Dr Manmohan Vaidya, Sah Sarkaryavah, RSS

ಆರೆಸ್ಸೆಸ್ ಸಹಸರಕಾರ್ಯವಾಹರಾದ ಡಾ. ಮನಮೋಹನ್ ಜೀ ವೈದ್ಯರ ಲೇಖನ ಇಂದಿನ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ಹೋಲಿಕೆಯೆ?

Manmohan Vaidya article in Vijay Karnataka

ಕಾಂಗ್ರೆಸ್ ನ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು
‘ಮುಸ್ಲಿಂ ಬ್ರದರ್ಹುಡ್’ ನೊಂದಿಗೆ ಹೋಲಿಸಿರುವುದು ಸಂಘದ ಪರಿಚಯ ತಿಳಿದಿರುವವರಿಗೆ ಮತ್ತು ರಾಷ್ಟ್ರೀಯ ವಿಚಾರವುಳ್ಳವರಿಗೆ ಆಶ್ಚರ್ಯವೆನಿಸುವುದು ಸಹಜವಾಗಿದೆ. ಭಾರತದ ವಾಮಪಂಥಿ, ಮಾವೋವಾದಿ ಮತ್ತು ಕ್ಷುದ್ರ ರಾಜಕೀಯ ಸ್ವಾರ್ಥಕ್ಕಾಗಿ ರಾಷ್ಟ್ರವಿರೋಧಿ ತತ್ವಗಳೊಡನೆ ನಿಂತ ತತ್ವಗಳಿಗೆ ಇದರಿಂದಾಗಿ ಆನಂದವಾಗುವುದೂ ಅಸ್ವಾಭಾವಿಕವೇನಲ್ಲ.
ಇದರರ್ಥ ರಾಹುಲ್ ಗಾಂಧಿಯವರು ಜಿಹಾದಿ ಮುಸ್ಲಿಂ ಆತಂಕವಾದದ ಜಾಗತಿಕ ದುರಂತಗಳ ಕುರಿತಾಗಿ ತಿಳಿದವರಲ್ಲ ಎಂದೇನೂ ಇಲ್ಲ. ಸಮಾಜಹಿತದಲ್ಲಿ ನಡೆಯುವ ಸಂಘದ ಕಾರ್ಯಗಳು ಮತ್ತು ಸಮಾಜದಿಂದ ಸಂಘಕ್ಕೆ ಸತತವಾಗಿ ಸಿಗುತ್ತಿರುವ ಮತ್ತು ಒಂದೇ ಸಮನೆ ಹೆಚ್ಚುತ್ತಿರುವ ಸಮರ್ಥನೆಯ ಕುರಿತಾಗಿಯೂ ತಿಳಿದವರಲ್ಲ ಎಂದೂ ಅಲ್ಲ. ಹಾಗಿದ್ದೂ ಈ ರೀತಿಯಾಗಿ ಅವರು ಹೇಳುತ್ತಿರುವದೇಕೆ ?
ಕಾರಣ, ಅವರ ರಾಜನೈತಿಕ ಸಲಹೆಗಾರರು ಈ ರೀತಿಯಾಗಿ ಸಂಘವನ್ನು ಹಳಿಯುವದರಿಂದ , ಸಂಘದ ವಿರುದ್ಧವಾಗಿ ಮಾತನಾಡುವದರಿಂದ ತಮಗೆ ರಾಜನೈತಿಕ ಲಾಭವಾಗಬಹುದು ಎಂಬ ಸಲಹೆಕೊಡುವದರಲ್ಲಿ ಸಫಲರಾಗಿದ್ದಾರೆ.
ಇದಕ್ಕಾಗಿ ನಾಟಕೀಯ ಆವೇಶಗಳೊಡನೆ ಆರೋಪ ಮಾಡುವದನ್ನು ಅವರಿಗೆ ಕಲಿಸಲಾಗಿದೆ. ಆರೋಪಗಳನ್ನು ಸಾಬೀತುಪಡಿಸುವ ಜವಾಬ್ದಾರಿ ಮಾತ್ರ ಅವರದ್ದಲ್ಲ. ಯಾವುದೋ ಒಂದು ಆರೋಪದ ಮೇಲೆ ಸ್ವಯಂಸೇವಕನೊಬ್ಬ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಆರೋಪವನ್ನು ಸಾಬೀತುಪಡಿಸುವ ಬದಲು ನ್ಯಾಯಾಲಯಕ್ಕೆ ಬರಲೂ ಅವರು ಹಿಂಜರಿಯುತ್ತಿದ್ದರು.

