್ತು ಜುಜರ್ ಸಿಂಗ್ ಚಮ್ಕೌರ್ ನಲ್ಲಿ ಹೋರಾಡುವಾಗ ಹುತಾತ್ಮರಾದರು. ಅವರ ಇಬ್ಬರು ಕಿರಿಯ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಇಬ್ಬರನ್ನೂ ಇಸ್ಲಾಂ ಸ್ವೀಕರಿಸದ ಕಾರಣಕ್ಕಾಗಿ ಫತೇಘರ್ ಸಾಹಿಬ್ನಲ್ಲಿ ಜೀವಂತವಾಗಿ ಸಮಾಧಿ ಮಾಡಲಾಯಿತು. ಗುರು ಗೋಬಿಂದ ಸಿಂಗ್   ಅವರು  ಅಕ್ಟೋಬರ್  7 , 1708 ರಲ್ಲಿ  ತಮ್ಮ  42ನೇ ವಯಸ್ಸಿನಲ್ಲಿ  ವಿಧಿವಶರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.