ವಾಸ್ತವದಲ್ಲಿ ಸಂಘವು ಭಾರತದ ಪರಂಪರಾಗತ ಆಧ್ಯಾತ್ಮ ಆಧಾರಿತ ಸರ್ವಾಂಗೀಣ ಮತ್ತು ಏಕಾತ್ಮ ಜೀವನದೃಷ್ಟಿಗಳ ಆಧಾರದ ಮೇಲೆ ಸಂಪೂರ್ಣ ಸಮಾಜವನ್ನು ಏಕಸೂತ್ರದಲ್ಲಿ ಜೋಡಿಸುವ ಕೆಲಸ ಮಾಡುತ್ತಿದೆ.ಇಂತಹ ಸರ್ವ ಸಮಾವೇಶಕ ಜೀವನದೃಷ್ಟಿಯ ಹೋಲಿಕೆಯನ್ನು ಜಿಹಾದಿ ‘ಮುಸ್ಲಿಂ ಬ್ರದರ್ಹುಡ್’ ನೊಂದಿಗೆ ಮಾಡುವುದು ಸಮಸ್ತ ಭಾರತೀಯರ, ದೇಶದ ಮಹಾನ್ ಸಂಸ್ಕೃತಿಯ ಘೋರ ಅಪಮಾನವಾಗಿದೆ. ವಾಸ್ತವದಲ್ಲಿ, ಜಿಹಾದಿ ಮುಸ್ಲಿಂ ಮಾನಸಿಕತೆ ಮತ್ತು ಅದರ ಕೆಲಸಗಳನ್ನೆಲ್ಲ ನೋಡಿದಲ್ಲಿ ಅದರೊಟ್ಟಿಗೆ ‘ಬ್ರದರ್ಹುಡ್’ ಶಬ್ದವೇ ಹೊಂದುವುದಿಲ್ಲ. ಇವರ ತಥಾಕಥಿತ “ಮುಸ್ಲಿಂ ಬ್ರದರ್ಹುಡ್” ಸಲಾಫಿ ಸುನ್ನಿ ಮುಸಲ್ಮಾನರ ಹೊರತಾಗಿ ಅನ್ಯ ಮುಸಲ್ಮಾನರನ್ನೂ ಸಹ ತಮ್ಮ ‘ಬ್ರದರ್ಹುಡ್’ ನಲ್ಲಿ ಸ್ವೀಕರಿಸುವುದಿಲ್ಲ. ಅಷ್ಟೇ ಅಲ್ಲ ಅವರನ್ನು ಮುಸ್ಲಿಮರೆಂದು ಒಪ್ಪಿಕೊಳ್ಳುವುದೂ ಇಲ್ಲ.

ಇದೇ ಸೆಪ್ಟೆಂಬರ್ 11ಕ್ಕೆ ಸ್ವಾಮೀ ವಿವೇಕಾನಂದರ ವಿಶ್ವವಿಖ್ಯಾತ ಶಿಕಾಗೋ ವ್ಯಾಖ್ಯಾನಕ್ಕೆ 125 ವರ್ಷಗಳು ತುಂಬಲಿದೆ. ಅವರು ಭಾರತದ ಸರ್ವಸಮಾವೇಶಿ, ಏಕಾತ್ಮ ಮತ್ತು ಸರ್ವಾಂಗೀಣ ಜೀವನದೃಷ್ಟಿಗಳ ಆಧಾರದ ಮೇಲೆ ವಿಶ್ವಬಂಧುತ್ವದ ವಿಚಾರವನ್ನು ಎಲ್ಲರ ಮುಂದಿರಿಸಿದ್ದರು. ಇದು ಕೇವಲ ಬೌದ್ಧಿಕ ಪ್ರತಿಪಾದನೆಯಾಗಿರಲಿಲ್ಲ. ಅವರು ತಮ್ಮ ಹೃದಯದ ಭಾವನೆಗಳನ್ನೇ ಮಾತಾಗಿಸಿದ್ದರು. ಶಿಕಾಗೋದ ತಮ್ಮ ಐತಿಹಾಸಿಕ ಸಂಬೋಧನೆಯಲ್ಲಿ ತಮ್ಮ ಉದ್ಬೋಧನೆಯ ಪ್ರಾರಂಭವನ್ನೇ ‘ಅಮೇರಿಕೆಯ ನನ್ನ ಸಹೋದರ ಸಹೋದರಿಯರೇ’ ಎನ್ನುವದರೊಂದಿಗೆ ಮಾಡಿದ್ದರು. ಇದನ್ನು ಕೇಳಿದ್ದೇ, ನೆರೆದ ಸಭೆಯೆಲ್ಲ ವಿಸ್ಮಿತಗೊಂಡು, ಉತ್ತೇಜಿತರಾಗಿ ಎದ್ದುನಿಂತು ಹಲವು ನಿಮಿಷಗಳವರೆಗಿನ ಎಲ್ಲರ ಚಪ್ಪಾಳೆಗಳ ಸದ್ದಿನೊಂದಿಗೆ ಸಂಪೂರ್ಣ ಸಭಾಗ್ರಹವೇ ಪ್ರತಿಧ್ವನಿತವಾಗಿತ್ತು.

ಭಾಷಣದಲ್ಲಿ ಅವರು ಹೇಳಿದ್ದು : “ನಾನು ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವಭೌಮ ಸ್ವೀಕೃತಿ ಎರಡರ ಶಿಕ್ಷಣವನ್ನೂ ಕೊಟ್ಟಿರುವ ಧರ್ಮದ ಅನುಯಾಯಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾವು ಎಲ್ಲ ಧರ್ಮಗಳ ಕುರಿತಾಗಿ ಕೇವಲ ಸಹಿಷ್ಣುತೆಯಲ್ಲಿಯೇ ವಿಶ್ವಾಸವುಳ್ಳವರಲ್ಲದೇ ಸಮಸ್ತ ಧರ್ಮಗಳನ್ನೂ ಸತ್ಯವೆಂದೇ ತಿಳಿದು ಸ್ವೀಕರಿಸುತ್ತೇವೆ. ಈ ಭೂಮಿಯ ಎಲ್ಲಾ ಧರ್ಮಗಳ ಮತ್ತು ದೇಶಗಳಿಂದ ತುಳಿತಕ್ಕೊಳಗಾದವರು ಹಾಗೂ ನಿರಾಶ್ರಿತರಿಗೆ ಆಶ್ರಯಕೊಟ್ಟ ದೇಶದ ವ್ಯಕ್ತಿ ನಾನು ಎಂದು ಹೆಮ್ಮೆಪಡುತ್ತೇನೆ. ನಾವು ನಮ್ಮ ವಕ್ಷಗಳಲ್ಲಿ ಯಹೂದಿಗಳ ವಿಶುದ್ಧ ಶೇಷಕ್ಕಾಗಿ ಸ್ಥಾನಕೊಟ್ಟವರೆಂದು ನಿಮ್ಮಲ್ಲಿ ಹೇಳಲು ನನಗೆ ಅಭಿಮಾನವೆನಿಸುತ್ತದೆ. ಅವರು ರೋಮನ್ನರ ಅತ್ಯಾಚಾರಗಳಿಗೆ ತಮ್ಮ ಪವಿತ್ರ ಮಂದಿರವು ಧೂಳಾಗಿ ಸೇರಿದ್ದ ವರ್ಷವೇ ದಕ್ಷಿಣ ಭಾರತಕ್ಕೆ ಬಂದು ಆಶ್ರಯ ಪಡೆದುಕೊಂಡಿದ್ದರು. ಮಹಾನ್ ಜರತುಷ್ಟ್ರ ಜಾತಿಯ ಉಳಿದ ಅಂಶಕ್ಕೆ ಆಶ್ರಯನೀಡಿದ ಮತ್ತು ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮದ ಅನುಯಾಯಿಯಾಗಿರುವುದಕ್ಕೆ ನನಗೆ ಗರ್ವವೆನಿಸುತ್ತದೆ.”
ಮುಂದುವರೆದು ಅವರು ಹೇಳುತ್ತಾರೆ,
“ಸಾಂಪ್ರದಾಯಿಕತೆ, ಹಠಧರ್ಮಿತೆ ಮತ್ತು ಬಿಭಿತ್ಸ ವಂಶಾನುವಂಶಗಳ ಧರ್ಮಾಂಧತೆಗಳು ಸುಮಾರು ಸಮಯದ ಕಾಲ ಈ ಪೃಥ್ವಿಯನ್ನಾಳಿವೆ. ಇವೆಲ್ಲ ಭೂಮಿಯನ್ನು ಹಿಂಸೆಯಿಂದ ತುಂಬುತ್ತಿವೆ ಮತ್ತು ಮೇಲಿಂದಮೇಲೆ ಅದನ್ನು ಮಾನವರ ರಕ್ತದಿಂದ ತೋಯಿಸಿವೆ.ಸಭ್ಯತೆಗಳನ್ನು ವಿಧ್ವಂಸಗೊಳಿಸುತ್ತ ಮತ್ತು ಇಡಿ-ಇಡಿಯಾಗಿ ದೇಶಗಳನ್ನೇ ನಿರಾಶೆಯ ಕೂಪದಲ್ಲಿ ತಳ್ಳುತ್ತಿವೆ. ಈ ಬಿಭಿತ್ಸ ದಾನವತೆ ಇಲ್ಲದೇ ಹೋಗಿದ್ದಲ್ಲಿ ಮಾನವ ಸಮಾಜವು ಇಂದಿನ ಅವಸ್ಥೆಗಿಂತ ಎಷ್ಟೋ ಅಧಿಕ ಉನ್ನತವಾಗಿರುತ್ತಿತ್ತು.”

ಡಾ.ಅಂಬೇಡ್ಕರರು ತಮ್ಮ “ಥಾಟ್ಸ್ ಆನ್ ಪಾಕಿಸ್ತಾನ್” ಪುಸ್ತಕದಲ್ಲಿ, “ಇಸ್ಲಾಂ ಒಂದು ಮುಚ್ಚಿದ ಸಮುದಾಯ (closed corporation)ವಾಗಿದೆ ಮತ್ತದು ಮುಸಲ್ಮಾನರು ಮತ್ತು ಮುಸಲ್ಮಾನರಲ್ಲದವರ ಮಧ್ಯೆ ಮಾಡುವ ಭೇದವು ವಾಸ್ತವಿಕವಾಗಿದೆ. “ಇಸ್ಲಾಮಿಕ್ ಬ್ರದರ್ಹುಡ್” ಇದು ಸಮಸ್ತ ಮಾನವಜಾತಿಯನ್ನು ಸಮಾವೇಶಗೊಳಿಸುವ ‘ವಿಶ್ವಬಂಧುತ್ವ’ವಲ್ಲ. ಇದು ಮುಸಲ್ಮಾನರ ಮುಸಲ್ಮಾನರಿಗೋಸ್ಕರವೇ ಇರುವ ‘ಬಂಧುತ್ವ’. ಇಲ್ಲಿ ಬಂಧುತ್ವವೇನೋ ಇದೇ ಆದರೆ ಅದರ ಲಾಭ ಅವರ ಸಮುದಾಯಕ್ಕಷ್ಟೇ ಸೀಮಿತವಾಗಿವೆ. ಅದರ ಹೊರಗಿರುವವರಿಗೆ ಅವಮಾನ ಮತ್ತು ಶತ್ರುತ್ವಗಳ ಹೊರತಾಗಿ ಮತ್ತೇನೂ ಇಲ್ಲ.” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
“ಮುಸ್ಲಿಂ ಬ್ರದರ್ಹುಡ್” ಎಲ್ಲಕಡೆಯೂ ಶರಿಯಾದ ರಾಜ್ಯವನ್ನು ತರಲು ಬಯಸುತ್ತದೆ, ಸಂಘವು ಹಿಂದುರಾಷ್ಟ್ರದ ಮಾತನಾಡುತ್ತದೆ. ಸಂಘವು ಎಲ್ಲರನ್ನೂ ಸ್ವೀಕರಿಸುತ್ತ ಸ್ವಾಮೀ ವಿವೇಕಾನಂದರಿಂದ ಪ್ರತಿಪಾದಿತ ‘ವಿಶ್ವಬಂಧುತ್ವ’ (ಯುನಿವರ್ಸಲ್ ಬ್ರದರ್ಹುಡ್)ದ ಪ್ರಸಾರ ಮಾಡುತ್ತದೆ. “ಮುಸ್ಲಿಂ ಬ್ರದರ್ಹುಡ್” ನ ಹೋಲಿಕೆ ಸ್ವಾಮೀ ವಿವೇಕಾನಂದರ ‘ವಿಶ್ವಬಂಧುತ್ವ’ದೊಡನೆ ಹೇಗೆ ಸಾಧ್ಯವಾಗಬಹುದು? ಸ್ವಲ್ಪ ಯೋಚಿಸಿ !. ಇಂತಹ ಮಹಾನ್ ವಿಚಾರಗಳೊಡನೆ ಮುನ್ನಡೆಯುತ್ತಿರುವ ಮತ್ತು ಸಂಪೂರ್ಣ ಸಮಾಜದ ಸಂಘಟನೆಯನ್ನು ಮಾಡುವ ಯೋಚನೆಯುಳ್ಳ ಸಂಘದ ಕುರಿತಾಗಿ ರಾಹುಲ್ ಗಾಂಧಿ ಮೇಲಿಂದ ಮೇಲೆ ಇಂತಹ ವೈಮನಸ್ಯದ ವಿಚಾರ ಮುಂದಿಡುತ್ತಿರುವುದಾದರೂ ಯಾಕೆ ?

ಓರ್ವ ಹಿರಿಯ ಅಂಕಣಕಾರ 2 ವರ್ಷಗಳ ಹಿಂದೆಯೇ ಕಾಂಗ್ರೆಸ್ಸನ್ನು ಹೀಗೆಂದು ವರ್ಣಿಸಿದ್ದರು :
“ಈ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಯಾವುದೇ ಮಟ್ಟಕ್ಕಿಳಿದು ಪ್ರಯತ್ನಿಸುತ್ತದೆ ಮತ್ತು ಪಕ್ಷದ ಬೌದ್ಧಿಕ ಚಟುವಟಿಕೆಗಳನ್ನು ಅವರು ಕಮ್ಯುನಿಸ್ಟರಿಗೆ ಹೊರಗುತ್ತಿಗೆ ನೀಡಿಯಾಗಿದೆ.”
ಕಾಂಗ್ರೆಸ್ಸಿನ ಬೌದ್ಧಿಕ ಗತಿವಿಧಿಗಳನ್ನು ಕಾಮ್ರೇಡರು ವಹಿಸಿಕೊಂಡಾಗಿನಿಂದ ಪಕ್ಷವು ಇಂತಹ ಅಸಹಿಷ್ಣುತೆಯನ್ನು ತೋರಿಸುತ್ತ ರಾಷ್ಟ್ರೀಯ ವಿಚಾರಗಳನ್ನು ತೀವ್ರವಾಗಿ ವಿರೋಧಿಸುತ್ತಿದೆ. ಸ್ವಾತಂತ್ರ್ಯಕ್ಕಿಂತ ಮುಂಚಿನ ಕಾಂಗ್ರೆಸ್ ಒಂದು ಮುಕ್ತ ವೇದಿಕೆಯಂತಿತ್ತು. ಅದರಲ್ಲಿ ಹಿಂದೂ ಮಹಾಸಭೆಯ, ಕ್ರಾಂತಿಕಾರಿಗಳ ಸಮರ್ಥಕರ , ಮೃದುವಾದಿ, ತೀವ್ರವಾದಿಗಳ ಹೀಗೆ ಎಲ್ಲ ರೀತಿಯ ಜನರ ಸಮಾವೇಶವಿತ್ತು. ಕ್ರಮಶ: ಅದು ರಾಜಕೀಯ ಪಕ್ಷದ ಸ್ವರೂಪವನ್ನು ಪಡೆಯತೊಡಗಿತು ಮತ್ತು ಸಹಮತವಿಲ್ಲದವರನ್ನು ಮೂಲೆಗುಂಪಾಗಿಸಲಾಯಿತು.

ಸ್ವಾತಂತ್ರ್ಯದ ನಂತರವೂ ವಿಭಿನ್ನ ವಿಚಾರಪ್ರವಾಹಗಳ ಜನ ಕಾಂಗ್ರೆಸ್ಸಿನಲ್ಲಿದ್ದರು. ಪಂಡಿತ್ ನೆಹರು ಸಂಘವನ್ನು ಕಟುವಾಗಿ ವಿರೋಧಿಸುತ್ತಿದ್ದರೆ ಸರ್ದಾರ್ ಪಟೇಲ್ ರಂತಹ ನೇತಾರ ಸಂಘವನ್ನು ಕಾಂಗ್ರೆಸ್ಸಿನಲ್ಲಿ ಸೇರುವಂತೆ ಆಹ್ವಾನಿಸುತ್ತಿದ್ದರು.
1962ರ ಚೀನಾದ ಆಕ್ರಮಣದ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇನೆಯ ಸಹಾಯಮಾಡಿದ ರೀತಿಯನ್ನು ಕಂಡು ಪ್ರಭಾವಿತರಾದ ಪಂಡಿತ್ ನೆಹರು 1963ರ ಗಣತಂತ್ರ ದಿನದ ಪರೇಡಿನಲ್ಲಿ ಪಾಲ್ಗೊಳ್ಳುವಂತೆ ಸಂಘದ ಸ್ವಯಂಸೇವಕರನ್ನು ಆಹ್ವಾನಿಸಿದ್ದರು. ವಿಷಯದ ಮಾಹಿತಿ ತಿಳಿಯುತ್ತಲೇ ಅತ್ಯಂತ ಕಡಿಮೆ ಸಮಯವಿರುವಾಗಲೂ 3000 ಸ್ವಯಂಸೇವಕರು ಆ ಪರೇಡ್ನಲ್ಲಿ ಭಾಗವಹಿಸಿದ್ದರು.

1965 ರ ಪಾಕಿಸ್ತಾನದ ಆಕ್ರಮಣದ ಸಮಯದಲ್ಲಿ ದೇಶದ ಪ್ರಮುಖ ನೇತಾರರ ಆಪತ್ಕಾಲೀನ ಭೇಟಿಯೊಂದನ್ನು ಪ್ರಧಾನಮಂತ್ರಿ ಶ್ರೀ ಲಾಲ್ ಬಹಾದುರ್ ಶಾಸ್ತ್ರೀಗಳು ಗೊತ್ತುಪಡಿಸಿದರು. ಇದಕ್ಕೆ ಸರಸಂಘಚಾಲಕ ಶ್ರೀ ಗುರೂಜಿಯವರನ್ನೂ
ಆಮಂತ್ರಿಸಲಾಗಿತ್ತಲ್ಲದೇ ಅವರು ಶೀಘ್ರವಾಗಿ ದೆಹಲಿ ತಲುಪುವಂತೆ ವ್ಯವಸ್ಥೆಯನ್ನೂ ಸರ್ಕಾರವೇ ಮಾಡಿತ್ತು. ಈ ಬೈಠಕ್ಕಿನಲ್ಲಿ ಕಮ್ಯುನಿಸ್ಟ್ ನೇತಾರನೊಬ್ಬ ಶಾಸ್ತ್ರೀಜಿಯವರನ್ನು ಬಾರಿ ಬಾರಿ “ನಿಮ್ಮ ಸೇನೆ ಏನು ಮಾಡುತ್ತಿತ್ತು?” ಎಂದು ಕೇಳುತ್ತಿದ್ದ.
ಆಗ ಗುರೂಜಿ : “ಇದೇನು ನಿಮ್ಮ ಸೇನೆ, ನಿಮ್ಮ ಸೇನೆ ಎಂದು ಹೇಳುತ್ತೀರಿ ? ನೀವು ಬೇರೊಂದು ದೇಶದಿಂದ ಬಂದವರೇನು ?” ಎಂದು ಕೇಳಿದ್ದರು.

ರಾಜಕೀಯವನ್ನು ರಾಜಕೀಯಕ್ಕಷ್ಟೇ ಸೀಮಿತಗೊಳಿಸಿ ಪರಸ್ಪರ ಸಂವಾದದಲ್ಲಿ ತೊಡಗುವ ಇಂತಹ ಪರಂಪರೆ 1970ರ ದಶಕದವರೆಗೂ ಚಾಲ್ತಿಯಲ್ಲಿತ್ತು.ನಂತರ ಕ್ರಮಶ: ವಾಮಪಂಥದ ವಿಚಾರಗಳ ಪ್ರಭಾವ ಕಾಂಗ್ರೆಸ್ಸಿನಲ್ಲಿ ಹೆಚ್ಚತೊಡಗಿತು. ಶತ್ರುತ್ವದ ಭಾಷೆ ಮತ್ತು ಅಸಹಿಷ್ಣುತೆಗಳು ಇಣುಕತೊಡಗಿದವು. ಭಾಜಪವನ್ನು ಹೊರತುಪಡಿಸಿ ಹೆಚ್ಚಿನ ಎಲ್ಲ ರಾಜಕೀಯ ಪಕ್ಷಗಳ ಬೌದ್ಧಿಕ – ವೈಚಾರಿಕ ಕೋಶದಲ್ಲಿ ವಾಮಪಂಥಿಗಳ ಪ್ರಭಾವ ಅಥವಾ ವರ್ಚಸ್ವ ಹೆಚ್ಚು-ಕಡಿಮೆ ಸಮನಾಗಿ ಕಂಡುಬರುತ್ತದೆ.
ಈ ಕಾರಣದಿಂದ, ತಮ್ಮ ರಾಜನೈತಿಕ ಸ್ವಾರ್ಥಕ್ಕಾಗಿ ರಾಷ್ಟ್ರೀಯ ವಿಚಾರಗಳ ಯಥಾಸಾಧ್ಯ ವಿರೋಧ ಮತ್ತು ಎಡಪಂಥದ ವಿಚಾರಗಳಿಂದ ಪ್ರೇರಿತ ಸಮಾಜ ವಿಘಟಕ ಪ್ರಯಾಸಗಳಿಗೆ ಇವರ ಮುಖೇನ ಸಮರ್ಥನೆ ಗಿಟ್ಟುತ್ತಿರುವುದೂ ಕಂಡುಬರುತ್ತದೆ.

ಕಳೆದ ಕೆಲ ವರ್ಷಗಳಿಂದ ನಮ್ಮ ದೇಶದ ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ಎಂತಹ ವಿಚಿತ್ರ ಸ್ಥಿತಿಯಲ್ಲಿದೆಯೆಂದರೆ, ತನ್ನ ಬೌದ್ಧಿಕ ಚಟುವಟಿಕೆಗಳನ್ನು ಕಮ್ಯುನಿಸ್ಟರಿಗೆ ಹೊರಗುತ್ತಿಗೆಗೆ ಕೊಟ್ಟ ಅದರ ಶರೀರದಲ್ಲೀಗ ಮಾವೋವಾದಿ ಆತ್ಮದ ಪ್ರವೇಶವಾಗಿದೆ. ಹೀಗನ್ನಿಸಲು ಇರುವ ಕಾರಣವೆಂದರೆ, ಕಾಂಗ್ರೆಸ್ ಅಧ್ಯಕ್ಷರ ಅಪಮಾನಕರ ವಕ್ತವ್ಯಗಳ ಸಮರ್ಥನೆಯಲ್ಲಿ ಪ್ರಕಟಗೊಂಡ ಎಲ್ಲ ಲೇಖನಗಳ ಲೇಖಕರ ತಂತುಗಳು ಮಾವೋವಾದಿಗಳ ಅಥವಾ ವಾಮಪಂಥದ ವಿಚಾರಗಳೊಂದಿಗೆ ಕೂಡಿಕೊಂಡಿರುವುದು.

ಮಾವೋವಾದದ ಪ್ರೇರಣೆಯಿಂದ ನಡೆದ ಆಂದೋಲನಗಳಿಗೆಲ್ಲ ಕಾಂಗ್ರೆಸ್ಸಿನ ಭರಪೂರ ಮುಕ್ತ ಸಮರ್ಥನೆ ದೊರಕಿರುವುದು ಕಡಿಮೆ ಆಶ್ಚರ್ಯದ ಸಂಗತಿಯೇನಲ್ಲ. ‘ಭಾರತ ನಿನ್ನ ಹೋಳಾಗುವುದು – ಇನ್ಷಾ ಅಲ್ಲಾ, ಇನ್ಷಾ ಅಲ್ಲಾ’ ಅಥವಾ
‘ಭಾರತದ ಕೊನೆಕಾಣುವವರೆಗೆ ಕದನ ನಿಲ್ಲಲಾರದು’ ನಂತಹ ಘೋಷಣೆಗಳು ಅಥವಾ ಭಾರತದ ಸಂಸತ್ತಿನ ಮೇಲೆ ಉಗ್ರದಾಳಿಯ ರೂವಾರಿ ಅಫ್ಝಲ್ ಗುರು (ಈತನ ಶಿಕ್ಷೆ ನಿಗದಿಯಯಾದ್ದೂ ಯೂಪಿಎ ಕಾಲದಲ್ಲೇ)ವಿನ ಸಮರ್ಥನೆಯಲ್ಲಿ
‘ಅಫ್ಝಲ್ ನಮಗೆ ನಾಚಿಕೆಯಿದೆ, ನಿನ್ನ ಕೊಲೆಗಾರರಿನ್ನೂ ಜೀವದಿಂದಿದ್ದಾರೆ’ ಯಂತಹ ಘೋಷಣೆಗಳನ್ನು ಕೂಗುವವರ ಬಹಿರಂಗ ಸಮರ್ಥನೆಯನ್ನು ಕಾಂಗ್ರೆಸ್ಸಿನ ನೇತಾರರು ಮಾಡಿದ್ದಾರೆ. ಸಮಾಜದಲ್ಲಿ ಜಾತೀಯ ವಿದ್ವೇಶದ ಭುಗಿಲೆಬ್ಬಿಸಿ ಸಂವಿಧಾನವನ್ನು ಧೂಳಿಪಟವಾಗಿಸಿ ನಡೆಸಿದ ಹಿಂಸೆಗಳಿಗೆ ಸಮರ್ಥನೆ, ಯಾರ ಪ್ರಚೋದನೆಯೂ ಇಲ್ಲದೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಹಾಳುಗೆಡವುವವರ ಪರವಾಗಿ ಸಮರ್ಥನೆಗೆ ಕಾಂಗ್ರೆಸ್ ತೊಡಗುವಾಗಲೇ ಅದರ ದೇಹವನ್ನು ವಶಗೊಳಿಸಿಕೊಂಡಿರುವ ಮಾವೋವಾದಿ ಆತ್ಮದ ಸ್ಪಷ್ಟ ಪರಿಚಯವಾಗುತ್ತದೆ.

ನಾಡ ಮಾವೋವಾದಿಗಳು ಯಾವೆಲ್ಲ ಬಗೆಗಳಿಂದ ಸಮಾಜದಲ್ಲಿ ವ್ಯಾಪಿಸಿಕೊಂಡರು ಮತ್ತು ಹೇಗೆಲ್ಲ ಪ್ರತಿಷ್ಠಪನಗೊಂಡರು ಎಂದೆಲ್ಲ ಈಚಿನ ಕೆಲ ಘಟನೆಗಳಿಂದ ಜನತೆಯ ಎದುರಿಗೆ ಬಂದಿದೆ. ಇಂತಹ ದೇಶ ವಿಘಟಕ ಶಕ್ತಿಗಳಿಗೆ ಕಾಂಗ್ರೆಸ್ಸಿನ ಸಮರ್ಥನೆಯನ್ನು ನೋಡಿದಾಗ ಆಶ್ಚರ್ಯಕ್ಕಿಂತ ದುಃಖವೇ ಜಾಸ್ತಿಯಾಗುತ್ತದೆ. ಸೈದ್ಧಾಂತಿಕ ಭಿನ್ನತೆಗಳ ಹೊರತಾಗಿಯೂ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಮಾತನಾಡುತ್ತಿರುವ ಭಾಷೆಯನ್ನು ಮೊದಲೆಂದೂ ಕೇಳಿರಲಿಲ್ಲ. ಭಾರತದ ಎಲ್ಲಕ್ಕಿಂತ ಹಳೆಯ , ಸ್ವಾತಂತ್ರ್ಯ ಆಂದೋಲನದ ಅಗ್ರಣಿಯಾಗಿದ್ದ , ಭಾರತದಾದ್ಯಂತ ಸಮರ್ಥಕರನ್ನು ಹೊಂದಿರುವ , ಪ್ರಮುಖ ರಾಷ್ಟ್ರೀಯ ಪಕ್ಷವೊಂದು ಅರಾಷ್ಟ್ರೀಯ ತತ್ವಗಳೊಡನೆ ಗುರ್ತಿಸಿಕೊಂಡಾಗ ಚಿಂತೆಯೂ ಹುಟ್ಟುತ್ತದೆ. ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್ ತನ್ನ ಜನಾಧಾರವನ್ನು ಕಳೆದುಕೊಳ್ಳುತ್ತಿದೆ ಎಂದು ಜನರಿಗೂ ಮನವರಿಕೆಯಾಗುತ್ತಿದೆ.

125 ವರ್ಷಗಳ ಹಿಂದೆ ಸ್ವಾಮೀ ವಿವೆಕಾನಂದರು ಸಮುದ್ರವನ್ನು ದಾಟಿ ಭಾರತದ ಸರ್ವಸಮಾವೇಶಿ ಸಂಸ್ಕೃತಿಯ ವಿಜಯ ಪತಾಕೆಯನ್ನು ಹಾರಿಸಿದರು. ಇಂದು ಅದೇ ದೇಶದ ನೇತಾರನೊಬ್ಬ ಸಮುದ್ರವನ್ನು ದಾಟಿ ಇದೇ ಭಾರತೀಯ ಸಂಸ್ಕೃತಿಯನ್ನು “ಇಸ್ಲಾಮಿಕ್ ಬ್ರದರ್ಹುಡ್” ನೊಂದಿಗೆ ಹೋಲಿಸಿ ವಿವೇಕಾನಂದರ , ಈ ಭಾರತದ ಮಹಾನ್ ಸಂಸ್ಕೃತಿಯ ಮತ್ತು ಭಾರತದ ಅಪಮಾನಮಾಡುತ್ತಿದ್ದಾನೆ.

ಜನತಂತ್ರದಲ್ಲಿ ವಿಭಿನ್ನ ಪಕ್ಷಗಳಲ್ಲಿ ಮತಭೇದಗಳಿರಬಹುದು ಆದರೆ ರಾಷ್ಟ್ರೀಯ ಹಿತದ ವಿಷಯಗಳಲ್ಲಿ ತಮ್ಮ ರಾಜನೈತಿಕ ನಿಲುವಿಗಿಂತಲೂ ಮೇಲೆದ್ದು ಒಗ್ಗಟ್ಟಾಗಿರುವುದರಿಂದಲೇ ರಾಷ್ಟ್ರ ಪ್ರಗತಿಕಾಣಬಲ್ಲದು ಅಲ್ಲದೇ ಒಳಗಿನ ಹಾಗೂ ಬಾಹ್ಯ ಸಂಕಟಗಳ ಮೇಲೆ ವಿಜಯ ಸಾಧಿಸಿ ತನ್ನ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಲ್ಲದು.

 

ಕನ್ನಡಕ್ಕೆ : ಶ್ರೀ ಶೈಲೇಶ ಕುಲಕರ್ಣಿ

Leave a Reply

Your email address will not be published.

This site uses Akismet to reduce spam. Learn how your comment data is processed.